ಸಾಲ ನೀಡಿದ ಮಹಿಳೆಯ ಕೊಂದು ಹೂತು ಹಾಕಿದ ದುಷ್ಕರ್ಮಿಗಳು: ಮೂವರ ಬಂಧನ
ಕೊಟ್ಟ ಸಾಲ ತೀರಿಸದೇ ಸಾಲ ಕೊಟ್ಟವಳನ್ನೇ ಕೊಂದು ಹೂತು ಹಾಕಿದ ಮೂವರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಘಟನೆ ನಡೆದಿದೆ.
ನವದೆಹಲಿ: ಕೊಟ್ಟ ಸಾಲ ತೀರಿಸದೇ ಸಾಲ ಕೊಟ್ಟವಳನ್ನೇ ಕೊಂದು ಹೂತು ಹಾಕಿದ ಮೂವರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಘಟನೆ ನಡೆದಿದೆ. 54 ವರ್ಷ ಮಹಿಳೆ ಮೀನಾ ವದ್ವಾನ್ ಕೊಲೆಯಾದವರು. ಈ ಮಹಿಳೆ ಜನವರಿ 2 ರಿಂದ ನಾಪತ್ತೆಯಾಗಿದ್ದರು. ಇವರ ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದಕ್ಕೆ ಸಂಬಂಧಿಸಿದಂತೆ ಅನುಮಾನದ ಮೇಲೆ ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬಯಲಾಗಿದೆ.
ಸಾಲದ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಾಲ ನೀಡಿದ ಮಹಿಳೆಯನ್ನೇ ಕೊಲೆ ಮಾಡಿದ ದುಷ್ಕರ್ಮಿಗಳು ನಂತರ ಸ್ಥಳೀಯ ಸ್ಮಶಾನದಲ್ಲಿ ಮಹಿಳೆಯನ್ನು ಹೂತು ಹಾಕಿದ್ದಾರೆ.
ವಾಯುವ್ಯ ದೆಹಲಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಹೂತು ಹಾಕಿದ ಮೃತದೇಹವನ್ನು ಹೊರ ತೆಗೆಯಲಾಗಿದ್ದು, ಆರೋಪಿಗಳಾದ ರೆಹನ್ (Rehan) ಮೊಬಿನ್ ಖಾನ್ (Mobin Khan) ಹಾಗೂ ನವೀನ್ (Naveen) ಎಂಬುವವರನ್ನು ಪೊಲೀಸರು ಕಸ್ಟಡಿಗೆ (custody) ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೊಲೆಯಾದ ಮೀನಾ ವದ್ವಾನ್ (Meena Wadhwan) ಎಂಬುವವರು ಲೇವಾದೇವಿ (moneylender) ವ್ಯವಹಾರ ನಡೆಸುವವರಾಗಿದ್ದು, ಇವರು ವ್ಯಾಪಾರಿಗಳು ಹಾಗೂ ದಿನಗೂಲಿ ಕಾರ್ಮಿಕರಿಗೆ ಬಡ್ಡಿಗೆ ಸಾಲ ನೀಡುತ್ತಿದ್ದರು. ಈ ಆರೋಪಿಗಳು ಕೂಡ ಅವರಿಂದ ಸಾಲ ಪಡೆದಿದ್ದರು. ಆದರೆ ತೀರಿಸಿರಲಿಲ್ಲ. ಹೀಗಾಗಿ ಮಹಿಳೆ ಹಣ ವಾಪಸ್ ನೀಡುವಂತೆ ಒತ್ತಡ ಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿ ಕುಪಿತಗೊಂಡ ಆರೋಪಿಗಳು ಮಹಿಳೆಯನ್ನು ಯಮಪುರಿಗೆ ಅಟ್ಟುವ ಪ್ಲಾನ್ ಮಾಡಿದ್ದಾರೆ.
