ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ತಲೆದಂಡಕ್ಕೆ ಬಿಸಿಸಿಐ ಮುಂದಾಗಿದೆ. ಜಿಂಬಾಬ್ವೆ ಸರಣಿ ವರೆಗೆ ದಿಲೀಪ್ ಅವಧಿ ಇದ್ದರೂ ವಿಶ್ರಾಂತಿ ನೀಡಲಾಗುತ್ತಿದೆ. ಇಷ್ಟೇ ಅಲ್ಲ ಜಿಂಬಾಬ್ವೆ ಸರಣಿ ಬಳಿಕ ದಿಲೀಪ್‌ಗೆ ಗೇಟ್ ಪಾಸ್ ನೀಡಲು ಬಿಸಿಸಿಐ ತಯಾರಿ ನಡೆಸಿದೆ.

ಮುಂಬೈ (ಜು.21) ಟೀಂ ಇಂಡಿಯಾದ ಸತತ ಸೋಲು ಹಲವು ಬದಲಾವಣೆಗೆ ಕಾರಣವಾಗುತ್ತಿದೆ. ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸ ಟೀಂ ಇಂಡಿಯಾ, ಬಿಸಿಸಿಐ ಪಾಲಿಗೆ ತೀವ್ರ ಹಿನ್ನಡೆ ಕೊಟ್ಟ ಸರಣಿ. ಟೀಂ ಇಂಡಿಯಾ ಆಯ್ಕೆ, ತಂಡದ ಬ್ಯಾಟಿಂಗ್, ಬೌಲಿಂಗ್ ಹಾಗೂ ಕಳೆದೆರಡು ವರ್ಷದಿಂದ ಟೀಂ ಇಂಡಿಯಾ ಫೀಲ್ಡಿಂಗ್ ಗುಣಮಟ್ಟ ಕಡಿಮೆಯಾಗುತ್ತಿದೆ ಅನ್ನೋ ದಾಖಲೆಯನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ. ಇದರ ಪರಿಣಾಮ ಮುಂಬರುವ ಜಿಂಬಾಬ್ವೆ ಪ್ರವಾಸಕ್ಕೆ ತಾತ್ಕಾಲಿಕ ಫೀಲ್ಡಿಂಗ್ ಕೋಚ್ ಮೂಲಕ ಟೀಂ ಇಂಡಿಯಾ ಪ್ರಯಾಣ ಬೆಳೆಸಲಿದೆ. ಟಿ ದಿಲೀಪ್‌ಗೆ ಉದ್ದೇಶಪೂರ್ವಕ ವಿಶ್ರಾಂತಿ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಜಿಂಬಾಬ್ವೆ ಸರಣಿ ಬಳಿಕ ಟಿ ದಿಲೀಪ್ ತಂಡದಿಂದ ಔಟ್

ಟಿ ದಿಲೀಪ್ ವಿಸ್ತರಣೆ ಅವಧಿ ಜಿಂಬಾಬ್ವೆ ಸರಣಿವರಿಗಿದೆ. ಆದರೆ ಜಿಂಬಾಬ್ಬೆ ಸರಣಿಗೆ ಟಿ ದಿಲೀಪ್ ತಂಡದ ಜೊತೆ ಪ್ರವಾಸ ಮಾಡುತ್ತಿಲ್ಲ. ಟಿ ದಿಲೀಪ್‌ಗೆ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. ರಾಹುಲ್ ದ್ರಾವಿಡ್ ಪ್ರಧಾನ ಕೋಚ್ ಸಮಯದಲ್ಲಿ ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಆಗಿ ಸೇರಿಕೊಂಡ ಟಿ ದಿಲೀಪ್ ಬಳಿಕ ಗೌತಮ್ ಗಂಭೀರ್ ಕೋಚ್ ಸಮಯದಲ್ಲೂ ಅವಧಿ ವಿಸ್ತರಣೆ ಪಡೆದಿದ್ದಾರೆ. ಇದೀಗ ಟಿ ದಿಲೀಪ್ ಅವಧಿ ವಿಸ್ತರಣೆ ಮಾಡದಿರಲು ಬಿಸಿಸಿಐ ನಿರ್ಧರಿಸಿದೆ.ಸದ್ಯ ಅಮಾನತು ಮಾಡಿದರೆ ಟೀಕೆ, ಆರೋಪಗಳು ತೀವ್ರಗೊಳ್ಳಲಿದೆ ಅನ್ನೋ ಕಾರಣಕ್ಕೆ ಬಿಸಿಸಿಐ ಜಿಂಬಾಬ್ವೆ ಪ್ರವಾಸ ಬಳಿಕ ಟಿ ದಿಲೀಪ್ ಅವಧಿ ವಿಸ್ತರಣೆ ಮಾಡದೆ ಹೊಸ ಫೀಲ್ಡಿಂಗ್ ಕೋಚ್ ಆಯ್ಕೆಗೆ ಬಿಸಿಸಿಐ ಮುಂದಾಗಿದೆ. ಈ ಕುರಿತು ಕ್ರೀಡಾ ಪತ್ರಕರ್ತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ವಿವಿಎಸ್ ಲಕ್ಷ್ಮಣ್ ಕೋಚಿಂಗ್ ತಂಡದಲ್ಲಿ ಹೊಸ ಸ್ಟಾಫ್

