Asianet Suvarna News Asianet Suvarna News

ಒಂದೂವರೆ ಕೋಟಿ ರೂ. ಹಂಚೋಕೆ ಆರ್ಡರ್​ ಮಾಡಿದ್ದ ರಜನಿಕಾಂತ್​... ಎಲ್ಲರ ಕಣ್ಣಲ್ಲೂ ಕಣ್ಣೀರ ಧಾರೆ...

ರಜನೀಕಾಂತ್​ ಅವರ  ಪಡೆಯಪ್ಪನ್​ ಚಿತ್ರ ಬಜೆಟ್​ಗಿಂದ ಕಡಿಮೆ ಖರ್ಚಿನಲ್ಲಿ ಮುಗಿದ ಕಾರಣ, ಉಳಿದ ಒಂದೂವರೆ ಕೋಟಿಯನ್ನು ಕಲಾವಿದರು ಹಾಗೂ ತಂತ್ರಜ್ಞರಿಗೆ ಹಂಚುವಂತೆ ಹೇಳಿದ್ದರಂತೆ!
 

When Rajinikanth distributed  crores of money to Padayappa team suc
Author
First Published Aug 31, 2023, 4:46 PM IST | Last Updated Aug 31, 2023, 4:47 PM IST

ಯಜಮಾನ (ತಲೈವಾ) ಎಂದೇ ಗುರುತಿಸಿಕೊಂಡಿರೋ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರ ಬಗ್ಗೆ ಕೆದಕಿದ್ದಷ್ಟೂ ಹೊಸ ಹೊಸ ವಿಷಯಗಳು ಬರುತ್ತಲೇ ಇರುತ್ತವೆ.  72ನೇ ವಯಸ್ಸಿನಲ್ಲಿಯೂ ಜೈಲರ್​ ಚಿತ್ರದ ಮೂಲಕ ಹಲವು ಚಿತ್ರಗಳ ದಾಖಲೆಗಳನ್ನು ಉಡೀಸ್​ ಮಾಡಿದ್ದಾರೆ ಎಂದರೆ ಅವರ ತಾಕತ್ತು ಎಷ್ಟು ಎನ್ನುವುದು ಕಾಣಸಿಗುತ್ತದೆ. ಇದಾಗಲೇ ಜೈಲರ್​ ಚಿತ್ರ  600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ರಜನಿಕಾಂತ್​ ಅವರು ಎಲ್ಲರಿಗೂ ಇಷ್ಟವಾಗಲು ಇನ್ನೊಂದು ಕಾರಣವೂ ಇದೆ. ಅದೇನೆಂದರೆ ಅವರ ವ್ಯಕ್ತಿತ್ವ. ಎಷ್ಟೇ ದೊಡ್ಡ ಸ್ಟಾರ್​ ಆದರೂ ತಮ್ಮ ಹಿಂದಿನ ಕಷ್ಟದ ದಿನಗಳನ್ನು ಅವರು ಎಂದಿಗೂ ಮರೆತೇ ಇಲ್ಲ. ಮೊನ್ನೆ ತಾನೆ ಬೆಂಗಳೂರಿಗೆ ಭೇಟಿ ನೀಡಿ ತಾವು ಕೆಲಸ ಮಾಡಿದ ಜಯನಗರ ಬಿಎಂಟಿಸಿ ಬಸ್ ಡಿಪೋದಲ್ಲಿ ಅಡ್ಡಾಡಿದ್ದರು. ಅಲ್ಲಿನ ಸಿಬ್ಬಂದಿ ಜೊತೆ ಮಾತನಾಡಿ ಫೋಟೊ ಕ್ಲಿಕ್ಕಿಸಿಕೊಂಡಿರೋದೂ ಇದಕ್ಕೊಂದು ಸಾಕ್ಷಿ.  ಬೆಂಗಳೂರಿನ ನಂಟು ಇರುವ ರಜನಿಕಾಂತ್​ ಅವರು ಎಂದಿಗೂ ಈ ನಂಟು ಹಾಗೂ ಆ ದಿನಗಳ ಕಷ್ಟದ ಸ್ಥಿತಿಯನ್ನು ಮರೆತೂ ಇಲ್ಲ, ತಮ್ಮ ಜೊತೆ ಕೆಲಸ ಮಾಡಿದವರನ್ನೂ, ಮಾಡುತ್ತಿರುವವರನ್ನು ಅಷ್ಟೇ ಆತ್ಮೀಯವಾಗಿ ಮಾತನಾಡಿಸುತ್ತಾರೆ. 

