ಅಹಮದಾಬಾದ್‌ನಲ್ಲಿ ನಡೆದ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಗುಜರಾತ್ ವಿರುದ್ಧ ಕೇರಳ 2 ರನ್‌ಗಳ ಮುನ್ನಡೆಯೊಂದಿಗೆ ಐತಿಹಾಸಿಕ ಫೈನಲ್‌ಗೆ ಪ್ರವೇಶಿಸಿದೆ. 67 ವರ್ಷಗಳಲ್ಲೇ ಮೊದಲ ಬಾರಿಗೆ ಕೇರಳ ರಣಜಿ ಫೈನಲ್ ತಲುಪಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ವಿದರ್ಭ ಮುಂಬೈಯನ್ನು ಸೋಲಿಸಿ ನಾಲ್ಕನೇ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ. ಫೆಬ್ರವರಿ 26 ರಿಂದ ನಾಗ್ಪುರದಲ್ಲಿ ಕೇರಳ ಮತ್ತು ವಿದರ್ಭ ನಡುವೆ ಫೈನಲ್ ಪಂದ್ಯ ನಡೆಯಲಿದೆ.

ಅಹಮದಾಬಾದ್: ಈ ಬಾರಿ ರಣಜಿ ಟ್ರೋಫಿಯ ಕೇರಳ ಹಾಗೂಗುಜರಾತ್‌ ನಡುವಿನ ಸೆಮಿಫೈನಲ್ ನಾಟಕೀಯವಾಗಿ ಕೊನೆಗೊಂಡಿದ್ದು, ಕೇವಲ 2 ರನ್‌ಗಳ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಕೇರಳ ಐತಿಹಾಸಿಕ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಕೇರಳ ಮೊದಲ ಇನ್ನಿಂಗ್ಸ್‌ನಲ್ಲಿ 457 ರನ್ ಕಲೆಹಾಕಿತ್ತು. 2 ಇನ್ನಿಂಗ್ಸ್‌ಗಳ ಪಂದ್ಯ ನಡೆಯದ ಕಾರಣ, ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದ ತಂಡ ಫೈನಲ್‌ಗೇರಬಹುದಿತ್ತು. ಗುಜರಾತ್ ಭಾರಿ ಹೋರಾಟ ನಡೆಸಿದರೂ, 455 ರನ್‌ಗೆ ಆಲೌಟಾಗಿ ಕೇವಲ 2 ರನ್ ಹಿನ್ನಡೆ ಅನುಭವಿಸಿತು. ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ ಕೇರಳ 12 ರನ್ ಗಳಿಸಿದ್ದಾಗ ಪಂದ್ಯ ಡ್ರಾಗೊಂಡಿತು. ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಕೇರಳ ಫೈನಲ್‌ಗೇರಿತು.

ಮುಂಬೈ ವಿರುದ್ಧ ಆರ್‌ಸಿಬಿಗೆ ತವರಲ್ಲೇ ಶಾಕ್‌; ಮಂಧನಾ ಪಡೆಗೆ ಹ್ಯಾಟ್ರಿಕ್ ಕನಸು ಭಗ್ನ!

ಕೊನೆ ದಿನವಾದ ಶುಕ್ರವಾರ ಗುಜರಾತ್‌ಗೆ ಇನ್ನಿಂಗ್ಸ್ ಮುನ್ನಡೆಗೆ 29 ರನ್ ಬೇಕಿತ್ತು. 3 ವಿಕೆಟ್ ಬಾಕಿಯಿತ್ತು. ಜಯ್‌ಮೀತ್‌ ಪಟೇಲ್ ಹೋರಾಟದ 79 ರನ್ ಗಳಿಸಿದರೂ, 2 ರನ್ ಬೇಕಿದ್ದಾಗ ಅರ್ಜಾನ್ ನಾಗ್ವಸ್‌ವಲ್ಲಾ ವಿಕೆಟ್ ಬೀಳುವುದರೊಂದಿಗೆ ಗುಜರಾತ್‌ನ ಫೈನಲ್ ಕನಸು ಭಗ್ನಗೊಂಡಿತು.

