ವಿದ್ಯಾ ಬಾಲನ್ ಅಪಶಕುನ ಅಂತ ಬ್ರಾಂಡ್ ಆದಾಗ!
ಈಗ ಶಕುಂತಲಾ ದೇವಿ ಫಿಲಂನೊಂದಿಗೆ ವಿದ್ಯಾ ಬಾಲನ್ ಯಶಸ್ಸಿನಿಂದ ಮಿಂಚುತ್ತಿದ್ದಾರೆ. ಆದರೆ ಒಂದು ಕಾಲದಲ್ಲಿ ವಿದ್ಯಾ ಶಾಪಗ್ರಸ್ತೆ, ಅಪಶಕುನ ಅಂತೆಲ್ಲ ಬ್ರಾಂಡ್ ಆಗಿದ್ರಂತೆ!
ವಿದ್ಯಾ ಬಾಲನ್ ಗಣಿತದ ಅಚ್ಚರಿ ಎಂದೇ ಹೆಸರು ಗಳಿಸಿರುವ ಶಕುಂತಲಾ ದೇವಿಯಾಗಿ, ಅದೇ ಹೆಸರಿನ ಸಿನಿಮಾದಲ್ಲಿ ಕಾಣಿಸಿಕೊಂಡು, ಆ ಸಿನಿಮಾ ಸಕ್ಸಸ್ ಆಗಿದೆ. ಅಮೆಜಾನ್ ಪ್ರೈಮ್ನಲ್ಲಿರುವ ಈ ಸಿನಿಮಾವನ್ನು ಅತ್ಯಲ್ಪ ಅವಧಿಯಲ್ಲಿ ಲಕ್ಷಾಂತರ ಜನ ನೋಡಿದ್ದಾರೆ. ಈ ಹಂತದಲ್ಲಿ ನಿಂತು ತಮ್ಮ ಹಿಂದಿನ ಸಿನಿಮಾ ಯಾನವನ್ನು ನೆನಪಿಸಿಕೊಂಡಿದ್ದಾರೆ ವಿದ್ಯಾ. ಆಗೆಲ್ಲ ಅವರಿಗೆ ನೆನಪಾಗೋದು, ಇಂಡಸ್ಟ್ರಿಗೆ ಬಂದ ಆರಂಭದ ದಿನಗಳು. ಆಗ ವಿದ್ಯಾ ಅಪಶಕುನ, ಶಾಪಗ್ರಸ್ತೆಮ ಐರನ್ ಲೆಗ್ ಅಂತೆಲ್ಲ ಬ್ರಾಂಡ್ ಆಗಿದ್ರಂತೆ.
ಮಲಯಾಳಂನಲ್ಲಿ ವಿದ್ಯಾ ಬಾಲನ್ ತಮ್ಮ ಮೊದಲ ಚಿತ್ರದಲ್ಲಿ ನಟಿಸುವುದು ಎಂದು ನಿಶ್ಚಯವಾಗಿತ್ತು. ಅದು ಮೇರುನಟ ಮೋಹನ್ಲಾಲ್ ಜೊತೆಗೆ. ಆ ಚಿತ್ರಕ್ಕೆ ಆಕೆ ಆಯ್ಕೆಯಾಗಿದ್ದೇ, ಏಳೆಂಟು ಫಿಲಂ ಆಫರ್ಗಳು ಆಕೆಯ್ನು ಹುಡುಕಿಕೊಂಡು ಬಂದವು. ಆದರೆ, ಮೋಹನ್ಲಾಲ್ ಚಿತ್ರ ಫರ್ಸ್ಟ್ ಶೆಡ್ಯೂಲ್ ಆಗಿದ್ದೇ ಸರಿ, ಆಮೇಲೆ ಅದು ಶೂಟಿಂಗ್ ಭಾಗ್ಯ ಕಾಣಲೇ ಇಲ್ಲ. ಇದನ್ನು ನೋಡಿದ ಇತರ ಫಿಲಂ ನಿರ್ಮಾಪಕರೂ ತಮ್ಮ ಪ್ರಾಜೆಕ್ಟ್ಗಳಿಂದ ಆಕೆಯನ್ನು ಹೊರಗೆ ಹಾಕಿದರು. ಈಕೆ ಐರನ್ ಲೆಗ್, ಈಕೆ ಕಾಲಿಟ್ಟರೆ ಚಿತ್ರ ಮಟಾಷ್, ಈಕೆ ಅಪಶಕುನ ಎಂದೆಲ್ಲ ಸುದ್ದಿ ಹಬ್ಬಿತು. ವಾಸ್ತವವಾಗಿ ಚಿತ್ರ ನಿಲ್ಲುವುದರಲ್ಲಿ ಈಕೆಯ ತಪ್ಪು ಏನೇನೂ ಇರಲಿಲ್ಲ.
