ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಶುಭಮನ್ ಗಿಲ್ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಮೂರನೇ, ವಿರಾಟ್ ಕೊಹ್ಲಿ ಐದನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಕುಲ್ದೀಪ್ ಯಾದವ್ ಮೂರನೇ ಸ್ಥಾನದಲ್ಲಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಸೆಮಿಫೈನಲ್ ತಲುಪಿದೆ. ಬೌಲಿಂಗ್ ಕೋಚ್ ಮಾರ್ನೆ ಮೊರ್ಕೆಲ್ ತಂಡವನ್ನು ಸೇರಿಕೊಂಡಿದ್ದಾರೆ. ಭಾರತವು ನ್ಯೂಜಿಲೆಂಡ್ ವಿರುದ್ಧ ಮಾರ್ಚ್ 2 ರಂದು ಆಡಲಿದೆ.

ದುಬೈ: ಭಾರತದ ತಾರಾ ಬ್ಯಾಟರ್ ಶುಭಮನ್ ಗಿಲ್ ಐಸಿಸಿ ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ಇತ್ತೀಚೆಗಷ್ಟೇ ನಂ.1 ಸ್ಥಾನಕ್ಕೇರಿದ್ದ ಶುಭ್‌ಮನ್ ಗಿಲ್ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ತಂಡವನ್ನು ಸೆಮಿಫೈನಲ್ ಗೇರಿಸಲು ಪ್ರಮುಖ ಪಾತ್ರ ವಹಿಸಿದ್ದರು. ಇದರೊಂದಿಗೆ 21 ರೇಟಿಂಗ್ ಅಂಕ ಹೆಚ್ಚಿಸಿಕೊಂಡಿರುವ ಅವರು, ಸದ್ಯ 817 ಅಂಕಗಳನ್ನು ಹೊಂದಿದ್ದಾರೆ.

Add Asianetnews Kannada as a Preferred SourcegooglePreferred

ಇನ್ನು, ರೋಹಿತ್‌ ಶರ್ಮಾ 3ನೇ ಸ್ಥಾನದಲ್ಲಿ ಮುಂದುವರಿದಿದ್ದು, ವಿರಾಟ್ ಕೊಹ್ಲಿ 1 ಸ್ಥಾನ ಮೇಲಕ್ಕೇರಿ 5ನೇ ಸ್ಥಾನ ಪಡೆದಿದ್ದಾರೆ. ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ವಿರಾಟ್ ಕೊಹ್ಲಿ ಅಜೇಯ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ನೂತವಾಗಿ ಬಿಡುಗಡೆಯಾಗಿರುವ ಏಕದಿನ ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಮೇಲೇರಿ ಟಾಪ್ 5ನೊಳಗೆ ಸ್ಥಾನ ಪಡೆದಿದ್ದಾರೆ.

ಇನ್ನುಳಿದಂತೆ ಶ್ರೇಯಸ್ ಅಯ್ಯರ್ 9ನೇ, ಕರ್ನಾಟಕದ ಕೆ. ಎಲ್.ರಾಹುಲ್ 2 ಸ್ಥಾನ ಜಿಗಿದು 15ನೇ ಸ್ಥಾನ ತಲುಪಿದ್ದಾರೆ. ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಕುಲ್ದೀಪ್ ಯಾದವ್ 3ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಸಿರಾಜ್ 12, ಜಡೇಜಾ 13, ಮೊಹಮದ್ ಶಮಿ 14ನೇ ಸ್ಥಾನಗಳಲ್ಲಿದ್ದಾರೆ. ಶ್ರೀಲಂಕಾದ ಮಿಸ್ಟ್ರಿ ಸ್ಪಿನ್ನರ್ ಮಹೀಶ್ ತೀಕ್ಷಣ ಹಾಗೂ ಆಫ್ಘಾನಿಸ್ತಾನದ ಲೆಗ್‌ಸ್ಪಿನ್ನರ್ ರಶೀದ್ ಖಾನ್ ಏಕದಿನ ಬೌಲಿಂಗ್ ವಿಭಾಗದಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿಯೇ ಮುಂದುವರೆದಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಕೋಚ್‌ ಆಗಿ ವಿಶ್ವ ಶ್ರೇಷ್ಠ ತಂಡ ಕಟ್ತೇನೆ: ಯುವಿ ತಂದೆ ಯೋಗರಾಜ್ ಅಚ್ಚರಿಯ ಹೇಳಿಕೆ!

ಭಾರತ ತಂಡಕ್ಕೆ ಮರಳಿದ ಬೌಲಿಂಗ್ ಕೋಚ್ ಮೋರ್ನೆ ಮೊರ್ಕೆಲ್

ದುಬೈ: ಟೀಂ ಇಂಡಿಯಾ ಬೌಲಿಂಗ್ ಕೋಚ್ ಮಾರ್ನೆ ಮೋರ್ಕೆಲ್ ಬುಧವಾರ ದುಬೈನಲ್ಲಿ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ. ಚಾಂಪಿಯನ್ ಟ್ರೋಫಿಗಾಗಿ ಅವರು ತಂಡದ ಜೊತೆಗೆ ದುಬೈಗೆ ಪ್ರಯಾಣಿಸಿದ್ದರು. ಆದರೆ ತಮ್ಮ ತಂದೆ ನಿಧನರಾದ ಕಾರಣ ಅವರು ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದರು. ಬುಧವಾರ ದುಬೈಗೆ ತೆರಳಿದ ಅವರು, ತಂಡದ ಜೊತೆ ಅಭ್ಯಾಸದ ವೇಳೆ ಕಾಣಿಸಿಕೊಂಡರು. ಭಾರತ ಮಾ.2ಕ್ಕೆ ನ್ಯೂಜಿಲೆಂಡ್ ವಿರುದ್ಧ ಆಡಲಿದೆ.

ಇದನ್ನೂ ಓದಿ: ತಂಡ ಸೋಲುತ್ತಿರುವಾಗ ನಿನಗೆ ಈ ಹುಚ್ಚಾಟ ಬೇಕಿತ್ತಾ? ಪಾಕ್ ಬೌಲರ್‌ಗೆ ತಪರಾಕಿ ಕೊಟ್ಟ ವಾಸೀಂ ಅಕ್ರಂ!

ಸತತ ಎರಡು ಪಂದ್ಯ ಗೆದ್ದು ಸೆಮೀಸ್‌ ಪ್ರವೇಶಿಸಿರುವ ಟೀಂ ಇಂಡಿಯಾ!

ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ತಾನಾಡಿದ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ. ಇದೀಗ ಸೆಮಿಫೈನಲ್‌ಗೂ ಮುನ್ನ ಟೀಂ ಇಂಡಿಯಾ ಔಪಚಾರಿಕ ಎನಿಸಿರುವ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಮಾರ್ಚ್ 02ರಂದು ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಪಾಕ್‌ ಎದುರು ಶತಕ ಶತಕ ಸಿಡಿಸಿ ಫಾರ್ಮ್‌ಗೆ ಮರಳಿರುವ ವಿರಾಟ್ ಕೊಹ್ಲಿ ಮತ್ತೊಂದು ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಲಾಗಿದೆ. ಇದಾದ ಬಳಿಕ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.