ಐಪಿಎಲ್ನ ಲೈವ್ ಕಾಮೆಂಟರಿ ವೇಳೆ ವೀರೇಂದ್ರ ಸೆಹ್ವಾಗ್ ಮತ್ತು ಆರ್ ಅಶ್ವಿನ್ ನಡುವೆ ವಾಕ್ಸಮರ ನಡೆದಿದೆ. ಸೆಹ್ವಾಗ್ ಅವರ ಹಾಸ್ಯಮಯ ಕಾಲೆಳೆಯುವ ಮಾತಿಗೆ ಸಿಡಿಮಿಡಿಗೊಂಡ ಅಶ್ವಿನ್ ತಿರುಗೇಟು ನೀಡಿದ್ದು, ಇಬ್ಬರ ನಡುವಿನ ವಾಗ್ವಾದದಿಂದಾಗಿ ಬಿಸಿಸಿಐ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ವರದಿಯಾಗಿದೆ.
ಕ್ಯಾಮರಾ ಮುಂದೆಯೇ ಆರ್ ಅಶ್ವಿನ್, ವೀರೇಂದ್ರ ಸೆಹ್ವಾಗ್ ಕಿತ್ತಾಟ
ಬೆಂಗಳೂರು: ನಿನ್ನೆಯಷ್ಟೇ ಈ ವರ್ಷದ ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಮೊದಲ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಈ ಉದ್ಘಾಟನಾ ಪಂದ್ಯದಲ್ಲಿ, ಆರ್ಸಿಬಿ ತಂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ಗಳಿಸಿತು. ಆದರೆ ನಿನ್ನೆಯ ಮ್ಯಾಚ್ನ ಲೈವ ಕಾಮೆಂಟರಿ ವೇಳೆ ಕಾಮೆಂಟೆಟರ್ ಹಾಗೂ ಇಬ್ಬರು ಕ್ರಿಕೆಟ್ ದಿಗ್ಗಜರಾದ ವೀರೇಂದ್ರ ಸೆಹ್ವಾಗ್ ಹಾಗೂ ಆರ್ ಅಶ್ವಿನ್ ಲೈವ್ನಲ್ಲೇ ಪರಸ್ಪರ ವಾಕ್ಸಮರ ನಡೆಸಿದ್ದು, ಇದು ಮುಜುಗರಕ್ಕೆ ಕಾರಣವಾಗಿದೆ. ತಾಳ್ಮೆ ಕಳೆದುಕೊಂಡು ಕ್ಯಾಮರಾ ಮುಂದೆಯೇ ಕಿತ್ತಾಡಿದ ಈ ಇಬ್ಬರ ವಿರುದ್ಧ ಈಗ ಕ್ರಮ ಕೈಗೊಳ್ಳುವುದಕ್ಕೆ ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ.
ಸೆಹ್ವಾಗ್ ಮಾತಿಗೆ ಆರ್ ಅಶ್ವಿನ್ ತಿರುಗೇಟು
ಹೌದು ನಿನ್ನೆಯಷ್ಟೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ವರ್ಷದ ಮೊದಲ ಐಪಿಎಲ್ ಪಂದ್ಯ ನಡೆಯಿತು. ಈ ಪಂದ್ಯದ ವೇಳೆ ತಮ್ಮ ಚೊಚ್ಚಲ ಕ್ರಿಕೆಟ್ ಕಾಮೆಂಟರಿ ಹೇಳುವುದಕ್ಕೆ ಕ್ರಿಕೆಟರ್ ಆರ್ ಅಶ್ವಿನ್ ಆಗಮಿಸಿದ್ದರು. ಆದರೆ ಅವರು ಕಾಮೆಂಟರಿ ಬಾಕ್ಸ್ಗೆ ಬರುತ್ತಿದ್ದಂತೆ ಅಲ್ಲೇ ಇದ್ದ ಸೆಹ್ವಾಗ್ ಹಾಸ್ಯಮಯವಾಗಿ ಅವರ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಇವತ್ತಾದರೂ ಜನ ತಮ್ಮ ಹೃದಯದಿಂದ ಮಾತನಾಡಲಿದ್ದಾರೆ ಹಾಗೂ ಮಾತನಾಡುವ ಮೊದಲು ಜಾಸ್ತಿ ಯೋಚನೆ ಮಾಡುವುದಿಲ್ಲ ಎಂದು ಭಾವಿಸುವೆ ಎಂದು ಹೇಳಿದ್ದಾರೆ. ವೀರೇಂದ್ರ ಸೆಹ್ವಾಗ್ ಈ ಮಾತಿಗೆ ಆರ್ ಅಶ್ವಿನ್ ಸಿಡಿಮಿಡಿಗೊಂಡಿದ್ದು, ನನ್ನ ಪೋಷಕರು ನನಗೆ ಯಾವಾಗಲೂ ಮಾತನಾಡುವ ಮೊದಲು ಯೋಚಿಸಿ ಮಾತನಾಡುವಂತೆ ಹೇಳಿಕೊಟ್ಟಿದ್ದಾರೆ ಹಾಗೂ ನಾನು ಯೋಚನೆ ಮಾಡದೇ ಎಂದಿಗೂ ಯಾವ ಮಾತನ್ನೂ ಆಡುವುದಿಲ್ಲ ಎಂದು ಆರ್ ಅಶ್ವಿನ್ ಹೇಳಿದ್ದಾರೆ.
