Actor Allu Arjun: ಅಲ್ಲು ಅರ್ಜುನ್ ಹೈದರಾಬಾದ್ ತೊರೆಯಲಿದ್ದಾರೆಯೇ? ಪ್ಯಾನ್ ಇಂಡಿಯಾ ಇಮೇಜ್ ಜೊತೆಗೆ ಬಾಲಿವುಡ್‌ನಿಂದಲೂ ಸಾಲು ಸಾಲು ಆಫರ್‌ಗಳು ಬರುತ್ತಿರುವುದರಿಂದ ʼಬನ್ನಿʼ ತಮ್ಮ ಕುಟುಂಬದೊಂದಿಗೆ ಮುಂಬೈಗೆ ಶಿಫ್ಟ್ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಹಿಂದಿನ ಸತ್ಯಾಸತ್ಯತೆ ಏನು? 

ಸದ್ಯ ಅಲ್ಲು ಅರ್ಜುನ್ ರೇಂಜ್ ಬೇರೆ. ಬನ್ನಿ ಜೊತೆ ಸಿನಿಮಾ ಮಾಡಬೇಕೆಂದರೆ ಬಜೆಟ್ 1000 ಕೋಟಿ ಇರಬೇಕು ಮತ್ತು ಕಥೆ ಪ್ಯಾನ್ ಇಂಡಿಯಾ ಮಟ್ಟದ್ದಾಗಿರಬೇಕು. 'ಪುಷ್ಪ' ಸರಣಿಯ ನಂತರ ಅವರ ಇಮೇಜ್ ಸಂಪೂರ್ಣ ಬದಲಾಗಿದೆ. ಅಲ್ಲು ಅರ್ಜುನ್‌ಗಾಗಿ ಬಾಲಿವುಡ್‌ನ ಸ್ಟಾರ್ ನಿರ್ದೇಶಕರು ಕ್ಯೂ ನಿಂತಿದ್ದಾರೆ. ಸದ್ಯ ಅವರು ಅಟ್ಲಿ ನಿರ್ದೇಶನದ 'ರಾಕಾ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಬೇರೆ ಭಾಷೆ ಸಿನಿಮಾಗಳಲ್ಲಿ ಬ್ಯುಸಿ

ಈ ಸಿನಿಮಾದ ನಂತರ ಅಲ್ಲು ಅರ್ಜುನ್, ಲೋಕೇಶ್ ಕನಕರಾಜ್ ಜೊತೆ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಶುರು ಮಾಡಲಿದ್ದಾರೆ. ಇದರ ನಡುವೆಯೇ ಸಂಜಯ್ ಲೀಲಾ ಬನ್ಸಾಲಿ ಜೊತೆಗೂ ಒಂದು ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ, ಅಲ್ಲು ಅರ್ಜುನ್ ಮುಂದಿನ ಕೆಲವು ವರ್ಷಗಳ ಕಾಲ ಟಾಲಿವುಡ್‌ಗಿಂತ ಹೆಚ್ಚಾಗಿ ಬೇರೆ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ. ಇದೇ ಕಾರಣಕ್ಕೆ ಅವರು ಹೈದರಾಬಾದ್‌ನಿಂದ ತಮ್ಮ ವಾಸಸ್ಥಳವನ್ನು ಬದಲಾಯಿಸಲಿದ್ದಾರೆ ಎನ್ನಲಾಗುತ್ತಿದೆ.

ಮುಂಬೈಗೆ ಶಿಫ್ಟ್‌ ಆಗ್ತಾರಾ?