ಇದರಿಂದಾಗಿ ವಿದ್ಯಾಳ ಅಮೂಲ್ಯ ಮೂರು ವರ್ಷಗಳ ನಷ್ಟವಾದವು. ಯಾರೂ ಆಕೆಯನ್ನು ಹಾಕಿಕೊಂಡು ಚಿತ್ರ ಮಾಡುವ ಧೈರ್ಯ ಮಾಡಲೇ ಇಲ್ಲ. ಇದರಿಂದ ಧೃತಿಗೆಟ್ಟ ವಿದ್ಯಾ ಸದಾ ಅಳುತ್ತಾ ಇದ್ದರಂತೆ. ತಂದೆ ಆಫೀಸ್ಗೆ ಹೋಗುತ್ತಿದ್ದರು, ವಿದ್ಯಾರ ಕರಕರೆಗೆ ಸಿಗುತ್ತಿದ್ದುದು ಅವರ ತಾಯಿ ಮಾತ್ರ. ತಾಯಿ ಧಾರ್ಮಿಕ ಸ್ವಭಾವದವರು. ಶಾಂತಿಯಿಂದ ಪ್ರಾರ್ಥನೆ ಮಾಡಲು ಹೇಳುತ್ತಿದ್ದುರು. ಆದರೆ ಕ್ರುದ್ಧರಾಗಿದ್ದ, ದುಃಖಿಯಾಗಿದ್ದ ವಿದ್ಯಾ ತಾಯಿ ಮೇಲೆ ರೇಗುತ್ತಿದ್ದರು. ದುಃಖ ತಡೆಯದೆ ಅಳುತ್ತಾ ಕೂರುತ್ತಿದ್ದರು. ವಿದ್ಯಾ ಬದುಕು ಬದಲಾದದ್ದು ಪ್ರದೀಪ್ ಸರ್ಕಾರ್ ಅವರು ವಿದ್ಯಾ ಅವರನ್ನು ಹಾಕಿಕೊಂಡು ಕಭಿ ಆನಾ ತು ಮೇರಿ ಗಲಿ ವಿಡಿಯೋ ಆಲ್ಬಂ ಮಾಡಿದಾಗ. ನಂತರ ಪರಿಣೀತಾ ಫಿಲಂ ಬಂತು. ಅದರಲ್ಲಂತೂ ವಿದ್ಯಾ ಮಿಂಚಿದರು. ಬಾಲಿವುಡ್ನ ಪೆಟ್ ಆದರು. ಕಹಾನಿ ಫಿಲಂನ ಸಕ್ಸಸ್ ನಿಮಗೆಲ್ಲರಿಗೂ ಗೊತ್ತೇ ಇದೆ. ಹಾಗೇ ಡರ್ಟಿ ಫಿಕ್ಚರ್ ಕೂಡ ಸಾಕಷ್ಟು ಖ್ಯಾತಿ ತಂದುಕೊಟ್ಟಿತು. ಕಳೆದ ವರ್ಷ ಬಂದ ಮಿಷನ್ ಮಂಗಲ್ ಸಕ್ಸಸ್ ಕೂಡ ವಿದ್ಯಾಗೆ ಸಾಕಷ್ಟು ಮೈಲೇಜ್ ಕೊಟ್ಟಿದೆ. ಈಗ ಯಾರೂ ವಿದ್ಯಾ ಅವರನ್ನು ಐರನ್ ಲೆಗ್ ಅನ್ನುವಂತಿಲ್ಲ.
