Asianet Suvarna News Asianet Suvarna News

ವಿಶ್ವಕಪ್‌ ಆಡಿಷನ್‌ನಲ್ಲಿ ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್‌ ಫೇಲ್‌..!

* ಭಾರತ-ವೆಸ್ಟ್‌ ಇಂಡೀಸ್ ಸರಣಿಯಲ್ಲಿ ಸಿಕ್ಕ ಅವಕಾಶ ಬಳಸಿಕೊಳ್ಳಲು ಸಂಜು-ಸೂರ್ಯ ವಿಫಲ
* ವಿಶ್ವಕಪ್‌ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಇದ್ದ ಸುವರ್ಣಾವಕಾಶ
* ಈ ಇಬ್ಬರಿಗೂ ಮತ್ತೆ ಸಿಗುತ್ತಾ ಏಕದಿನ ಕ್ರಿಕೆಟ್ ತಂಡದಲ್ಲಿ ಚಾನ್ಸ್?

Sanju Samson and Suryakumar Yadav fail to perform for World Cup Addition kvn
Author
First Published Jul 31, 2023, 10:18 AM IST

ಬ್ರಿಡ್ಜ್‌ಟೌನ್‌: ಏಕದಿನ ವಿಶ್ವಕಪ್‌ ಹತ್ತಿರವಾಗುತ್ತಿದ್ದಂತೆ ಭಾರತದ ಸಮಸ್ಯೆಯೂ ಹೆಚ್ಚುತ್ತಿದೆ. ವಿಂಡೀಸ್‌ ವಿರುದ್ಧ ಶನಿವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ ಎದುರಾದ 6 ವಿಕೆಟ್‌ ಸೋಲನ್ನು ಕೇವಲ ಒಂದು ಫಲಿತಾಂಶವನ್ನಾಗಷ್ಟೇ ನೋಡದೆ, ತಂಡದ ವಿಶ್ವಕಪ್‌ ಸಿದ್ಧತೆಯ ದೃಷ್ಟಿಯಿಂದ ನೋಡಿದಾಗ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಯಾರು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ ಎನ್ನುವುದು ಸ್ಪಷ್ಟವಾಗಲಿದೆ.

ವಿಶ್ವಕಪ್‌ಗೆ ಆಯ್ಕೆ ರೇಸ್‌ನಲ್ಲಿರುವ ಆಟಗಾರರಿಗೆ ಹೆಚ್ಚಿನ ಅವಕಾಶ ಸಿಗಲಿ ಎನ್ನುವ ಉದ್ದೇಶದಿಂದ ಈ ಸರಣಿಯಲ್ಲಿ ಭಾರತ ಕೆಲ ಅಚ್ಚರಿಯ ಪ್ರಯೋಗಗಳಿಗೆ ಮುಂದಾಗಿದೆ. ಏಷ್ಯಾಕಪ್‌ ಹಾಗೂ ವಿಶ್ವಕಪ್‌ಗೂ ಮುನ್ನ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯುವುದು ಮುಖ್ಯವೆನಿಸಿದರೂ, ಇವರಿಬ್ಬರಿಗೂ ‘ಅಗತ್ಯ’ವಿಲ್ಲದೆ ಇದ್ದರೂ ವಿಶ್ರಾಂತಿ ನೀಡಿ, 2ನೇ ಏಕದಿನದಲ್ಲಿ ವಿಶ್ವಕಪ್‌ಗೆ ‘ಆಡಿಷನ್‌’ ನಡೆಸಲಾಯಿತು. ಆದರೆ ಬ್ಯಾಟರ್‌ಗಳ ದಯನೀಯ ವೈಫಲ್ಯ ತಂಡದ ಆಡಳಿತವನ್ನು ಮುಜುಗರಕ್ಕೆ ಸಿಲುಕಿಸಿತು.

ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಭಾರತ, ಆಕ್ರಮಣಕಾರಿಯಾಗಿ ಆಡಿ ದೊಡ್ಡ ಮೊತ್ತ ದಾಖಲಿಸುವ ಇರಾದೆಯನ್ನೇ ತೋರಲಿಲ್ಲ. ಎಲ್ಲರೂ ತಮ್ಮ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲಷ್ಟೇ ಆಡುತ್ತಿದ್ದಾರೆ ಎನ್ನುವ ಭಾವನೆ ನೋಡುಗರಲ್ಲಿ ಮೂಡಿದ್ದು ಸುಳ್ಳಲ್ಲ.

ವೆಸ್ಟ್ ಇಂಡೀಸ್‌ ಗೆದ್ರೆ ಫ್ರೀ ರಮ್‌ ಆಫರ್‌..! ಬರ್ಬೇಕಾದ್ರೆ ರಮ್‌ ತನ್ನಿ ಎಂದ ವಿಂಡೀಸ್‌..!

ಪ್ರಮುಖವಾಗಿ ಸೂರ್ಯಕುಮಾರ್‌ ಯಾದವ್‌ ಹಾಗೂ ಸಂಜು ಸ್ಯಾಮ್ಸನ್‌ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿತ್ತು. ಇಬ್ಬರೂ ನಿರೀಕ್ಷೆ ಉಳಿಸಿಕೊಳ್ಳಲಿಲ್ಲ. 25 ಎಸೆತದಲ್ಲಿ 24 ರನ್‌ ಗಳಿಸಿ ಸೂರ್ಯ ಔಟಾದರೆ, ಸ್ಯಾಮ್ಸನ್‌ 19 ಎಸೆತದಲ್ಲಿ 9 ರನ್‌ ಗಳಸಿ ವಿಕೆಟ್‌ ಒಪ್ಪಿಸಿದರು. ಇಶಾನ್‌ ಕಿಶನ್‌ ಸತತ 2ನೇ ಅರ್ಧಶತಕ ಬಾರಿಸಿದರೂ, ಅವರು ಆತ್ಮವಿಶ್ವಾಸದೊಂದಿಗೆ ಬ್ಯಾಟ್‌ ಮಾಡಿದಂತೆ ಕಾಣಲಿಲ್ಲ. ಹಿಂಜರಿಕೆಯಿಂದಲೇ ಇನ್ನಿಂಗ್ಸ್‌ ಕಟ್ಟಿದಂತೆ ಕಂಡುಬಂತು. ಇನ್ನು ಶುಭ್‌ಮನ್‌ ಗಿಲ್‌ ಸತತ ಇನ್ನಿಂಗ್ಸ್‌ಗಳಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡದೆ ಇರುವುದು ಸಹ ತಂಡಕ್ಕೆ ತಲೆಬಿಸಿ ತಂದಿರಬಹುದು.

ಶನಿವಾರದ ಪಂದ್ಯದಲ್ಲಿ ವಿಂಡೀಸ್‌ನ ಅನನುಭವಿ ವೇಗಿಗಳ ಬೌನ್ಸರ್‌ ದಾಳಿಗೆ ಭಾರತೀಯರು ನಡುಗಿದಂತೆ ಕಂಡಬಂತು. ಸ್ಪಿನ್ನರ್‌ಗಳಾದ ಗುಡಾಕೇಶ್‌ ಮೋಟಿ, ಯಾನಿಕ್‌ ಕರಿಹಾ ನಿರೀಕ್ಷೆಗೂ ಹೆಚ್ಚಾಗಿ ಕಾಡಿದರು. ವಿಕೆಟ್‌ ನಷ್ಟವಿಲ್ಲದೆ 90 ರನ್‌ ಗಳಿಸಿದ್ದ ಭಾರತ, 113 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡಿತು. ಆನಂತರ 146ಕ್ಕೆ 5ರಿಂದ 181ಕ್ಕೆ ಆಲೌಟ್‌ ಆಯಿತು. 2-3 ಬಾರಿ ಮಳೆಯಿಂದಾಗಿ ಆಟ ಸ್ಥಗಿತಗೊಂಡರೂ, ಹೆಚ್ಚು ಸಮಯ ವ್ಯರ್ಥವಾಗಲಿಲ್ಲ.

