ಬಿಕಿನಿ ಹಾಕಿದ್ರೂ ಸಮಸ್ಯೆ, ಹಿಜಾಬ್ ಧರಿಸಿದ್ರೂ ಸಮಸ್ಯೆ; 'ಬೇಷರಂ ರಂಗ್' ವಿವಾದಕ್ಕೆ ಟಿಎಂಸಿ ಸಂಸದೆ ನುಸ್ರುತ್
ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡಿನ ವಿವಾದದ ಬಗ್ಗೆ ಟಿಎಂಸಿ ಸಂಸದೆ ನುಸ್ರುತ್ ಪ್ರತಿಕ್ರಿಯೆ ನೀಡಿದ್ದಾರೆ.
ಬಾಲಿವುಡ್ ಸ್ಟಾರ್ ಕಿಂಗ್ ಖಾನ್ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದ ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇತ್ತೀಚಿಗಷ್ಟೆ ರಿಲೀಸ್ ಆಗಿರುವ ಬೇಷರಂ ರಂಗ್ ಹಾಡು ವಿವಾದದ ಕಿಡಿ ಹೊತ್ತಿಸಿದೆ. ಅಂದಹಾಗೆ ಬೇಷರಂ ರಂಗ್ ಹಾಡನ್ನು ತುಂಬಾ ಗ್ಲಾಮರಸ್ ಆಗಿ ಚಿತ್ರಿಸಲಾಗಿದೆ. ಈ ಹಾಡಿನಲ್ಲಿ ದೀಪಿಕಾ ಸ್ವಿಮ್ ಸೂಟ್ನಲ್ಲೇ ಮಿಂಚಿದ್ದಾರೆ. ಸಿಕ್ಕಾಪಟ್ಟೆ ಹಾಟ್ ಆಗಿರುವ ಈ ಹಾಡಿನ ವಿರುದ್ಧ ಅನೇಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಕೇಸರಿ ಬಿಕಿನಿ ಧರಿಸಿ ನಾಚಿಕೆ ಇಲ್ಲದ ಬಣ್ಣ ಎಂದಿರುವುದು ಅನೇಕರ ಕೋಪಕ್ಕೆ ಕಾರಣವಾಗಿದೆ. ಈ ಹಾಡಿನ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ. ಕೇಸರಿ ಬಿಕಿನಿ ಧರಿಸಿದ್ದಕ್ಕೆ ದೀಪಿಕಾ ವಿರುದ್ಧ ಹರಿಹಾಯ್ದಿದ್ದ ಬಿಜೆಪಿ ನಾಯಕರ ವಿರುದ್ಧ ಟಿಎಂಸಿ ಸಂಸದೆ ನುಸ್ರುತ್ ಜಹಾನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ' ಅವರಿಗೆ ಎಲ್ಲದರಲ್ಲೂ ಸಮಸ್ಯೆ ಇದೆ' ಎನ್ನುವ ಮೂಲಕ ನುಸ್ರುತ್ ಸರಿಯಾಗಿ ತಿರುಗೇಟು ನೀಡಿದ್ದಾರೆ.
ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನುಸ್ರುತ್, 'ಯಾವುದೇ ರಾಜಕೀಯ ಪಕ್ಷವು ಬಣ್ಣಗಳ ಮೇಲೆ ಪೇಟೆಂಟ್ ಹೊಂದಿಲ್ಲ ಎಂದು ನಾನು ನಂಬುತ್ತೇನೆ' ಎಂದು ಹೇಳಿದರು. 'ಅವರಿಗೆ ಲ್ಲದರಲ್ಲೂ ಸಮಸ್ಯೆ ಇದೆ. ಮಹಿಳೆಯರು ಹಿಜಾಬ್ ಧರಿಸಿದ್ರೂ ಸಮಸ್ಯೆ ಇಗೆ. ಬಿಕಿನಿ ಹಾಕಿದ್ರೂ ಅವರಿಗೆ ಸಮಸ್ಯೆ. ಭಾರತದ ಈಗಿನ ಮಹಿಳೆಯರು ಏನನ್ನು ಧರಿಸಬೇಕೆಂದು ಅವರೇ ಹೇಳುತ್ತಿದ್ದಾರೆ' ಎಂದು ಹೇಳಿದರು.
