ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ, ಯಶಸ್ವಿ ಜೈಸ್ವಾಲ್ ಅವರು ಐಪಿಎಲ್ ಆಸೆ ತೋರಿಸಿ ನಿರ್ಶೊನ್ ಡಿಕ್ವೆಲ್ಲಾ ಅವರನ್ನು ಸ್ಲೆಡ್ಜ್ ಮಾಡಿದರು. ಈ ಮಾತುಕತೆಯ ನಂತರದ ಎಸೆತದಲ್ಲೇ ಡಿಕ್ವೆಲ್ಲಾ ಔಟಾದರು, ಇದು ಭಾರತದ 165 ರನ್‌ಗಳ ಭರ್ಜರಿ ಗೆಲುವಿಗೆ ಸಾಕ್ಷಿಯಾಯಿತು.

ಗಾಲೆ: ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಇನ್ನು ಈ ಪಂದ್ಯದ ಕೊನೆಯ ದಿನದಾಟದ ವೇಳೆಯಲ್ಲಿ ಟೀಂ ಇಂಡಿಯಾ ಬ್ಯಾಟರ್ ಯಶಸ್ವಿ ಜೈಸ್ವಾಲ್, ಲಂಕಾದ ಬ್ಯಾಟರ್‌ ನಿರ್ಶೊನ್ ಡಿಕ್ವೆಲ್ಲಾ ಅವರಿಗೆ ಐಪಿಎಲ್ ಆಸೆ ತೋರಿಸಿ ಔಟ್ ಮಾಡಿದ ವಿಚಿತ್ರ ಘಟನೆಗೆ ಗಾಲೆ ಸ್ಟೇಡಿಯಂ ಸಾಕ್ಷಿಯಾಗಿದೆ. ಜೈಸ್ವಾಲ್ ಹಾಗೂ ಡಿಕ್ವೆಲ್ಲಾ ಮಾತುಕತೆ ನಡೆದ ಮರು ಎಸೆತದಲ್ಲಿಯೇ ಲಂಕಾ ಬ್ಯಾಟರ್‌ ವಿಕೆಟ್ ಒಪ್ಪಿಸಿದ್ದಾರೆ.

ಯಶಸ್ವಿ ಜೈಸ್ವಾಲ್ ಪದೇ ಪದೇ, ನಿರ್ಶೋನ್ ಡಿಕ್ವೆಲ್ಲಾ ಅವರ ಬಳಿ ಬಂದು ಸಿಕ್ಸರ್ ಬಾರಿಸಿ ತೋರಿಸು ಎಂದು ಸ್ಲೆಡ್ಜ್ ಮಾಡಲಾರಂಭಿಸಿದರು. ಆಗ ಐಪಿಎಲ್‌ನಲ್ಲಿ ನನ್ನ ತೆಗೆದುಕೊಳ್ಳಿ ಖಂಡಿತ ಸಿಕ್ಸರ್ ಬಾರಿಸುತ್ತೇನೆ ಎಂದು ಡಿಕ್ವೆಲ್ಲಾ ಹೇಳುತ್ತಾರೆ. ಆಗ ಜೈಸ್ವಾಲ್, ನಾವು 100% ಐಪಿಎಲ್‌ನಲ್ಲಿ ನಿನ್ನ ಖರೀದಿಸುತ್ತೇವೆ. ಸಿಕ್ಸ್ ಹೊಡೆದು ತೋರಿಸು ಎನ್ನುತ್ತಾರೆ. ಇದಾದ ಬಳಿಕ ಪ್ರಸಿದ್ದ್ ಕೃಷ್ಣ ಎಸೆದ ಚೆಂಡನ್ನು ಸಿಕ್ಸರ್ ಬಾರಿಸುವ ಯತ್ನದಲ್ಲಿ ಡಿಕ್ವೆಲ್ಲಾ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರುತ್ತಾರೆ.

