ಆರ್ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವಿನ ಕ್ವಾಲಿಫೈಯರ್-1 ಪಂದ್ಯದ ಕುರಿತು ಗಿಣಿಶಾಸ್ತ್ರದ ಭವಿಷ್ಯವೊಂದು ವೈರಲ್ ಆಗಿದೆ. ಈ ಹಿಂದೆ ಆರ್ಸಿಬಿ ಗೆಲುವನ್ನು ನಿಖರವಾಗಿ ಭವಿಷ್ಯ ನುಡಿದಿದ್ದ ಗಿಣಿ, ಈ ಪಂದ್ಯದಲ್ಲೂ ಆರ್ಸಿಬಿ ಗೆದ್ದು ಫೈನಲ್ಗೆ ಏರಲಿದೆ ಎಂದು ಹೇಳಿದೆ.
ಬೆಂಗಳೂರು (ಮೇ.25): ಐಪಿಎಲ್ ಟ್ರೋಫಿಯನ್ನು ಡಿಫೆಂಡ್ ಮಾಡಿಕೊಳ್ಳುವ ನಿಟ್ಟಿನಲ್ಲಿ ಸರಿಯಾದ ಹೆಜ್ಜೆ ಇಟ್ಟಿರುವ ಆರ್ಸಿಬಿ ಈಗ ಫೈನಲ್ನ ಬಾಗಲಿಲಲ್ಲಿದೆ. ಗುಜರಾತ್ ಟೈಟನ್ಸ್ ವಿರುದ್ಧದ ಕ್ವಾಲಿಫೈಯರ್-1 ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ನೇರವಾಗಿ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಫೈನಲ್ ಪಂದ್ಯಕ್ಕೂ ಮುನ್ನ ಸಾಕಷ್ಟು ದಿನಗಳ ವಿಶ್ರಾಂತಿ ಕೂಡ ತಂಡಕ್ಕೆ ಸಿಗಲಿದೆ. ಆ ನಿಟ್ಟಿನಲ್ಲಿ ಆರ್ಸಿಬಿ ಹಾಗೂ ಗುಜರಾತ್ ತಂಡಗಳು ಕ್ವಾಲಿಫೈಯರ್-1 ಮುಖಾಮುಖಿಯಲ್ಲೇ ಗೆಲುವು ಸಾಧಿಸಿ ಫೈನಲ್ಗೇರುವ ಗುರಿಯಲ್ಲಿದೆ. ಇದರ ನಡುವೆ ನಾಳಿನ ಪಂದ್ಯವನ್ನು ಗೆಲ್ಲೋದು ಯಾರು ಅನ್ನೋದರ ಬಗ್ಗೆಯೂ ಸಾಕಷ್ಟು ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿವೆ.

ಕ್ರಿಕೆಟ್ ಲೈನ್ ಗುರು ಅನ್ನೋ ಇನ್ಸ್ಟಾಗ್ರಾಮ್ ಪೇಜ್ ಮೂಲಕ ಗಿಣಿಶಾಸ್ತ್ರದ ಭವಿಷ್ಯವನ್ನು ವ್ಯಕ್ತಿ ನುಡಿಯುತ್ತಿದ್ದು, ಆರ್ಸಿಬಿಯ ಕಳೆದ ಪಂದ್ಯದಲ್ಲಿ ಇವರು ಹೇಳಿದ್ದು ಭವಿಷ್ಯ ನಿಜವಾಗಿದೆ. ಅದರೊಂದಿಗೆ ಲೀಗ್ ಹಂತದ ಕೊನೇ ಪಂದ್ಯದಲ್ಲಿ ಇವರ ಗಿಣಿ ನುಡಿದ ಭವಿಷ್ಯ ನಿಜವಾಗಿದೆ.
ಕ್ವಾಲಿಫೈಯರ್-1 ಪಂದ್ಯದ ನಿಟ್ಟಿನಲ್ಲಿ ಇದೇ ವ್ಯಕ್ತಿ ತನ್ನ ಗಿಣಿ ಹೇಳಿರುವ ಭವಿಷ್ಯದ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.
ಐಪಿಎಲ್ನ ಸೆಮಿಫೈನಲ್ ಪಂದ್ಯದಲ್ಲಿ ಗೆಲ್ಲೋರು ಯಾರು ಎಂದು ಗಿಣಿ ಮೂಲಕ ಕೇಳಿದ ಭವಿಷ್ಯಕ್ಕೆ ಗಿಣಿ ಗೆಲುವಿನ ಕಾರ್ಡ್ ತೆಗೆದಿದೆ. ಇದರ ಪ್ರಕಾರ ಪಂದ್ಯದಲ್ಲಿ ಆರ್ಸಿಬಿ ಗೆದ್ದು, ಫೈನಲ್ಗೆ ಏರಲಿದೆ ಎಂದು ಆತ ತಿಳಿಸಿದ್ದಾನೆ.
