Prabhas Radhe Shyam Trailer : ಜನ ಜಾತ್ರೆ... ಅಭಿಮಾನಿಗಳಿಂದಲೇ ರಾಧೆ ಶ್ಯಾಮ್ ಟ್ರೇಲರ್ ಬಿಡುಗಡೆ!
* ಅಭಿಮಾನಿಗಳಿಂದಲೇ ರಾಧೆ ಶ್ಯಾಮ್ ಚಿತ್ರದ ಟ್ರೇಲರ್ ಬಿಡುಗಡೆ
* 18 ವರ್ಷ ಸಮಯ ತೆಗೆದುಕೊಂಡು ಕತೆ ಬರೆದಿದ್ದೇನೆ.
* ಹಸ್ತ ಸಾಮುದ್ರಿಕ ಪಂಡಿತನ ಸುತ್ತ ನಡೆಯುವ ಅಪೂರ್ವ ಪ್ರೇಮಕತೆ
* ಅಭಿಮಾನಿಗಳಿಂದಲೇ ಟ್ರೇಲರ್ ಬಿಡುಗಡೆ
ಹೈದರಾಬಾದ್(ಡಿ. 27) ಅದು ರಾಮೋಜಿ ಫಿಲ್ಮ್ ಸಿಟಿಯ ವಿಶಾಲವಾದ ಮೈದಾನ. ಎಲ್ಲಿ ನೋಡಿದರೂ ಜನರ ಜಾತ್ರೆ. ತಮ್ಮ ನೆಚ್ಚಿನ ನಟನ ಫೋಟೋಗಳನ್ನು ಹಿಡಿದು ಕೇಕೆ, ಶಿಳ್ಳೆ ಹಾಕುತ್ತ ನುಗುತ್ತಿದ್ದ ಅಭಿಮಾನಿಗಳು, ಖಾಕಿ ಪಡೆಯ ಬೇಲಿಯನ್ನೂ ದಾಟಿ ಕಟೌಟ್ಗಳ ಮೇಲೆ ಹತ್ತಿ ನಿಂತ ದೃಶ್ಯಗಳು, ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದ ಸಿನಿಮಾ ಪತ್ರಕರ್ತರು. ಹೀಗೆ ಒಂದು ನ್ಯಾಷನಲ್ ಈವೆಂಟ್ನಿಂದ ಆ ಮೈದಾನ ಜನರಿಂದ ತುಂಬಿ ಹೋಗಿತ್ತು. ಅದಕ್ಕೆ ಕಾರಣ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಸೆಟ್ಟೇರಿರುವ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟನೆಯ, ರಾಧಾ ಕೃಷ್ಣ ಕುಮಾರ್ ನಿರ್ದೇಶನದ ‘ರಾಧೆ ಶ್ಯಾಮ್’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ. ಅಂದಹಾಗೆ ಟ್ರೇಲರ್ ಬಿಡುಗಡೆ ಮಾಡಿದ್ದು ದೊಡ್ಡ ಸ್ಟಾರ್ ನಟನಲ್ಲ. ಪ್ರಭಾಸ್ ಅಭಿಮಾನಿಗಳೇ ತಮ್ಮ ಮೊಬೈಲ್ಗಳಲ್ಲಿ ಟಾರ್ಚ್ ಲೈಟ್ ಅನ್ ಮಾಡುವ ಮೂಲಕ ‘ರಾಧೆ ಶ್ಯಾಮ್’ ಟ್ರೇಲರ್ ಅನ್ನು ದೊಡ್ಡ ಪರದೆ ಮೇಲೆ ಮೂಡಿಸಿದರು.
ಟೈಟಾನಿಕ್ ನೆನಪಿಸಿದ ಟ್ರೇಲರ್ : ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹೀಗೆ ಎಲ್ಲ ಭಾಷೆಯಲ್ಲಿ ಬಿಡುಗಡೆ ಆದ ಟ್ರೇಲರ್ ನೋಡಿದಾಗ ಎಲ್ಲರಿಗೂ ನೆನಪಾಗಿದ್ದು ಹಾಲಿವುಡ್ನ ‘ಟೈಟಾನಿಕ್’ ಸಿನಿಮಾ. ಮೇಕಿಂಗ್, ಟೇಕಿಂಗ್, ದೃಶ್ಯಗಳು, ಛಾಯಾಗ್ರಾಹಣದ ನೈಪುಣ್ಯತೆ, ಕಲಾವಿದರ ಔಟ್ ಲುಕ್... ಹೀಗೆ ಚಿತ್ರದ ಪ್ರತಿಯೊಂದು ಅಂಶವೂ ‘ಟೈಟಾನಿಕ್’ ಚಿತ್ರವನ್ನು ನೆನಪಿಸುವಂತೆ ಮಾಡಿದವು. ಆದರೆ, ಕತೆ ವಿಚಾರದಲ್ಲಿ ಅದೇ ಬೇರೆ, ಇದೇ ಬೇರೆ ಎನ್ನುತ್ತದೆ ‘ರಾಧೆ ಶ್ಯಾಮ್’ ಚಿತ್ರತಂಡ.
ಚಿತ್ರದ ಕತೆ ಏನು?