ಹೀಗಿತ್ತು ಜೈಸ್ವಾಲ್-ಡಿಕ್ವೆಲ್ಲಾ ವೈರಲ್ ಮಾತುಕತೆ:

ಜೈಸ್ವಾಲ್: ಕಮಾನ್ ಯಾರ್, ಮೊದಲ ಇನ್ನಿಂಗ್ಸ್‌ನಲ್ಲಿ ತುಂಬಾ ಚೆನ್ನಾಗಿ ಒಳ್ಳೊಳ್ಳೆಯ ಶಾಟ್ ಹೊಡೆದಿದ್ದೀರ. ನಾವು ಈ ಇನ್ನಿಂಗ್ಸ್‌ನಲ್ಲೂ ಅಂತ ಇನ್ನಿಂಗ್ಸ್‌ಗಾಗಿ ಕಾಯುತ್ತಿದ್ದೇವೆ.

ಡಿಕ್ವೆಲ್ಲಾ: ಹೌದಾ? ನಿಜವಾ?

ಜೈಸ್ವಾಲ್: ಖಂಡಿತವಾಗಿ, ನಾನು ಅದನ್ನೇ ಎದುರು ನೋಡುತ್ತಿದ್ದೇನೆ. ಡೀಪ್‌ ಸ್ಕ್ವೇರ್ ಲೆಗ್ ಕಡೆ ಬೌಂಡರಿ ಬಾರಿಸಿ ತೋರಿಸು. ನಿನಗ್ಯಾಕೆ ಸಾಧ್ಯವಾಗಲ್ಲ ನೋಡೋಣ.

ಡಿಕ್ವೆಲ್ಲಾ: ನನಗೆ ಸದ್ಯಕ್ಕೆ ಅಗತ್ಯವಿಲ್ಲ. ನನ್ನನ್ನು ಐಪಿಎಲ್‌ಗೆ ಕರೆದುಕೊಳ್ಳಿ, ಆಗ ನಾನು ಸಿಕ್ಸರ್ ಬಾರಿಸುತ್ತೇನೆ.

ಜೈಸ್ವಾಲ್: ಹೌದಾ, ಖಂಡಿತವಾಗಿಯೂ, 100% ನಿಮ್ಮನ್ನು ಐಪಿಎಲ್‌ಗೆ ತೆಗೆದುಕೊಳ್ಳುತ್ತೇವೆ. ಆತನಿಗೆ ಸಿಕ್ಸರ್ ಬಾರಿಸಿ ತೋರಿಸು ಎಂದು ಜೈಸ್ವಾಲ್ ಸ್ಲೆಡ್ಜ್ ಮಾಡುತ್ತಾರೆ.

Scroll to load tweet…

ಇದಾದ ಮರು ಎಸೆತದಲ್ಲೇ ಡಿಕ್ವೆಲ್ಲಾ ಬೌಂಡರಿ ಬಾರಿಸುವ ಪ್ರಯತ್ನದಲ್ಲಿ ಪ್ರಸಿದ್ದ್ ಕೃಷ್ಣ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಕ್ಯಾಚಿತ್ತು ಪೆವಿಲಿಯನ್ ಹಾದಿ ಹಿಡಿದರು. ಇದರೊಂದಿಗೆ ಕೊನೆಗೂ ಜೈಸ್ವಾಲ್ ಸ್ಲೆಡ್ಜಿಂಗ್ ವರ್ಕೌಟ್ ಆಯ್ತು.

ಗಾಲೆ ಟೆಸ್ಟ್ ಗೆದ್ದು ಬೀಗಿದ ಟೀಂ ಇಂಡಿಯಾ:

ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲು 372 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು ಮಾನವ್ ಸುತಾರ್ ಮಾರಕ ದಾಳಿಗೆ ತತ್ತರಿಸಿ 206 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಟೀಂ ಇಂಡಿಯಾ ಮೊದಲ ಟೆಸ್ಟ್‌ನಲ್ಲಿ 165 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಮೊದಲ ಟೆಸ್ಟ್‌ನಲ್ಲಿ ಶ್ರೀಲಂಕಾ ಎದುರು ಮಾನವ್ ಸುತಾರ್ 10 ವಿಕೆಟ್ ಕಬಳಿಸಿ ಮಿಂಚಿದರು. ಇದೀಗ ಎರಡನೇ ಟೆಸ್ಟ್ ಪಂದ್ಯವು ಆಗಸ್ಟ್ 23ರಿಂದ ಕೊಲಂಬೊದಲ್ಲಿ ಆರಂಭವಾಗಲಿದೆ.