ಇದನ್ನೂ ಓದಿ: ಥಾರ್ ಮಹೀಂದ್ರಾ ಡಿಕ್ಕಿ ಬೇಸಿಗೆ ರಜೆ ಕಳೆಯಲು ಅಜ್ಜನ ಮನೆಗೆ ಬಂದ ಇಬ್ಬರು ಮೊಮ್ಮಕ್ಕಳು ಹಾಗೂ ಅಜ್ಜ ಸಾವು
ಈ ಮಾತಿನ ನಂತರ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಇಬ್ಬರ ವಾಕ್ಸಮರದಿಂದಾಗಿ ಕಾಮೆಂಟರಿ ಬಾಕ್ಸ್ನಲ್ಲಿ ವಾತಾವರಣ ಬಿಸಿಯೇರಿ ಆತಂಕಕ್ಕೇ ಕಾರಣವಾಗಿತ್ತು. ಈ ಹಿನ್ನೆಲೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಈ ಇಬ್ಬರು ಮಾಜಿ ಕ್ರಿಕೆಟರ್ಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ. ಕ್ರಿಕೆಟ್ ಅನ್ನು ವಿಶ್ಲೇಷಿಸುವುದು ಕಾಮೆಂಟರಿ ಪ್ಯಾನೆಲ್ನ ಕೆಲಸ, ಆದರೆ ವೈಯಕ್ತಿಕ ವಾದಗಳು ಮತ್ತು ಹಳೆಯ ಪೈಪೋಟಿ ಸಾರ್ವಜನಿಕವಾಗಿ ಹೊರಬಂದರೆ, ಬಿಸಿಸಿಐ ಕಠಿಣ ಕ್ರಮ ಕೈಗೊಳ್ಳಬಹುದು.. ಆದರೆ ಬಿಸಿಸಿಐ ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇದುವರೆಗೆ ಬಂದಿಲ್ಲ, ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ಜನ ಈ ವಿಚಾರದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬ್ಯಾಂಕ್ ಖಾತೆಗೆ ಅಚಾನಕ್ ಆಗಿ ಬಂದು ಬಿತ್ತು 10 ಕೋಟಿ: ಮಹಿಳೆ ಮಾಡಿದ್ದೇನು?
ಅಶ್ವಿನ್ ಈ ಕಾಮೆಂಟರಿ ಪಾತ್ರದಲ್ಲಿ ಚೆನ್ನಾಗಿ ನಟಿಸಲು ಸಾಧ್ಯವಿಲ್ಲ ಮತ್ತು ಸುಲಭವಾಗಿ ಅವರನ್ನು ಕೆರಳಿಸಬಹುದು. ಇದೆಲ್ಲವೂ ಅವರ ಸ್ವಂತ YT ಚಾನೆಲ್ನಲ್ಲಿ ಚೆನ್ನಾಗಿ ನಡೆಯಬಹುದು ಏಕೆಂದರೆ ಅವರು ಕೆಟ್ಟದಾಗಿ ಮಾತನಾಡಬಹುದು ಮತ್ತು ಅವರೇ ಅಲ್ಲಿ ಬಾಸ್ ಆದರೆ ಇಲ್ಲಿ ಯಾವಾಗಲೂ ಅವರ ಮುಖವನ್ನು ನೋಡಿಕೊಂಡು ಮಾತನಾಡುವ ಜನ ಇರುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಶ್ವಿನ್ ಯೂಟ್ಯೂಬ್ನಲ್ಲಿಯೇ ಇದ್ದು, ಅಲ್ಲಿಂದಲೇ ವಿಶ್ಲೇಷಣೆ ಮಾಡಬೇಕಿತ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಲ್ಲಿ ಕೆರಳಿಸಿದ್ದು ಯಾರು? ಅಶ್ವಿನ್ ಕ್ರಿಕೆಟ್ ಅನ್ನು ವಿಶ್ಲೇಷಿಸಲು ಇದ್ದಾರೆಯೇ ಹೊರತು ಸೆಹ್ವಾಗ್ ಅವರಂತೆ ರಬ್ಬಿಶ್ ಮಾತನಾಡಲು ಅಲ್ಲ ಎಂದು ಒಬ್ಬರು ಅಶ್ವಿನ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ವಾಸ್ತವವೆಂದರೆ ಅವರು ಹೊಸ ಕಾಮೆಂಟೇಟರ್ಗಳನ್ನು ದ್ವೇಷಿಸುತ್ತಾರೆ. ಜಹೀರ್ ಖಾನ್ ಕೂಡ ಅಶ್ವಿನ್ ಗುಂಪಿಗೆ ಸೇರಿದಾಗ ಅವರನ್ನು ಕಾಡಿಸಿದ್ದರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಸೆಹ್ವಾಗ್ ಕೂಡ ಹೇಗೆ ವೃತ್ತಿಪರ ಆಗಿರಬೇಕು ಎಂಬುದನ್ನು ಕಲಿಯಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.


