ಮೈಸೂರು-ಕೊಡಗು ಗಡಿಭಾಗದಲ್ಲಿ ಅಂದರೆ ಬೆಟ್ಟದಪುರದಿಂದ ಕುಶಾಲನಗರಕ್ಕೆ ತೆರಳುವ ರಸ್ತೆಯ ಬದಿಯ ತೋಟವೊಂದರಲ್ಲಿ ಸನ್ನಿ ಲಿಯೋನ್ ಕಂಡುಬಂದಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಮೈಸೂರು (ಫೆ.05): ಬಾಲಿವುಡ್‌ ನಟಿ ಸನ್ನಿ ಲಿಯೋನ್ (Sunny Leone) ಅಂದರೆ ಪಡ್ಡೆಹುಡುಗರಿಗೆ ಎಲ್ಲಿಲ್ಲದ ಕ್ರೇಜ್. ಅವರ ಸಿನಿಮಾಗಳು, ಹಾಡುಗಳು ಬಂದರೆ ಸಾಕು ಅಭಿಮಾನಿಗಳು ಮುಗಿಬೀಳುತ್ತಾರೆ. ಆದರೆ, ಅಂತಹ ಗ್ಲಾಮರಸ್ ನಟಿ ದಿಢೀರನೆ ಮೈಸೂರು ಮತ್ತು ಕೊಡಗು ಗಡಿಭಾಗದ ಕಲ್ಲಂಗಡಿ ತೋಟವೊಂದರಲ್ಲಿ ಪ್ರತ್ಯಕ್ಷರಾದರೆ ಹೇಗಿರಬೇಡ? ಹೌದು, ಬೆಟ್ಟದಪುರದಿಂದ ಕುಶಾಲನಗರಕ್ಕೆ ತೆರಳುವ ರಸ್ತೆಯ ಬದಿಯ ತೋಟವೊಂದರಲ್ಲಿ ಸನ್ನಿ ಲಿಯೋನ್ ಕಂಡುಬಂದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Add Asianetnews Kannada as a Preferred SourcegooglePreferred

ವಿಡಿಯೋ ಹಿಂದಿನ ಅಸಲಿ ಕಹಾನಿ:

ವಿಷಯ ಏನೆಂದರೆ, ಇದು ನಿಜವಾದ ಸನ್ನಿ ಲಿಯೋನ್ ಅಲ್ಲ. ಬದಲಿಗೆ ರೈತನೊಬ್ಬ ತನ್ನ ಬೆಳೆ ರಕ್ಷಣೆಗಾಗಿ ಮಾಡಿರುವ ಹೊಸ ಆವಿಷ್ಕಾರ! ಸಾಮಾನ್ಯವಾಗಿ ರೈತರು ತಮ್ಮ ತೋಟಗಳಿಗೆ ಜನರ ಕೆಟ್ಟ ದೃಷ್ಟಿ ಬೀಳಬಾರದು, ಬೆಳೆ ಚೆನ್ನಾಗಿ ಬರಲಿ ಎಂದು ಕಪ್ಪು ಬಣ್ಣದ ಬೊಂಬೆಗಳನ್ನೋ (ದೃಷ್ಟಿ ಬೊಂಬೆ), ಅಥವಾ ಕುಂಬಳಕಾಯಿಗೆ ರಾಕ್ಷಸನ ಮುಖ ಬರೆದು ನೇತು ಹಾಕುವುದನ್ನೋ ನಾವು ನೋಡಿದ್ದೇವೆ. ಆದರೆ, ಇಲ್ಲಿನ ಹೈಟೆಕ್ ರೈತನೊಬ್ಬ ಒಂದು ಹೆಜ್ಜೆ ಮುಂದೆ ಹೋಗಿ, ತನ್ನ ಕಲ್ಲಂಗಡಿ ತೋಟಕ್ಕೆ ದೃಷ್ಟಿಯಾಗಬಾರದು ಎಂದು ಬೋಲ್ಡ್ ನಟಿ ಸನ್ನಿ ಲಿಯೋನ್ ಅವರ ದೊಡ್ಡ ಫೋಟೋವನ್ನೇ ತೋಟದ ಮಧ್ಯೆ ನಿಲ್ಲಿಸಿದ್ದಾನೆ.

