ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಭೆಯಲ್ಲಿ, ಐಪಿಎಲ್ ಪಂದ್ಯಗಳಿಗೆ ಶಾಸಕರಿಗೆ ಮೂರು ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಎರಡು ಉಚಿತ ಟಿಕೆಟ್‌ ನೀಡಲು ಕೆಎಸ್‌ಸಿಎ ಒಪ್ಪಿಗೆ ಸೂಚಿಸಿದೆ. ಇದರೊಂದಿಗೆ ಚಿನ್ನಸ್ವಾಮಿ ಕ್ರೀಡಾಂಗಣದ ಆಸನ ಸಾಮರ್ಥ್ಯ ಹೆಚ್ಚಳ, ಹೊಸ ಕ್ರೀಡಾಂಗಣದ ಬಗ್ಗೆಯೂ ಚರ್ಚೆ.

 ಬೆಂಗಳೂರು (ಮಾ.31): ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯ ವೀಕ್ಷಣೆಗೆ ಶಾಸಕರಿಗೆ ಮೂರು ಟಿಕೆಟ್‌ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಎರಡು ಟಿಕೆಟ್‌ ಉಚಿತವಾಗಿ ನೀಡಲು ಕೆಎಸ್‌ಸಿಎ ಒಪ್ಪಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲ್ಲದೆ, ಅಂತಾರಾಷ್ಟ್ರೀಯ ಪಂದ್ಯಗಳಿಗೆ ಎರಡು ಹೆಚ್ಚುವರಿ ಟಿಕೆಟನ್ನು ಖರೀದಿಸಲು ಅವಕಾಶ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಸೋಮವಾರ ತಮ್ಮ ನಿವಾಸದಲ್ಲಿ ಕೆಎಸ್‌ಸಿಎ, ಆರ್‌ಸಿಬಿ ಮತ್ತು ಡಿಎನ್‌ಎ ಸಂಸ್ಥೆಯ ಪ್ರತಿನಿಧಿಗಳ ಜತೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಶಾಸಕರಿಗೆ ಕ್ರಿಕೆಟ್‌ ಪಂದ್ಯ ವೀಕ್ಷಣೆಗೆ ಟಿಕೆಟ್‌ ವಿತರಣೆ ಕುರಿತಂತೆ ಚರ್ಚೆ ಮಾಡಲಾಗಿದೆ. ಕಳೆದ ವಾರ ಮೊದಲ ಪಂದ್ಯದ ಟಿಕೆಟ್‌ ಮಾರಾಟವಾಗಿದ್ದ ಕಾರಣ 2 ಟಿಕೆಟ್‌ ನೀಡಲು ಒಪ್ಪಿದ್ದರು. ಈಗ ಮತ್ತೆ ಸಭೆ ನಡೆಸಲಾಗಿದ್ದು, ಕ್ರಿಕೆಟ್‌ ಸಂಸ್ಥೆಯವರು ಅನೇಕ ಒಪ್ಪಂದ ಮಾಡಿಕೊಂಡಿರುತ್ತಾರೆ. ಹೀಗಾಗಿ ಐಪಿಎಲ್‌ ಪಂದ್ಯಗಳಿಗಾಗಿ ಶಾಸಕರಿಗೆ ಮೂರು ಟಿಕೆಟ್‌ ನೀಡುವ ತೀರ್ಮಾನ ಮಾಡಲಾಗಿದೆ. ಆ ಮೂಲಕ ಈ ವಿಚಾರವನ್ನು ಇಲ್ಲಿಗೆ ಅಂತ್ಯಗೊಳಿಸಲಾಗುತ್ತಿದೆ. ಯಾರಿಗಾದರೂ ಐಪಿಎಲ್‌ ಟಿಕೆಟ್‌ ಬಗ್ಗೆ ಆಸಕ್ತಿಯಿಲ್ಲದಿದ್ದರೆ, ಅವರು ಈ ಬಗ್ಗೆ ಲಿಖಿತ ರೂಪದಲ್ಲಿ ನೀಡಲಿ. ನಾವು ಅವರಿಗೆ ಟಿಕೆಟ್‌ ನೀಡುವುದಿಲ್ಲ. ಯಾರಿಗೂ ಬಲವಂತ ಮಾಡುವುದಿಲ್ಲ ಎಂದರು.

ಶಾಸಕರ ಬೇಡಿಕೆಗಳಿರುತ್ತವೆ. ಎಲ್ಲವನ್ನೂ ಈಡೇರಿಸಲಾಗುವುದಿಲ್ಲ. ಅವರ ಬೇಡಿಕೆಗಳ ಆಧಾರದ ಮೇಲೆ ಚರ್ಚೆ ಮಾಡಿದ್ದು, ಪರಿಸ್ಥಿತಿಗೆ ಅನುಗುಣವಾಗಿ ನಿರ್ಧರಿಸಲಾಗಿದೆ. ನಾನು ರಾಜಸ್ಥಾನ, ಮುಂಬೈ, ದೆಹಲಿ, ಕೋಲ್ಕತ್ತಾ ಹಾಗೂ ಗುಜರಾತ್‌ನ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ಅಲ್ಲಿ ಸುಮಾರು ಶೇ. 50ರಿಂದ 60ರಷ್ಟು ಟಿಕೆಟ್‌ಗಳನ್ನು ಸರ್ಕಾರಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರಿಗೆ ವಿತರಿಸಲಾಗುತ್ತದೆ. ಅಲ್ಲಿಗೆ ಹೋಲಿಸಿದರೆ ನಮ್ಮಲ್ಲಿ ಹಸ್ತಕ್ಷೇಪ ಕಡಿಮೆಯಿದೆ ಎಂದು ತಿಳಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದ ಆಸನ ಸಂಖ್ಯೆ ಹೆಚ್ಚಳ ಕುರಿತ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿ, ಕ್ರೀಡಾಂಗಣದ ಬಗ್ಗೆಯೂ ಚರ್ಚೆ ಮಾಡಲಾಗಿದ್ದು, ಯಾವ ರೀತಿ ಆಸನ ಸಂಖ್ಯೆ ಹೆಚ್ಚಿಸಬೇಕು ಎಂದು ಮಾತನಾಡಲಾಗಿದೆ. 20 ಸಾವಿರ ಆಸನಗಳನ್ನು ಹೆಚ್ಚಿಸಿದರೆ ಜನರಿಗೂ ಅನುಕೂಲವಾಗಲಿದೆ. ಇನ್ನು, ಬೇರೆ ಕಡೆ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಗುರುತಿಸಲು ಜಿಬಿಎ ಮುಖ್ಯ ಆಯುಕ್ತರ ಬಳಿ ಚರ್ಚಿಸಲಾಗಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದೇನೆ. ಅವರು ಪ್ರಸ್ತಾವನೆ ಸಲ್ಲಿಸಿದ ಬಳಿಕ ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಅನುಮತಿ ನೀಡಲಾಗುವುದು ಎಂದರು.