5ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಲೀಗ್‌ನ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದು, ಕರುಣ್ ನಾಯರ್ ₹18 ಲಕ್ಷಕ್ಕೆ ಮಂಗಳೂರು ತಂಡಕ್ಕೆ ಮಾರಾಟವಾಗುವ ಮೂಲಕ ಅತಿ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಆರ್. ಸ್ಮರಣ್, ಮನೀಶ್ ಪಾಂಡೆ, ಮತ್ತು ಮಯಾಂಕ್ ಅಗರ್‌ವಾಲ್ ಸೇರಿದಂತೆ ಹಲವು ಪ್ರಮುಖ ಆಟಗಾರರು ಹೆಚ್ಚಿನ ಮೊತ್ತಕ್ಕೆ ವಿವಿಧ ತಂಡಗಳ ಪಾಲಾದರು.

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಸ್‌ಸಿಎ) ಆಯೋಜಿಸುವ 5ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಲೀಗ್‌ನ ಆಟಗಾರರ ಹರಾಜು ಪ್ರಕ್ರಿಯೆ ಶುಕ್ರವಾರ ನಡೆದಿದ್ದು, ನಿರೀಕ್ಷೆಯಂತೆಯೇ ಕರುಣ್‌ ನಾಯರ್‌, ಸ್ಮರಣ್‌ ಸೇರಿದಂತೆ ಪ್ರಮುಖರು ಅತಿ ದುಬಾರಿ ಆಟಗಾರರು ಎನಿಸಿಕೊಂಡರು. ಆದರೆ ಭಾರತದ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್ ಅನ್‌ಸೋಲ್ಡ್ ಆಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹರಾಜಿನಲ್ಲಿ ಮೈಸೂರು ವಾರಿಯರ್ಸ್‌, ಬೆಂಗಳೂರು ಬ್ಲಾಸ್ಟರ್ಸ್‌, ಶಿವಮೊಗ್ಗ ಯೋಧಾಸ್‌, ಹುಬ್ಬಳ್ಳಿ ಟೈಗರ್ಸ್‌, ಗುಲ್ಬರ್ಗಾ ಮಿಸ್ಟಿಕ್ಸ್‌ ಹಾಗೂ ಕೋಸ್ಟಲ್ ಕಿಂಗ್ಸ್‌ ಮಂಗಳೂರು ತಂಡಗಳು ಪಾಲ್ಗೊಂಡವು. ಪ್ರತಿ ತಂಡದ ಬಳಿ ₹60 ಲಕ್ಷ ಪರ್ಸ್‌ ಮೊತ್ತ ಇತ್ತು. ಎಲ್ಲಾ ತಂಡಗಳೂ ತಲಾ 20 ಆಟಗಾರರನ್ನು ಖರೀದಿಸಿದವು. ಹರಾಜು ಪಟ್ಟಿಯಲ್ಲಿದ್ದ 150ಕ್ಕೂ ಹೆಚ್ಚು ಆಟಗಾರರ ಪೈಕಿ 120 ಆಟಗಾರರಿಗೆ ಅದೃಷ್ಟ ಒಲಿಯಿತು. ತಾರಾ ಕ್ರಿಕೆಟಿಗ ಕರುಣ್‌ ನಾಯರ್‌ರನ್ನು ಮಂಗಳೂರು ತಂಡ ₹18 ಲಕ್ಷಕ್ಕೆ ಖರೀದಿಸಿದರೆ, ಆರ್‌.ಸ್ಮರಣ್‌ ₹15.75 ಲಕ್ಷಕ್ಕೆ ಶಿವಮೊಗ್ಗ ಯೋಧಾಸ್‌ ಪಾಲಾದರು.

ಹುಬ್ಬಳ್ಳಿ ಟೈಗರ್ಸ್‌ ತಂಡ ಅಭಿನವ್‌ ಮನೋಹರ್‌ಗೆ ₹13.50 ಲಕ್ಷ, ಮಯಾಂಕ್‌ ಅಗರ್‌ವಾಲ್‌ಗೆ ₹11.50 ಲಕ್ಷ ನೀಡಿತು. ಮನೀಶ್‌ ಪಾಂಡೆ ₹12.75 ಲಕ್ಷ ಹಾಗೂ ಮ್ಯಾಕ್ನಿಲ್ ನೊರೊನ್ಹಾ ₹12.25 ಲಕ್ಷಕ್ಕೆ ಗುಲ್ಬರ್ಗಾ ತಂಡಕ್ಕೆ ಬಿಕರಿಯಾದರು. ಉಳಿದಂತೆ ಚೇತನ್‌ ಎಲ್‌.ಆರ್‌. 11.5 ಲಕ್ಷಕ್ಕೆ ಮೈಸೂರು, ಶುಭಾಂಗ್‌ ಹೆಗ್ಡೆ ₹11 ಲಕ್ಷಕ್ಕೆ ಬೆಂಗಳೂರು, ಶ್ರೇಯಸ್‌ ಗೋಪಾಲ್‌ ₹10.25 ಲಕ್ಷಕ್ಕೆ ಮಂಗಳೂರು, ಮನೋಜ್‌ ಭಾಂಡಗೆ ₹10 ಲಕ್ಷಕ್ಕೆ ಮೈಸೂರು, ಪ್ರವೀಣ್ ದುಬೆ ₹9.5 ಲಕ್ಷಕ್ಕೆ ಬೆಂಗಳೂರು, ವಿಜಯ್‌ಕುಮಾರ್ ವೈಶಾಕ್‌ ₹8.25 ಲಕ್ಷಕ್ಕೆ ಮೈಸೂರು ತಂಡಕ್ಕೆ ಹರಾಜಾದರು.