ಕಂಟೆಂಟ್ ಕ್ರಿಯೇಟರ್ ಕಣ್ಣಿಗೆ ಬಿದ್ದ ದೃಶ್ಯ:

ಬೆಟ್ಟದಪುರ-ಕುಶಾಲನಗರ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಂಟೆಂಟ್ ಕ್ರಿಯೇಟರ್ ಒಬ್ಬರು ಈ ದೃಶ್ಯವನ್ನು ನೋಡಿ ದಂಗಾಗಿದ್ದಾರೆ. ತಕ್ಷಣ ಬೈಕ್ ನಿಲ್ಲಿಸಿ ವಿಡಿಯೋ ಮಾಡಿರುವ ಅವರು, ರೈತನ 'ಕ್ರಿಯೇಟಿವಿಟಿ'ಗೆ ಶಹಬ್ಬಾಸ್ಗಿರಿ ನೀಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಯುವಕ, 'ನಮ್ಮ ಜನರ ತಲೆ ಅದ್ಯಾವ ಲೆವೆಲ್‌ನಲ್ಲಿ ಓಡುತ್ತೆ ಅಂತಾ ಹೇಳೋದಕ್ಕೆ ಆಗೋದಿಲ್ಲ. ನಾನು ದಾರಿಯಲ್ಲಿ ಹೋಗುವಾಗ ತೋಟ ನೋಡುತ್ತಿದ್ದೆ. ಅಲ್ಲಿ ದೃಷ್ಟಿ ಆಗಬಾರದು ಎಂದು ಸನ್ನಿ ಲಿಯೋನ್ ಫೋಟೋ ಹಾಕಿದ್ದಾರೆ. ಆಹಾಹಾ... ನಮ್ಮ ಜನಕ್ಕೆ ಏನು ತಲೆ ಗುರೂ...' ಎಂದು ಉದ್ಗರಿಸಿದ್ದಾರೆ.

View post on Instagram

ದೃಷ್ಟಿ ಬೊಂಬೆಗಿಂತ ಸನ್ನಿ ಲಿಯೋನ್ ಬೆಸ್ಟ್!:

ರೈತನ ಈ ಐಡಿಯಾ ಹಿಂದೆ ಒಂದು ಬಲವಾದ ಮನಶಾಸ್ತ್ರವಿದೆ ಎಂದು ನೆಟ್ಟಿಗರು ವಿಶ್ಲೇಷಿಸುತ್ತಿದ್ದಾರೆ. ದಾರಿಯಲ್ಲಿ ಹೋಗುವವರು ತೋಟದ ಹಚ್ಚ ಹಸಿರು ಅಥವಾ ಕಲ್ಲಂಗಡಿ ಹಣ್ಣುಗಳನ್ನು ನೋಡಿ ಕಣ್ಣು ಹಾಕುವ ಬದಲು, ಅಲ್ಲಿರುವ ಸನ್ನಿ ಲಿಯೋನ್ ಫೋಟೋವನ್ನೇ ನೋಡಿಕೊಂಡು ಹೋಗುತ್ತಾರೆ. ಆಗ ಬೆಳೆಗೆ ತಾಗುವ ದೃಷ್ಟಿ ದೋಷ ತಪ್ಪುತ್ತದೆ ಎಂಬುದು ರೈತನ ಲೆಕ್ಕಾಚಾರ.

ಸೋಷಿಯಲ್ ಮೀಡಿಯಾದಲ್ಲಿ ನಗೆಪಾಟಲು:

ಈ ವಿಡಿಯೋ ಎಕ್ಸ್ (ಟ್ವಿಟರ್), ಇನ್‌ಸ್ಟಾಗ್ರಾಮ್ ಸೇರಿದಂತೆ ಹಲವು ಕಡೆ ಶೇರ್ ಆಗುತ್ತಿದ್ದು, ನೆಟ್ಟಿಗರು ಬಗೆಬಗೆಯ ಕಮೆಂಟ್ ಮಾಡುತ್ತಿದ್ದಾರೆ. 'ಇದು ಮಾಡರ್ನ್ ಬೆದರು ಬೊಂಬೆ, 'ಕಾಗೆ, ಪಕ್ಷಿಗಳು ಹೆದರುತ್ತವೋ ಇಲ್ಲವೋ ಗೊತ್ತಿಲ್ಲ, ಆದರೆ ದಾರಿಯಲ್ಲಿ ಹೋಗುವ ಹುಡುಗರು ಮಾತ್ರ ಫುಲ್ ಖಷ್', 'ಕಲ್ಲಂಗಡಿ ಕಳ್ಳರಿಂದ ರಕ್ಷಿಸಲು ಸನ್ನಿ ಲಿಯೋನ್ ಸೆಕ್ಯೂರಿಟಿ ಗಾರ್ಡ್ ಆಗಿದ್ದಾರೆ' ಎಂದು ತಮಾಷೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ರೈತನೊಬ್ಬನ ಈ ವಿಭಿನ್ನ ಪ್ರಯೋಗ ಈಗ ಇಂಟರ್ನೆಟ್ ಜಗತ್ತಿನಲ್ಲಿ ನಗೆಯುಕ್ಕಿಸುತ್ತಿದೆ.