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಇನ್ನು ಮುಂದೆ ಹೈದರಾಬಾದ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ವರದಿಗಳ ಪ್ರಕಾರ, ಅಲ್ಲು ಅರ್ಜುನ್ ಹೈದರಾಬಾದ್‌ನಿಂದ ಸಂಪೂರ್ಣವಾಗಿ ಮುಂಬೈಗೆ ಶಿಫ್ಟ್ ಆಗುವ ಯೋಚನೆಯಲ್ಲಿದ್ದಾರೆ. ಈ ನಿರ್ಧಾರದಿಂದಾಗಿ, ಭವಿಷ್ಯದಲ್ಲಿ ಟಾಲಿವುಡ್ ನಿರ್ದೇಶಕ-ನಿರ್ಮಾಪಕರು ಅವರನ್ನು ಭೇಟಿಯಾಗಲು ಮುಂಬೈಗೆ ಹೋಗಬೇಕಾಗುತ್ತದೆ. ಪ್ರತಿ ವರ್ಷ ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ಅಭಿಮಾನಿಗಳು ಹೈದರಾಬಾದ್‌ನಲ್ಲಿರುವ ಅವರ ಮನೆಗೆ ಬಂದು ಶುಭ ಕೋರುವುದು ಸಂಪ್ರದಾಯ. ಅವರು ಮುಂಬೈಗೆ ಶಿಫ್ಟ್ ಆದರೆ ಈ ಸಂಪ್ರದಾಯಕ್ಕೆ ಬ್ರೇಕ್ ಬೀಳಬಹುದು.

ಬಾಲಿವುಡ್‌ನಲ್ಲಿ ಏನ್‌ ಮಾಡ್ತಾರೆ?

ಈಗಾಗಲೇ 'ರಾಕಾ' ಶೂಟಿಂಗ್‌ಗಾಗಿ ಅಲ್ಲು ಅರ್ಜುನ್ ಹೆಚ್ಚಾಗಿ ಮುಂಬೈನಲ್ಲೇ ಇರುತ್ತಿದ್ದಾರೆ. ಅಲ್ಲಿ ಫ್ಲ್ಯಾಟ್ ಕೂಡ ಖರೀದಿಸಿದ್ದಾರೆ ಎನ್ನಲಾಗಿದೆ. ಸಾಲು ಸಾಲು ಬಾಲಿವುಡ್ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳುತ್ತಿರುವುದರಿಂದ, ಅವರು ಸಂಪೂರ್ಣವಾಗಿ ಮುಂಬೈಗೆ ಶಿಫ್ಟ್ ಆಗುವ ಯೋಚನೆಯಲ್ಲಿದ್ದಾರೆ ಎಂದು ವರದಿಯಾಗಿದೆ. ಬಾಲಿವುಡ್ ಸ್ಟಾರ್‌ಗಳೇ ಸೌತ್ ಕಡೆ ಮುಖ ಮಾಡಿರುವಾಗ, ಅಲ್ಲು ಅರ್ಜುನ್ ಬಾಲಿವುಡ್‌ಗೆ ಹೋಗಿ ಏನು ಮಾಡುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಇಡೀ ಕುಟುಂಬ ಹೋಗಲಿದ್ಯಾ?

ಅಲ್ಲು ಅರ್ಜುನ್‌ಗೆ ಮೊದಲಿನಿಂದಲೂ ಮುಂಬೈ ಮೇಲೆ ಆಸಕ್ತಿ ಇತ್ತು ಎನ್ನಲಾಗಿದೆ. ಅಲ್ಲಿನ ವಾತಾವರಣ ಮತ್ತು ಜೀವನಶೈಲಿ ಅವರಿಗೆ ಇಷ್ಟವಾಗಿದ್ದರಿಂದ, ಎಂದಾದರೂ ಅಲ್ಲಿ ನೆಲೆಸಬೇಕೆಂಬ ಗುರಿ ಹೊಂದಿದ್ದರು ಎಂದು ಚಿತ್ರರಂಗದ ಮೂಲಗಳು ಹೇಳುತ್ತವೆ. ಅಲ್ಲು ಅರ್ಜುನ್ ಜೊತೆಗೆ ಅವರ ಪತ್ನಿ ಸ್ನೇಹಾ ರೆಡ್ಡಿ, ಮಕ್ಕಳಾದ ಅಲ್ಲು ಅಯಾನ್ ಮತ್ತು ಅಲ್ಲು ಅರ್ಹಾ ಕೂಡ ಮುಂಬೈಗೆ ತೆರಳಲಿದ್ದಾರೆ ಎಂಬ ಮಾಹಿತಿ ಇದೆ. 'ರಾಕಾ' ನಂತರ, ನಿರ್ದೇಶಕ ಲೋಕೇಶ್ ಕನಕರಾಜ್ ಜೊತೆಗಿನ ಸಿನಿಮಾದ ಶೂಟಿಂಗ್ ಕೂಡ ಹೆಚ್ಚಾಗಿ ಮುಂಬೈ ಸುತ್ತಮುತ್ತಲೇ ನಡೆಯಲಿದೆ ಎನ್ನಲಾಗಿದೆ.