 ರಜನಿಕಾಂತ್​ ಅವರ ಇನ್ನೊಂದು ವ್ಯಕ್ತಿತ್ವ ಎಂದರೆ ಅವರೊಬ್ಬ ದಾನಿ ಎನ್ನುವುದು. ರಜನೀಕಾಂತ್‌ ಅವರ ಒಟ್ಟು ಆಸ್ತಿ ಮೌಲ್ಯ 365 ಕೋಟಿ ರುಪಾಯಿ. ಪ್ರತಿ ಸಿನಿಮಾಕ್ಕೆ ಸುಮಾರು 50 ರಿಂದ 55  ಕೋಟಿ ಯಷ್ಟು ಸಂಭಾವನೆ ಪಡೆಯುತ್ತಾರೆ. ಇದನ್ನು ಗಮನಿಸಿದರೆ ಇವರ ಆಸ್ತಿ ಇನ್ನೂ ಹೆಚ್ಚಾಗಬೇಕಿತ್ತು. ರಜನಿಕಾಂತ್ ಬಳಿ ಕೋಟಿಗಳಿಗೆ ಬೆಲೆ ಬಾಳುವಂತಹ  ಮರ್ಸಿಡಿಸ್ ಜಿ ವ್ಯಾಗನ್, ರೋಲ್ಸ್ ರಾಯ್ಸ್ ಘೋಸ್ಟ್ , ರೋಲ್ಸ್ ರಾಯ್ಸ್ ಫ್ಯಾಂಟಮ್, ಕಸ್ಟಮ್ ನಿರ್ಮಿತ ಲಿಮೋಸಿನ್ ಕಾರುಗಳಿವೆ. ಇದರ ಬೆಲೆಗಳನ್ನು ಗಮನಿಸಿದರೂ ಇವರ ಆಸ್ತಿಯ ಮೊತ್ತ ಕಡಿಮೆ ಎಂದೇ ಹೇಳಬೇಕು. ಆದರೆ ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ಇವರು ತಮ್ಮ ಆಸ್ತಿಯನ್ನು ಅದೆಷ್ಟೋ ಮಂದಿಗೆ ದಾನ ಮಾಡಿದ್ದಾರೆ. 

ನನಗಿಂತ ಚಿಕ್ಕವರಾಗಿದ್ದರೂ ಸನ್ಯಾಸಿ ಕಾಲಿಗೆರಗುತ್ತೇನೆ,ಟೀಕಾರರ ಬಾಯಿ ಮುಚ್ಚಿಸಿದ ರಜನಿಕಾಂತ್!

ಹೌದು. ದಾನ ಮಾಡುವುದರಲ್ಲಿ ತಲೈವಾ (Talaiva) ಅವರದ್ದು ದೊಡ್ಡ ಕೊಡುಗೈ. ತಮ್ಮ ಸಿನಿಮಾಗಳಿಂದ ನಿರ್ಮಾಪಕರು, ವಿತರಕರು, ಪ್ರದರ್ಶಕರು ನಷ್ಟ ಅನುಭವಿಸಿದಾಗ ಬೆಂಬಲಕ್ಕೆ ನಿಂತಿದ್ದಾರೆ. ಕಲಾವಿದರು, ಸಿನಿಮಾ ಕಾರ್ಮಿಕರನ್ನೂ ಅವರು ಅಷ್ಟೇ ಪ್ರೀತಿಯಿಂದ ನೋಡುತ್ತಾರೆ. ಅದಕ್ಕೆ ಒಂದು ಉದಾಹರಣೆ ಇದೀಗ ಬೆಳಕಿಗೆ ಬಂದಿದೆ. ಸಹ ನಿರ್ಮಾಪಕ ಪಿ. ಎಲ್ ತೇನಪ್ಪನ್ ಅವರು ರಜನೀಕಾಂತ್​ ಅವರ ಕೊಡುಗೈ ಬಗ್ಗೆ ಮಾತನಾಡಿದ್ದಾರೆ. ಬ್ಲಾಕ್​ಬಸ್ಟರ್​ ಚಿತ್ರವಾಗಿರುವ  'ಪಡೆಯಪ್ಪ' ಬಗ್ಗೆ ಅವರು ಮಾತನಾಡಿದ್ದಾರೆ. 1999ರಲ್ಲಿ ತೆರೆ ಕಂಡ ಚಿತ್ರವಿದು. ಕೆ.ಎಸ್.ರವಿಕುಮಾರ್ ನಿರ್ದೇಶನದ ಈ ಚಿತ್ರ ಹಲವು ಪ್ರಶಸ್ತಿಗಳಿಗೆ ಭಾಜನವಾಗಿ ಸುದ್ದಿಯಾಗಿತ್ತು.  'ಪಡೆಯಪ್ಪ' ಸಿನಿಮಾ ಅಂದುಕೊಂಡ ಬಜೆಟ್‌ಗಿಂತ ಕಡಿಮೆ ಬಜೆಟ್‌ನಲ್ಲೇ ಚಿತ್ರೀಕರಣ ಮುಗಿಸಿತ್ತು. ಇದೇ ಖುಷಿಯಲ್ಲಿ ಉಳಿದ ಹಣವನ್ನೆಲ್ಲಾ ಕಲಾವಿದರು ಮತ್ತು ತಂತ್ರಜ್ಞರಿಗೆ ಹಂಚಿಬಿಟ್ಟರಂತೆ ರಜನೀಕಾಂತ್​ ಅವರು!

