ಟಿ20 ವಿಶ್ವಕಪ್ ಹೀರೋ ತಿಲಕ್ ವರ್ಮಾ, ಹೈದರಾಬಾದ್ನಲ್ಲಿ ರಾಮ್ ಚರಣ್ ಅವರ 'ಪೆದ್ದಿ' ಸಿನಿಮಾ ಸೆಟ್ಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಚಿತ್ರದ ಸ್ಪೋರ್ಟ್ಸ್ ಸೀಕ್ವೆನ್ಸ್ಗಳನ್ನು ನೋಡಿ ಫಿದಾ ಆದ ತಿಲಕ್ ವರ್ಮಾಗೆ, ರಾಮ್ ಚರಣ್ ಒಂದು ವಿಶೇಷ ಉಡುಗೊರೆ ನೀಡಿದ್ದಾರೆ.
ಮೈದಾನದಲ್ಲಿ ರನ್ ಹೊಳೆ ಹರಿಸುವ ಕ್ರಿಕೆಟಿಗ ಮತ್ತು ಬೆಳ್ಳಿತೆರೆಯಲ್ಲಿ ಬಾಕ್ಸಾಫೀಸ್ ದಾಖಲೆ ಬರೆಯುವ ಗ್ಲೋಬಲ್ ಸ್ಟಾರ್ ಒಂದೇ ಕಡೆ ಸೇರಿದರೆ ಆ ಸಂಭ್ರಮವೇ ಬೇರೆ. ಹೈದರಾಬಾದ್ನಲ್ಲಿ ಇಂತಹದ್ದೇ ಅಪರೂಪದ ದೃಶ್ಯ ಕಂಡುಬಂದಿದೆ. ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಸ್ಟಾರ್ ಬ್ಯಾಟರ್ ತಿಲಕ್ ವರ್ಮಾ, ರಾಮ್ ಚರಣ್ ನಟಿಸುತ್ತಿರುವ 'ಪೆದ್ದಿ' ಚಿತ್ರದ ಶೂಟಿಂಗ್ ಸೆಟ್ಗೆ ಭೇಟಿ ನೀಡಿದರು. ನಿರ್ದೇಶಕ ಬುಚ್ಚಿಬಾಬು ಸನಾ ನಿರ್ದೇಶನದ ಈ ಗ್ರಾಮೀಣ ಕ್ರೀಡಾ ಆಕ್ಷನ್ ಡ್ರಾಮಾ ಸೆಟ್ನಲ್ಲಿ ತಿಲಕ್ ವರ್ಮಾ ಆಗಮನದಿಂದ ಸಂಭ್ರಮ ಮನೆಮಾಡಿತ್ತು.
ಈ ಭೇಟಿಯ ವೇಳೆ, ತಿಲಕ್ ವರ್ಮಾ ಸಿನಿಮಾದ ಕೆಲವು ಪ್ರಮುಖ ಸ್ಪೋರ್ಟ್ಸ್ ಸೀಕ್ವೆನ್ಸ್ಗಳನ್ನು ವೀಕ್ಷಿಸಿದರು. ಒಬ್ಬ ವೃತ್ತಿಪರ ಅಥ್ಲೀಟ್ ಆಗಿ, ಅವರು ಈ ದೃಶ್ಯಗಳ ಬಗ್ಗೆ ಬಹಳ ಆಶ್ಚರ್ಯ ವ್ಯಕ್ತಪಡಿಸಿದರು. ಕೇವಲ ಆಕ್ಷನ್ ಮಾತ್ರವಲ್ಲದೆ, ಆ ದೃಶ್ಯಗಳಲ್ಲಿನ ಭಾವನಾತ್ಮಕ ಆಳವು ತಿಲಕ್ ಅವರನ್ನು ಬಹಳವಾಗಿ ಆಕರ್ಷಿಸಿತು ಎಂದು ಚಿತ್ರತಂಡ ತಿಳಿಸಿದೆ. 'ಟಿ20 ವಿಶ್ವಕಪ್ ಚಾಂಪಿಯನ್ ತಿಲಕ್ ವರ್ಮಾ ನಮ್ಮ ಸೆಟ್ಗೆ ಬಂದಿದ್ದು ಸಂತೋಷ ತಂದಿದೆ. ಚಿತ್ರದ ಸ್ಪೋರ್ಟ್ಸ್ ಸೀಕ್ವೆನ್ಸ್ಗಳನ್ನು ನೋಡಿ ಅವರು ತುಂಬಾ ಇಂಪ್ರೆಸ್ ಆಗಿದ್ದಾರೆ' ಎಂದು ನಿರ್ದೇಶಕರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಸೆಟ್ಗೆ ಬಂದ ತಿಲಕ್ ವರ್ಮಾರನ್ನು ರಾಮ್ ಚರಣ್ ಆತ್ಮೀಯವಾಗಿ ಸ್ವಾಗತಿಸಿದರು. ವಿಶ್ವಕಪ್ ಗೆದ್ದಿದ್ದಕ್ಕಾಗಿ ಚಿತ್ರತಂಡದ ಪರವಾಗಿ ಚರಣ್, ತಿಲಕ್ ವರ್ಮಾರನ್ನು ವಿಶೇಷವಾಗಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ರಾಮ್ ಚರಣ್ ತಮ್ಮ ಆಟೋಗ್ರಾಫ್ ಇರುವ 'ಪೆದ್ದಿ' ಥೀಮ್ನ ಬ್ಯಾಟ್ ಅನ್ನು ತಿಲಕ್ ವರ್ಮಾಗೆ ಉಡುಗೊರೆಯಾಗಿ ನೀಡಿದರು. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕ್ರಿಕೆಟ್ ಮತ್ತು ಸಿನಿಮಾ ಅಭಿಮಾನಿಗಳು ಈ ಕ್ಷಣವನ್ನು ನೋಡಿ ಸಂಭ್ರಮಿಸುತ್ತಿದ್ದಾರೆ.
ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿರುವ 'ಪೆದ್ದಿ' ಸಿನಿಮಾ ಮೇಲೆ ಭಾರಿ ನಿರೀಕ್ಷೆಗಳಿವೆ. ಈಗಾಗಲೇ ಬಿಡುಗಡೆಯಾದ 'ಚಿಕಿರಿ ಚಿಕಿರಿ' ಹಾಡು 200 ಮಿಲಿಯನ್ ವೀಕ್ಷಣೆಗಳೊಂದಿಗೆ ಮುನ್ನುಗ್ಗುತ್ತಿದ್ದರೆ, ಚರಣ್ ಇಂಟ್ರೊ ಸಾಂಗ್ 'ರೈಯ್ ರೈಯ್ ರಾ ರಾ' ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿದೆ. ಜಾನಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ, ಸಕ್ಕರೆ ಕಾರ್ಖಾನೆಯ ಹಿನ್ನೆಲೆಯಲ್ಲಿ ಚಿತ್ರೀಕರಿಸಿದ ಈ ಹಾಡಿನಲ್ಲಿ ಚರಣ್ ಅವರ ಮಾಸ್ ಸ್ಟೆಪ್ಸ್ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದೆ. ಈ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದು, ಶಿವರಾಜ್ಕುಮಾರ್, ಜಗಪತಿ ಬಾಬು, ದಿವ್ಯೇಂದು ಶರ್ಮಾ, ಬೊಮನ್ ಇರಾನಿ ಮುಂತಾದ ಘಟಾನುಘಟಿಗಳು ಪ್ರಮುಖ ಪಾತ್ರಗಳಲ್ಲಿದ್ದಾರೆ.
'ಪೆದ್ದಿ' ಕಥೆಯ ಬಗ್ಗೆ ಆಸಕ್ತಿದಾಯಕ ಚರ್ಚೆ ನಡೆಯುತ್ತಿದೆ. ಆರಂಭದಲ್ಲಿ ಇದು ಕೇವಲ ಕ್ರಿಕೆಟ್ ಹಿನ್ನೆಲೆಯ ಚಿತ್ರವೆಂದು ಭಾವಿಸಲಾಗಿತ್ತು. ಆದರೆ, ಇತ್ತೀಚಿನ ಮಾಹಿತಿಯ ಪ್ರಕಾರ, ರಾಮ್ ಚರಣ್ ಇದರಲ್ಲಿ ಕುಸ್ತಿಪಟುವಾಗಿ ಕಾಣಿಸಿಕೊಳ್ಳಲಿದ್ದಾರೆ. ಒಬ್ಬ ಕುಸ್ತಿಪಟು ಕ್ರಿಕೆಟ್ ಮೈದಾನಕ್ಕೆ ಕಾಲಿಟ್ಟರೆ ಹೇಗಿರುತ್ತದೆ ಎಂಬ ವಿಭಿನ್ನ ಪಾಯಿಂಟ್ನೊಂದಿಗೆ ಈ ಸಿನಿಮಾ ಸಾಗಲಿದೆ ಎನ್ನಲಾಗಿದೆ. ಇದಕ್ಕಾಗಿಯೇ ರಾಮ್ ಚರಣ್ ಈ ಚಿತ್ರಕ್ಕಾಗಿ ಸಂಪೂರ್ಣವಾಗಿ ದೇಹವನ್ನು ಬದಲಾಯಿಸಿಕೊಂಡು, ಕಟ್ಟುಮಸ್ತಾದ ದೇಹದೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಕ್ರೀಡೆ ಮತ್ತು ಗ್ರಾಮೀಣ ಹಿನ್ನೆಲೆಯಲ್ಲಿ ಸಾಗುವ ಈ ಪವರ್ಫುಲ್ ಡ್ರಾಮಾ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ.
ಏಪ್ರಿಲ್ 30ರಂದು ವಿಶ್ವಾದ್ಯಂತ ಪೆದ್ದಿ ಬಿಡುಗಡೆ
ಸದ್ಯ ಈ ಸಿನಿಮಾದ ಶೂಟಿಂಗ್ ಅಂತಿಮ ಹಂತದಲ್ಲಿದೆ. ಪ್ಯಾಚ್ ವರ್ಕ್ ಮತ್ತು ಒಂದು ಐಟಂ ಸಾಂಗ್ ಹೊರತುಪಡಿಸಿ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. ಈ ತಿಂಗಳಾಂತ್ಯಕ್ಕೆ ಚಿತ್ರೀಕರಣ ಮುಗಿಸಲು ಚಿತ್ರತಂಡ ಯೋಜಿಸುತ್ತಿದೆ. ಆರ್. ರತ್ನವೇಲು ಅವರ ಛಾಯಾಗ್ರಹಣ, ನವೀನ್ ನೂಲಿ ಅವರ ಸಂಕಲನ ಮತ್ತು ಅವಿನಾಶ್ ಕೊಳ್ಳ ಅವರ ಕಲಾ ನಿರ್ದೇಶನ ಈ ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ವೆಂಕಟ ಸತೀಶ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರವು ಏಪ್ರಿಲ್ 30 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.


