ಪಠಾಣ್​, ಜವಾನ್​ ಯಶಸ್ಸಿನ ಬೆನ್ನಲ್ಲೇ ಶಾರುಖ್​ ಖಾನ್​ ಅವರಿಗೆ ಜೀವ ಬೆದರಿಕೆ ಬರುತ್ತಿದೆ ಎನ್ನಲಾಗಿದ್ದು, ಅವರ ದೂರಿನ ಮೇಲೆ ಅವರಿಗೆ ವೈ ಪ್ಲಸ್​ ಭದ್ರತೆ ನೀಡಲಾಗಿದೆ. 

ಬಾಲಿವುಡ್​​ ಸ್ಟಾರ್​ ಶಾರುಖ್​ ಖಾನ್​ 'ಪಠಾಣ್' ಮತ್ತು 'ಜವಾನ್' ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಜವಾನ್​ ಇದಾಗಲೇ 1100 ಕೋಟಿ ರೂಪಾಯಿ ಅಧಿಕ ಬಾಚಿಕೊಂಡಿದೆ. ಇಲ್ಲಿಯವರೆಗಿನ ಬಾಲಿವುಡ್​​ನ ಹಲವು ದಾಖಲೆಗಳನ್ನು ಉಡೀಸ್​ ಮಾಡಿ ಜವಾನ್​ ಮುನ್ನುಗ್ಗುತ್ತಲೇ ಸಾಗಿದೆ. ಪಠಾಣ್​ ಚಿತ್ರವೇ ಅತಿದೊಡ್ಡ ಬ್ಲಾಕ್​ಬಸ್ಟರ್​ ಎಂದು ಸಾಬೀತಾಗಿತ್ತು. ಅದರೆ ಅದನ್ನು ಮೀರಿ ಜವಾನ್​ ಮುನ್ನುಗ್ಗುತ್ತಿದೆ. ಆದರೆ ಅದರ ಬೆನ್ನಲ್ಲೇ ಶಾಕಿಂಗ್​ ಸುದ್ದಿಯೊಂದು ಹೊರಬಂದಿದೆ. ಅದೇನೆಂದರೆ ಶಾರುಖ್​ ಖಾನ್​ ಅವರಿಗೆ ಕೊಲೆ ಬೆದರಿಕೆಗಳು ಬರುತ್ತಿವೆಯಂತೆ. ಪಠಾಣ್​ ಮತ್ತು ಜವಾನ್​ ಚಿತ್ರದ ಯಶಸ್ಸಿನ ಬಳಿಕ ತಮಗೆ ಕೊಲೆ ಬೆದರಿಕೆ ಬರುವುದು ಹೆಚ್ಚಾಗಿದೆ ಎಂದು ಶಾರುಖ್​ ನಟ ದೂರು ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು (ಮಹಾರಾಷ್ಟ್ರ ಸರ್ಕಾರ) ಅವರಿಗೆ ವೈ+ ಭದ್ರತೆಯನ್ನು ಒದಗಿಸಿದ್ದಾರೆ.

Add Asianetnews Kannada as a Preferred SourcegooglePreferred

ಶಾರೂಕ್ ಖಾನ್ ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದು ತಮ್ಮ ಚಿತ್ರ ಯಶಸ್ವಿಯಾದ ನಂತರ ತನಗೆ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಶಾರುಖ್​ ಅವರಿಗೆ ಭದ್ರತೆ ಹೆಚ್ಚಿಸಿದೆ. Y+ ಭದ್ರತೆ ಅಡಿಯಲ್ಲಿ, ಶಾರುಖ್​ ಖಾನ್ ಅವರಿಗೆ ದಿನಪೂರ್ತಿ 24 ಗಂಟೆಗಳ ಕಾಲ ಆರು ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಯಿರುತ್ತಾರೆ. ಇದಕ್ಕೂ ಮುನ್ನ ಶಾರೂಕ್ ಖಾನ್ ಇಬ್ಬರು ಭದ್ರತಾ ಸಿಬ್ಬಂದಿಯ ರಕ್ಷಣೆಯಲ್ಲಿದ್ದರು. ಈದ ಅದನ್ನು ಅಪ್​ಗ್ರೇಡ್​​ ಮಾಡಲಾಗಿದೆ. ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಐಜಿ ವಿಐಪಿ ಭದ್ರತೆಯು ಶಾರುಖ್ ಖಾನ್ ಅವರ ಭದ್ರತೆಯನ್ನು ಮೇಲ್ದರ್ಜೆಗೇರಿಸಿದೆ. ಭದ್ರತಾ ಸೇವೆಗೆ ಖಾಸಗಿಯಾಗಿ ಹಣ ನೀಡಲಾಗುವುದು ಮತ್ತು ಸಂಬಂಧಿತ ವೆಚ್ಚಗಳನ್ನು ಭರಿಸಲು ನಟ ಜವಾಬ್ದಾರರಾಗಿದ್ದು, ರಾಜ್ಯ ಸರ್ಕಾರಕ್ಕೆ ಮೊತ್ತವನ್ನು ಪಾವತಿಸುತ್ತಾರೆ. 

