ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ RRR ಚಿತ್ರದ ಮೇಕಿಂಗ್ ವಿಡಿಯೋ ವೈರಲ್ ಆಗಿದೆ. ಚಿತ್ರೀಕರಣದ ವೇಳೆ ಜೂನಿಯರ್ ಎನ್‌ಟಿಆರ್ ಅವರನ್ನು ತಬ್ಬಿಕೊಂಡು ರಾಮ್ ಚರಣ್ ಕಣ್ಣೀರು ಹಾಕಿದ್ದಾರೆ.

ಹೈದರಾಬಾದ್: ಟಾಲಿವುಡ್ ಸೂಪರ್ ಸ್ಟಾರ್‌ಗಳಾದ ರಾಮ್ ಚರಣ್ ಮತ್ತು ಜೂನಿಯರ್‌ ಎನ್‌ಟಿಆರ್‌ಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಜೂನಿಯರ್ ಎನ್‌ಟಿಆರ್ ಅವರನ್ನು ತಬ್ಬಿಕೊಂಡು ರಾಮ್ ಚರಣ್ ಮಕ್ಕಳಂತೆ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ರಾಮ್ ಚರಣ್ ಅವರದ್ದು ಪರಿಶುದ್ಧವಾದ ಮನಸ್ಸು ಎಂದು ಕಮೆಂಟ್ ಮಾಡಿದ್ದಾರೆ. ಜೂನಿಯರ್ ಎನ್‌ಟಿಆರ್ ಅಭಿಮಾನಿಗಳು ಸಹ ಈ ವಿಡಿಯೋಗೆ ಲೈಕ್ಸ್ ನೀಡಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ರಾಮ್‌ಚರಣ್ ಕಣ್ಣೀರು ಹಾಕಿದ್ದೇಕೆ? ವೈರಲ್ ವಿಡಿಯೋದಲ್ಲಿರೋದು ಏನು ಎಂದು ನೋಡೋಣ ಬನ್ನಿ. 

Add Asianetnews Kannada as a Preferred SourcegooglePreferred

ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ (RRR) ಸಿನಿಮಾದಲ್ಲಿ ರಾಮ್‌ಚರಣ್‌ ಮತ್ತು ಜೂ. ಎನ್‌ಟಿಆರ್ ಜೊತೆಯಾಗಿ ನಟಿಸಿದ್ದರು. ಬ್ರಿಟಿಷ್ ಅಧಿಕಾರಿಯಾದ ಸ್ಕಾಟ್ ಬಕ್ಸ್‌ಟನ್ ಮತ್ತು ಆತನ ಪತ್ನಿ ಕ್ಯಾಥ್‌ರಿನ್ ಕಾಡಿನಲ್ಲಿರುವ ಮಲ್ಲಿ ಎಂಬ ಬಾಲಕಿಯನ್ನು ಅರಮನೆಗೆ ಕರೆದುಕೊಂಡು ಬರುತ್ತಾರೆ. ಮಲ್ಲಿಯನ್ನು ಹುಡುಕಿಕೊಂಡು ಅಖ್ತರ್ ವೇಷ ಧರಿಸಿ ಜೂ. ಎನ್‌ಟಿಆರ್ ಬರುತ್ತಾರೆ. ಈ ವೇಳೆ ಬ್ರಿಟಿಷ್ ಪೊಲೀಸ್ ಅಧಿಕಾರಿಯಾಗಿರುವ ಸೀತಾರಾಮ ರಾಜು (ರಾಮ್‌ಚರಣ್) ಜೊತೆ ಅಖ್ತರ್‌ಗೂ ಸ್ನೇಹವಾಗುತ್ತದೆ. ಈ ವೇಳೆ ತಾನು ಹುಡುಕುತ್ತಿರೋ ಬುಡಕಟ್ಟಿನ ರಕ್ಷಕ ಕೊಮರಾಮ್ ಭೀಮ್ ಎಂಬಾತನೇ ತನ್ನ ಗೆಳೆಯ ಎಂದು ರಾಮ್‌ಚರಣ್‌ಗೆ ಗೊತ್ತಾಗುತ್ತದೆ. 

