BCCI Directs KKR to Release Mustafizur Rahman Over Bangladesh Row IPL 2026: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಮುಸ್ತಾಫಿಜುರ್ ರೆಹಮಾನ್ ಅವರನ್ನು ರಿಲೀಸ್ ಮಾಡುವಂತೆ ಬಿಸಿಸಿಐ ಫ್ರಾಂಚೈಸಿಗೆ ಸೂಚನೆ ನೀಡಿದೆ. ಇತ್ತೀಚಿನ ಬೆಳವಣಿಗೆಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮುಂಬೈ (ಜ.3): ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಬಿಸಿಸಿಐ, ಬಾಂಗ್ಲಾದೇಶ ತಂಡದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ನನ್ನು 2026ರ ಐಪಿಎಲ್ ಟೀಮ್ನಿಂದ ಕೈಬಿಡುವಂತೆ ಬಾಲಿವುಡ್ ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡಕ್ಕೆ ಸೂಚಿಸಿದೆ. ಕೇವಲ ಎರಡು ವಾರದಲ್ಲಿ ಬಾಂಗ್ಲಾದೇಶದಲ್ಲಿ ನಾಲ್ಕು ಹಿಂದೂಗಳ ಹತ್ಯೆಯಾದ ಬಳಿಕ ಹಾಘೂ ಬಾಂಗ್ಲಾದಲ್ಲಿ ಭಾರತ ವಿರೋಧಿ ಭಾವನೆ ತೀವ್ರವಾಗಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೆಕೆಆರ್ ತಂಡಕ್ಕೆ ಮುಸ್ತಾಫಿಜುರ್ ರೆಹಮಾನ್ರನ್ನು ತಂಡದಿಂದ ಕೈಬಿಡುವಂತೆ ಸೂಚನೆ ನೀಡಿರುವುದಾಗಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ. ಇದರಿಂದಾಗಿ ಐಪಿಎಲ್ನಲ್ಲಿ ಮುಸ್ತಾಫಿಜುರ್ ರೆಹಮಾನ್ ಭಾಗವಹಿಸುವ ಬಗ್ಗೆಗ ಇದ್ದ ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಂತಾಗಿದೆ.
ಡಿಸೆಂಬರ್ 2025 ರಲ್ಲಿ ನಡೆದ ಐಪಿಎಲ್ 2026 ಮಿನಿ ಹರಾಜಿನಲ್ಲಿ ಕೆಕೆಆರ್ ಮುಸ್ತಾಫಿಜುರ್ ಅವರನ್ನು 9.20 ಕೋಟಿ ರೂ.ಗಳಿಗೆ ಸಹಿ ಮಾಡಿಕೊಂಡಿತ್ತು. ಇದರ ಬೆನ್ನಲ್ಲಿಯೇ ವಿವಾದ ಕೂಡು ಶುರುವಾಗಿತ್ತು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ತೀವ್ರತರವಾದ ದಾಳಿ ಆಗುತ್ತಿದೆ. ಭಾರತ ವಿರೋಧಿ ಭಾವನೆ ತೀವ್ರವಾಗಿದೆ ಹೀಗಿರುವ ಸಮಯದಲ್ಲಿ ಐಪಿಎಲ್ನಲ್ಲಿ ಬಾಂಗ್ಲಾ ಆಟಗಾರ ಆಡಲು ಅವಕಾಶ ನೀಡಬಾರದು ಎನ್ನುವ ಒತ್ತಾಯ ಕೇಳಿಬಂದಿತ್ತು. ಅದರಲ್ಲೂ ಕೋಲ್ಕತ್ತಾದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಯಾವೊಬ್ಬ ಬಾಂಗ್ಲಾ ಪ್ಲೇಯರ್ಗೂ ಆಡುವ ಅವಕಾಶ ನೀಡೋದಿಲ್ಲ ಎಂದು ಸ್ಥಳೀಯ ಧಾರ್ಮಿಕ ಗುಂಪುಗಳು ಎಚ್ಚರಿಕೆ ನೀಡಿದ್ದವು.
