Asianet Suvarna News Asianet Suvarna News

ರಾಜಕೀಯಕ್ಕೆ ಬರ್ತಾರಾ ರಾಕಿಂಗ್ ಸ್ಟಾರ್: ಗೋವಾ ಸಿಎಂ ಭೇಟಿಯಾದ ಯಶ್‌ ರಾಧಿಕಾ

  • ಗೋವಾ ಸಿಎಂ ಭೇಟಿ ಮಾಡಿದ ರಾಕಿಂಗ್‌ ಸ್ಟಾರ್
  • ಯಶ್ ರಾಧಿಕಾ ದಂಪತಿಯಿಂದ ಪ್ರಮೋದ್ ಸಾವಂತ್ ಭೇಟಿ
  • ಪಣಜಿಯಲ್ಲಿ ಗೋವಾ ಸಿಎಂ ಭೇಟಿ ಮಾಡಿದ ಸ್ಟಾರ್ ಜೋಡಿ
KGF Star Yash and wife Radhika Meets Goa CM Pramod savant in Panaji akb
Author
Panaji, First Published May 4, 2022, 12:11 PM IST | Last Updated May 4, 2022, 12:20 PM IST

ಕೆಜಿಎಫ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟ ಯಶ್‌ ಹಾಗೂ ಪತ್ನಿ ನಟಿ ರಾಧಿಕಾ ಪಂಡಿತ್ ಈಗ ಕರಾವಳಿ ರಾಜ್ಯ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಭೇಟಿಯಾಗಿದ್ದಾರೆ. ಇದರಿಂದ ರಾಕಿಂಗ್‌ ಸ್ಟಾರ್ ಯಶ್‌ ರಾಜಕೀಯಕ್ಕೆ ಬರುತ್ತಾರಾ ಎಂಬ ಊಹಾಪೋಹಾ ಶುರುವಾಗಿದೆ. ಇತ್ತೀಚಿನ ದಿನಗಳಲ್ಲಿ ನಟ ಯಶ್ ಅವರು ರಾಜಕೀಯಕ್ಕೆ ಬರುತ್ತಾರೆ ಎನ್ನುವ ಕುರಿತು ಭಾರೀ ಚರ್ಚೆ ಆಗುತ್ತಿದೆ. ಅಲ್ಲದೇ ಅವರ ಸಾಮಾಜಿಕ ಕಾರ್ಯಗಳಿಂದ ಯಶ್‌ ಈಗಾಗಲೇ ಸಾಕಷ್ಟು ಜನಮನ್ನಣೆ ಗಳಿಸಿದ್ದಾರೆ.

ಗೋವಾ ಸಿಎಂ ಪ್ರಮೋದ್ ಸಾವಂತ್ (Pramod Savanth) ಅವರು ಯಶ್ ಹಾಗೂ ರಾಧಿಕಾ ತಮ್ಮನ್ನು ಭೇಟಿಯಾದ ಕ್ಷಣದ ಫೋಟೋಗಳನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಜಿಎಫ್ (KGF) ಸೂಪರ್‌ ಸ್ಟಾರ್ ಯಶ್‌ ಹಾಗೂ ಅವರ ಪತ್ನಿ ರಾಧಿಕಾ ಪಂಡಿತ್ ಹಾಗೂ ತಂಡ ಪಣಜಿಯಲ್ಲಿ ಭೇಟಿಯಾಗಿದ್ದು ಖುಷಿ ಆಯ್ತು ಎಂದು ಅವರು ಬರೆದು ಕೊಂಡಿದ್ದಾರೆ. 

ಇತ್ತ ಯಶ್‌ ರಾಜಕೀಯ ಸೇರುವ ಕುರಿತು ಎಲ್ಲಿಯೂ ಹೇಳಿಕೆ ನೀಡದೇ ಇದ್ದರೂ, ಅವರ ನಡೆಗಳು ಇಂಥದ್ದೊಂದು ಪ್ರಶ್ನೆಯನ್ನು ಹುಟ್ಟು ಹಾಕುತ್ತಿವೆ. ಕಳೆದ ಐದಾರು ವರ್ಷಗಳಿಂದ ರಾಕಿಭಾಯ್ ಹತ್ತು ಹಲವು ಜನಪರ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಅನೇಕ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಕೆರೆಗಳನ್ನು ಸಂರಕ್ಷಿಸಿದ್ದಾರೆ. ಹೀಗಾಗಿ ಅವರಿಗೆ ಜನಪರ ಕೆಲಸ ಮಾಡುವ ಒಲವು ಇದೆ. ಅನೇಕ ಸಂದರ್ಶನಗಳಲ್ಲಿ ಯಶ್, ನನ್ನ ಗುರಿ ಬೇರೆ. ನಾನು ತಲುಪಬೇಕಿರುವ ಕೇಂದ್ರಸ್ಥಾನ ಬೇರೆ ಎನ್ನುವ ಅರ್ಥದಲ್ಲಿ ಅನೇಕ ಬಾರಿ ಮಾತಾಡಿದ್ದೂ ಇದೆ. ಹಾಗಾಗಿ ಯಶ್ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಮಾತು ಮುನ್ನೆಲೆಗೆ ಬಂದಿದೆ. 