ಅದೇ ರೀತಿ, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಜೊತೆ ಅಲ್ಲು ಅರ್ಜುನ್ ಸಿನಿಮಾ ಮಾಡಿದರೆ, ಅಲ್ಲೇ ಇರಬೇಕಾಗುತ್ತದೆ. ಈ ಪ್ರಾಜೆಕ್ಟ್‌ನ ಶೂಟಿಂಗ್ ಕೂಡ ಮುಂಬೈನಲ್ಲೇ ನಡೆಯುವುದರಿಂದ, ಕುಟುಂಬದೊಂದಿಗೆ ಅಲ್ಲೇ ನೆಲೆಸಲು ಅವರು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿಯಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ತಿಳಿದಿಲ್ಲ, ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ.

ಇತ್ತೀಚೆಗೆ ಅಲ್ಲು ಅರ್ಜುನ್ ಹುಟ್ಟುಹಬ್ಬದಂದು, ಅಟ್ಲಿ ನಿರ್ದೇಶನದ ಸಿನಿಮಾದ 'ರಾಕಾ' ಟೈಟಲ್ ಮತ್ತು ಫಸ್ಟ್ ಲುಕ್ ರಿವೀಲ್ ಮಾಡಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಫಸ್ಟ್ ಲುಕ್ ಎಲ್ಲರನ್ನೂ ಬೆರಗುಗೊಳಿಸುವಂತಿತ್ತು. ಇದರಲ್ಲಿ ಬನ್ನಿ ಒಂದು ವಿಚಿತ್ರ ಜೀವಿ ರೀತಿ ಕಾಣಿಸಿಕೊಂಡಿದ್ದರು. ಈ ಸಿನಿಮಾಗಾಗಿ ಅಲ್ಲು ಅರ್ಜುನ್ ಬಹಳಷ್ಟು ಶ್ರಮ ವಹಿಸುತ್ತಿದ್ದಾರೆ. ಸ್ಟೈಲಿಶ್ ಸ್ಟಾರ್ ಎಂದೇ ಖ್ಯಾತರಾದ ಬನ್ನಿ, ಈ ಲುಕ್‌ನಲ್ಲಿ ಬೋಳು ತಲೆ, ಭಯಾನಕ ಕೈ-ಉಗುರುಗಳೊಂದಿಗೆ ಕಾಣಿಸಿಕೊಂಡಿದ್ದಾರೆ. 'ರಾಕಾ' ಸಿನಿಮಾ ಸ್ಪೇಸ್ ಸೈನ್ಸ್ ಮತ್ತು ಫಿಕ್ಷನ್ ಕಥೆಯನ್ನು ಹೊಂದಿದೆ ಎನ್ನಲಾಗಿದ್ದು, ಬನ್ನಿ ಏಲಿಯನ್ ಪಾತ್ರದಲ್ಲಿ ನಟಿಸುತ್ತಿದ್ದಾರೆಯೇ ಎಂಬ ಕುತೂಹಲ ಹೆಚ್ಚಾಗಿದೆ.