Actor thalapathy vijay News: ಬೆಳೆ ಸಾಲ ಮನ್ನಾ ವಿಚಾರದಲ್ಲಿ ಟಿವಿಕೆ ಸರ್ಕಾರ ರೈತರಿಗೆ ಮೋಸ ಮಾಡಿದೆ ಎಂದು ತಮಿಳುನಾಡು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದಳಪತಿ ವಿಜಯ್ ( Thalapathy Vijay ) ಟಿವಿಕೆ ಸರ್ಕಾರದ ಬೆಳೆ ಸಾಲ ಮನ್ನಾ ಘೋಷಣೆ ವಿರುದ್ಧ ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್, ಕಿಡಿಕಾರಿದ್ದಾರೆ. ಸಾಲ ಮನ್ನಾ ಹೆಸರಿನಲ್ಲಿ ಸರ್ಕಾರವು ರೈತರಿಗೆ ದೊಡ್ಡ ಮೋಸ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ಸಾನ ಮನ್ನಾ ಮಾಡಿದೆ!
ಈ ಬಗ್ಗೆ X ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, "ಚುನಾವಣಾ ಪ್ರಚಾರದ ವೇಳೆ, 5 ಎಕರೆವರೆಗೆ ಜಮೀನು ಹೊಂದಿರುವ ರೈತರ ಸಂಪೂರ್ಣ ಬೆಳೆ ಸಾಲ ಮನ್ನಾ ಮಾಡುವುದಾಗಿ ಟಿವಿಕೆ ಸರ್ಕಾರ ಭರವಸೆ ನೀಡಿತ್ತು. ಆದರೆ ಈಗ, ಕೇವಲ 50,000 ರೂಪಾಯಿವರೆಗಿನ ಸಾಲಕ್ಕೆ ಮಾತ್ರ ಮನ್ನಾ ಘೋಷಿಸಿದೆ," ಎಂದು ಉಲ್ಲೇಖಿಸಿದ್ದಾರೆ. "ಟಿವಿಕೆ ಸರ್ಕಾರ ಬೆಳೆ ಸಾಲ ಮನ್ನಾ ಹೆಸರಲ್ಲಿ ರೈತರನ್ನು ವಂಚಿಸಿದೆ," ಎಂದು ಅವರು ನೇರವಾಗಿ ಹೇಳಿದ್ದಾರೆ. ಇದು ರೈತರಿಗೆ ಮಾಡಿದ ಅನ್ಯಾಯ ಮತ್ತು "ನಂಬಿಕೆಗೆ ಬಗೆದ ದೊಡ್ಡ ದ್ರೋಹ" ಎಂದು ಉದಯನಿಧಿ ಬಣ್ಣಿಸಿದ್ದಾರೆ. ಚುನಾವಣಾ ಭರವಸೆಗಳಿಂದ ಸರ್ಕಾರ ಹಿಂದೆ ಸರಿದಿದೆ ಎಂದು ಅವರು ಟೀಕಿಸಿದ್ದಾರೆ.
ಹಗರಣ ಮಾಡಿದೆ!
ಈ ಹಿಂದೆ, 200 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಹೇಳಿ, 500 ಯೂನಿಟ್ಗಿಂತ ಹೆಚ್ಚು ಬಳಸುವವರಿಗೆ ಈ ಸೌಲಭ್ಯ ಇಲ್ಲ ಎಂದು ಷರತ್ತು ವಿಧಿಸಿದ್ದನ್ನೂ ಅವರು ನೆನಪಿಸಿದ್ದಾರೆ. ಬೆಳೆ ಸಾಲ ಮನ್ನಾ ಹೆಸರಿನಲ್ಲಿ ಸರ್ಕಾರ ಒಂದು "ಹಗರಣ"ವನ್ನೇ ನಡೆಸುತ್ತಿದೆ ಎಂದು ಉದಯನಿಧಿ ಸ್ಟಾಲಿನ್ ಆರೋಪಿಸಿದ್ದಾರೆ.
ರೈತರಿಗೆ ಮಾಡಿದ ಅನ್ಯಾಯ!
"ಮುಖ್ಯಮಂತ್ರಿಗಳೇ, ಇಂತಹ ಇನ್ನೂ ಹಲವು ದ್ರೋಹಗಳಿಗೆ ಜನರು ಮಾನಸಿಕವಾಗಿ ಸಿದ್ಧರಾಗಿರಬೇಕೇ?" ಎಂದು ಅವರು ಪ್ರಶ್ನಿಸಿದ್ದಾರೆ. "ಇದು ರೈತರಿಗೆ ಮಾಡಿದ ಅನ್ಯಾಯ. ನಂಬಿಕೆಗೆ ಬಗೆದ ಮಹಾ ದ್ರೋಹ. ಮೊದಲು 200 ಯೂನಿಟ್ ಉಚಿತ ವಿದ್ಯುತ್ ಎಂದು ಹೇಳಿ, 500 ಯೂನಿಟ್ಗಿಂತ ಹೆಚ್ಚು ಬಳಸಿದರೆ ಅನ್ವಯ ಆಗಲ್ಲ ಎಂದು ಶಾಕ್ ಕೊಟ್ಟರು. ಈಗ ಬೆಳೆ ಸಾಲ ಮನ್ನಾ ಹೆಸರಲ್ಲಿ ಒಂದು ಹಗರಣವನ್ನೇ ಮಾಡುತ್ತಿದ್ದಾರೆ," ಎಂದು ಉದಯನಿಧಿ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.
ಪರಿಹಾರ ಕೊಡ್ತಾರಂತೆ!
ಸಹಕಾರಿ ಬ್ಯಾಂಕ್ಗಳಲ್ಲಿ ಸಾಲ ಪಡೆದ ಸಣ್ಣ ರೈತರ ₹50,000 ವರೆಗಿನ ಬೆಳೆ ಸಾಲವನ್ನು ಮನ್ನಾ ಮಾಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಸೋಮವಾರ ಘೋಷಿಸಿದ್ದರು. ಜೊತೆಗೆ, ಸಹಕಾರಿ ಬ್ಯಾಂಕ್ಗಳ ಮೂಲಕ ಬೆಳೆ ಸಾಲ ಪಡೆದ ದೊಡ್ಡ ರೈತರಿಗೆ ₹5,000 ಪರಿಹಾರ ನೀಡುವುದಾಗಿಯೂ ತಿಳಿಸಿದ್ದರು. ಈ ಘೋಷಣೆ ಬೆನ್ನಲ್ಲೇ ಉದಯನಿಧಿ ಈ ಟೀಕೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ, ನೀಟ್ ರದ್ದು, ಸಂಪೂರ್ಣ ಮದ್ಯ ನಿಷೇಧ, ವಿದ್ಯಾರ್ಥಿ ಸಾಲ ಮನ್ನಾ ಸೇರಿದಂತೆ ನಿಮ್ಮ ಸರ್ಕಾರದಲ್ಲೂ ಅನೇಕ ಭರವಸೆಗಳನ್ನು ನೀಡಿದ್ದಿರಿ, ಅವು ಏನಾದವು? ಎಂದು ನೆಟ್ಟಿಗರು ಉದಯನಿಧಿ ಅವರನ್ನೇ ಪ್ರಶ್ನಿಸುತ್ತಿದ್ದಾರೆ.