ಜವಾನ್ ಜೋಡಿ ಶಾರುಖ್​- ದೀಪಿಕಾಗೆ ಮಗು ಹುಟ್ಟಿಸಿದ ಫ್ಯಾನ್ಸ್​! ನಾಮಕರಣವನ್ನೂ ಮಾಡಿದ್ದಾರೆ ನೋಡಿ

ಹೆಚ್ಚಿನ ಬೆದರಿಕೆ ಗ್ರಹಿಕೆಯನ್ನು ಎದುರಿಸುತ್ತಿರುವ ಜನರಿಗೆ ವೈ-ಪ್ಲಸ್ ಭದ್ರತೆಯನ್ನು ನೀಡಲಾಗುತ್ತದೆ. ಈ ಹಿಂದೆ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆಯ ನಂತರ ಕಳೆದ ವರ್ಷ ನಟ ಸಲ್ಮಾನ್ ಖಾನ್‌ಗೆ Y+ ಭದ್ರತೆಯನ್ನು ಒದಗಿಸಲಾಗಿತ್ತು. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ (Blackbuck poaching case) ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ಸಾಬೀತಾಗಿದ್ದೇ ಈ ಬೆದರಿಕೆಗೆ ಕಾರಣ. ಈ ಪ್ರಕರಣದಲ್ಲಿ ಸಲ್ಮಾನ್​ ಸದ್ಯ ಜಾಮೀನಿನ ಮೇಲೆ ಇದ್ದರೂ, ಬಿಷ್ಣೋಯ್ ಸಮುದಾಯವರು ಮಾತ್ರ ನಟನ ಬೆನ್ನ ಬಿದ್ದಿದ್ದಾರೆ. ಏಕೆಂದರೆ, ಕೃಷ್ಣಮೃಗಗಳನ್ನು ಬಿಷ್ಣೋಯ್ ಸಮುದಾಯವು ಪವಿತ್ರವೆಂದು ಪರಿಗಣಿಸುತ್ತದೆ. ಅದಕ್ಕಾಗಿಯೇ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಸಲ್ಮಾನ್ ಖಾನ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಅವರನ್ನು ಕೊಲ್ಲುವುದಾಗಿ ಹಿಂದೆಯೂ ಕೆಲ ಬಾರಿ ಕೊಲೆ ಬೆದರಿಕೆ ಬಂದಿತ್ತು. ಕೊಲೆ ಬೆದರಿಕೆ ಒಡ್ಡಿರುವ ಆರೋಪ ಹೊತ್ತ ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿ ಇದ್ದು, ಈಗ ಪದೇ ಪದೇ ಮತ್ತೆ ಬೆದರಿಕೆ ಹಾಕುತ್ತಲೇ ಇದ್ದಾರೆ. ಅಷ್ಟಕ್ಕೂ ಅವರ ಬೇಡಿಕೆ ಎಂದರೆ ಕೃಷ್ಣಮೃಗವನ್ನು ಕೊಂದಿರುವುದಕ್ಕೆ ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು ಎನ್ನುವುದು. 

ಮಹಾರಾಷ್ಟ್ರ ಸರ್ಕಾರದ ನೀತಿಯ ಪ್ರಕಾರ, ಜೀವ ಬೆದರಿಕೆಯನ್ನು ಎದುರಿಸುತ್ತಿರುವ ನಾಗರಿಕರಿಗೆ ಭದ್ರತೆಯನ್ನು ಒದಗಿಸಲಾಗಿದೆ. ಸರ್ಕಾರ ಒದಗಿಸುವ ರಕ್ಷಣೆಗೆ ಭದ್ರತೆ ಪಡೆದವರು ಶುಲ್ಕವನ್ನು ಪಾವತಿಸಬೇಕು ಮತ್ತು ಭದ್ರತಾ ಮೊತ್ತವನ್ನು ಠೇವಣಿ ಮಾಡಬೇಕಾಗುತ್ತದೆ.

ಶಾರುಖ್​ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಜವಾನ್​ ತಂಡದಿಂದ ಭರ್ಜರಿ ಗುಡ್​ ನ್ಯೂಸ್​