ಯುವ ವೈದ್ಯೆಯೊಬ್ಬರು ನೀಡಿದ ದೂರಿನ ಮೇರೆಗೆ ಮಲೆಯಾಳಿ ರ‍್ಯಾಪರ್ ವೇದನ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಮದುವೆಯ ಭರವಸೆ ನೀಡಿ ವಂಚಿಸಿದ ಆರೋಪದ ಮೇಲೆ ಎರ್ನಾಕುಲಂನ ತ್ರಿಕ್ಕಾಕರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಯುವತಿಯೊಬ್ಬರಿಗೆ ಮದುವೆಯ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಲೆಯಾಳಿ ಪ್ರಸಿದ್ಧ ರ‍್ಯಾಪರ್ ವೇದನ್ ವಿರುದ್ಧ ಪೊಲೀಸರು ಬಲತ್ಕಾರ ಪ್ರಕರಣ ದಾಖಲಿಸಿದ್ದಾರೆ. ಮದುವೆಯ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಯುವ ವೈದ್ಯೆಯೊಬ್ಬರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವೇದನ್ ಎಂದೇ ಖ್ಯಾತಿ ಗಳಿಸಿರುವ ಮಲಯಾಳಂ ರ‍್ಯಾಪರ್ ಮತ್ತು ಗೀತರಚನೆಕಾರ ಹಿರಂದಾಸ್ ಮುರಳಿ ವಿರುದ್ಧ ಪೊಲೀಸರು ಅತ್ಯಾ*ಚಾರ ಪ್ರಕರಣ ದಾಖಲಿಸಿದ್ದಾರೆ.

Add Asianetnews Kannada as a Preferred SourcegooglePreferred

ಸಂತ್ರಸ್ತೆ ಪೊಲೀಸ್ ಆಯುಕ್ತರ ಸಂಪರ್ಕಿಸಿದ ಬಳಿಕ ಕೇಸ್ ದಾಖಲು

ಬುಧವಾರ ಜುಲೈ 30 ರಂದು ರಾತ್ರಿ ದೂರುದಾರ ವೈದ್ಯೆ ಕೊಚ್ಚಿ ನಗರ ಉಪ ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿದ ನಂತರ ಕೇರಳದ ಎರ್ನಾಕುಲಂನ ತ್ರಿಕ್ಕಾಕರ ಪೊಲೀಸರು ವೇದನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡ ನಂತರ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ನಾವು ಸತ್ಯಾಸತ್ಯತೆಗಳನ್ನು ಪರಿಶೀಲಿಸುತ್ತಿದ್ದೇವೆ. ಅದರ ನಂತರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ದೂರಿಗೆ ಕಾರಣವಾದ ಘಟನೆಗಳು ಕೆಲವು ವರ್ಷಗಳ ಹಿಂದೆ ನಡೆದಿವೆ. ಮದುವೆಯ ಭರವಸೆಯ ಮೇರೆಗೆ ಲೈಂಗಿಕ ದೌರ್ಜನ್ಯ ನಡೆದ ಸ್ಥಳಗಳಲ್ಲಿ ತ್ರಿಕ್ಕಾಕರವೂ ಒಂದು ಎಂದು ಉಲ್ಲೇಖಿಸಿದ ನಂತರ ತ್ರಿಕ್ಕಾಕರ ಪೊಲೀಸರು ಈ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮತ್ತೊಂದು ಮಹಿಳೆಯಿಂದಲೂ ಆರೋಪ

ರ‍್ಯಾಪರ್ ವೇದನ್ ಜೊತೆ ತನಗೆ ಈ ರೀತಿಯ ಅನುಭವ ಆಗಿದೆ ಎಂದು ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದನ್ನು ನೋಡಿದ ನಂತರ ಯುವವೈದ್ಯೆಗೆ ವೇದನ್‌ ತನಗೂ ಮೋಸ ಮಾಡಿರುವುದರ ಅರಿವಾಗಿ ಮುಂದೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿಂದೆ ಚಿತ್ರರಂಗದಲ್ಲಿ ನಟಿಯರು ಮೀ ಟೂ ಆರೋಪ ಮಾಡಿದ ಸಂದರ್ಭದಲ್ಲಿಯೂ ವೇದನ್‌ ವಿರುದ್ಧವೂ ಲೈಂಗಿಕ ದೌರ್ಜನ್ಯದ ವಿರುದ್ಧ ಆರೋಪ ಕೇಳಿ ಬಂದಿತ್ತು.

ಗಾಂಜಾದೊಂದಿಗೆ ಸಿಕ್ಕಿಬಿದ್ದಿದ್ದ ವೇದನ್

ಈಗ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ತುತ್ತಾಗಿರುವ ವೇದನ್ ವಿರುದ್ಧ ಈ ಹಿಂದೆ ಡ್ರಗ್ ಸೇವನೆಯ ಆರೋಪವೂ ಕೇಳಿ ಬಂದಿತ್ತು. ಏಪ್ರಿಲ್ 28ರಂದು ಕೊಚ್ಚಿಯ ಹಿಲ್ ಪ್ಯಾಲೇಸ್ ಪೊಲೀಸರು ಕೊಚ್ಚಿಯಲ್ಲಿರುವ ವೈಟ್ಟಿಲಾ ಬಳಿಯ ವೇದನ್ ಅವರ ನಿವಾಸದ ಮೇಲೆ ದಾಳಿ ಮಾಡು ಆರು ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದರು. ಜೊತೆಗೆ ವೇದನ್ ಮತ್ತು ಅವರ ಇತರ ಎಂಟು ಸ್ನೇಹಿತರನ್ನು ಬಂಧಿಸಿದರು .

ಚಿರತೆ ಹಲ್ಲಿನ ಪೆಂಡೆಂಟ್‌ ಕಾರಣಕ್ಕೂ ಬಂಧಿತನಾಗಿದ್ದ ವೇದನ್

ಆ ಪ್ರಕರಣದಲ್ಲಿ ಅವರು ಜಾಮೀನಿನ ಮೇಲೆ ಬಿಡುಗಡೆಯಾದ ಕೆಲ ಸಮಯದಲ್ಲೇ ಅವರ ಬಳಿ ಚಿರತೆ ಹಲ್ಲಿನ ಪೆಂಡೆಂಟ್ ಇರುವುದು ಕಂಡುಬಂದ ನಂತರ ಅರಣ್ಯ ಇಲಾಖೆಯು ಅವರ ವಿರುದ್ಧ ಕೇಸ್ ದಾಖಲಿಸಿ ತಕ್ಷಣವೇ ಬಂಧಿಸಿತು. ಈ ವೇಳೆ ವೇದನ್ ಅವರು ಅಭಿಮಾನಿಯೊಬ್ಬರು ಅದನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಿದ್ದರು. ಈ ಪ್ರಕರಣದಲ್ಲೂ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.