ಬೆಂಗಳೂರಿನಲ್ಲಿ ಒನ್‌ವೇಯಲ್ಲಿ ಕಾರು ಚಲಾಯಿಸಿ ಸಿಕ್ಕಿಬಿದ್ದ ಚಾಲಕನಿಗೆ ದಂಡ ಮತ್ತು ಕಾರು ಜಪ್ತಿ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಪಾಲನೆಯ ಕುರಿತು ಜಾಗೃತಿ ಮೂಡಿಸಿದೆ.

ಬೆಂಗಳೂರು (ಆ.29): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೊದಲೇ ಜನರು ಟ್ರಾಫಿಕ್ ಎಂದು ಒದ್ದಾಡುತ್ತಿದ್ದಾರೆ. ಆದರೆ, ಇಲ್ಲೊಬ್ಬ ಕಾರು ಚಾಲಕ ಒನ್‌ವೇನಲ್ಲಿ ಬಂದು ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಲ್ಲದೇ, ಇದನ್ನು ಪ್ರಶ್ನೆ ಮಾಡಿದ ಇತರ ವಾಹನ ಸವಾರರಿಗೆ ಧಮ್ಕಿ ಹಾಕಿ ಮನೆಗೆ ಹೋಗಿದ್ದನು. ಇದನ್ನು ಆಟೋ ಡ್ರೈವರ್ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ ಬೆನ್ನಲ್ಲಿಯೇ, ಧಮ್ಕಿ ಹಾಕಿದ ಕಾರಿನ ಮಾಲೀಕ ಪೊಲೀಸರಿಗೆ ಕೈಮುಗಿದು ದಂಡ ಕಟ್ಟಿ ಹೋಗಿದ್ದಾನೆ.

ಹೌದು, ಬೆಂಗಳೂರಿನಲ್ಲಿ ಯಾವಾಗಲೂ ಸಾಮಾನ್ಯ ಟ್ರಾಫಿಕ್ ಇರುವ ರಸ್ತೆಯಲ್ಲಿ ಒನ್‌ ವೇನಲ್ಲಿ ಕಾರು ಚಲಾಯಿಸಿದ್ದಲ್ಲದೆ, ಅದನ್ನು ಪ್ರಶ್ನಿಸಿದ ಸಾರ್ವಜನಿಕರೊಂದಿಗೆ ಜಗಳಕ್ಕಿಳಿದಿದ್ದ ಚಾಲಕನ ವಿರುದ್ಧ ಹೈಗ್ರೌಂಡ್ಸ್ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ, ಆತನ ಕಾರನ್ನು ಜಪ್ತಿ ಮಾಡಿದ್ದಾರೆ. ಈ ಘಟನೆಯ ಕುರಿತು ಕ್ರಮ ಕೈಗೊಂಡಿರುವ ಪೊಲೀಸರು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಇಂದಿಗೂ ಮುಸ್ಲಿಮರೇ ದಸರಾ ಆನೆಗಳಿಗೆ ಅಂಬಾರಿ ಕಟ್ಟೋದು ಎಂದ ಅಬ್ದುಲ್‌ ರಜಾಕ್‌!

ಆಗಸ್ಟ್ 26ರಂದು ರಾತ್ರಿ 9 ಗಂಟೆ ಸುಮಾರಿಗೆ ಕುಮಾರಕೃಪಾ ರಸ್ತೆಯಲ್ಲಿ ಈ ಘಟನೆ ನಡೆದಿದೆ. ರೇಸ್ ವ್ಯೂ ಜಂಕ್ಷನ್‌ನಿಂದ ಶಿವಾನಂದ ಜಂಕ್ಷನ್ ಕಡೆಗೆ ಕೆ.ಎ 04, ಎನ್.ಎ 6151 ನಂಬರ್‌ನ ಕಾರಿನಲ್ಲಿ ಚಾಲಕ ಅಮಿತಾಭ ದತ್ತ ಅವರು ಒನ್ ವೇಯಲ್ಲಿ ಬರುತ್ತಿದ್ದರು. ಇದನ್ನು ಪ್ರಶ್ನಿಸಿದ ಇತರೆ ವಾಹನ ಸವಾರರೊಂದಿಗೆ ಅವರು ಕಿರಿಕ್ ಮಾಡಿ ಅವಾಜ್ ಹಾಕಿದ್ದಾರೆ. ಅವರ ವರ್ತನೆಯನ್ನು ಗಮನಿಸಿದ ಆಟೋ ಚಾಲಕರೊಬ್ಬರು ಈ ಸಂಪೂರ್ಣ ಘಟನೆಯನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ 'ಎಕ್ಸ್' (ಹಿಂದಿನ ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ತಕ್ಷಣವೇ ಪ್ರತಿಕ್ರಿಯಿಸಿದ ಹೈಗ್ರೌಂಡ್ಸ್ ಸಂಚಾರ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Scroll to load tweet…