ರಾಹುಲ್‌ ಅನ್‌ಸೋಲ್ಡ್‌, ದೇವದತ್‌ಗೆ ₹2.6 ಲಕ್ಷ

ರಾಜ್ಯದ ಪ್ರಮುಖ ಆಟಗಾರರಾದ ಕೆ.ಎಲ್‌.ರಾಹುಲ್‌ ಹಾಗೂ ದೇವದತ್‌ ಪಡಿಕ್ಕಲ್‌ ಈಗ ಭಾರತ ಟೆಸ್ಟ್‌ ತಂಡದಲ್ಲಿದ್ದಾರೆ. ರಾಹುಲ್‌ ಆಫ್ಘನ್‌ ವಿರುದ್ಧ ಏಕದಿನ ಸರಣಿಯಲ್ಲೂ ಆಡಲಿದ್ದಾರೆ. ಹೀಗಾಗಿ ರಾಹುಲ್‌ರನ್ನು ಖರೀದಿಸಲು ಯಾವುದೇ ತಂಡವೂ ಆಸಕ್ತಿ ತೋರಲಿಲ್ಲ. ಪಡಿಕ್ಕಲ್‌ ಕೆಲ ಪಂದ್ಯಕ್ಕೆ ಲಭ್ಯವಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರನ್ನು ಮೈಸೂರು ತಂಡ ₹2.60 ಲಕ್ಷ ನೀಡಿ ತಂಡಕ್ಕೆ ಸೇರಿಸಿಕೊಂಡಿತು. ಪ್ರಸಿದ್ಧ್‌ ಕೃಷ್ಣ ಕೂಡಾ ಕೇವಲ ₹2.60 ಲಕ್ಷಕ್ಕೆ ಮೈಸೂರಿಗೆ ಹರಾಜಾದರು. ಉಳಿದಂತೆ ನಿಹಾಲ್‌ ಉಳ್ಳಾಲ್, ಸುಜಯ್‌ ಸತೇರಿ, ಕಿಶನ್‌ ಬೆದರೆ, ವಿಶಾನ್ ಓನತ್‌ ಕೂಡಾ ಯಾವುದೇ ತಂಡಕ್ಕೂ ಬಿಕರಿಯಾಗಲಿಲ್ಲ.

ಹರಾಜಿನ ದುಬಾರಿ ಆಟಗಾರರು

ಆಟಗಾರ ಮೊತ್ತ ತಂಡ

ಕರುಣ್‌ ₹18.00 ಲಕ್ಷ ಮಂಗಳೂರು

ಸ್ಮರಣ್‌ ₹15.75 ಲಕ್ಷ ಶಿವಮೊಗ್ಗ

ಅಭಿನವ್‌ ₹13.50 ಲಕ್ಷ ಹುಬ್ಬಳ್ಳಿ

ಮನೀಶ್‌ ₹12.75 ಲಕ್ಷ ಗುಲ್ಬರ್ಗಾ

ಮ್ಯಾಕ್ನಿಲ್‌ ₹12.25 ಲಕ್ಷ ಗುಲ್ಬರ್ಗಾ

ಮಯಾಂಕ್‌ ₹11.50 ಲಕ್ಷ ಹುಬ್ಬಳ್ಳಿ

ಚೇತನ್‌ ₹11.50 ಲಕ್ಷ ಮೈಸೂರು

ಶುಭಾಂಗ್‌ ₹11.00 ಲಕ್ಷ ಬೆಂಗಳೂರು

ಶ್ರೇಯಸ್‌ ₹10.25 ಲಕ್ಷ ಮಂಗಳೂರು

ಪ್ರವೀಣ್‌ ₹9.50 ಲಕ್ಷ ಬೆಂಗಳೂರು

--