‘ಕವಲು ದಾರಿ’ ತಮಿಳಿನಲ್ಲೂ ಸಂಪತ್!
ಪುನೀತ್ ನಿರ್ಮಾಣದ ‘ಕವಲು ದಾರಿ’ ಚಿತ್ರ ನೋಡಿದವರಿಗೆ ಈಗಲೂ ನೆನಪಿರಬಹುದಾದ ಒಂದು ಪಾತ್ರದ ಹೆಸರು ಮೈಲೂರು ಶ್ರೀನಿವಾಸ್ ಅಲಿಯಾಸ್ ಫೆರ್ನಾಂಡಿಸ್. ಈ ಪಾತ್ರದಲ್ಲಿನ ಅದ್ಭುತ ಅಭಿನಯದ ಮೂಲಕ ಗಮನ ಸೆಳೆದವರು ರಂಗಭೂಮಿ ನಟ ಸಂಪತ್ ಕುಮಾರ್.
ಅದೃಷ್ಟವೇ ಎನ್ನುವ ಹಾಗೆ ಈ ಚಿತ್ರ ತೆರೆ ಕಂಡ ನಂತರ ಸಂಪತ್ ಕುಮಾರ್ ಸಿನಿ ಜರ್ನಿಗೆ ಬ್ರೇಕ್ ಸಿಕ್ಕಿತು. ನಟನೆಯಲ್ಲಿ ಸಾಕಷ್ಟುಬ್ಯುಸಿ ಆಗಿದ್ದಾರೆ. ಈಗ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ವಿಶೇಷ ಅಂದ್ರೆ ‘ಕವಲು ದಾರಿ’ ತಮಿಳಿಗೂ ರಿಮೇಕ್ ಆಗುತ್ತಿದ್ದು, ಅಲ್ಲೂ ಮೈಲೂರು ಶ್ರೀನಿವಾಸ್ ಅಲಿಯಾಸ್ ಫೆರ್ನಾಂಡಿಸ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ ಸಂಪತ್ ಕುಮಾರ್. ಆ ಮೂಲಕ ಇದೇ ಮೊದಲು ಸಂಪತ್ ಕಾಲಿವುಡ್ಗೂಕಾಲಿಡುತ್ತಿರುವ ಖುಷಿಯಲ್ಲಿದ್ದಾರೆ.
‘ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ನಡೆದು ಹೋಗುತ್ತವೆ. ಅಂತಹದ್ದೇ ಒಂದು ಘಟನೆ ಇದು. ಯಾಕಂದ್ರೆ ತಮಿಳು ಸಿನಿಮಾದಲ್ಲೂ ನಾನು ಕಾಣಿಸಿಕೊಳ್ಳಬಹುದು ಎನ್ನುವುದನ್ನು ಕನಸು ಕೂಡ ಕಂಡಿರಲಿಲ್ಲ. ಯೋಗಾಯೋಗ ಎನ್ನುವ ಹಾಗೆ ಕವಲು ದಾರಿಯಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಆ ಚಿತ್ರದಲ್ಲಿನ ಪಾತ್ರಕ್ಕೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಅಲ್ಲಿಂದ ಒಂದಷ್ಟುಅವಕಾಶಗಳು ಬಂದವು. ಈಗ ಅದರ ತಮಿಳು ಅವತರಣಿಕೆಯಲ್ಲೂ ಅಭಿನಯಿಸುವ ಅವಕಾಶ ಸಿಕ್ಕಿದೆ. ಎಲ್ಲಿಂದೆಲ್ಲಿಗೂ ಜರ್ನಿ ಸಾಗುತ್ತಿದೆ. ನೆನೆಪಿಸಿಕೊಂಡರೆ ಖುಷಿ ಆಗುತ್ತಿದೆ’ಎನ್ನುತ್ತಾರೆ ನಟ ಸಂಪತ್ ಕುಮಾರ್.
ಕಳೆದ 17 ವರ್ಷಗಳಿಂದ ಕಲಾರಂಗದ ವಿವಿಧ ವಿಭಾಗಗಳಲ್ಲಿ ವೃತ್ತಿನಿರತರಾಗಿರುವ ಸಂಪತ್ ಕುಮಾರ್ ‘ಕವಲುದಾರಿ’ ಬರುವ ಮುನ್ನ ಕನ್ನಡದ ಸಿನಿ ಪ್ರೇಕ್ಷಕರಿಗೆ ಪರಿಚಯವಾಗಿದ್ದು ‘ಕೆಜಿಎಫ್’ ಚಿತ್ರದ ಮೂಲಕ. ಈ ಚಿತ್ರದಲ್ಲಿ ಅವರು ಗಣಿಯಲ್ಲಿ ಕೆಲಸ ಮಾಡುವ ಒಬ್ಬ ಸಾಮಾನ್ಯ ಕಾರ್ಮಿಕ. ತನ್ನ ಪತ್ನಿ ಮತ್ತು ಮಗುವನ್ನು ಉಳಿಸಬೇಕು ಎನ್ನುವ ಧಾವಂತದಲ್ಲಿ ಖುದ್ದು ಸಾವಿಗೆ ಬಲಿಯಾಗುವ ಪಾತ್ರ. ನೋಡುಗರನ್ನು ಕುರ್ಚಿಯ ತುದಿಯಲ್ಲಿ ಕೂರಿಸುವ ಸನ್ನಿವೇಶವದು. ಒಂದು ಹಂತದಲ್ಲಿ ನಾಯಕ ಅಪಾಯಕ್ಕೆ ಸಿಕ್ಕಿ ಬೀಳುವ ಸಂದರ್ಭದಿಂದ ಪಾರು ಮಾಡುವಂಥ ಆ ಪಾತ್ರ. ಅದಕ್ಕೆ ಅಕ್ಷರಶಃ ಜೀವ ತುಂಬಿ ನಟಿಸಿದವರು ಇದೇ ಸಂಪತ್ ಕುಮಾರ್. ಅವರೀಗ ಕಾಲಿವುಡ್ಗೂ ಬೇಕಾಗಿದ್ದಾರೆನ್ನುವುದು ವಿಶೇಷ.