ತೆಲಂಗಾಣದ ಗಾಯಕ ರಾಹುಲ್‌ ಸಿಪ್ಲಿಗಂಜ್‌ ಅವರು ಟಾಲಿವುಡ್‌ನ ಪ್ರಮುಖ ಗಾಯಕರಾಗಿದ್ದಾರೆ. ಈಗ ಅವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ.   

ತೆಲಂಗಾಣದ ಯುವಕ ರಾಹುಲ್ ಸಿಪ್ಲಿಗಂಜ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಖತ್‌ ಆಗಿ ಹಾಡುಗಳನ್ನು ಹಾಡುವ ಮೂಲಕ ಗಾಯಕರಾಗಿ ಬಹಳ ಜನಪ್ರಿಯರಾಗಿದ್ದಾರೆ. ಇದೀಗ ಗಾಯಕ ರಾಹುಲ್ ಸಿಪ್ಲಿಗಂಜ್‌ಗೆ ನೀಡಿದ್ದ ಭರವಸೆಯನ್ನು ಮುಖ್ಯಮಂತ್ರಿ ರೇವಂತ್ ರೆಡ್ಡಿ ಉಳಿಸಿಕೊಂಡಿದ್ದಾರೆ. ಬೋನಾಲ ಹಬ್ಬದ ಸಂದರ್ಭದಲ್ಲಿ ಒಂದು ಕೋಟಿ ರೂಪಾಯಿ ನಗದು ಬಹುಮಾನವನ್ನು ಸರ್ಕಾರ ಘೋಷಿಸಿದೆ.

Add Asianetnews Kannada as a Preferred SourcegooglePreferred

ಮುಖ್ಯಮಂತ್ರಿಯಿಂದ ಘೋಷಣೆ!

ಪಾತಬಸ್ತಿಯ ಹುಡುಗನಾಗಿ ಆರಂಭವಾದ ರಾಹುಲ್‌ನ ಪ್ರಯಾಣ RRR ಸಿನಿಮಾದ ʼನಾಟು ನಾಟುʼ ಹಾಡಿನ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಆಸ್ಕರ್‌ವರೆಗೂ ತಲುಪಿದೆ. ಸ್ವಂತ ಪರಿಶ್ರಮದಿಂದ ಬೆಳೆದ ಅವರು ತೆಲಂಗಾಣದ ಯುವಕರಿಗೆ ಮಾರ್ಗದರ್ಶಕ ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ಆಸ್ಕರ್ ವೇದಿಕೆಯಲ್ಲಿ ಹಾಡುವ ಅಪರೂಪದ ಗೌರವವನ್ನು ರಾಹುಲ್ ಸಿಪ್ಲಿಗಂಜ್ ಪಡೆದಿದ್ದಾರೆ.

ನೀಡಿದ್ದ ಮಾತನ್ನು ಉಳಿಸಿಕೊಂಡ ರೇವಂತ್ ರೆಡ್ಡಿ

ಕಳೆದ ಚುನಾವಣೆಗೆ ಮುನ್ನ ನಡೆದ ಒಂದು ಕಾರ್ಯಕ್ರಮದಲ್ಲಿ ಆಗಿನ ಪಿಸಿಸಿ ಅಧ್ಯಕ್ಷರಾಗಿದ್ದ ರೇವಂತ್ ರೆಡ್ಡಿ, ರಾಹುಲ್ ಸಿಪ್ಲಿಗಂಜ್‌ಗೆ ಹತ್ತು ಲಕ್ಷ ಆರ್ಥಿಕ ಸಹಾಯ ಘೋಷಿಸಿ, ಕಾಂಗ್ರೆಸ್ ಸರ್ಕಾರ ಬಂದರೆ ಒಂದು ಕೋಟಿ ರೂಪಾಯಿ ನಗದು ಬಹುಮಾನ ನೀಡುವುದಾಗಿ ಹೇಳಿದ್ದರು.

ಬಿಗ್‌ ಬಾಸ್‌ ವಿಜೇತೆ!

ಇತ್ತೀಚೆಗೆ ಗದ್ದರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ರಾಹುಲ್ ಸಿಪ್ಲಿಗಂಜ್‌ರನ್ನು ಪ್ರತ್ಯೇಕವಾಗಿ ಉಲ್ಲೇಖಿಸಿ, ಶೀಘ್ರದಲ್ಲೇ ಸರ್ಕಾರದಿಂದ ಘೋಷಣೆ ಹೊರಬೀಳಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಅದರಂತೆ ಇಂದು ಪಾತಬಸ್ತಿ ಬೋನಾಲ ಹಬ್ಬದ ಸಂದರ್ಭದಲ್ಲಿ ರಾಹುಲ್‌ಗೆ ಬಹುಮಾನ ಘೋಷಿಸಿದ್ದಾರೆ. ರಾಹುಲ್ ಸಿಪ್ಲಿಗಂಜ್ ತಮ್ಮ ವೃತ್ತಿಜೀವನದಲ್ಲಿ ಸಿಂಗರೇಣಿ ಉಂದಿ, ರಂಗ ರಂಗ ರಂಗಸ್ಥಲಾನ, ಓ ಮೈ ಗಾಡ್ ಡ್ಯಾಡಿ, ನಾಟು ನಾಟು ಮುಂತಾದ ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ.

ಬಡ ಕುಟುಂಬದಿಂದ ಬಂದ ರಾಹುಲ್ ಸಿಪ್ಲಿಗಂಜ್‌ರ ಪ್ರಯಾಣ ಇಂದು ಟಾಲಿವುಡ್‌ನ ಪ್ರಮುಖ ಗಾಯಕರ ಸ್ಥಾನಕ್ಕೆ ತಲುಪಿದೆ. ರಾಹುಲ್ ಸಿಪ್ಲಿಗಂಜ್ ಬಿಗ್ ಬಾಸ್ ತೆಲುಗು ಸೀಸನ್ 3ರಲ್ಲಿ ಭಾಗವಹಿಸಿ ವಿಜೇತರಾಗಿದ್ದರು.