ಸತತ ಸೋಲು, ಮನಸ್ತಾಪ, ಮಾಜಿ ಕ್ರಿಕೆಟಿಗರ ಆಕ್ರೋಶ, ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಬಳಿಕ ಟೀಂ ಇಂಡಿಯಾ ಜಿಂಬಾಬ್ಬೆ ಸರಣಿ ಗೆದ್ದಿದೆ. ಆದರೆ 3ನೇ ಪಂದ್ಯಕ್ಕೂ ಮೊದಲೇ ಟೀಂ ಇಂಡಿಯಾದಲ್ಲಿ ತಳಮಳ ಶುರುವಾಗಿದೆ.

ಹರಾರೆ (ಜು.26) ಟೀಂ ಇಂಡಿಯಾ ಕಳೆದೆರಡು ತಿಂಗಳಲ್ಲಿ ಸತತವಾಗಿ ಸಂಕಷ್ಟಗಳ ಸರಮಾಲೆ ಎದುರಿಸಿದೆ. ಟೀಂ ಇಂಡಿಯಾ ಆಯ್ಕೆ, ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ಸೋಲು ಸೇರಿದಂತೆ ಹಲವು ಸಂಕಷ್ಟಗಳು ಎದುರಾಗಿದೆ. ಆದರೆ ಜಿಂಬಾಬ್ವೆ ವಿರುದ್ದ ಆರಂಭಿಕ 2 ಪಂದ್ಯ ಗೆದ್ದು ಸರಣಿ ಗೆದ್ದುಕೊಂಡಿದೆ. ಈ ಮೂಲಕ ಸೋಲಿನಿಂದ ಹೊರಬಂದಿದೆ. ಆದರೆ ಗೆಲುವಿನ ನಿಟ್ಟುಸಿರು ಬಿಟ್ಟ ಟೀಂ ಇಂಡಿಯಾಗೆ ಮತ್ತೆ ಸಂಕಷ್ಟಗಳು ಎದುರಾಗಿದೆ. ಜಿಂಬಾಬ್ವೆ ವಿರುದ್ಧ 3ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೂ ಮೊದಲೇ ಅನಿವಾರ್ಯ ನಿರ್ಧಾರಗಳು ತಲೆನೋವು ಹೆಚ್ಚಿಸಿದೆ.

ಟೀಂ ಇಂಡಿಯಾಗೆ ಎದುರಾದ ಸಂಕಷ್ಟವೇನು?

ಜಿಂಬಾಬ್ವೆ ವಿರುದ್ಧ ಟಿ20 ಸರಣಿ ಆಡುತ್ತಿರುವ ಟೀಂ ಇಂಡಿಯಾಗೆ ಇದೀಗ ಇಂಜುರಿ ಸಮಸ್ಯೆಗಳು ಕಾಡುತ್ತಿದೆ. 2ನೇ ಟಿ20 ಪಂದ್ಯದಲ್ಲಿ ಗಾಯಗೊಂಡ ಬೌಲರ್ ಪ್ರಿನ್ಸ್ ಯಾದವ್ 3ನೇ ಪಂದ್ಯದಿಂದ ಹೊರಬಿದ್ದಿದ್ದಾರೆ. ಪ್ರಿನ್ಸ್ ಯಾದವ್ ಪ್ರಮುಖ 2 ವಿಕೆಟ್ ಕಬಳಿಸಿ ಗಮನಸೆಳೆದಿದ್ದರು. ಆದರೆ ಗಾಯಗೊಂಡ ಕಾರಣ ಅರ್ಧದಿಂದಲೇ ಮೈದಾನದಿಂದ ಹೊರನಡೆಯಬೇಕಾಯಿತು.ಇದೀಗ ಜಿಂಬಾಬ್ವೆ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. 3ನೇ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿದೆ. ಪ್ರಿನ್ಸ್ ಯಾದವ್ ಬದಲು ಅಶೋಕ್ ಶರ್ಮಾ ತಂಡ ಸೇರಿಕೊಂಡಿದ್ದಾರೆ.

ಯಾರಿಗೆ ಸ್ಥಾನ

2ನೇ ಪಂದ್ಯದಲ್ಲಿ ಅಶೋಕ್ ಬದಲು ಯಶ್ ಠಾಕೂರ್ ಸ್ಥಾನ ಪಡೆದಿದ್ದರು. ಇದೀಗ ಪ್ರಿನ್ಸ್ ಯಾದವ್ ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಮತ್ತೆ ಅಶೋಕ್ ಶರ್ಮಾ ತಂಡ ಸೇರಿಕೊಂಡಿದ್ದಾರೆ. 2ನೇ ಪಂದ್ಯದ ಬಳಿಕ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ಇಂಜುರಿ ಕುರಿತು ಅಪ್‌ಡೇಟ್ ನೀಡಿದ್ದಾರೆ.

ಆರಂಭಿಕ 2 ಪಂದ್ಯಗಳಲ್ಲಿ ಗೆಲುವು

ಐರ್ಲೆಂಡ್ ವಿರುದ್ದ 2 ಸೋಲು, ಇಂಗ್ಲೆಂಡ್ ವಿರುದ್ಧ 4 ಸೋಲು ಕಂಡ ಟೀಂ ಇಂಡಿಯಾ ಕಂಗಾಲಾಗಿತ್ತು. ಆದರೆ ಜಿಂಬಾಬ್ವೆ ವಿರುದ್ದದ 3 ಪಂದ್ಯಗಳ ಟಿ20 ಸರಣಿಯಲ್ಲಿ ಆರಂಭಿಕ 2 ಪಂದ್ಯ ಗೆದ್ದು ಸರಣಿ ಗೆದ್ದುಕೊಂಡಿದೆ. 2ನೇ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಅಬ್ಬರಿಸಿತ್ತು. ಹೀಗಾಗಿ ಭರ್ಜರಿ 90 ರನ್ ಗೆಲುವು ದಾಖಲಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯ 219 ರನ್ ಸಿಡಿಸಿತ್ತು. ಇತ್ತ ಜಿಂಬಾಬ್ವೆ ತಂಡವನ್ನು 129 ರನ್‌ಗೆ ಆಲೌಟ್ ಮಾಡಿತ್ತು.