ನಟಿ ವಿದ್ಯಾ ಬಾಲನ್ ಕನ್ನಡದಲ್ಲಿ ಬೈಯೋದನ್ನ ನೋಡಿದ್ದೀರಾ..? ಇಲ್ನೋಡಿ ವಿಡಿಯೋ
ವಿದ್ಯಾ ಅವರಿಗೆ ಕ್ಯಾಸ್ಟಿಂಗ್ ಕೌಚ್ ಅಸಹ್ಯದ ಎಕ್ಸ್ಪೀರಿಯೆನ್ಸ್ ಕೂಡ ಆಗಿದೆ. ಅದನ್ನು ನಿರ್ಭಿಢೆಯಿಂದ ಹೇಳಿಕೊಂಢ ಕೆಲವೇ ತಾರೆಯರಲ್ಲಿ ವಿದ್ಯಾ ಒಬ್ಬರು.
ಒಮ್ಮೆ ಚೆನ್ನೈಯಲ್ಲಿ ಒಬ್ಬ ನಿರ್ದೇಶಕ ಈಕೆ ಇದ್ದ ಹೋಟೆಲ್ಗೆ ಸಿನಿಮಾ ಬಗೆಗೆ ಮಾತುಕತೆ ನಡೆಸಲು ಬಂದ. ರೂಮಿನಲ್ಲೇ ಮಾತಾಡೋಣ ಎಂದ. ಆದರೆ ವಿದ್ಯಾ ರೂಮಿಗಿಂತ ಲಾಂಜ್ ಪ್ರಶಸ್ತ ಎಂದರು. ಆದರೆ ನಿರ್ದೇಶಕ ಅದಕ್ಕೆ ಒಪ್ಪಲಿಲ್ಲ. ಕಡೆಗೆ ವಿದ್ಯಾ ರೂಮಿನ ಬಾಗಿಲು ತೆಗೆದಿಟ್ಟು ಆತನೊಂದಿಗೆ ಮಾತನಾಡಿದರು. ಆದರೆ ಮಾತನಾಡಲು ಅವನಲ್ಲಿ ಏನೂ ಇರಲಿಲ್ಲ. ಐದು ನಿಮಿಷದಲ್ಲಿ ಆತ ಎದ್ದುಹೋದ. ಕಡೆಗೂ ಆತ ಬಂದದ್ದೇಕೆ, ರೂಮಿನಲ್ಲಿ ಬಾಗಿಲು ಹಾಕಿಕೊಂಡು ಮಾತಾಡುವ ವಿಚಾರ ಅವನಿಗೆ ಏನಿತ್ತು ಎಂದು ಆಕೆಗೆ ಅರ್ಥವೇ ಆಗಲಿಲ್ಲ!
ವಾವ್, ವಿದ್ಯಾರ ಅದ್ಭುತ ಪ್ರತಿಭೆಯಂತೆ ಮನೆಯೂ ವಂಡರ್ಪುಲ್!
ಶಕುಂತಲಾ ದೇವಿ ಸಿನಿಮಾ ಬಗ್ಗೆ ಉತ್ಸಾಹದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಒಟಿಟಿ ಹಾಗೂ ಲಾಕ್ಡೌನ್ ಕಾಲದಲ್ಲಿ, ಥಿಯೇಟರ್ಗಳಿಲ್ಲದ ಕಾಲದಲ್ಲಿ ವಿದ್ಯಾ ಶಕುಂತಲಾದೇವಿ ಪಾತ್ರದ ಮೂಲಕ ಮನೆ ಮನೆ ತಲುಪಿದ್ದಾರೆ. ಹೀರೋಯಿನ್ನೇ ಆಗಬೇಕೆಂಬ ಬಯಸದ, ಸದಾ ವಿಭಿನ್ನ ಪಾತ್ರಗಳಲ್ಲಿ ಮನ ಸೆಳೆಯುವ ವಿದ್ಯಾ ಇನ್ನಷ್ಟು ಯಶಸ್ವಿಯಾಗಲಿ.
ಶಕುಂತಲಾ ದೇವಿ ಚಿತ್ರದ ಬಗ್ಗೆ ರೋಚಕ ಸತ್ಯ ಬಿಚ್ಚಿಟ್ಟ ವಿದ್ಯಾ ಬಾಲನ್!