67 ವರ್ಷಗಳಲ್ಲೇ ಮೊದಲ ಸಲ ಕೇರಳ ರಣಜಿ ಫೈನಲ್‌ಗೆ ಪ್ರವೇಶ

ದೇಸಿ ಕ್ರಿಕೆಟ್ ಇತಿಹಾಸದಲ್ಲೇ ಕೇರಳ ತಂಡ ಇದೇ ಮೊದಲ ಸಲ ಫೈನಲ್‌ಗೇರಿತು. ತಂಡ 67 ವರ್ಷಗಳಿಂದ ದೇಸಿ ಕ್ರಿಕೆಟ್ ಆಡುತ್ತಿದೆ. ಆದರೆ ಮೊದಲ ಬಾರಿ ವಿಜಯ್ ಹಜಾರೆ ಏಕದಿನ, ಮುಷ್ತಾಕ್ ಅಲಿ ಟಿ20 ಅಥವಾ ರಣಜಿಯಲ್ಲಿ ಫೈನಲ್‌ಗೇರಿದೆ.

ಚಾಂಪಿಯನ್ಸ್ ಟ್ರೋಫಿ: ಆಫ್ಘಾನ್ ಮ್ಯಾಜಿಕ್ ಫೇಲ್: ದಕ್ಷಿಣ ಆಫ್ರಿಕಾ ಶುಭಾರಂಭ

ಮುಂಬೈ ಔಟ್: ವಿದರ್ಭ 4ನೇ ಸಲ ಫೈನಲ್‌ಗೆ

ನಾಗ್ಪುರ: ಇಲ್ಲಿ ನಡೆದ ಹಾಲಿ ಚಾಂಪಿಯನ್ ಮುಂಬೈ ವಿರುದ್ಧ ಸೆಮಿಫೈನಲ್‌ನಲ್ಲಿ 80 ರನ್‌ಗಳಿಂದ ಗೆದ್ದ ವಿದರ್ಭ, ರಣಜಿಯಲ್ಲಿ 4ನೇ ಬಾರಿ ಫೈನಲ್‌ಗೇರಿತು. ವಿದರ್ಭ ಮೊದಲ ಇನ್ನಿಂಗ್ಸ್‌ನಲ್ಲಿ 383 ರನ್ ಗಳಿಸಿದ್ದರೆ, ಮುಂಬೈ 292 ರನ್‌ ಆಲೌಟಾಗಿ ಹಿನ್ನಡೆ ಅನುಭವಿಸಿತ್ತು. ಹೀಗಾಗಿ ಪಂದ್ಯ ಡ್ರಾಗೊಂಡರೂ ವಿದರ್ಭ ಫೈನಲ್‌ಗೇರಬಹುದಿತ್ತು. ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ 270 ರನ್ ಗಳಿಸಿದ ವಿದರ್ಭ, ಮುಂಬೈಗೆ 406 ರನ್ ಗುರಿ ನೀಡಿತು. ಮುಂಬೈ 325 ರನ್ ಗಳಿಸಿ ಆಲೌಟಾಯಿತು. ಶಾರ್ದೂಲ್ ಠಾಕೂರ್ 66, ಶಮ್ಸ್ ಮುಲಾನಿ 46 ರನ್ ಗಳಿಸಿದರು.
ಹರ್ಷ ದುಬೆ 5 ವಿಕೆಟ್ ಕಿತ್ತರು.

26ರಿಂದ ವಿದರ್ಭ ಹಾಗೂ ಕೇರಳ ನಡುವಿನ ಫೈನಲ್ ಫೈಟ್:

ಫೆ.26ರಿಂದ ನಾಗುರದಲ್ಲಿ ಆರಂಭಗೊಳ್ಳಲಿದೆ. ಕೇರಳ ಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟಿದ್ದರೆ, ವಿದರ್ಭ 3ನೇ ಟ್ರೋಫಿ ಗೆಲ್ಲಲು ಎದುರು ನೋಡುತ್ತಿದೆ.