ಬಿಸಿಸಿಐನಲ್ಲಿ ಬದಲಾವಣೆಯ ಗಾಳಿ ಬೀಸುವ ಮುನ್ಸೂಚನೆ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ಬಿಸಿಸಿಐ ‘ಡೈರೆಕ್ಟರ್ ಆಫ್ ಕ್ರಿಕೆಟ್’ ಎಂಬ ಹೊಸ ಹುದ್ದೆಯನ್ನ ಸೃಷ್ಟಿಸಲು ಮುಂದಾಗಿದೆ. ಮೊದಲ ಬಾರಿಗೆ ವಿವಿಎಸ್ ಲಕ್ಷ್ಮಣ್ ಅವರು ಆ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಅವರ ಕಾರ್ಯವೈಖರಿಗಳು ಈ ಸ್ಟೋರಿಯಲ್ಲಿವೆ..

ಬೆಂಗಳೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತನ್ನ ಆಡಳಿತ ರಚನೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ. ಟೀಮ್ ಇಂಡಿಯಾದ ಮಾಜಿ ದಿಗ್ಗಜ ಬ್ಯಾಟರ್ ವಿವಿಎಸ್ ಲಕ್ಷ್ಮಣ್ ಅವರಿಗೆ ದೊಡ್ಡ ಜವಾಬ್ದಾರಿ ನೀಡಲು ಸಜ್ಜಾಗಿದೆ. ಪ್ರಸ್ತುತ ಬೆಂಗಳೂರಿನ 'ಸೆಂಟರ್ ಆಫ್ ಎಕ್ಸಲೆನ್ಸ್' (CoE) ಮುಖ್ಯಸ್ಥರಾಗಿರುವ ಲಕ್ಷ್ಮಣ್, ಶೀಘ್ರದಲ್ಲೇ ಬಿಸಿಸಿಐನ 'ಡೈರೆಕ್ಟರ್ ಆಫ್ ಕ್ರಿಕೆಟ್' (Director of Cricket) ಆಗಿ ನೇಮಕಗೊಳ್ಳುವ ಸಾಧ್ಯತೆಯಿದೆ.

ಸೆಪ್ಟೆಂಬರ್‌ನಲ್ಲಿ ಮಹತ್ವದ ಬದಲಾವಣೆ

ಮೂಲಗಳ ಪ್ರಕಾರ, ಸೆಪ್ಟೆಂಬರ್ ತಿಂಗಳಿನಲ್ಲಿ ಬಿಸಿಸಿಐ ಪ್ರಮುಖ ಹುದ್ದೆಗಳ ಮರುಹಂಚಿಕೆ ಮಾಡಲಿದೆ. ಹಿರಿಯ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಸೆಪ್ಟೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿದ್ದು, ಇದೇ ವೇಳೆ ಲಕ್ಷ್ಮಣ್ ಅವರ ಹೊಸ ಹುದ್ದೆಯ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.

ಡೈರೆಕ್ಟರ್ ಆಫ್ ಕ್ರಿಕೆಟ್ ಹುದ್ದೆ?

ಲಕ್ಷ್ಮಣ್ ಅವರಿಗೆ ನೀಡಲು ಉದ್ದೇಶಿಸಿರುವ ಈ ಹೊಸ ಹುದ್ದೆಯು ಭಾರತೀಯ ಕ್ರಿಕೆಟ್‌ನ ಸಮಗ್ರ ಕಾರ್ಯಾಚರಣೆಯ ಕೇಂದ್ರಬಿಂದುವಾಗಿರಲಿದೆ. ಇದರ ಪ್ರಮುಖ ಜವಾಬ್ದಾರಿಗಳು ಹೀಗಿರಲಿವೆ.. ಹಿರಿಯ ರಾಷ್ಟ್ರೀಯ ತಂಡ, ಆಯ್ಕೆ ಸಮಿತಿ, ತರಬೇತುದಾರರು ಮತ್ತು ಸೆಂಟರ್ ಆಫ್ ಎಕ್ಸಲೆನ್ಸ್ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುವುದು. ದೇಶದ ವಿವಿಧ ಹಂತದ ಕ್ರಿಕೆಟ್‌ನಲ್ಲಿ ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವುದು. 2027ರ ಏಕದಿನ ವಿಶ್ವಕಪ್ ಸೇರಿದಂತೆ ಭವಿಷ್ಯದ ದೊಡ್ಡ ಟೂರ್ನಿಗಳಿಗಾಗಿ ತಂಡವನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಲಕ್ಷ್ಮಣ್ ಆಯ್ಕೆಗೆ ಕಾರಣವೇನು?

ರಾಹುಲ್ ದ್ರಾವಿಡ್ ಅವರ ನಂತರ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಮೊದಲು ಕೇಳಿಬಂದ ಹೆಸರು ವಿವಿಎಸ್ ಲಕ್ಷ್ಮಣ್ ಅವರದ್ದು. ಆದರೆ, ಅವರು ಬೆಂಗಳೂರಿನಲ್ಲೇ ಉಳಿದು ಯುವ ಆಟಗಾರರ ಅಭಿವೃದ್ಧಿಗೆ ಶ್ರಮಿಸಲು ಆಸಕ್ತಿ ತೋರಿದ್ದರು. ಇತ್ತೀಚೆಗೆ ಜಿಂಬಾಬ್ವೆ ಪ್ರವಾಸದ ವೇಳೆ ಯುವ ಭಾರತ ತಂಡಕ್ಕೆ ಮಾರ್ಗದರ್ಶನ ನೀಡಿ 3-0 ಅಂತರದ ಜಯ ತಂದುಕೊಟ್ಟಿದ್ದು ಲಕ್ಷ್ಮಣ್ ಅವರ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ.

ಅಗರ್ಕರ್ ಭವಿಷ್ಯವೇನು?

ಒಂದೆಡೆ ಲಕ್ಷ್ಮಣ್ ಅವರಿಗೆ ಬಡ್ತಿ ನೀಡುವ ಮಾತು ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿಯನ್ನು 2027ರ ಜೂನ್ ವರೆಗೆ ವಿಸ್ತರಿಸುವ ಬಗ್ಗೆಯೂ ಬಿಸಿಸಿಐನಲ್ಲಿ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ. ಒಟ್ಟಿನಲ್ಲಿ, ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಲಕ್ಷ್ಮಣ್ ಅವರಿಗೆ 'ಡೈರೆಕ್ಟರ್ ಆಫ್ ಕ್ರಿಕೆಟ್' ಪಟ್ಟ ಕಟ್ಟುವ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಯುಗ ಆರಂಭಿಸಲು ಬಿಸಿಸಿಐ ಮುಂದಾಗಿದೆ.