ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯ ನಂತರ ತಮ್ಮ ಹುಟ್ಟೂರಾದ ತುಮ್ಮಪೇಟೆಗೆ ಭೇಟಿ ನೀಡಿ, ಸತ್ಯನಾರಾಯಣ ವ್ರತ ನೆರವೇರಿಸಿದರು. ಅವರು ಗ್ರಾಮಸ್ಥರಿಗಾಗಿ ಭರ್ಜರಿ ಔತಣಕೂಟ ಏರ್ಪಡಿಸಿ, ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಘೋಷಿಸಿದರು.

ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವಿಜಯ್ ದೇವರಕೊಂಡ, ತಮ್ಮ ಪತ್ನಿ ರಶ್ಮಿಕಾ ಮಂದಣ್ಣ ಮತ್ತು ಕುಟುಂಬಸ್ಥರ ಜೊತೆ ತಮ್ಮ ಹುಟ್ಟೂರಾದ ತುಮ್ಮಪೇಟೆಗೆ ಭೇಟಿ ನೀಡಿದ್ದಾರೆ. ನಾಗರ್‌ಕರ್ನೂಲ್ ಜಿಲ್ಲೆಯ ಬಲ್ಮೂರು ಮಂಡಲದಲ್ಲಿರುವ ತುಮ್ಮಪೇಟೆ ವಿಜಯ್ ಅವರ ಸ್ವಂತ ಊರು. ಮದುವೆಯಾದ ನಂತರ ಇದೇ ಮೊದಲ ಬಾರಿಗೆ ಅವರು ಕುಟುಂಬ ಸಮೇತ ಇಲ್ಲಿಗೆ ಬಂದಿದ್ದಾರೆ.

Add Asianetnews Kannada as a Preferred SourcegooglePreferred

ತುಮ್ಮಪೇಟೆ ಗ್ರಾಮಸ್ಥರು ವಿಜಯ್ ಕುಟುಂಬಕ್ಕೆ ಅದ್ದೂರಿಯಾಗಿ ಸ್ವಾಗತ ಕೋರಿದರು. ಈ ಊರಿನಲ್ಲಿರುವ ತಮ್ಮ ಸ್ವಗೃಹದಲ್ಲಿ ವಿಜಯ್ ದಂಪತಿ ಸತ್ಯನಾರಾಯಣ ಸ್ವಾಮಿ ವ್ರತವನ್ನು ನೆರವೇರಿಸಿದರು. ಬಳಿಕ, ವಿಜಯ್ ಕುಟುಂಬದವರು ಸ್ಥಳೀಯ ಜನರಿಗೆಲ್ಲಾ ಮದುವೆಯ ಭರ್ಜರಿ ಔತಣಕೂಟ ಏರ್ಪಡಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್ ದೇವರಕೊಂಡ, "ನನ್ನ ಸ್ವಂತ ಊರಲ್ಲಿ ಮದುವೆ ಸಂಭ್ರಮ ಆಚರಿಸುತ್ತಿರುವುದು ತುಂಬಾ ಖುಷಿ ಕೊಟ್ಟಿದೆ. ನಮ್ಮಿಬ್ಬರನ್ನು ಹರಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಮ್ಮ ಊರಿಗೆ ಇನ್ನೂ ಒಳ್ಳೆ ಕೆಲಸಗಳನ್ನು ಮಾಡಬೇಕು ಅಂತ ಇದೆ. ಒಂದೊಂದಾಗಿ ಎಲ್ಲವನ್ನೂ ಮಾಡೋಣ. ಇಲ್ಲಿ ನಮಗೆ ಸ್ವಂತ ಮನೆ, ಜಮೀನು ಎಲ್ಲವೂ ಇದೆ. ಇನ್ಮುಂದೆ ಆಗಾಗ ನಮ್ಮ ಊರಿಗೆ ಬರುತ್ತೇನೆ," ಎಂದರು. "ಅಚ್ಚಂಪೇಟೆ ಡಿವಿಷನ್‌ನಲ್ಲಿರುವ 44 ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ 'ವಿಜಯ್ ದೇವರಕೊಂಡ ಚಾರಿಟಬಲ್ ಟ್ರಸ್ಟ್' ವತಿಯಿಂದ ಸ್ಕಾಲರ್‌ಶಿಪ್ ನೀಡುತ್ತೇವೆ," ಎಂದು ಅವರು ಘೋಷಿಸಿದರು.

