ಗಾಂಧಿನಗರದ ಗಲ್ಲಿಯಿಂದ ಟಾಲಿವುಡ್ ವರೆಗೆ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ, ಈ ಸಿನಿಮಾದಲ್ಲಿ ಆ ನಟ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕೆಲವರು ಇಲ್ಲ, ಆ ನಟ ರಿಷಬ್ ಎದುರು ಬಲಾಢ್ಯ ವಿಲನ್ ಆಗಿ ತೊಡೆ ತಟ್ಟಲಿದ್ದಾರೆ ಎಂದಿದ್ದಾರೆ..

ಏನಿದು ಹೊಸ ಸುದ್ದಿ?

Add Asianetnews Kannada as a Preferred SourcegooglePreferred

ಬೆಂಗಳೂರು: 'ಕಾಂತಾರ' ಎನ್ನುವ ದೈವಿಕ ಕಥೆಯ ಮೂಲಕ ವಿಶ್ವದಾದ್ಯಂತ ಕರುನಾಡಿನ ಕೀರ್ತಿ ಪತಾಕೆ ಹಾರಿಸಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಈಗ ಮತ್ತೊಂದು ಮಹಾ ಸಾಹಸಕ್ಕೆ ಸಜ್ಜಾಗಿದ್ದಾರೆ. 'ಕಾಂತಾರ: ಚಾಪ್ಟರ್ 1' ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವಾಗಲೇ ರಿಷಬ್ ಅವರ ಮುಂದಿನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ 'ಜೈ ಹನುಮಾನ್' ಬಗ್ಗೆ ದಿನಕ್ಕೊಂದು ಅಚ್ಚರಿಯ ಸುದ್ದಿಗಳು ಹೊರಬೀಳುತ್ತಿವೆ. ಈಗ ಸಿಕ್ಕಿರುವ ಲೇಟೆಸ್ಟ್ ಅಪ್‌ಡೇಟ್ ಎಂದರೆ, ಈ ಸಿನಿಮಾದಲ್ಲಿ 'ಬಾಹುಬಲಿ' ಖ್ಯಾತಿಯ ಭರ್ಜರಿ ನಟ ರಾಣಾ ದಗ್ಗುಬಾಟಿ (Rana Daggubati) ಅವರು ರಿಷಬ್ ಶೆಟ್ಟಿ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ!

ಬಲ್ಲಾಳದೇವ ಈಗ ರಿಷಬ್ ಶೆಟ್ಟಿಯ ಹನುಮಂತನ ಕಥೆಯಲ್ಲಿ

ಹೌದು, ಪ್ರಶಾಂತ್ ವರ್ಮಾ ನಿರ್ದೇಶನದ ಈ ಫ್ಯಾಂಟಸಿ ಸಿನಿಮಾದಲ್ಲಿ ರಾಣಾ ದಗ್ಗುಬಾಟಿ ಅವರ ಸೇರ್ಪಡೆ ಸಿನಿರಂಗದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. 'ಬಾಹುಬಲಿ' ಚಿತ್ರದಲ್ಲಿ ಬಲ್ಲಾಳದೇವನಾಗಿ ಅಬ್ಬರಿಸಿದ್ದ ರಾಣಾ ಈಗ ರಿಷಬ್ ಅವರ ಹನುಮಂತನ ಕಥೆಯಲ್ಲಿ ಯಾವ ಅವತಾರ ತಾಳಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ. ಗಾಂಧಿನಗರದ ಗಲ್ಲಿಯಿಂದ ಟಾಲಿವುಡ್ ವರೆಗೆ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ, ರಾಣಾ ಈ ಸಿನಿಮಾದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕೆಲವರು ರಾಣಾ ಅವರು ರಿಷಬ್ ಎದುರು ಬಲಾಢ್ಯ ವಿಲನ್ ಆಗಿ ತೊಡೆ ತಟ್ಟಲಿದ್ದಾರೆ ಎಂದು ಹೇಳುತ್ತಿದ್ದಾರೆ.

ಇಬ್ಬರ ನಡುವಿನ ಈ ಸುಂದರ ಬಾಂಧವ್ಯ

ವಿಶೇಷವೆಂದರೆ, ರಿಷಬ್ ಶೆಟ್ಟಿ ಮತ್ತು ರಾಣಾ ದಗ್ಗುಬಾಟಿ ನಡುವೆ ಮೊದಲಿನಿಂದಲೂ ಆತ್ಮೀಯ ಗೆಳೆತನವಿದೆ. ಈ ಹಿಂದೆ ರಾಣಾ ತಮ್ಮ ಟಾಕ್ ಶೋ ಒಂದಕ್ಕಾಗಿ ರಿಷಬ್ ಅವರ ಹುಟ್ಟೂರಾದ ಕೆರಾಡಿಗೆ ಭೇಟಿ ನೀಡಿ, ಅವರ ಸರಳ ಜೀವನ ಮತ್ತು ಸಿನಿಮಾ ಪಯಣವನ್ನು ಹತ್ತಿರದಿಂದ ಕಂಡಿದ್ದರು. ಇಬ್ಬರ ನಡುವಿನ ಈ ಸುಂದರ ಬಾಂಧವ್ಯ ಈಗ ತೆರೆಯ ಮೇಲೂ ಅದ್ಭುತವಾಗಿ ಮೂಡಿಬರಲಿದೆ ಎಂಬ ವಿಶ್ವಾಸ ಅಭಿಮಾನಿಗಳದ್ದು. ರಾಣಾ ದಗ್ಗುಬಾಟಿ ಅವರು ಪಾತ್ರದ ತೂಕ ನೋಡಿ ಸಿನಿಮಾ ಒಪ್ಪಿಕೊಳ್ಳುವ ನಟ, ಹಾಗಾಗಿ 'ಜೈ ಹನುಮಾನ್' ಚಿತ್ರದಲ್ಲಿ ಅವರ ಪಾತ್ರ ಖಂಡಿತವಾಗಿಯೂ ಪವರ್‌ಫುಲ್ ಆಗಿರುತ್ತದೆ ಎಂಬುದು ಖಾತ್ರಿ.

ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಟಿ-ಸೀರೀಸ್‌ನಂತಹ ಪ್ರತಿಷ್ಠಿತ ಸಂಸ್ಥೆಗಳು ಬೃಹತ್ ಮೊತ್ತದಲ್ಲಿ ನಿರ್ಮಾಣ ಮಾಡುತ್ತಿವೆ. ಅಂದಹಾಗೆ, ಈ ಸಿನಿಮಾ ತಂಡಕ್ಕೆ ಹಂಪಿಯ ಮೇಲೆ ಅತೀವ ಭಕ್ತಿಯಿದೆ. ಫೆಬ್ರವರಿ 22 ರಂದು ಐತಿಹಾಸಿಕ ಹಂಪಿ ಕ್ಷೇತ್ರದಲ್ಲಿ 'ಜೈ ಹನುಮಾನ್' ಚಿತ್ರದ ಮುಹೂರ್ತ ಬಲು ಅದ್ದೂರಿಯಾಗಿ ನೆರವೇರಲಿದೆ. ಒಟ್ಟಿನಲ್ಲಿ ರಿಷಬ್ ಶೆಟ್ಟಿ ಅವರ ಹನುಮನ ಅವತಾರ ಮತ್ತು ರಾಣಾ ದಗ್ಗುಬಾಟಿ ಅವರ ಎಂಟ್ರಿ ಸಿನಿರಸಿಕರಿಗೆ ಬಿಗ್ ಟ್ರೀಟ್ ನೀಡಲು ಸಜ್ಜಾಗಿದೆ.