ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ರಾಜೀನಾಮೆ ನೀಡಿದ್ದಾರೆ. ರಾಜೀವ್ ಶುಕ್ಲಾ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಂದಿನ ಅಧ್ಯಕ್ಷರ ಬಗ್ಗೆ ತೀರ್ಮಾನವಾಗಲಿದೆ.

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ಕರ್ನಾಟಕದ ರೋಜರ್‌ ಬಿನ್ನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಉಪಾಧ್ಯಕ್ಷರಾಗಿದ್ದ ರಾಜೀವ್ ಶುಕ್ಲಾ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಎಂದು ವರದಿಯೊಂದು ಹೇಳಿದೆ.

Add Asianetnews Kannada as a Preferred SourcegooglePreferred

ಸೌರವ್ ಗಂಗೂಲಿ ಬಳಿಕ 2022ರಲ್ಲಿ ರೋಜರ್‌ ಬಿನ್ನಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರಿಗೆ ಈ ವರ್ಷ ಜುಲೈಗೆ 70 ವರ್ಷ ತುಂಬಿತ್ತು. ಬಿಸಿಸಿಐ ನಿಯಮದ ಪ್ರಕಾರ 70 ವರ್ಷ ಮೇಲ್ಪಟ್ಟವರು ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಹಿಸಲು ಅನರ್ಹರಾಗಿರುತ್ತಾರೆ. ಈ ನಡುವೆ ಬಿನ್ನಿ ರಾಜೀನಾಮೆ ನೀಡಿದ್ದು, 65 ವರ್ಷದ ಶುಕ್ಲಾ ಮಧ್ಯಂತರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮಾಧ್ಯಮದ ವರದಿಯೊಂದರ ಪ್ರಕಾರ, ಪ್ರಾಯೋಜಕತ್ವದಿಂದ ಡ್ರೀಮ್ 11 ಹಿಂದೆ ಸರಿದ ವಿಚಾರ ಚರ್ಚಿಸಲು ಕಳೆದ ಬುಧವಾರ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯ ಅಧ್ಯಕ್ಷತೆಯನ್ನು ಶುಕ್ಲಾ ವಹಿಸಿಕೊಂಡಿದ್ದರು ಎನ್ನಲಾಗಿದೆ.

ರಾಜೀವ್‌ ಶುಕ್ಲಾ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯ ತನಕ ತಾತ್ಕಾಲಿಕವಾಗಿ ಈ ಹುದ್ದೆ ಅಲಂಕರಿಸಲಿದ್ದಾರೆ. ಆ ಸಭೆಯಲ್ಲಿ ಮುಂದಿನ ಅಧ್ಯಕ್ಷರ ಬಗ್ಗೆ ತೀರ್ಮಾನವಾಗುವ ಸಾಧ್ಯತೆಯಿದೆ.

ರಾಷ್ಟ್ರೀಯ ಕ್ರೀಡಾ ಕಾನೂನಿನ ಪ್ರಕಾರ ಬಿಸಿಸಿಐ ಪದಾಧಿಕಾರಿಗಳ ನಿವೃತ್ತಿ ವಯಸ್ಸು 70 ರಿಂದ 75 ವರ್ಷಕ್ಕೆ ಹೆಚ್ಚಿಸಿತ್ತು. ಹೀಗಾಗಿ ಬಿನ್ನಿ ಅವರೇ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರೆಯಬಹುದು ಎನ್ನುವ ಚರ್ಚೆಗಳಿದ್ದವು. ಆದರೆ ತನ್ನ ಪದಾಧಿಕಾರಿಗಳ ವಯೋಮಿತಿಯನ್ನು ಹೆಚ್ಚಿಸುವ ಬಗ್ಗೆ ಬಿಸಿಸಿಐ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗಿದೆ.

ಕೆಒಎನಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಆಚರಣೆ

ಹಾಕಿ ದಂತಕತೆ ಮೇಜರ್‌ ಧ್ಯಾನ್‌ಚಂದ್‌ರ ಹುಟ್ಟುಹಬ್ಬ (ಆ.29)ದ ಅಂಗವಾಗಿ ಶುಕ್ರವಾರ ಕರ್ನಾಟಕ ರಾಜ್ಯ ಒಲಿಂಪಿಕ್ಸ್‌ ಸಮಿತಿ (ಕೆಒಎ) ಕಂಠೀರವ ಕ್ರೀಡಾಂಗಣದ ಆವರಣದಲ್ಲಿರುವ ಒಲಿಂಪಿಕ್ಸ್‌ ಭವನದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಿತು. ಈ ವೇಳೆ ಕೆಒಎ ಅಧ್ಯಕ್ಷ ಡಾ.ಕೆ.ಗೋವಿಂದರಾಜು, ಧ್ಯಾನ್‌ಚಂದ್‌ರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ರಾಜ್ಯದ ಮಾಜಿ ಅಥ್ಲೀಟ್‌ಗಳಾದ ಧ್ಯಾನ್‌ಚಂದ್‌ ಪ್ರಶಸ್ತಿ ವಿಜೇತ ಉದಯ್‌ ಕೆ ಪ್ರಭು, ಅರ್ಜುನ ಪ್ರಶಸ್ತಿ ವಿಜೇತೆ ರೀತ್‌ ಅಬ್ರಹಾಂ, ಎಚ್‌.ಎಂ.ಜ್ಯೋತಿ, ಮಾಜಿ ಅಂ.ರಾ. ಬಾಸ್ಕೆಟ್‌ಬಾಲ್‌ ಆಟಗಾರರಾದ ಆರ್‌.ರಾಜನ್‌ಗೆ ವಿಶೇಷ ಸ್ಮರಣಿಕೆ ನೀಡಿಮ ಗೌರವಿಸಿದರು.