Asianet Suvarna News Asianet Suvarna News

KPL ಫಿಕ್ಸಿಂಗ್: ಸಿಸಿಬಿಯಿಂದ ಅಂತಾರಾಷ್ಟ್ರೀಯ ಬುಕ್ಕಿಯ ಬಂಧನ

ಬೆಂಗಳೂರು ಸಿಸಿಬಿ ಪೊಲೀಸರು ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಪ್ರಮುಖ ಬುಕ್ಕಿಯನ್ನು ಖೆಡ್ದಾಗೆ ಬೀಳಿಸಲು ಯಶಸ್ವಿಯಾಗಿದ್ದಾರೆ. ಅಂತಾರಾಷ್ಟ್ರೀಯ ಬುಕ್ಕಿಯಾದ ಸಯ್ಯಂ ಅರೆಸ್ಟ್ ಮಾಡುವ ಮೂಲಕ ಭರ್ಜರಿ ಬೇಟೆಯಾಡುವಲ್ಲಿ ಬೆಂಗಳೂರಿನ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

KPL Match Fixing CCB Police arrest International bookie Sayyam
Author
Bengaluru, First Published Nov 10, 2019, 4:06 PM IST

ಬೆಂಗಳೂರು[ನ.10]: ಕರ್ನಾಟಕ ಪ್ರೀಮಿಯರ್ ಲೀಗ್[ಕೆಪಿಎಲ್] ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಅಂತಾರಾಷ್ಟ್ರೀಯ ಬುಕ್ಕಿಯಾದ ಸಯ್ಯಂನನ್ನು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ[ಸಿಸಿಬಿ]ದ ಅಧಿಕಾರಿಗಳು ಬಂಧಿಸಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದಡಿ ಈಗಾಗಲೇ ನ್ಯಾಯಾಂಗ ಬಂಧನಲ್ಲಿರುವ ಡ್ರಮ್ಮರ್ ಭವೇಶ್ ಬಾಫ್ನಾ ನೀಡಿದ ಖಚಿತ ಮಾಹಿತಿಯ ಮೇರೆಗೆ ಸಯ್ಯಂನನ್ನು ಅರೆಸ್ಟ್ ಮಾಡಲಾಗಿದೆ. ಕೆಲದಿನಗಳ ಹಿಂದಷ್ಟೇ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದಡಿ ಬಳ್ಳಾರಿ ಟಸ್ಕರ್ಸ್ ತಂಡ ನಾಯಕ ಸಿ.ಎಂ. ಗೌತಮ್ ಹಾಗೂ ಅಬ್ರಾರ್ ಖಾಜಿಯನ್ನು ವಶಕ್ಕೆ ಪಡೆಯಲಾಗಿದೆ.

ಟಿ10 ಲೀಗ್ ನಲ್ಲಿ ಫಿಕ್ಸಿಂಗ್ ಛಾಯೆ..?

