ಬಾಂಗ್ಲಾದೇಶದ ಕುಸ್ತಿಪಟು ಶರಿಫುಲ್ ಇಸ್ಲಾಂ, ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ಅಪಹರಣ ಮತ್ತು ಸುಲಿಗೆ ಯತ್ನದಲ್ಲಿ ನಟನಿಗೆ ಚೂರಿ ಹಾಕಿದ್ದಾನೆ. ಜೇಹ್ನನ್ನು ಅಪಹರಿಸಿ ಒಂದು ಕೋಟಿ ಬೇಡಿಕೆ ಇಡುವ ಯೋಜನೆ ವಿಫಲವಾಗಿದೆ. ಆರೋಪಿ ತನ್ನ ತಪ್ಪೊಪ್ಪಿಕೊಂಡಿದ್ದು, ಅಕ್ರಮವಾಗಿ ಭಾರತ ಪ್ರವೇಶಿಸಿ ವಿಜಯ್ ದಾಸ್ ಎಂಬ ಹೆಸರಿನಲ್ಲಿ ವಾಸಿಸುತ್ತಿದ್ದ.
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ನವಾಬ್ಗೆ ಚೂರಿ ಹಾಕಿದ ಆರೋಪಿ ಪೊಲೀಸ್ ವಿಚಾರಣೆಯಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಮುಖ್ಯ ಆರೋಪಿ ಶರಿಫುಲ್ ಇಸ್ಲಾಂ ಶೆಹಜಾದ್ ತಾನು ಬಾಂಗ್ಲಾದೇಶದ ನಿವಾಸಿ ಎಂದು ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲ, ಅವನು ಬಾಂಗ್ಲಾದೇಶದ ರಾಷ್ಟ್ರೀಯ ಮಟ್ಟದ ಕುಸ್ತಿಪಟು. ಬುಧವಾರ ಮಧ್ಯರಾತ್ರಿ ಸೈಫ್ ಮನೆಗೆ ನುಗ್ಗಿದ್ದು ಸೈಫ್-ಕರೀನಾ ಅವರ ಕಿರಿಯ ಮಗನನ್ನು ಅಪಹರಿಸುವ ಉದ್ದೇಶದಿಂದ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ. ಜೊತೆಗೆ ಒಂದು ಕೋಟಿ ರೂಪಾಯಿ ಬೇಡಿಕೆ ಇಡುವ ಯೋಜನೆ ಹಾಕಿದ್ದ.
ಅದರಂತೆ ಮನೆಗೆ ನುಗ್ಗಿ ಮೊದಲು ನವಾಬ್ ಪುತ್ರ ಜೇಹ್ ರೂಮ್ಗೆ ಹೋಗಿದ್ದ. ನಾಲ್ಕು ವರ್ಷದ ಮಗುವೇ ಶರಿಫುಲ್ನ ಗುರಿಯಾಗಿತ್ತು. ಆದರೆ ಜೇಹ್ನ ಆಯಾ ಅಡ್ಡ ಬಂದರು. ಅಪರಿಚಿತ ವ್ಯಕ್ತಿಯನ್ನು ರೂಮಿನಲ್ಲಿ ನೋಡಿದ ಅವರು ಕೂಗಿಕೊಂಡು ಓಡಿಹೋದರು. ಈ ಸಂದರ್ಭದಲ್ಲಿ ಜೇಹ್ ರೂಮಿನಿಂದ ತಪ್ಪಿಸಿಕೊಂಡ. ಹೀಗಾಗಿ ಶರಿಫುಲ್ನ ಯೋಜನೆ ವಿಫಲವಾಯಿತು. ಆ ಕೂಗು ಕೇಳಿ ಸೈಫ್ ಓಡಿ ಬಂದರು. ಆಗ ಅವರಿಗೆ ಚೂರಿ ಇರಿಯಲಾಯಿತು.
ನಂತರ ಪೊಲೀಸರ ಬಲೆಗೆ ಬಿದ್ದ ಶರಿಫುಲ್ ಇಸ್ಲಾಂ ಶೆಹಜಾದ್ ವಿಚಾರಣೆಯಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡ. ಶರಿಫುಲ್ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದ ಎಂದು ತಿಳಿದುಬಂದಿದೆ. ಸುಮಾರು ಏಳು ತಿಂಗಳ ಹಿಂದೆ ಮೇಘಾಲಯದ ಬಳಿ ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಡೌಕಿ ನದಿಯನ್ನು ದಾಟಿ ಈ ದೇಶಕ್ಕೆ ಪ್ರವೇಶಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಂತರ ಅವನು ಪಶ್ಚಿಮ ಬಂಗಾಳಕ್ಕೆ ಬಂದ. ಅಲ್ಲಿ ಬಂಗಾಳದ ಮಹಿಳೆಯೊಬ್ಬಳ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದ. ಕೆಲವು ವಾರಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಇದ್ದು ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಪ್ರಯತ್ನಿಸಿದ. ತನ್ನ ಹೆಸರನ್ನು ವಿಜಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದ. ನಂತರ ಸಿಮ್ ಕಾರ್ಡ್ ಖರೀದಿಸಿ ಮುಂಬೈಗೆ ಬಂದ. ಅಲ್ಲಿ ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುತ್ತಿದ್ದಾಗ ಕಳುವು ಮಾಡಿ ಕೆಲಸ ಕಳೆದುಕೊಂಡ.
6 ದಿನಗಳ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೈಫ್ ಆಲಿ ಖಾನ್ ಬಿಡುಗಡೆ, ವೈದ್ಯರ ಖಡಕ್ ಸೂಚನೆ
