ಬಾಕ್ಸ್ ಆಫೀಸ್‌ನಲ್ಲಿ ಮಿನುಗುತ್ತಿರುವ 'ಧುರಂಧರ್' ಚಿತ್ರಕ್ಕೆ ಈ ಕಾನೂನು ಸಮರವು ಹೊಸ ತಲೆನೋವಾಗಿ ಪರಿಣಮಿಸಿದೆ. ರಣವೀರ್ ಸಿಂಗ್ ಅವರ ಅಪ್ಪಟ ಅಭಿಮಾನಿಗಳು ಈ ವಿವಾದ ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಎಂದು ಆತಂಕದಿಂದ ಕಾಯುತ್ತಿದ್ದಾರೆ. ಸದ್ಯಕ್ಕೆ ಈ 'ಕಥೆಯ ಕದನ' ಬಾಲಿವುಡ್‌ನ ಹಾಟ್ ಟಾಪಿಕ್ ಆಗಿದೆ.

ಬಾಕ್ಸ್ ಆಫೀಸ್ ಧೂಳೆಬ್ಬಿಸಿದ 'ಧುರಂಧರ್' ಚಿತ್ರಕ್ಕೆ ಕೃತಿಚೌರ್ಯದ ಕಂಟಕ! 

ಬಾಲಿವುಡ್‌ನಲ್ಲಿ ಸಾವಿರಾರು ಕೋಟಿ ಕಲೆಕ್ಷನ್ ಮಾಡಿ ಇತಿಹಾಸ ಬರೆದಿರುವ ರಣವೀರ್ ಸಿಂಗ್ (Ranveer Singh) ಅಭಿನಯದ 'ಧುರಂಧರ್: ದಿ ರಿವೆಂಜ್' ಸಿನಿಮಾ ಈಗ ದೊಡ್ಡ ವಿವಾದದ ಸುಳಿಯಲ್ಲಿ ಸಿಲುಕಿದೆ. ಚಿತ್ರದ ಭರ್ಜರಿ ಯಶಸ್ಸಿನ ಬೆನ್ನಲ್ಲೇ, ಈ ಸಿನಿಮಾದ ಕಥೆ ನನ್ನದು ಎಂದು ನಿರ್ಮಾಪಕ ಸಂತೋಷ್ ಕುಮಾರ್ ಆರ್‌ಎಸ್ ಗಂಭೀರ ಆರೋಪ ಮಾಡಿದ್ದಾರೆ. ಈ ಕೃತಿಚೌರ್ಯದ (Plagiarism) ಆರೋಪವು ಈಗ ನ್ಯಾಯಾಲಯದ ಮೆಟ್ಟಿಲೇರುವ ಹಂತಕ್ಕೆ ತಲುಪಿದ್ದು, ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಕಥೆ ಕದ್ದಿದ್ದಾರೆ ಎಂದು ಆರೋಪಿಸಿದ ಸಂತೋಷ್ ಕುಮಾರ್:

ನಿರ್ಮಾಪಕ ಸಂತೋಷ್ ಕುಮಾರ್ ಅವರ ಪ್ರಕಾರ, ಆದಿತ್ಯ ಧರ್ ಅವರು 2023ರಲ್ಲಿ ತಾವು ನೋಂದಾಯಿಸಿದ್ದ 'ಡಿ-ಸಾಹೇಬ್' ಎಂಬ ಚಿತ್ರದ ಸ್ಕ್ರಿಪ್ಟ್ ಅನ್ನು ನಕಲು ಮಾಡಿದ್ದಾರೆ. "ಅವರು ನನ್ನ ಪ್ರಾಜೆಕ್ಟ್ ಮತ್ತು ಸ್ಕ್ರಿಪ್ಟ್ ಅನ್ನು ಕುಶಲತೆಯಿಂದ ಬಳಸಿಕೊಂಡು ನನ್ನನ್ನು ಶೋಷಿಸಿದ್ದಾರೆ. ಚಿತ್ರಕಥೆಗಾರರ ಸಂಘದಲ್ಲಿ (SWA) ನನ್ನ ಕಥೆ ನೋಂದಣಿಯಾದ ಬಗ್ಗೆ ಎಲ್ಲಾ ಪುರಾವೆಗಳು ನನ್ನ ಬಳಿ ಇವೆ," ಎಂದು ಸಂತೋಷ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೋಲಿಕೆಗಳೇನು? ಸೀಕ್ರೆಟ್ ರಿವೀಲ್ ಮಾಡಿದ ನಿರ್ಮಾಪಕ:

ತಮ್ಮ 'ಡಿ-ಸಾಹೇಬ್' ಮತ್ತು 'ಧುರಂಧರ್' ಚಿತ್ರದ ನಡುವಿನ ಸಾಮ್ಯತೆಗಳ ಬಗ್ಗೆ ಮಾತನಾಡುತ್ತಾ, "ನನ್ನ ಕಥೆಯಲ್ಲಿ ಮಾಜಿ ಸೇನಾ ಅಧಿಕಾರಿಯ ಮಗನ ಕುಟುಂಬದ ಮೇಲೆ ಅಪರಾಧಿಗಳು ದಾಳಿ ಮಾಡುತ್ತಾರೆ. ಅವನು ಸೇಡು ತೀರಿಸಿಕೊಳ್ಳಲು 10 ಮಂದಿಯನ್ನು ಕೊಂದು ಬಂಧನಕ್ಕೊಳಗಾಗುತ್ತಾನೆ. ಅವನ ಧೈರ್ಯ ಮೆಚ್ಚಿದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA), ಅವನನ್ನು ಪಾಕಿಸ್ತಾನಕ್ಕೆ 'ರಾ' (RAW) ಏಜೆಂಟ್ ಆಗಿ ಕಳುಹಿಸುತ್ತಾನೆ. ಆದಿತ್ಯ ಧರ್ ತುಂಬಾ ಬುದ್ಧಿವಂತ, ಅವನು ನನ್ನ ಕಥೆಯ ಮುಖ್ಯ ಎಳೆಗಳನ್ನು ಮಾತ್ರ ತೆಗೆದುಕೊಂಡು ಅದಕ್ಕೆ ರಾಜಕೀಯ ಪ್ರಚಾರವನ್ನು ಸೇರಿಸಿ ಸಿನಿಮಾ ಮಾಡಿದ್ದಾರೆ," ಎಂದು ಸಂತೋಷ್ ಗಂಭೀರವಾಗಿ ಆರೋಪಿಸಿದ್ದಾರೆ.

ಆದಿತ್ಯ ಧರ್ ಕಾನೂನು ಸಮರ:

ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿರುವ ನಿರ್ದೇಶಕ ಆದಿತ್ಯ ಧರ್, ಈಗಾಗಲೇ ತಮ್ಮ ಕಾನೂನು ತಂಡದ ಮೂಲಕ ಸಂತೋಷ್ ಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಸುಳ್ಳು ಹೇಳಿಕೆಗಳನ್ನು ನೀಡಿ ಚಿತ್ರದ ಗೌರವಕ್ಕೆ ಧಕ್ಕೆ ತರುವುದನ್ನು ತಡೆಯುವಂತೆ ನೋಟಿಸ್‌ನಲ್ಲಿ ವಿನಂತಿಸಲಾಗಿದೆ. ಒಂದು ವೇಳೆ ಸಂತೋಷ್ ಅವರು ಈ ಆಧಾರರಹಿತ ಆರೋಪಗಳನ್ನು ಮುಂದುವರಿಸಿದರೆ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಆದಿತ್ಯ ಧರ್ ಎಚ್ಚರಿಕೆ ನೀಡಿದ್ದಾರೆ.

ಬೆದರಿಕೆಗೆ ಜಗ್ಗದ ಸಂತೋಷ್:

ಆದಿತ್ಯ ಧರ್ ಕಳುಹಿಸಿದ ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿರುವ ಸಂತೋಷ್, "ಅವರು ನನಗೆ ಕಳುಹಿಸಿರುವುದು ಕಾನೂನು ನೋಟಿಸ್ ಅಲ್ಲ, ಅದು ಕೇವಲ ಒಂದು ಇಮೇಲ್ ಅಷ್ಟೇ. ನನ್ನನ್ನು ಬೆದರಿಸಲು ಮತ್ತು ನನ್ನ ಬಾಯಿ ಮುಚ್ಚಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಆದರೆ ನಾನು ಇದಕ್ಕೆ ಹೆದರುವುದಿಲ್ಲ, ನಾನು ಈ ಪ್ರಕರಣವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುತ್ತಿದ್ದೇನೆ," ಎಂದು ಸವಾಲು ಹಾಕಿದ್ದಾರೆ. ಅಲ್ಲದೆ, ಚಿತ್ರದ ನಿರ್ಮಾಣ ಸಂಸ್ಥೆ ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ವಿರುದ್ಧವೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಬಾಕ್ಸ್ ಆಫೀಸ್‌ನಲ್ಲಿ ಮಿನುಗುತ್ತಿರುವ 'ಧುರಂಧರ್' ಚಿತ್ರಕ್ಕೆ ಈ ಕಾನೂನು ಸಮರವು ಹೊಸ ತಲೆನೋವಾಗಿ ಪರಿಣಮಿಸಿದೆ. ರಣವೀರ್ ಸಿಂಗ್ ಅವರ ಅಪ್ಪಟ ಅಭಿಮಾನಿಗಳು ಈ ವಿವಾದ ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಎಂದು ಆತಂಕದಿಂದ ಕಾಯುತ್ತಿದ್ದಾರೆ. ಸದ್ಯಕ್ಕೆ ಈ 'ಕಥೆಯ ಕದನ' ಬಾಲಿವುಡ್‌ನ ಹಾಟ್ ಟಾಪಿಕ್ ಆಗಿದೆ.