ಈ ರೋಚಕ ಘಟನೆಯನ್ನು ಅವರು ವಿವರಿಸಿದ್ದಾರೆ. 'ಅಂದು ಇನ್ನೂ ನೆನಪಿದೆ. 'ಪಡೆಯಪ್ಪ' (Padeyappan) ಚಿತ್ರದಲ್ಲಿ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರಿಗೆ ಸಂಭಾವನೆ ಎಷ್ಟು ಎನ್ನುವ ಮಾಹಿತಿ ತಗೊಂಡು ಬನ್ನಿ ಎಂದರು. ಅದರ ಮಾಹಿತಿ ನನಗೆ ಇರಲಿಲ್ಲ. ಆದರೆ ಅವರು ಎಲ್ಲಾ ನನ್ನ ತಲೆಯಲ್ಲಿಯೇ ಇದೆ ಬನ್ನಿ ಎಂದುಬಿಟ್ಟರು.  ಅವರ ಮನೆಗೆ ಹೋದೆ. ತಾವೇ ಎಲ್ಲಾ ಲೆಕ್ಕ ಹೇಳಲು ಶುರು ಮಾಡಿದರು. 'ಪಡೆಯಪ್ಪ' ಚಿತ್ರಕ್ಕೆ 4 ಕೋಟಿ ರೂ. ಬಜೆಟ್ ಪ್ಲ್ಯಾನ್ ಮಾಡಿದ್ದರು. ಆದರೆ 2.70 ಕೋಟಿ ರೂ.ಗೆ ಸಿನಿಮಾ ನಿರ್ಮಾಣವಾಗಿತ್ತು. ನಾಯಕಿ ರಮ್ಯಾಕೃಷ್ಣ ಸೇರಿದಂತೆ  ತಂತ್ರಜ್ಞರು ಎಲ್ಲರಿಗೂ ಡಬಲ್ ಸಂಭಾವನೆ ಕೊಡು ಎಂದರು. 1.30 ಕೋಟಿ ರೂ. ಬಜೆಟ್ ಉಳಿದಿತ್ತು. ಇಷ್ಟು ದುಡ್ಡು ಉಳಿಯಲು ಕಾರಣವೂ ಚಿತ್ರತಂಡವೇ ಅಲ್ಲವೆ ಎಂದ ಅವರು ಎಲ್ಲಾ ಹಣ ಹಂಚಲು ಹೇಳಿದರು.  ರಾತ್ರಿ 11 ಗಂಟೆಗೆ ನಾನೊಬ್ಬನೇ ಕಾರಿನಲ್ಲಿ ಹಣ ಇಟ್ಟುಕೊಂಡು ಊರೂರು ಸುತ್ತಿ ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಹಣ ಕೊಟ್ಟು ಬಂದಿದ್ದೆ. ಏಕೆಂದರೆ ಆ ರಾತ್ರಿನೇ ಹಣ ಹಂಚಿಕೆ ಮಾಡುವ ಆದೇಶವಾಗಿತ್ತು. ಎಷ್ಟೋ ಕಲಾವಿದರು ನಾವು ಕನಸು ಕಾಣುತ್ತಿದ್ದೆವೋ ಎಂದು ಕೇಳಿದ್ದರು, ಎಲ್ಲರೂ ಆನಂದದಿಂದ ಕಣ್ಣೀರು ಹಾಕಿದರು ಎಂದು ಪಿ. ಎಲ್ ತೇನಪ್ಪನ್ (P.L.Tenappan) ಹೇಳಿದ್ದಾರೆ. 

ಶಿವರಾಜ್​ ಕುಮಾರ್​ ಬಾಲಿವುಡ್​ಗೆ ಎಂಟ್ರಿ? ಖ್ಯಾತ ನಿರ್ದೇಶಕ ಸುದೀಪ್ತೋ ಸೇನ್ ಬುಲಾವು!


 

Latest Videos
Follow Us:
Download App:
  • android
  • ios