ಪಾಕಿಸ್ತಾನದಲ್ಲೇ ಕುಳಿತು ಅವರ ವಿರುದ್ಧ ಗುಡುಗಿದ್ದ ಜಾವೇದ್ ಅಖ್ತರ್ ಈಗ ತನ್ನ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 3ನೇ ವಿಶ್ವಯುದ್ಧ ಗೆದ್ದಂತೆ ಆಗಿದೆ ಎಂದು ಅಖ್ತರ್ ಹೇಳಿದ್ದಾರೆ. 

'ಮುಂಬೈ ದಾಳಿಕೋರರು ಇನ್ನೂ ನಿಮ್ಮ ದೇಶದಲ್ಲಿ(ಪಾಕಿಸ್ತಾನ) ಮುಕ್ತವಾಗಿ ಓಡಾಡುತ್ತಿದ್ದಾರೆ' ಎಂದು ಜಾವೇದ್ ಅಖ್ತರ್ ಪಾಕಿಸ್ತಾನದಲ್ಲೇ ಕುಳಿತು ಅವರ ವಿರುದ್ಧ ಗುಡುಗಿದ್ದರು. ಜಾವೇದ್ ಅಖ್ತರ್ ಅವರ ಮಾತು ಸಿಕ್ಕಾಪಟ್ಟೆ ವೈರಲ್ ಆಗಿದ್ದು ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಮಾತಿನ ಜೊತೆಗೆ ಪಾಕ್ ನಲ್ಲಿ ಭಾರತೀಯ ಕಲಾವಿದನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆಯೂ ಟೀಕಿಸಿದ್ದರು. ಈ ಹೇಳಿಕೆ ಬಗ್ಗೆ ಖ್ಯಾತ ಬರಹಗಾರ ಮತ್ತು ಚಿತ್ರಸಾಹಿತಿ ಜಾವೆದ್ ಅಖ್ತರ್ ಪ್ರತಿಕ್ರಿಯೆ ನೀಡಿದ್ದಾರೆ. 'ನನ್ನ ಮನಸ್ಸಲ್ಲಿ ಇರುವುದನ್ನು ಹೇಳಲು ನನ್ನ ದೇಶದಲ್ಲೇ ನಾನು ಭಯಪಡಲ್ಲ ಇನ್ನು ಕೇವಲ ಭೇಟಿ ನೀಡುತ್ತಿರುವ ದೇಶದಲ್ಲಿ ಕುಳಿತು ಮಾತಾಡಲು ಹೆದರಲ್ಲ' ಎಂದು ಹೇಳಿದ್ದಾರೆ. 

ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜಾವೇದ್ ಅಖ್ತರ್ ಮಾತನಾಡಿದ್ದಾರೆ. 'ನನ್ನ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇಂಥ ಕಾರ್ಯಕ್ರಮಗಳಿಗೆ ಹೋಗಬಾರದು ಎನಿಸುತ್ತಿದೆ. 3ನೇ ವಿಶ್ವಯುದ್ಧ ಗೆದ್ದು ಬಂದಂತೆ ಆಗಿದೆ. ಜನರಿಂದ, ಮಾಧ್ಯಮಗಳಿಂದ ಸಾಕಷ್ಟು ಪ್ರತಿಕ್ರಿಯೆ ಬಂದಿದ್ದವು. ನಾನು ಅಷ್ಟನ್ನು ಹೇಳಲೇಬೆಕಿತ್ತು. ನಾನು ಸುಮ್ಮನಿರಬೇಕಿತ್ತಾ?’ಎಂದು ಜಾವೇದ್ ಅಖ್ತರ್ ಪ್ರತಿಕ್ರಿಯೆ ನೀಡಿದ್ದಾರೆ. 

Add Asianetnews Kannada as a Preferred SourcegooglePreferred

ಜಾವೇದ್ ಅಖ್ತರ್ ಇತ್ತೀಚೆಗಷ್ಟೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಉರ್ದು ಕವಿ ಫೈಜ್ ಅಹ್ಮದ್ ಫೈಜ್ ಅವರ ನೆನಪಿಗಾಗಿ ಲಾಹೋರ್‌ನಲ್ಲಿ ನಡೆದ ಸಮಾರಂಭದಲ್ಲಿ ಜಾವೇದ್ ಅಖ್ತರ್ ಭಾಗಿಯಾಗಿದ್ದರು. ಸಮಾರಂಭದಲ್ಲಿ ಪಾಕ್ ವಿರುದ್ಧವೇ ಗುಡುಗಿದ್ದರು. ಜಾವೇದ್ ಅಖ್ತರ್ ಮಾತು ಅಲ್ಲಿನ ಸೆಲೆಬ್ರಿಟಿಗಳ ಆಕ್ರೋಶಕ್ಕೆ ಕಾರಣವಾಯಿತು. ಅನೇಕರು ಜಾವೇದ್ ವಿರುದ್ಧ ಕಿಡಿ ಕಾರಿದ್ದರು. 

ಪಾಕ್‌ಗೆ ಖಡಕ್ ಉತ್ತರ ಕೊಟ್ಟಾಗ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿತ್ತು ಎಂದು ಬಹಿರಂಗ ಪಡಿಸಿದ ಜವೇದ್ ಅಖ್ತರ್

ಪಾಕ್ ನಲ್ಲಿ ಜಾವೇದ್ ಅಖ್ತರ್ ಹೇಳಿದ್ದೇನು? 

 'ನಾವು ಪ್ರತಿಯೊಬ್ಬರನ್ನು ದೂಷಿಸುತ್ತಿಲ್ಲ. ಇದರಿಂದ ಏನು ಉಪಯೋಗವಿಲ್ಲ. ವಾತಾವರಣ ಉದ್ವಿಗ್ನವಾಗಿದೆ ಅದನ್ನು ಮೊದಲು ಶಮನಗೊಳಿಸಬೇಕು. ನಾವು ಮುಂಬೈನಿಂದ ಬಂದವರು, ನಮ್ಮ ನಗರದ ಮೇಲೆ ದಾಳಿಯಾಗಿದ್ದನ್ನು ನಾವು ನೋಡಿದ್ದೇವೆ. ಅವರು (ದಾಳಿಕೋರರು) ನಾರ್ವೆ ಅಥವಾ ಈಜಿಪ್ಟ್ ನಿಂದ ಬಂದವರಲ್ಲ. ಅವರು ಇನ್ನೂ ನಿಮ್ಮ ದೇಶದಲ್ಲಿ ಸ್ವತಂತ್ರವಾಗಿ ಸುತ್ತಾಡುತ್ತಿದ್ದಾರೆ. ಹಾಗಾಗಿ ಹಿಂದೂಸ್ತಾನಿಗಳ ಹೃದಯದಲ್ಲಿ ಇನ್ನೂ ಕೋಪವಿದ್ದರೆ, ನೀವು ದೂರು ಈ ಬಗ್ಗೆ ಆರೋಪಿಸುವಂತಿಲ್ಲ' ಎಂದು ಹೇಳಿದರು. 

ಪಾಕಿಸ್ತಾನದಲ್ಲೇ ಕುಳಿತು ಪಾಕ್ ವಿರುದ್ಧ ಗುಡುಗಿದ ಜಾವೇದ್ ಅಖ್ತಾರ್; ವಿಡಿಯೋ ವೈರಲ್

ಭಾರತದ ಸೆಲೆಬ್ರಿಟಿಗಳನ್ನು ಗೌರವಿಸಲ್ಲ 

ಪಾಕಿಸ್ತಾನದ ಲೆಜೆಂಡ್ ಗಳಿಗೆ ಭಾರತ ಆತಿಥ್ಯ ನೀಡಿದ ರೀತಿಯಲ್ಲಿ ಭಾರತೀಯ ಕಲಾವಿದರನ್ನು ಪಾಕಿಸ್ತಾನದಲ್ಲಿ ಸ್ವಾಗತಿಸುತ್ತಿಲ್ಲ ಎಂದು ಸಹ ಅಖ್ತರ್ ಹೇಳಿದರು. 'ಫೈಜ್ (ಫೈಜ್ ಅಹ್ಮದ್ ಫೈಜ್) ಸಾಹಬ್ ಅವರು ಭೇಟಿ ನೀಡಿದಾಗ ಅವರನ್ನು ಬಹಳ ಮುಖ್ಯವಾದ ಸಂದರ್ಶಕರಂತೆ ಸ್ವೀಕರಿಸಲಾಯಿತು. ಅದನ್ನು ಎಲ್ಲೆಡೆ ಪ್ರಸಾರ ಮಾಡಲಾಯಿತು. ನಾವು ನುಸ್ರತ್ ಫತೇಹ್ ಅಲಿ ಖಾನ್ ಮತ್ತು ಮೆಹದಿ ಹಸನ್ ಅವರ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ನೀವು (ಪಾಕಿಸ್ತಾನ) ಲತಾ ಮಂಗೇಶ್ಕರ್ ಅವರಿಗೆ ಎಂದಿಗಾದರೂ ಕಾರ್ಯಕ್ರಮವನ್ನು ಆಯೋಜಿಸಿದ್ದೀರಾ?' ಎಂದು ಪ್ರಶ್ನಿಸಿದ್ದರು.