'ಏನು ಧರಿಸಬೇಕು, ಏನು ತಿನ್ನಬೇಕು, ಹೇಗೆ ಮಾತನಾಡಬೇಕು, ಹೇಗೆ ನಡೆಯಬೇಕು, ಶಾಲೆಯಲ್ಲಿ ಏನನ್ನು ಕಲಿಯಬೇಕು, ಟಿವಿಯಲ್ಲಿ ಏನನ್ನು ನೋಡಬೇಕು ಎಂದು ಹೇಳುವ ಮೂಲಕ ಅವರು ನಮ್ಮ ಜೀವನವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಹೊಸ, ವಿಕಸನಗೊಂಡ ಭಾರತ ಎಂದು ಕರೆಯಲಾಗಿದೆ. ಇದು ತುಂಬಾ ಭಯಾನಕವಾಗಿದೆ. ದೀರ್ಘಾವಧಿಯಲ್ಲಿ ಅದು ನಮ್ಮೆಲ್ಲರನ್ನೂ ಎಲ್ಲಿಗೆ ಕೊಂಡೊಯ್ಯುತ್ತದೆ ಎಂದು ನನಗೆ ತಿಳಿದಿಲ್ಲ' ಎಂದು ನುಸ್ರುತ್ ಆತಂಕ ವ್ಯಕ್ತಪಡಿಸಿದರು.
Boycott Pathaan ಅಶ್ಲೀಲವಾಗಿ ಕಾಣಿಸಿಕೊಂಡ ದೀಪಿಕಾ; ಶಾರುಖ್ 'ಪಠಾಣ್' ಚಿತ್ರ ಬಹಿಷ್ಕಾರಕ್ಕೆ ಒತ್ತಡ
ರಮ್ಯಾ ಪ್ರತಿಕ್ರಿಯೆ
ನಟಿ ರಮ್ಯಾ ಪ್ರತಿಕ್ರಿಯೆ ಪ್ರತಿಕ್ರಿಯೆ ನೀಡಿ ದೀಪಿಕಾ ಪರ ಬ್ಯಾಟ್ ಬೀಸಿದ್ದರು. ಸಮಂತಾ ತನ್ನ ವಿಚ್ಛೇದನಕ್ಕಾಗಿ, ಸಾಯಿ ಪಲ್ಲವಿ ಅವರ ಅಭಿಪ್ರಾಯಕ್ಕಾಗಿ, ರಶ್ಮಿಕಾ ಅವರು ಬ್ರೇಕಪ್ ಮಾಡಿಕೊಂಡಿದ್ದಕ್ಕಾಗಿ, ದೀಪಿಕಾ ಅವರ ಬಟ್ಟೆಗಾಗಿ ಮತ್ತು ಅನೇಕ ಮಹಿಳೆಯರನ್ನು ಎಲ್ಲದಕ್ಕೂ ಟ್ರೋಲ್ ಮಾಡಿದ್ದಾರೆ. ಆಯ್ಕೆಯ ಸ್ವಾತಂತ್ರ್ಯ ನಮ್ಮ ಮೂಲಭೂತ ಹಕ್ಕು. ಮಹಿಳೆಯರು ತಾಯಿ ದುರ್ಗೆಯ ಸ್ವರೂಪ. ಈ ಸ್ತ್ರೀದ್ವೇಷದ ವಿರುದ್ಧ ನಾವು ಹೋರಾಡಲೇ ಬೇಕಿದೆ' ಎಂದು ಹೇಳಿದ್ದರು.
ಕೇಸರಿ ಬಟ್ಟೆಯಲ್ಲಿ ದೀಪಿಕಾ ಪಡುಕೋಣೆ ಹಾಟ್ ದೃಶ್ಯ, 'ಪಠಾಣ್' ಮೇಲೆ ಹಿಂದು ಕೆಂಗಣ್ಣು!
ನಟ ಚೇತನ್ ಪ್ರತಿಕ್ರಿಯೆ
'ಆ ದಿನಗಳು' ಖ್ಯಾತಿಯ ನಟ ಚೇತನ್ ಅವರು ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. 'ಪಠಾಣ್ ಚಿತ್ರದ ಹಾಡು ಈಗ ಅದರ ಕೇಸರಿ ಬಿಕಿನಿ ಮತ್ತು ಹಸಿರು ಶರ್ಟ್ ಕಾರಣದಿಂದ ರಾಜಕೀಯಗೊಳ್ಳುತ್ತಿದೆ. ಬಟ್ಟೆಯ ಬಣ್ಣದ ಕಾರಣಕ್ಕೆ ವಿರೋಧವು ಬಹಳ ಕ್ಷುಲ್ಲಕವಾಗಿದೆ. ಬುದ್ಧ ಮತ್ತು ಬಸವಣ್ಣನವರ ಬಣ್ಣವಾದ ಕೇಸರಿಯನ್ನು ಹಿಂದುತ್ವವು ತನ್ನದಾಗಿಸಿಕೊಳ್ಳುತ್ತಿದೆ. ಪ್ರಕೃತಿ ಮತ್ತು ರೈತರ ಸಂಕೇತವಾದ ಹಸಿರು ಬಣ್ಣವು ಇಸ್ಲಾಮೀಕರಣಗೊಳ್ಳುತ್ತಿದೆ. ಮಾಡಬೇಕೆಂದೇ ಮಾಡುತ್ತಿರುವ ವಿವಾದವಿದು' ಎಂದು ಹೇಳಿದ್ದರು.