ಈ ಬಗ್ಗೆ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ಸೈಕಿಯಾ, ಮಂಡಳಿಯ ನಿರ್ಧಾರವನ್ನು ತಿಳಿಸಲಾಗಿದೆ ಮತ್ತು ಬಾಂಗ್ಲಾದೇಶ ಅಂತರರಾಷ್ಟ್ರೀಯ ಆಟಗಾರನೊಂದಿಗೆ ಬೇರ್ಪಡುವಂತೆ ಫ್ರಾಂಚೈಸಿಗೆ ಔಪಚಾರಿಕವಾಗಿ ಸೂಚಿಸಲಾಗಿದೆ ಎಂದರು. "ಇತ್ತೀಚೆಗೆ ಎಲ್ಲೆಡೆ ನಡೆಯುತ್ತಿರುವ ಬೆಳವಣಿಗೆಗಳಿಂದಾಗಿ, ಬಿಸಿಸಿಐ ತನ್ನ ಆಟಗಾರರಲ್ಲಿ ಒಬ್ಬರಾದ ಬಾಂಗ್ಲಾದೇಶದ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಬಿಡುಗಡೆ ಮಾಡುವಂತೆ ಕೆಕೆಆರ್ ಫ್ರಾಂಚೈಸಿಗೆ ಸೂಚನೆ ನೀಡಿದೆ" ಎಂದು ಸೈಕಿಯಾ ಹೇಳಿದರು. "ಯಾವುದೇ ಬದಲಿ ಆಟಗಾರನನ್ನು ಕೇಳಿದರೆ, ಬಿಸಿಸಿಐ ಆ ಬದಲಿ ಆಟಗಾರನನ್ನು ಅನುಮತಿಸಲಿದೆ ಎಂದು ಹೇಳಿದೆ" ಎಂದು ಅವರು ಹೇಳಿದರು.
ಬಾಂಗ್ಲಾ ಆಟಗಾರರ ಭಾಗವಹಿಸುವಿಕೆಗೆ ವಿರೋಧಿಸಿದ್ದ ಬಿಜೆಪಿ
ಕೋಲ್ಕತ್ತಾದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳಲ್ಲಿ ಬಾಂಗ್ಲಾದೇಶಿ ಆಟಗಾರರು ಭಾಗವಹಿಸುವ ಬಗ್ಗೆ ಬಿಜೆಪಿ ನಾಯಕ ಕೌಸ್ತವ್ ಬಾಗ್ಚಿ ಸಾರ್ವಜನಿಕವಾಗಿ ಆಕ್ಷೇಪಣೆ ವ್ಯಕ್ತಪಡಿಸಿದ ನಂತರ ಮುಸ್ತಾಫಿಜುರ್ ಸೇರ್ಪಡೆಯ ಸುತ್ತಲಿನ ವಿವಾದವು ವೇಗ ಪಡೆದುಕೊಂಡಿತು. ಅವರ ಹೇಳಿಕೆಗಳ ನಂತರ ಹಲವಾರು ಕಡೆಗಳಿಂದ ಟೀಕೆಗಳು ಬಂದವು. ಕೆಲವರು ಕೆಕೆಆರ್ ತಂಡದ ಸಹ ಮಾಲೀಕ ಹಾಗೂ ಬಾಲಿವುಡ್ ನಟ ಶಾರುಖ್ ಖಾನ್, ಹರಾಜಿನಲ್ಲಿ ಮುಸ್ತಾಫಿಜುರ್ ರೆಹಮಾನ್ರನ್ನು ಆಯ್ಕೆ ಮಾಡಿದ್ದಕ್ಕೆ ಟಾರ್ಗೆಟ್ ಮಾಡಿದ್ದರು.
ಬಿಸಿಸಿಐ ರಾಜಕೀಯ ಪ್ರತಿಕ್ರಿಯೆಗಳನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಸೈಕಿಯಾ ಅವರ ಹೇಳಿಕೆಯು ಮಂಡಳಿಯು ಮಧ್ಯಪ್ರವೇಶಿಸುವ ಮೊದಲು ವಿಶಾಲ ಪರಿಸ್ಥಿತಿಯನ್ನು ಅವಲೋಕಿಸಿದೆ ಎಂದು ಸ್ಪಷ್ಟಪಡಿಸಿದೆ. ಐಪಿಎಲ್ 2026 ರ ಸಿದ್ಧತೆಗಳು ವೇಗ ಪಡೆದುಕೊಳ್ಳುತ್ತಿದ್ದಂತೆ ಮತ್ತಷ್ಟು ತೊಡಕುಗಳನ್ನು ತಪ್ಪಿಸುವ ಗುರಿಯನ್ನು ಹೊಂದಿರುವ ತಡೆಗಟ್ಟುವ ಕ್ರಮವಾಗಿ ಮುಸ್ತಾಫಿಜುರ್ ಅವರನ್ನು ಬಿಡುಗಡೆ ಮಾಡುವ ಸೂಚನೆಯನ್ನು ತಿಳಿಸಲಾಗಿದೆ.
ಕ್ರಿಕೆಟ್ ದೃಷ್ಟಿಕೋನದಿಂದ ನೋಡುವುದಾದರೆ, ಈ ನಿರ್ಧಾರವು ಕೆಕೆಆರ್ನ ವಿದೇಶಿ ವೇಗದ ಬೌಲಿಂಗ್ ವಿಭಾಗದಲ್ಲಿ ದೊಡ್ಡ ಅಂತರ ಸೃಷ್ಟಿಸಲಿದೆ. ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಪ್ರಮುಖವಾಗಿರುವ ಮುಸ್ತಾಫಿಜುರ್, ವಿಶೇಷವಾಗಿ ನಿಧಾನಗತಿಯ ಮೇಲ್ಮೈಗಳಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿತ್ತು.


