ಮುಲ್ಲಾನ್‌ಪುರದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿವೆ. ರಾಷ್ಟ್ರೀಯ ತಂಡಕ್ಕೆ ಮರಳಲು ಯತ್ನಿಸುತ್ತಿರುವ ಹೊಸ ನಾಯಕರಾದ ಶ್ರೇಯಸ್ ಅಯ್ಯರ್ ಮತ್ತು ಶುಭಮನ್ ಗಿಲ್ ಮೇಲೆ ಎಲ್ಲರ ಕಣ್ಣಿದ್ದು, ಎರಡೂ ತಂಡಗಳು ಗೆಲುವಿನ ಆರಂಭದ ನಿರೀಕ್ಷೆಯಲ್ಲಿವೆ.

ಮುಲ್ಲಾನ್‌ಪುರ: ಕಳೆದ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ವಿರುದ್ಧ ಫೈನಲ್‌ ಪಂದ್ಯ ಸೋತು ರನ್ನರ್‌-ಅಪ್‌ ಆಗಿದ್ದ ಪಂಜಾಬ್‌ ಕಿಂಗ್ಸ್‌ ತಂಡ ಈ ಬಾರಿ ಟೂರ್ನಿಯಲ್ಲಿ ಗೆಲುವಿನ ಆರಂಭ ಪಡೆಯುವ ತವಕದಲ್ಲಿದೆ. ತನ್ನ ತವರು ಮೈದಾನದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ವಿರುದ್ಧ ಸೆಣಸಾಡಲಿದೆ.

Add Asianetnews Kannada as a Preferred SourcegooglePreferred

ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ತುದಿಗಾಲಲ್ಲಿರುವ ಗಿಲ್-ಅಯ್ಯರ್

ಸದ್ಯ ಭಾರತ ಟಿ20 ತಂಡದಿಂದ ಹೊರಗುಳಿದಿರುವ ಶ್ರೇಯಸ್‌ ಅಯ್ಯರ್‌ ಹಾಗೂ ಶುಭ್‌ಮನ್ ಗಿಲ್‌ ಈಗ ಕ್ರಮವಾಗಿ ಪಂಜಾಬ್‌ ಹಾಗೂ ಗುಜರಾತ್‌ಗೆ ನಾಯಕತ್ವ ವಹಿಸುತ್ತಿದ್ದಾರೆ. ರಾಷ್ಟ್ರೀಯ ಟಿ20 ತಂಡಕ್ಕೆ ಮರಳಲು ಎದುರು ನೋಡುತ್ತಿರುವ ಇವರು, ಈ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುವುದರ ಜೊತೆಗೆ ತಮ್ಮ ತಂಡಗಳನ್ನೂ ಯಶಸ್ಸಿನತ್ತ ಕೊಂಡೊಯ್ಯಬೇಕಿದೆ.

ಪಂಜಾಬ್‌ ಬಹುತೇಕ ಕಳೆದ ಬಾರಿ ಇದ್ದ ತಂಡವನ್ನೇ ಮುಂದುವರಿಸಿದೆ. ಯುವ ಕ್ರಿಕೆಟಿಗರಾದ ಪ್ರಭ್‌ಸಿಮ್ರನ್‌ ಸಿಂಗ್‌, ಪ್ರಿಯಾನ್ಶ್‌ ಆರ್ಯ, ಶಶಾಂಕ್‌ ಸಿಂಗ್‌, ನೇಹಲ್‌ ವಧೇರಾ ಈ ಬಾರಿಯೂ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ. ಭಾರತ ಪರ ಟಿ20ಯ ಗರಿಷ್ಠ ವಿಕೆಟ್‌ ಸರದಾರರ ಪಟ್ಟಿಯಲ್ಲಿರುವ ಅರ್ಶ್‌ದೀಪ್‌ ಸಿಂಗ್‌ ಹಾಗೂ ಯಜುವೇಂದ್ರ ಚಹಲ್‌ ತಂಡದ ಬೌಲಿಂಗ್‌ ಆಧಾರಸ್ತಂಭ. ಕರ್ನಾಟಕದ ವಿಜಯ್‌ಕುಮಾರ್‌ ವೈಶಾಕ್‌ ಕೂಡಾ ತಂಡದಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಗುಜರಾತ್ ಟೈಟಾನ್ಸ್‌ನಲ್ಲಿದ್ದಾರೆ ಯುವ & ಅನುಭವಿ ಆಟಗಾರರು

ಮತ್ತೊಂದೆಡೆ ಗುಜರಾತ್‌ ತಂಡ ಅನುಭವಿ ಹಾಗೂ ಯುವ ಆಟಗಾರರನ್ನು ಒಳಗೊಂಡಿದೆ. ಗಿಲ್‌ ಜೊತೆ ಜೋಶ್‌ ಬಟ್ಲರ್‌, ವಾಷಿಂಗ್ಟನ್‌ ಸುಂದರ್‌, ಸಾಯಿ ಸುದರ್ಶನ್‌, ರಶೀದ್‌ ಖಾನ್‌, ಗ್ಲೆನ್‌ ಫಿಲಿಪ್ಸ್‌ ಇದ್ದಾರೆ. ಮೊಹಮ್ಮದ್‌ ಸಿರಾಜ್‌, ಕನ್ನಡಿಗ ಪ್ರಸಿದ್ಧ್‌ ಕೃಷ್ಣ, ಕಗಿಸೊ ರಬಾಡ ತಂಡಕ್ಕೆ ಬೌಲಿಂಗ್‌ನಲ್ಲಿ ಬಲ ಒದಗಿಸಲಿದ್ದಾರೆ.

ಒಟ್ಟು ಮುಖಾಮುಖಿ: 06

ಪಂಜಾಬ್‌: 03

ಗುಜರಾತ್: 03

ಸಂಭಾವ್ಯ ಆಟಗಾರರು

ಪಂಜಾಬ್‌: ಪ್ರಿಯಾನ್ಶ್‌, ಪ್ರಭ್‌ಸಿಮ್ರನ್‌, ಕೊನೊಲಿ, ಶ್ರೇಯಸ್‌(ನಾಯಕ), ಸ್ಟೋಯ್ನಿಸ್‌, ವಧೇರಾ, ಶಶಾಂಕ್‌, ಯಾನ್ಸನ್‌, ಬಾರ್ಟ್‌ಲೆಟ್‌, ಅರ್ಶ್‌ದೀಪ್‌, ಚಹಲ್‌, ವೈಶಾಕ್‌.

ಗುಜರಾತ್‌: ಗಿಲ್‌(ನಾಯಕ), ಸುದರ್ಶನ್‌, ಬಟ್ಲರ್‌, ವಾಷಿಂಗ್ಟನ್‌, ಫಿಲಿಪ್ಸ್‌, ಶಾರುಖ್, ತೆವಾಟಿಯಾ, ಹೋಲ್ಡರ್‌/ರಬಾಡ, ರಶೀದ್‌, ಪ್ರಸಿದ್ಧ್‌, ಸಿರಾಜ್‌, ಅರ್ಶದ್‌/ಕಿಶೋರ್‌.