ಇದಕ್ಕೆ ಕಾಮೆಂಟ್ ಮಾಡಿರುವ ಹಲವರು, ಆರ್ಸಿಬಿ ಮ್ಯಾಚ್ ಗೆಲ್ಲೋದು ಪಕ್ಕಾ ಎಂದು ಹೇಳಿದ್ದರೆ, ಇನ್ನೂ ಕೆಲವರು ಬರೆದಿಟ್ಟುಕೊಳ್ಳಿ ಈ ಪಂದ್ಯದಲ್ಲಿ ಜಿಟಿ ಗೆಲುವು ಸಾಧಿಸಲಿದೆ ಎಂದಿದ್ದಾರೆ. ಇನ್ನೂ ಕೆಲವರು ಈ ಕಾಮೆಂಟ್ ಬಾಕ್ಸ್ಗೆ ನಾನು ಮ್ಯಾಚ್ ಮುಗಿದ ನಂತರ ಬರುತ್ತೇನೆ ಎಂದಿದ್ದಾರೆ.
ಪಂದ್ಯಕ್ಕೂ ಮುನ್ನ ರಜತ್ ಪಟಿದಾರ್ ವಾರ್ನಿಂಗ್
ಮಂಗಳವಾರ ರಾತ್ರಿ ನಡೆಯಲಿರುವ ಹೈ-ವೋಲ್ಟೇಜ್ ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಗುಜರಾತ್ ಟೈಟನ್ಸ್ ಸವಾಲನ್ನು ಎದುರಿಸಲಿದ್ದು, ಒತ್ತಡದ ಸಂದರ್ಭದಲ್ಲಿ ಯೋಜನೆಗಳನ್ನು ಸರಿಯಾಗಿ ಕಾರ್ಯರೂಪಕ್ಕೆ ತರುವುದು ಮತ್ತು ತಂಡದ ಸಾಮರ್ಥ್ಯಕ್ಕೆ ತಕ್ಕಂತೆ ಆಡುವುದು ಅತ್ಯಂತ ನಿರ್ಣಾಯಕವಾಗಲಿದೆ ಎಂದು ಆರ್ಸಿಬಿ ನಾಯಕ ರಜತ್ ಪಟಿದಾರ್ ನಂಬಿದ್ದಾರೆ. ಪ್ರಸಕ್ತ ಸೀಸನ್ನ ಲೀಗ್ ಹಂತದ ಮುಖಾಮುಖಿಗಳಲ್ಲಿ ಉಭಯ ತಂಡಗಳು ಸಮಬಲದ ಸಾಧನೆ ಮಾಡಿವೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಆರ್ಸಿಬಿ 5 ವಿಕೆಟ್ಗಳ ಜಯ ಸಾಧಿಸಿದ್ದರೆ, ನಂತರ ನಡೆದ ರಿವರ್ಸ್ ಫಿಕ್ಸ್ಚರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 4 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ ತಿರುಗೇಟು ನೀಡಿತ್ತು.
ನೇರವಾಗಿ ಫೈನಲ್ ಪ್ರವೇಶಿಸುವ ದೊಡ್ಡ ಅವಕಾಶ ಕಣ್ಣಮುಂದಿರುವಾಗ, ಮೈದಾನದಲ್ಲಿ ತೋರುವ ಸಂಯಮವೇ ಉಭಯ ತಂಡಗಳ ನಡುವಿನ ವ್ಯತ್ಯಾಸವನ್ನು ನಿರ್ಧರಿಸಲಿದೆ ಎಂದು ಪಟಿದಾರ್ ಅಭಿಪ್ರಾಯಪಟ್ಟಿದ್ದಾರೆ. "ಎರಡೂ ತಂಡಗಳು ಈ ಸೀಸನ್ನುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿವೆ. ಪಂದ್ಯದ ದಿನದಂದು ಯಾವ ತಂಡ ತನ್ನ ಯೋಜನೆಗಳನ್ನು ಉತ್ತಮವಾಗಿ ಕಾರ್ಯರೂಪಕ್ಕೆ ತರುತ್ತದೆಯೋ, ಯಾರು ಶ್ರೇಷ್ಠ ಕ್ರಿಕೆಟ್ ಆಡುತ್ತಾರೋ ಮತ್ತು ಒತ್ತಡದ ಸಂದರ್ಭದಲ್ಲಿ ಹೆಚ್ಚು ಶಾಂತವಾಗಿರುತ್ತಾರೋ, ಆ ತಂಡವೇ ಪಂದ್ಯವನ್ನು ಗೆಲ್ಲಲಿದೆ ಎಂದು ನಾನು ಭಾವಿಸುತ್ತೇನೆ" ಎಂದು ರಜತ್ ಹೇಳಿದ್ದಾರೆ.


