ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಕೊಲೆ, ಸಹೋದರ ಸಂಬಂಧಿ ಮೇಲೆಯೇ ಶಂಕೆ, ದೂರು ದಾಖಲು ಮಾಡಿದ ಕೊಲೆಯಾದ ಯುವಕನ ತಾಯಿ. 

ಕಮಲಾಪುರ(ಮಾ.01): ಮಲಗಿದ್ದಾಗ ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಾಳಮಂದರ್ಗಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಕೊಲೆಯಾದವನನ್ನು ಭರತ ಸುಭಾಶ್ಚಂದ್ರ ವಾಡಿ (24) ಎಂದು ಗುರುತಿಸಲಾಗಿದೆ. ಇವರ ಸಂಬಂಧಿ ಮಲ್ಲಿಕಾರ್ಜುನ ಶಿವಶರಣಪ್ಪ ವಾಡಿ ಕೊಲೆ ಮಾಡಿ ಪರಾರಿಯಾಗಿರುವುದಾಗಿ ಕೊಲೆಯಾದ ಭರತನ ತಾಯಿ ಬಂಗಾರಮ್ಮ ಸುಭಾಶ್ಚಂದ್ರ ಕಮಲಾಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಮಲ್ಲಿಕಾರ್ಜುನನ ಮೊಬೈಲ್‌ನಲ್ಲಿದ್ದ ಸೀಮ್‌ ಕಾರ್ಡ್‌ ಹೊರತೆಗೆದು ಕಲ್ಲಿಗೆ ತಿಕ್ಕಿ ಭರತ ನಿಷ್ಕಿ್ರಯಗೊಳಿಸಿದ್ದ. ಇದೇ ಕಾರಣಕ್ಕೆ ಕುಡಿದ ಮತ್ತಿನಲ್ಲಿದ್ದ ಮಲ್ಲಿಕಾರ್ಜುನ ಭರತ ನಡುವೆ ಜಗಳ ಆರಂಭವಾಗಿದೆ. ಸಾರ್ವಜನಿಕರು ಬುದ್ಧಿ ಹೇಳಿ ಮನೆಗೆ ಕಳುಹಿಸಿದ್ದರು. ‘ಇವತ್ತು ಬಚಾವಾಗಿದ್ದಿಯಾ ಮತ್ತೆ ಒಬ್ಬನೆ ಸಿಕ್ಕಾಗ ನಿನ್ನನ್ನು ಕೊಲೆ ಮಾಡಿಯೇ ತೀರುತ್ತೇನೆ’ ಎಂದು ಮಲ್ಲಿಕಾರ್ಜುನ ಕಿರುಚುತ್ತಿದ್ದ ಎಂದು ಹೇಳಲಾಗಿದೆ. ಭರತನನ್ನು ಮನೆಗೆ ಕೊಂಡೊಯ್ದ ತಾಯಿ ಊಟ ಮಾಡಿಸಿ ಮಲಗಲು ತಿಳಿಸಿದ್ದಾರೆ. ಊಟ ಮುಗಿಸಿದ ಭರತ ಎಂದಿನಂತೆ ಶಾಲೆ ಕಟ್ಟಡದ ಮೇಲೆ ಮಲಗಿದ್ದ. ತಡ ರಾತ್ರಿ ಅಲ್ಲಿಗೆ ತೆರಳಿದ ಮಲ್ಲಿಕಾರ್ಜುನ ನಿದ್ರೆಯಲ್ಲಿದ್ದ ಭರತನ ತಲೆ ಮೇಲೆ ಕಲ್ಲು ಹಾಕಿದ್ದಾನೆ. ಭರತ ಸ್ಥಳದಲ್ಲೆ ಮೃತಪಟ್ಟಿದ್ದಾನೆ.

Murder case: ಪಕ್ಕದ ಮನೆಯವ್ಳ ಜತೆ ಮಾತಾಡಿದ ವಿಚಾರಕ್ಕೆ ಪತ್ನಿಯನ್ನು ಕೊಲೆ ಮಾಡಿ ಖಾಲಿ ಬ್ಯಾರಲ್‌ನಲ್ಲಿ ಬಚ್ಚಿಟ್ಟ ಪತಿ !

ಸಂಬಂಧಿ ಬಸವರಾಜ ಎಂಬಾತ ಮಂಗಳವಾರ ಬೆಳಗ್ಗೆ ಕೆಲಸಕ್ಕೆ ತೆರಳಲು ಭರತನನ್ನು ಕರೆಯಲು ಹೋಗಿದ್ದಾನೆ. ಭರತ ತಲೆ ರಕ್ತದ ಮಡುವಿನಲ್ಲಿರುವುದು ಕಂಡು ವಿಷಯ ಭರತನ ತಾಯಿ ಬಂಗಾರಮ್ಮಳಿಗೆ ತಿಳಿಸಿದ್ದಾನೆ. ಬಂದು ನೋಡುವಷ್ಟರಲ್ಲಿ ಭರತ ಮೃತಪಟ್ಟಿದ್ದ. ಈ ಕುರಿತು ಕಮಲಾಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಸಿಪಿಐ ವಿ.ನಾರಾಯಣ, ಪಿಎಸ್‌ ಐ ವಿಶ್ವನಾಥ ಮುದ್ದಾರೆಡ್ಡಿ, ರಾಜೇಂದ್ರ ರೆಡ್ಡಿ, ರಾಜಶೇಖರ್‌ ನಾಶಿ, ಹುಸೇನ ಭಾಷಾ, ಶರಣಬಸಪ್ಪ ಭೇಟಿ ಪರಿಶೀಲಿಸಿದ್ದು ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.