ಜಿಂಬಾಬ್ವೆ ಪ್ರವಾಸದಂದ ಗೌತಮ್ ಗಂಭೀರ್‌ಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ವಿವಿಎಸ್ ಲಕ್ಷ್ಮಣ್‌ಗೆ ಜವಾಬ್ದಾರಿ ನೀಡಲಾಗಿದೆ. ವಿವಿಎಸ್ ಲಕ್ಷ್ಣಣ್ ಪ್ರಧಾನ ಕೋಚ್ ಆದರೆ, ಹೊಸ ಫೀಲ್ಡಿಂಗ್ ಕೋಚ್ ತಂಡ ಸೇರಿಕೊಳ್ಳಲಿದ್ದಾರೆ. ಜಿಂಬಾಬ್ವೆ ಪ್ರವಾಸದಲ್ಲಿ ತಂಡದ ಒಗ್ಗಟ್ಟು, ಪ್ರದರ್ಶನ ಸೇರಿದಂತೆ ಹಲವು ಇತರ ಕಾರಣಗಳನ್ನು ಪರಾಮರ್ಶೆ ನಡೆಸಲಾಗುತ್ತದೆ. ಬಳಿಕ ಕೋಚ್ ಹಾಗೂ ಸ್ಟಾಫ್ ಕುರಿತು ನಿರ್ಧಾರವನ್ನು ಬಿಸಿಸಿಐ ತೆಗೆದುಕೊಳ್ಳಲಿದೆ.

ರೋಹಿತ್ ಶರ್ಮಾರಿಂದ ಜೀವದಾನ ಪಡೆದಿದ್ದ ಟಿ ದಿಲೀಪ್

2024-25ರ ಬಾರ್ಡರ್ ಗವಾಸ್ಕರ್ ಟ್ರೋಫಿ ಬಳಿಕ ಭಾರತದ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಕರಿಯರ್ ಬಹುತೇಕ ಅಂತ್ಯಗೊಂಡಿತ್ತು. ಟೀಂ ಇಂಡಿಯಾ ಕಳಪೆ ಫೀಲ್ಡಿಂಗ್‌‌ನಿಂದ ಹಲವು ಗೆಲುವು ಕೈತಪ್ಪಿತ್ತು. ಹೀಗಾಗಿ ಟಿ ದಿಲೀಪ್ ಅವಧಿ ವಿಸ್ತರಣೆ ಮಾಡದಿರಲು ಬಿಸಿಸಿಐ ಮುಂದಾಗಿತ್ತು. ಆದರೆ ನಾಯಕ ರೋಹಿತ್ ಶರ್ಮಾ ಮಧ್ಯಪ್ರವೇಶಿಸಿದ್ದರು. ಟಿ ದಿಲೀಪ್ ರಿಟೇನ್ ಮಾಡುವಂತೆ ಕೋಚ್ ಗಂಭೀರ್ ಹಾಗೂ ಟೀಂ ಮ್ಯಾನೇಜ್ಮೆಂಟ್‌ಗೆ ಮನವಿ ಮಾಡಿದ್ದರು. ಹೀಗಾಗಿ 2025ರ ಚಾಂಪಿಯನ್ಸ್ ಟ್ರೋಫಿ ಬಳಿಕ ಮತ್ತೊಂದು ವರ್ಷಕ್ಕೆ ಟಿ ದಿಲೀಪ್ ಅವಧಿ ವಿಸ್ತರಣೆ ಮಾಡಲಾಗಿತ್ತು.