ಪೊಲೀಸರು ಆರೋಪಿ ಚಾಲಕ ಅಮಿತಾಭ ದತ್ತ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ, ಕಾನೂನು ಉಲ್ಲಂಘನೆಗಾಗಿ ದಂಡ ವಿಧಿಸಿದ್ದಾರೆ. ಅಲ್ಲದೆ, ಅವರ ಕಾರನ್ನು ಜಪ್ತಿ ಮಾಡಿದ್ದಾರೆ. ಈ ಘಟನೆಯ ಕುರಿತು ಬೆಂಗಳೂರು ಸಂಚಾರ ಪೊಲೀಸರು ತಮ್ಮ ಅಧಿಕೃತ ಖಾತೆಯಲ್ಲಿ 'ರೀಲ್ಸ್' ಮಾಡಿ ಹಂಚಿಕೊಂಡಿದ್ದು, ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಬೇಕೆಂದು ಜಾಗೃತಿ ಮೂಡಿಸಿದ್ದಾರೆ. ಈ ಕ್ರಮವು ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ ಗಳಿಸಿದೆ.

ಜೆ.ಸಿ. ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ:

ನಗರದ ಪ್ರಮುಖ ವಾಣಿಜ್ಯ ರಸ್ತೆಯಾದ ಜೆ.ಸಿ. ರಸ್ತೆಯಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿ ನಡೆಯುತ್ತಿರುವುದರಿಂದ, ಬಸ್‌ಗಳು ಮತ್ತು ಭಾರಿ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇದರಿಂದಾಗಿ ವಾಹನ ಸವಾರರು ಸುಮಾರು 2 ಕಿ.ಮೀ. ಹೆಚ್ಚುವರಿ ದೂರ ಸುತ್ತಿ ಬಳಸಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಮತ್ತು ಕಾಮಗಾರಿಗೆ ಅನುಕೂಲವಾಗುವಂತೆ ಸಂಚಾರ ಪೊಲೀಸರು ಜೆ.ಸಿ. ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ. ಅದರಂತೆ, ಲಾಲ್‌ಬಾಗ್‌ನಿಂದ ಟೌನ್ ಹಾಲ್ ಕಡೆಗೆ ಸಾಗುವ ವಾಹನಗಳು ನೇರವಾಗಿ ಜೆ.ಸಿ. ರಸ್ತೆಯಲ್ಲಿ ಹೋಗಲು ಸಾಧ್ಯವಾಗುತ್ತಿಲ್ಲ.

ಮೆಟ್ರೋ ಹಳದಿ ಮಾರ್ಗ ಅಧ್ವಾನ, ಕೋಟಿ ಕೋಟಿ ಸುರಿದ್ರೂ ಸೌಲಭ್ಯ ಗಳೇ ಇಲ್ಲ, ಆಸನಗಳಿಲ್ಲ, ಶೌಚಾಲಯವಿಲ್ಲ!

ಪರ್ಯಾಯ ಮಾರ್ಗಗಳು:

ಲಾಲ್‌ಬಾಗ್‌ನಿಂದ ಬರುವ ವಾಹನಗಳು ಬಲಕ್ಕೆ ತಿರುವು ತೆಗೆದುಕೊಂಡು ನ್ಯಾಷನಲ್ ಕಾಲೇಜು ಬ್ರಿಡ್ಜ್, ರಾಮಕೃಷ್ಣ ಆಶ್ರಮ ಮತ್ತು ಕೆ.ಆರ್. ಮಾರ್ಕೆಟ್ ಮೂಲಕ ಟೌನ್ ಹಾಲ್ ತಲುಪಬೇಕಿದೆ. ಈ ಮಾರ್ಗ ಬದಲಾವಣೆಯಿಂದಾಗಿ ಬಿಎಂಟಿಸಿ ಬಸ್‌ಗಳು ಸೇರಿದಂತೆ ಇತರ ಭಾರಿ ವಾಹನಗಳಿಗೆ ಸಂಚಾರದಲ್ಲಿ ತೊಂದರೆಯಾಗಿದೆ. ಸಾರ್ವಜನಿಕರು ಮತ್ತು ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸಿಕೊಂಡು ಸಹಕರಿಸಬೇಕು ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಕಾಮಗಾರಿ ಪೂರ್ಣಗೊಳ್ಳುವವರೆಗೂ ಈ ನಿರ್ಬಂಧ ಮುಂದುವರೆಯುವ ಸಾಧ್ಯತೆಯಿದೆ.