ಸುಮಾರು ಎರಡು ಸಾವಿರ ಜನಕ್ಕೆ ಭರ್ಜರಿ ಔತಣಕೂಟ ಏರ್ಪಡಿಸಿದ ವಿಜಯ್ ದೇವರಕೊಂಡ:

ಇನ್ನು ತಮ್ಮ ಹುಟ್ಟೂರಿನ ಜನರ ಜತೆಗೆ ವಿಜಯ್ ದೇವರಕೊಂಡ ಆತ್ಮೀಯವಾಗಿ ಬೆರೆತಿದ್ದು ಮಾತ್ರವಲ್ಲದೇ ತಮ್ಮೂರಿನ ಜನರಿಗೆ ಮದುವೆಯ ಭರ್ಜರಿ ಔತಣಕೂಟ ಏರ್ಪಡಿಸಿ ಗಮನ ಸೆಳೆದಿದ್ದಾರೆ. ಈ ಔತಣಕೂಟದಲ್ಲಿ ತುಮ್ಮಪೇಟೆ ಸೇರಿದಂತೆ ಅಕ್ಕಪಕ್ಕ ಹಳ್ಳಿಯ ಸುಮಾರು ಎರಡು ಸಾವಿರ ಜನ ಪಾಲ್ಗೊಂಡಿದ್ದರು. ಈ ಔತಣಕೂಟದಲ್ಲಿ ತೆಲಂಗಾಣದ ಅನ್ನ ಹಾಗೂ ಮುದ್ದುಪನ್ನು, ನಾಟಿ ಕೋಳಿ ಕರಿ, ಮಟನ್ ಕರಿ ಹಾಗೂ ಸಿಹಿ ಪದಾರ್ಥಗಳನ್ನು ಗ್ರಾಮಸ್ಥರಿಗೆ ಉಣಬಡಿಸಲಾಯಿತು. ತಾವೆಷ್ಟೇ ದೊಡ್ಡ ಸ್ಟಾರ್ ಆಗಿ ಬೆಳೆದರೂ ತನ್ನ ಹುಟ್ಟೂರನ್ನು ಮರೆಯದೇ ಮದುವೆ ಊಟ ಹಾಕಿಸಿದ ವಿಜಯ್ ದೇವರಕೊಂಡ ಅವರ ನಡೆಯ ಬಗ್ಗೆ ಊರಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 04ರಂದು ವಿರೋಶ್ ಅದ್ದೂರಿ ಆರತಕ್ಷತೆ:

ಇನ್ನು ತಮ್ಮ ಹುಟ್ಟೂರಿನಲ್ಲಿ ಗ್ರಾಮಸ್ಥರಿಗೆ ಒಂದೊಳ್ಳೆಯ ಊಟ ಹಾಕಿಸಿದ ಬಳಿಕ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಹೈದರಾಬಾದ್‌ಗೆ ವಾಪಾಸ್ಸಾಗಿದ್ದು, ಮಾರ್ಚ್ 04ರಂದು ನಡೆಯಲಿರುವ ಅದ್ದೂರಿ ಆರತಕ್ಷತೆ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದ್ದಾರೆ. ಈ ಅದ್ದೂರಿ ಆರತಕ್ಷತೆ ಕಾರ್ಯಕ್ರಮದಲ್ಲಿ ಹಲವು ಸಿನಿಮಾ ಸೆಲಿಬ್ರಿಟಿಗಳು, ರಾಜಕೀಯ ನಾಯಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ.