15 ವರ್ಷದ ನೋವು, ಜೈ ಶ್ರೀರಾಮ್ ನೋಟ್ ಬರೆದು ಮೊದಲ ವಿಕೆಟ್ ಸಂಭ್ರಮಿಸಿದ ಮುಂಬೈ ಸ್ಪಿನ್ನರ್, ವಿಕೆಟ್ ಪಡೆದ ಬೆನ್ನಲ್ಲೇ ಸ್ಪಿನ್ನರ್ ತಂದಿದ್ದ ಚೀಟಿಯನ್ನು ಎತ್ತಿ ತೋರಿಸಿ ಸಂಭ್ರಮಿಸಿದರು. ಈ ನೋಟ್ ಭಾರಿ ವೈರಲ್ ಆಗಿದೆ. 

ಮುಂಬೈ (ಮೇ.04) ಐಪಿಎಲ್ ಟೂರ್ನಿಯಲ್ಲಿ ಆಟಗಾರರ ಸ್ಟೈಲ್, ಸೆಲೆಬ್ರೇಷನ್ ಸೇರಿದಂತೆ ಎಲ್ಲವೂ ಅತ್ಯಂತ ಮುಖ್ಯವಾಗುತ್ತದೆ. ಅಭಿಮಾನಿಗಳ ನಡುವೆ ಈ ರೀತಿಯ ಕೆಲ ವಿಚಾರಗಳು ಭಾರಿ ಸದ್ದು ಮಾಡುತ್ತದೆ. ಈ ಪೈಕಿ ವಿಕೆಟ್ ಪಡೆದಾಗ ನಡೆಯುವ ಸೆಲೆಬ್ರೇಷನ್ ಹಲವು ಬಾರಿ ವೈರಲ್ ಆಗಿದೆ. ಇದೀಗ ಲಖನೌ ಸೂಪರ್ ಜೈಂಟ್ಸ್ ವಿರುದ್ದದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸ್ಪಿನ್ನರ್ ರಾಘು ಶರ್ಮಾ ಐಪಿಎಲ್‌ನ ಚೊಚ್ಚಲ ವಿಕೆಟ್ ಗಿಟ್ಟಿಸಿಕೊಂಡು ಸಂಭ್ರಮಿಸಿದ್ದಾರೆ. ಈ ಸಂಭ್ರಮದಲ್ಲಿ ಜೇಬಿನಲ್ಲಿದ್ದ ಚೀಟಿಯೊಂದನ್ನು ಎತ್ತಿ ತೋರಿಸಿ ಸಂಭ್ರಮಿಸಿದ್ದಾರೆ. ಜೈ ಶ್ರೀರಾಮ್ ಬರೆದ ಈ ಚೀಟಿಯಲ್ಲಿ ಕೆಲ ಸಂದೇಶವನ್ನು ರವಾನಿಸಿ ಭಾರಿ ವೈರಲ್ ಆಗಿದ್ದಾರೆ.

2026ರಲ್ಲಿ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ ರಾಘು ಶರ್ಮಾ ಮುಂಬೈ ತಂಡದ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ. ಲಖನೌ ವಿರುದ್ಧ ರಾಘು ಶರ್ಮಾ ಮೊದಲ ವಿಕೆಟ್ ಸಂಭ್ರಮ ಮಾಡಿದ್ದಾರೆ. 13ನೇ ಓವರ್‌ನಲ್ಲಿ ಲಖನೌ ತಂಡದ ಅಕ್ಷತ್ ರಘುವಾನಿ ವಿಕೆಟ್ ಪಡೆದಿದ್ದಾರೆ. ಇಡೀ ತಂಡ ಸಂಭ್ರಮಿಸಲು ಆಗಮಿಸುತ್ತಿದ್ದಂತೆ ರಾಘು ಶರ್ಮಾ ತಮ್ಮ ಜೇಬಿನಿಂದ ಚೀಟಿ ಎತ್ತಿ ತೋರಿಸಿ ವಿಕೆಟ್ ಸಂಭ್ರಮಿಸಿದರು.

ನೋಟ್‌ನಲ್ಲಿ ಏನು ಬರೆದಿತ್ತು?

ರಾಧೆ ರಾಧೆ, ಗುರದೇವನ ದೈವಿಕ ಕೃಪೆ ಹಾಗೂ ಆಶೀರ್ವಾದದಿಂದ ನನ್ನ ನೋವಿನ 15 ವರ್ಷಗಳು ಇಂದು ಅಂತ್ಯಗೊಂಡಿದೆ. ನನಗೆ ಮಹತ್ವದ ವೇದಿಕೆಯಲ್ಲಿ ಈ ಅವಕಾಶ ನೀಡಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಎಂದೆಂದಿಗೂ ಕೃತಜ್ಞನಾಗಿದ್ದೇನೆ. ಜೈ ಶ್ರೀರಾಮ್ ಎಂದು ರಾಘು ಶರ್ಮಾ ಬರೆದಿದ್ದರು. ಈ ಚೀಟಿ ಹಿಡಿದು ವಿಕೆಟ್ ಸಂಭ್ರಮಿಸಿದ್ದಾರೆ.

Scroll to load tweet…

ಯಾರು ಈ ರಾಘು ಶರ್ಮಾ

ಪಂಜಾಬ್ ಮೂಲದ ರಾಘು ಶರ್ಮಾ ಲೆಗ್ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ. 2017ರಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ ರಾಘು ಶರ್ಮಾ ಹೆಚ್ಚಿನ ಅವಕಾಶಗಳು ಸಿಗದೆ ನಿರಾಸೆ ಗೊಂಡಿದ್ದರು. 12 ಪ್ರಥಮ ದರ್ಜೆ ಪಂದ್ಯಗಳಿಂದ 57 ವಿಕೆಟ್ ಕಬಳಿಸಿದ್ದಾರೆ. ದೇಸಿ ಮಟ್ಟದಲ್ಲಿ ಕೇವಲ 5 ಟಿ20 ಪಂದ್ಯದಲ್ಲಿ ಆಡೋ ಅವಕಾಶ ಸಿಕ್ಕಿದ್ದು, 4 ವಿಕೆಟ್ ಕಬಳಿಸಿದ್ದರು. ಕಳೆದ ವರ್ಷ (2025) ರಾಘು ಶರ್ಮಾ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡಿದ್ದರು. ಆದರೆ ಆಡೋ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಹರಾಜಿನಲ್ಲಿ ರಾಘು ಶರ್ಮಾರನ್ನು ಮುಂಬೈ ಇಂಡಿಯನ್ಸ್ ರಿಟೇನ್ ಮಾಡಿಕೊಂಡಿತ್ತು.