ಗೋವಾ ಸಿಎಂ ಬಂದ ತಕ್ಷಣ ಓಪನ್ ಆದ ಸವದತ್ತಿ ಯಲ್ಲಮ್ಮ ದೇವಾಲಯ!

ಇದಕ್ಕೆ ಪೂರಕ ಎನ್ನುವಂತೆ ಯಶ್ ನಿನ್ನೆಯಷ್ಟೇ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಭೇಟಿ ಮಾಡಿದ್ದಾರೆ. ಸದ್ಯ ಯಶ್ ಮತ್ತು ರಾಧಿಕಾ ಪಂಡಿತ್ ಗೋವಾದಲ್ಲೇ (Goa) ಇದ್ದು, ಪಣಜಿಯಲ್ಲಿ (Panaji) ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಹೇಳಿ ಕೇಳಿ ನಟಿ ರಾಧಿಕಾ ಪಂಡಿತ್ (Radhika Pandit) ತಾಯಿಯ ತವರು ಕೂಡ ಗೋವಾವೇ ಆಗಿದ್ದು, ಗೋವಾದೊಂದಿಗೆ ಈ ಜೋಡಿಗೆ ಅವಿನಾಭಾವ ಸಂಬಂಧ ಇದೆ. ಇದರ ಜೊತೆ ಯಶ್‌ ರಾಧಿಕಾ ತಮ್ಮ ವಿವಾಹವನ್ನು ಗೋವಾದಲ್ಲೇ ಆಗಿದ್ದರು. 

ಎಲ್ಲರಂತಲ್ಲ ನಮ್ಮ ರಾಕಿಂಗ್‌ ಸ್ಟಾರ್:‌ ಯಶ್‌ ಮಾಡ್ತಿರೋ ಮಾದರಿ ಕೆಲಸಗಳೇನು ಗೊತ್ತಾ?

ಈ ಹಿಂದೆ ಯಶ್ ಹಲವಾರು ರಾಜಕೀಯ ಮುಖಂಡರ ಜತೆ ಗುರುತಿಸಿಕೊಂಡಿದ್ದೂ ಇದೆ. ಸುಮಲತಾ ಅಂಬರೀಶ್ ಅವರು ಮಂಡ್ಯ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಾಗ, ಅವರ ಪರ ಪ್ರಚಾರ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡ (Congress Leader)ಎಂ.ಬಿ. ಪಾಟೀಲ್ (MB Patil) ಅವರ ಜೊತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಹತ್ತಾರು ಯೋಜನೆಗಳಿಗೆ ಕೈ ಜೋಡಿಸಿದ್ದಾರೆ. ಹೀಗಾಗಿ ಇವತ್ತಲ್ಲ, ನಾಳೆ ಯಶ್ ರಾಜಕೀಯಕ್ಕೆ ಬರುತ್ತಾರೆ ಎನ್ನುತ್ತದೆ ಯಶ್ ವಲಯ.

ದಿಢೀರ್ ಅಂತ ಅವರು ರಾಜಕೀಯ ಪ್ರವೇಶ ಮಾಡದೇ ಇದ್ದರೂ, ಅದಕ್ಕೆ ಸೂಕ್ತ ವೇದಿಕೆಯನ್ನಂತೂ ಈಗಿನಿಂದಲೇ ತಯಾರು ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೂಡ ಗಾಂಧಿನಗರದಲ್ಲಿ (Gandinagar) ಹರಿದಾಡುತ್ತಿದೆ. ಯಶ್ (Yash) ಮುಂದೊಂದು ದಿನ ದೊಡ್ಡ ರಾಜಕಾರಣಿಯಾಗಿ ಉನ್ನತ ಹುದ್ದೆಯನ್ನೂ ಏರಲಿ ಎನ್ನುವುದು ಅವರ ಅಭಿಮಾನಿಗಳ ಆಸೆಯೂ ಆಗಿರುವುದಂತು ನಿಜ.
 

Latest Videos
Follow Us:
Download App:
  • android
  • ios