ದೃಶ್ಯದ ಮೇಕಿಂಗ್ ವಿಡಿಯೋ
ಕ್ರಾಂತಿಕಾರಿಯಾದ ಕೊಮರಾಮ್ ಭೀಮ್‌ಗೆ ಶಿಕ್ಷೆ ನೀಡಲು ಸಾರ್ವಜನಿಕ ಪ್ರದೇಶದಲ್ಲಿ ಕೈಗಳನ್ನು ಕಟ್ಟಿ ನಿಲ್ಲಿಸಲಾಗುತ್ತದೆ. ಭೀಮನ ಮೊಣಕಾಲು ನೆಲಕ್ಕೆ ತಾಗೋವರಗೂ ಆತನಿಗೆ ಬಾರುಕೋಲು ತೆಗೆದುಕೊಂಡು ಹೊಡೆಯುವಂತೆ ಕ್ಯಾಥರಿನ್ ಆದೇಶ ಮಾಡುತ್ತಾಳೆ. ಕ್ಯಾಥರಿನ್ ಆದೇಶದಂತೆ ಪೊಲೀಸ್ ಅಧಿಕಾರಿಯಾದ ಸೀತಾರಾಮ ರಾಜು ಹೊಡೆಯಲು ಮುಂದಾಗುತ್ತಾನೆ. ಮೊಳೆಗಳಿಂದ ತುಂಬಿರುವ ಬಾರಕೋಲು ನೀಡಿ ಹೊಡೆಯುವಂತೆ ಕ್ಯಾಥರಿನ್ ಜೋರಾಗಿ ಕೂಗಿ ಹೇಳುತ್ತಾಳೆ. ತನ್ನ ಜೀವ ಉಳಿಸಿದ ಗೆಳೆಯನಿಗೆ ಒಲ್ಲದ ಮನಸ್ಸಿನಿಂದಲೇ ಶಿಕ್ಷೆ ನೀಡಲು ಮುಂದಾಗುತ್ತಾನೆ. ಇದೀಗ ಇದೇ ದೃಶ್ಯದ ಮೇಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಇದನ್ನೂ ಓದಿ: ರಾಮಾಯಣ, ಮಹಾಭಾರತವೇ ನನ್ನ ಕಥೆಗಳಿಗೆ ಪ್ರೇರಣೆ: ಎಸ್‌ಎಸ್‌ ರಾಜಮೌಳಿ

ಸಿನಿಮಾದಲ್ಲಿಯ ದೃಶ್ಯಗಳನ್ನು ನೈಜವಾಗಿ ತೋರಿಸುವ ಉದ್ದೇಶದಿಂದ ಚಿತ್ರೀಕರಣದ ವೇಳೆ ಕೆಲವನ್ನು ರಿಯಲ್ ಆಗಿಯೇ ಮಾಡಲಾಗುತ್ತದೆ. ಜೂ. ಎನ್‌ಟಿಆರ್‌ಗೆ ಶಿಕ್ಷೆ ಕೊಡುವ ಚಿತ್ರೀರಣ ಮುಗಿಯುತ್ತಿದ್ದಂತೆ ರಾಮ್‌ಚರಣ್ ಕಣ್ಣೀರು ಹಾಕಿದ್ದಾರೆ.

25ನೇ ಮಾರ್ಚ್ 2022ರಂದು ಬಿಡುಗಡೆಯಾದ ಆರ್‌ಆರ್‌ಆರ್‌ ಸಿನಿಮಾ 550 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ 1253-1387 ಕೋಟಿ ಕಲೆಕ್ಷನ್ ಮಾಡಿತ್ತು. ಬಿ. ವಿಜಯೇಂದ್ರ ಪ್ರಸಾದ್ ಕಥೆಗೆ ರಾಜಮೌಳಿ ಆಕ್ಷನ್ ಕಟ್ ಹೇಳಿದ್ದರು. ಚಿತ್ರದಲ್ಲಿ ಎನ್ ಟಿ ರಾಮರಾವ್ ಜೂನಿಯರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್, ಶ್ರಿಯಾ ಶರಣ್, ಸಮುಥಿರಕಣಿ, ರೇ ಸ್ಟೀವನ್ಸನ್, ಅಲಿಸನ್ ಡೂಡಿ, ಒಲಿವಿಯಾ ಮೋರಿಸ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. 

ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ
ಆರ್‌ಆರ್‌ಆರ್‌ (RRR) ಚಿತ್ರದ ನಾಟು ನಾಟು ಹಾಡಿಗೆ ಒರಿಜಿನಲ್ ಸಾಂಗ್ ಕ್ಯಾಟಗರಿಯ ಆಸ್ಕರ್ 2023 ಪ್ರಶಸ್ತಿ ಪಡೆದುಕೊಂಡಿದೆ. ಚಿತ್ರದ ನಿರ್ದೇಶಕ ಎಸ್​.ಎಸ್​.ರಾಜಮೌಳಿ, ನಟ ಜೂ.ಎನ್​ಟಿಆರ್, ರಾಮ್ ಚರಣ್​, ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಶಸ್ತಿ ಸ್ವೀಕರಿಸಿದ್ದರು. ಚಂದ್ರಬೋಸ್ ಸಾಹಿತ್ಯ ಬರೆದಿರುವ 'ನಾಟು ನಾಟು' ಹಾಡನ್ನು ಗಾಯಕರಾದ ರಾಹುಲ್ ಸಿಪ್ಲಿಗಿಂಜ್ ಹಾಗೂ ಕೀರವಾಣಿಯವರ ಮಗ ಕಾಲ ಭೈರವ ಹಾಡಿದ್ದರು. 'ನಾಟು ನಾಟು' ಹಾಡು ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲಿಯೇ ಸೂಪರ್ ಹಿಟ್ ಆಗಿದೆ. 

ಇದನ್ನೂ ಓದಿ: Oscars 2023: ಮಾ.13ಕ್ಕೆ ಆಸ್ಕರ್‌ ಪ್ರಶಸ್ತಿ ಪ್ರಕಟ: ಭಾರತದ ಚಿತ್ರಗಳು ಮೂರು ವಿಭಾಗದಲ್ಲಿ ಸ್ಪರ್ಧೆ

View post on Instagram