ಸಾಲಗಾರರಿಂದ ತಪ್ಪಿಸಿಕೊಳ್ಳಲು ಮೂಗಿಗೆ ಹತ್ತಿ ಇಟ್ಟು ಫೇಸ್ಬುಕ್ಗೆ ಫೋಟೋ ಹಾಕಿದ ಮಹಿಳೆ
ಇದಾದ ಬಳಿಕ ಜನವರಿ 2 ರಂದು ಮಹಿಳೆ ನಾಪತ್ತೆಯಾಗಿದ್ದು, ಮಹಿಳೆಯ ಮನೆಯವರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಮೀನಾ ವದ್ವಾನ್ ಅವರು ಸ್ವಲ್ಪ ಸಮಯದಲ್ಲಿ ಹಿಂದಿರುಗುತ್ತೇನೆ ಎಂದು ಹೇಳಿ ಜನವರಿ 2 ರಂದು ಮನೆಯಿಂದ ಹೊರ ಹೋದವರು ಮರಳಿ ಬಂದಿಲ್ಲ ಎಂದು ಕುಟುಂಬದವರು ನೀಡಿದ ದೂರಿನಲ್ಲಿ ಹೇಳಲಾಗಿತ್ತು. ಅಲ್ಲದೇ ನಂತರದಲ್ಲಿ ಅವರ ಫೋನ್ ಸ್ವಿಚ್ಅಪ್ (switched off) ಆಗಿತ್ತು. ಆದರೆ ಮನೆ ಸಮೀಪದ ಸಿಸಿಟಿವಿ (CCTV footage) ದೃಶ್ಯಾವಳಿಗಳಲ್ಲೂ ಅವರಿಗೆ ಏನಾಯಿತು ಎಂಬ ಬಗ್ಗೆ ಯಾವುದೇ ಸುಳಿವುಗಳಿರಲಿಲ್ಲ.
ಹೀಗಾಗಿ ಆಕೆಗೆ ಬಂದಿದ್ದ ಫೋನ್ ಕರೆಗಳ ಆಧಾರದ ಮೇಲೆ ಪೊಲೀಸರು ಆರೋಪಿ ಮೊಬಿನ್ನನ್ನು ಮೊದಲು ಪ್ರಶ್ನಿಸಿದ್ದಾರೆ. ಆದರೆ ಇದರಿಂದ ತನಿಖೆಗೆ ಸಹಾಯಕವಾಗುವಂತಹ ಯಾವುದೇ ಮಾಹಿತಿ ಸಿಗಲಿಲ್ಲ. ನಂತರ ಮತ್ತೊಬ್ಬ ಆರೋಪಿ ನವೀನ್ನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದಾಗ, ತಾನು, ಮೊಬಿನ್ ಮತ್ತು ರೆಹಾನ್ ಎಂಬುವವರ ಜೊತೆಗೂಡಿ ಮೀನಾ ವಾದ್ವಾನ್ ಅವರನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ಅವರ ಶವವನ್ನು ನಂಗ್ಲೋಯ್ನಲ್ಲಿರುವ (Nangloi) ಸ್ಮಶಾನದಲ್ಲಿ ಹೂತು ಹಾಕಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಲಬಾಧೆ: ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಂದೆ ಆತ್ಮಹತ್ಯೆ
ಮಹಿಳೆಯ ಕುಟುಂಬದವರಿಗೆ ಈ ಮಾಹಿತಿ ನೀಡಿದಾಗ, ಈ ಶಂಕಿತ ಆರೋಪಿಗಳೆಲ್ಲರ ಬಗ್ಗೆ ತಮಗೆ ಚೆನ್ನಾಗಿ ತಿಳಿದಿದೆ. ಇವರೆಲ್ಲರೂ ನಮ್ಮ ಕುಟುಂಬದ ಸ್ನೇಹಿತರು ಎಂದು ಹೇಳಿದ್ದಾಗಿ ಪೊಲೀಸರು ಹೇಳಿದ್ದಾರೆ. ಆರೋಪಿಗಳು ಹೂತು ಹಾಕಿದ ಮಹಿಳೆಯ ಮೃತದೇಹವನ್ನು ಹೊರತೆಗೆದು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಸ್ಮಶಾನಕ್ಕೆ ಮಹಿಳೆಯ ಶವವನ್ನು ಸಾಗಿಸಲು ಬಳಸಿದ ಆಟೋ ರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಈ ಶವವನ್ನು ಸ್ಮಶಾನಕ್ಕೆ ತಂದಾಗ ದಾಖಲೀಕರಣ ಮಾಡಿಕೊಂಡಿಲ್ಲ ಎಂಬ ಕಾರಣಕ್ಕೆ ಸ್ಮಶಾನದ (graveyard) ಉಸ್ತುವಾರಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ವಿಚಾರ ಮುಚ್ಚಿಡಲು ಈತ ಆರೋಪಿಗಳಿಂದ 5 ಸಾವಿರ ರೂಪಾಯಿ ಪಡೆದಿದ್ದ ಎಂದು ತಿಳಿದು ಬಂದಿದೆ.