ಧೋನಿ ಕೇವಲ ಹೆಸರಲ್ಲ, ಎಮೋಷನ್‌..! ಮಹಿ ವಿಮಾನದಲ್ಲಿ ನಿದ್ರಿಸುವಾಗ ವಿಡಿಯೋ ಮಾಡಿದ ಗಗನ ಸಖಿ..! ವಿಡಿಯೋ ವೈರಲ್

ವಿಂಡೀಸ್‌ 9ನೇ ಓವರಲ್ಲಿ ವಿಕೆಟ್‌ ನಷ್ಟವಿಲ್ಲದೆ 53 ರನ್‌ ಗಳಿಸಿ ಉತ್ತಮ ಆರಂಭ ಪಡೆದಿತ್ತು. ಆದರೆ ಶಾರ್ದೂಲ್‌ರ ಮಾರಕ ದಾಳಿ ವಿಂಡೀಸ್‌ 17 ಓವರಲ್ಲಿ 91 ರನ್‌ಗೆ 4 ವಿಕೆಟ್‌ ಕಳೆದುಕೊಳ್ಳುವಂತೆ ಮಾಡಿತು. ದಿಢೀರ್‌ ಕುಸಿತದಿಂದ ಧೃತಿಗೆಡದ ನಾಯಕ ಶಾಯ್‌ ಹೋಪ್‌(ಔಟಾಗದೆ 63), ಕೇಸಿ ಕಾರ್ಟಿ(ಔಟಾಗದೆ 48) ಇನ್ನೂ 13.2 ಓವರ್‌ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.

2019ರ ಬಳಿಕ ವಿಂಡೀಸ್‌ ವಿರುದ್ಧ ಮೊದಲ ಸೋಲು!

ವೆಸ್ಟ್‌ಇಂಡೀಸ್‌ ವಿರುದ್ಧ ಸತತ 9 ಏಕದಿನ ಪಂದ್ಯಗಳನ್ನು ಗೆದ್ದಿದ್ದ ಭಾರತಕ್ಕೆ ಈ ಸೋಲು ಆಘಾತ ನೀಡಿದೆ. 2019ರ ಬಳಿಕ ಮೊದಲ ಬಾರಿಗೆ ವಿಂಡೀಸ್‌ ವಿರುದ್ಧ ಭಾರತ ಪರಾಭವಗೊಂಡಿದೆ. ಕೆರಿಬಿಯನ್‌ ಪಡೆ ವಿರುದ್ಧ ಸತತ 13ನೇ ಏಕದಿನ ಸರಣಿ ಗೆಲ್ಲಬೇಕಿದ್ದರೆ ಭಾರತ ಕೊನೆಯ ಪಂದ್ಯವನ್ನು ತನ್ನದಾಗಿಸಿಕೊಳ್ಳಬೇಕು. 2006ರ ಬಳಿಕ ಭಾರತ ವಿರುದ್ಧ ಮೊದಲ ಸರಣಿ ಜಯಕ್ಕೆ ವಿಂಡೀಸ್‌ ಕಾತರಿಸುತ್ತಿದೆ.

ಭಾರತ ತಂಡ ಪ್ರಯೋಗ ನಡೆಸುತ್ತಿರುವುದೇಕೆ?

ರಿಷಭ್‌ ಪಂತ್ ವಿಶ್ವಕಪ್‌ನಲ್ಲಿ ಆಡುವುದಿಲ್ಲ ಎನ್ನುವುದು ಬಹುತೇಕ ಖಚಿತವಾಗಿದೆ. ಕೆ.ಎಲ್‌.ರಾಹುಲ್‌ ಹಾಗೂ ಶ್ರೇಯಸ್‌ ಅಯ್ಯರ್‌ ವಿಶ್ವಕಪ್‌ ವೇಳೆಗೆ ಫಿಟ್‌ ಆಗಲಿದ್ದಾರಾ? ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಹೀಗಾಗಿ ಟೀಂ ಇಂಡಿಯಾ ಬದಲಿ ಆಟಗಾರರನ್ನು ಸಿದ್ಧಗೊಳಿಸಲು ಈ ರೀತಿ ಪ್ರಯೋಗಗಳನ್ನು ನಡೆಸುತ್ತಿದೆ.

Follow Us:
Download App:
  • android
  • ios