ಹಸ್ತ ಸಾಮುದ್ರಿಕ ಪಂಡಿತನ ಸುತ್ತ ನಡೆಯುವ ಅಪೂರ್ವ ಪ್ರೇಮಕತೆ ಇದು. ಆದರೆ, ಟ್ರೇಲರ್ನಲ್ಲಿ ಬಿಟ್ಟಿರುವ ಡೈಲಾಗ್ಗಳು ಅಭೂತಪೂರ್ವ ಪ್ರೇಮಕತೆಯೊಂದನ್ನು ತೆರೆದಿಡಲಿದೆ ಎನ್ನಬಹುದು. ‘ನಿನ್ನ ಪ್ರೀತಿ ನನಗೆ ಒಂದು ವರ, ಅದನ್ನ ಪಡೆಯಕ್ಕೆ ಯುದ್ಧಾನೇ ಮಾಡಬೇಕು’, ‘ನೀನು ರೋಮಿಯೋ ಅಲ್ಲದೆ ಇರಬಹುದು. ಆದ್ರೆ, ನಾನು ಜೂಲಿಯೇಟ್. ನನ್ ಪ್ರೀತಿಯಲ್ಲಿ ಬಿದ್ದರೆ ಸತ್ತೋಗ್ತಿಯಾ’ ಎನ್ನುವಂತಹ ಡೈಲಾಗ್ಗಳು ಪ್ರೇಮ ಯುದ್ಧದ ಕತೆ ಹೇಳುವಂತಿದೆ.
Radhe Shyam: ಸಂಚಾರಿ ಹಾಡಿನಲ್ಲಿ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡ ವಿಕ್ರಮಾದಿತ್ಯ
ಯುವಿ ಕ್ರಿಯೇಷನ್ ಎಂಬ ಸಿನಿಮಾ ಮರ : ನಿರ್ಮಾಪಕ ವಂಶಿಕೃಷ್ಣ ರೆಡ್ಡಿ, ಪ್ರಮೋದ್ ಹಾಗೂ ಪ್ರಭಾಸ್ ಮತ್ತು ಅವರ ಸ್ನೇಹಿತರು ಸೇರಿ ಹುಟ್ಟು ಹಾಕಿರುವ ಸಂಸ್ಥೆಯೇ ಯುವಿ ಕ್ರಿಯೇಷನ್. ಸದ್ಯಕ್ಕೆ ದಕ್ಷಿಣ ಭಾರತದ ಬಹುದೊಡ್ಡ ನಿರ್ಮಾಣ ಸಂಸ್ಥೆಯಾಗಿ ಬೆಳೆಯುತ್ತಿರುವ ಯುವಿ ಕ್ರಿಯೇಷನ್ ಮೂಲಕ ತಮ್ಮ ಸ್ನೇಹಿತರಿಗೆ ಸಿನಿಮಾ ಮಾಡುವ ಮೂಲಕ ಪ್ರಭಾಸ್ ಅವರು ತೆಲುಗು ಚಿತ್ರರಂಗದಲ್ಲಿ ಸಿನಿಮಾ ನಿರ್ಮಾಣವನ್ನು ದೊಡ್ಡ ಆಲದ ಮರದಂತೆ ಬೆಳೆಸುತ್ತಿದ್ದಾರೆ. ‘ರಾಧೆ ಶ್ಯಾಮ್’ ಈ ಸಂಸ್ಥೆಯ 12ನೇ ಸಿನಿಮಾ. ಅಂದಹಾಗೆ ಇದೇ ಯುವಿ ಕ್ರಿಯೇಷನ್ ಅಂಗಳದಲ್ಲಿ ಹೆಚ್ಚಾಗಿ ಬಹುಭಾಷಾ ನಟಿ ಕನ್ನಡದ ಅನುಷ್ಕಾ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ.
18 ವರ್ಷ ಸಮಯ ತೆಗೆದುಕೊಂಡು ಕತೆ ಬರೆದಿದ್ದೇನೆ. ಮೂರು ವರ್ಷ ಚಿತ್ರಕಥೆ ಮಾಡಿದ್ದೇನೆ. ಈ ಚಿತ್ರದಲ್ಲಿ ಫೈಟ್ಗಳು ಇರಲ್ಲ. ಆದರೆ, ನಾಯಕ ಮತ್ತು ನಾಯಕಿ ನಡುವೆ ಯುದ್ಧಗಳು ಇರುತ್ತವೆ. ಅದು ಪ್ರೀತಿಗಾಗಿ ನಡೆಯುವ ಯುದ್ಧ. ಈ ಯುದ್ಧವೇ ತೆರೆ ಮೇಲೆ ಅದ್ಭುತವಾದ ಲೋಕವನ್ನು ಕಟ್ಟಿಕೊಡುತ್ತದೆ. ಹೊಸ ಪ್ರಭಾಸ್ ಅವರನ್ನು ನೀವು ಇಲ್ಲಿ ನೋಡಬಹುದು ಎಂದು ನಿರ್ದೇಶಕ ರಾಧ ಕೃಷ್ಣಕುಮಾರ್ ಹೇಳಿದ್ದಾರೆ.
ನಿಮಗೋಸ್ಕರ ಈ ಸಿನಿಮಾ. ಭಾರತದ ಎಲ್ಲ ಭಾಷೆಗಳಲ್ಲೂ ಸಿನಿಮಾ ಬರುತ್ತಿದೆ. ಹೊಸತನ ಮತ್ತು ನೀವು ಕೇಳಿರುವ ಮತ್ತು ನೋಡದಿರುವ ಪ್ರೇಮ ಕತೆಯೊಂದು ಈ ಚಿತ್ರದಲ್ಲಿದೆ. ಏಕಕಾಲದಲ್ಲಿ ಎರಡು- ಮೂರು ಪ್ಯಾನ್ ಇಂಡಿಯಾ ಚಿತ್ರಗಳಿಗೆ ಚಾಲನೆ ಕೊಟ್ಟಿದ್ದೇನೆ. ನಿಮ್ಮ ಅಭಿಮಾನ ಹೀಗೆ ಇರಲಿ ಎಂದು ಬಾಹುಬಲಿ ಪ್ರಭಾಸ್ ಕೇಳಿಕೊಂಡರು.