ಬಳ್ಳಾರಿ ಟಸ್ಕರ್ಸ್ ಹಾಗೂ ಹುಬ್ಳಿ ಟೈಗರ್ಸ್ ನಡುವೆ ಆಗಸ್ಟ್ 31ರಂದು ನಡೆದ ಕೆಪಿಎಲ್ ಫೈನಲ್ ಪಂದ್ಯದ ವೇಳೆ ಈ ಇಬ್ಬರು ಆಟಗಾರರು ಸ್ಪಾಟ್ ಫಿಕ್ಸಿಂಗ್ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಫೈನಲ್ ಪಂದ್ಯದಲ್ಲಿ ಮಂದಗತಿಯಲ್ಲಿ ಬ್ಯಾಟಿಂಗ್ ನಡೆಸಲು 20 ಲಕ್ಷ ರುಪಾಯಿ ಪಡೆದಿದ್ದರು ಹಾಗೆಯೇ ಬೆಂಗಳೂರು ವಿರುದ್ಧದ ಪಂದ್ಯದಲ್ಲೂ ಕಳ್ಳಾಟದಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಭಾರತ ’ಎ’ ತಂಡದ ಮಾಜಿ ಕ್ರಿಕೆಟಿಗ ಸಿ.ಎಂ. ಗೌತಮ್, ಕರ್ನಾಟಕ ಹಾಗೂ ಗೋವಾ ರಣಜಿ ತಂಡವನ್ನು ಪ್ರತಿನಿಧಿಸಿದ್ದರು. ಇನ್ನು ಐಪಿಎಲ್’ನ ವಿವಿಧ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲೀ ಕಾಣಿಸಿಕೊಂಡಿದ್ದರು. ಇನ್ನು ಮತ್ತೋರ್ವ ಕ್ರಿಕೆಟಿಗ ಖಾಜಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದು, ಕಳೆದ ವರ್ಷವಷ್ಟೇ ನಾಗಾಲ್ಯಾಂಡ್’ಗೆ ವಲಸೆ ಹೋಗಿದ್ದರು. 

ಫಿಕ್ಸಿಂಗ್‌ ಭೀತಿಯಿಂದಲೇ KPL ನಿಲ್ಲಿ​ಸಿದ್ರಾ ಕುಂಬ್ಳೆ?

ಮೊದಲಿಗೆ ಸಿಸಿಬಿ ಪೊಲೀಸರು ಕೆಪಿಎಲ್ ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪದಡಿ ಕ್ರಿಕೆಟಿಗ ನಿಶಾಂತ್ ಸಿಂಗ್ ಶೇಖಾವತ್ ಎಂಬಾತನನ್ನು ಬಂಧಿಸಲಾಗಿತ್ತು. ಶೇಖಾವತ್ 2018ರಲ್ಲಿ ನಡೆದ ಕೆಪಿಎಲ್ ಟೂರ್ನಿಯ ಬೆಂಗಳೂರು ಹಾಗೂ ಬೆಳಗಾವಿ ನಡುವಿನ ಪಂದ್ಯದಲ್ಲಿ ಮಂದಗತಿಯಲ್ಲಿ ಆಡಲು 5 ಲಕ್ಷ ರುಪಾಯಿ ಪಡೆದಿದ್ದರು ಎನ್ನುವ ಆರೋಪವಿದೆ. ಆ ಬಳಿಕ ಮತ್ತಷ್ಟು ತನಿಖೆ ಚುರುಕುಗೊಳಿಸಿದ ಪೊಲೀಸರು ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ, ಬೆಂಗಳೂರು ಬ್ಲಾಸ್ಟರ್ಸ್ ತಂಡದ ಬೌಲಿಂಗ್ ಕೋಚ್ ವಿನು ಪ್ರಸಾದ್ ಹಾಗೂ ಬ್ಯಾಟ್ಸ್’ಮನ್ ವಿಶ್ವನಾಥನ್’ರನ್ನು ಬಂಧಿಸಿದ್ದರು.

ಅಲಿ ದುಬೈ ಮೂಲದ ಬುಕ್ಕಿಗಳೊಂದಿಗೆ ಬೆಟ್ಟಿಂಗ್ ನಡೆಸುತ್ತಿದ್ದ, ಹಾಗೆಯೇ ಕೆಪಿಎಲ್ ಲೀಗ್’ನಲ್ಲಿ ವಿವಿಧ ತಂಡಗಳಲ್ಲಿ ಆಡುತ್ತಿದ್ದ ಕೆಲ ಆಟಗಾರರೊಂದಿಗೆ ಸಂಪರ್ಕ ಹೊಂದಿದ್ದ ಎನ್ನುವ ಆರೋಪವಿದೆ.

ಈ ಸುದ್ದಿಯನ್ನು ಇಂಗ್ಲೀಷ್’ನಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ... 
 

Follow Us:
Download App:
  • android
  • ios