ರಿಹರ್ಸಲ್ ವೇಳೆ ನಟ ಚಿಯಾನ್ ವಿಕ್ರಮ್ಗೆ ಗಾಯ; 'ತಂಗಲಾನ್' ಚಿತ್ರೀಕರಣ ಸ್ಥಗಿತ
ರಿಹರ್ಸಲ್ ವೇಳೆ ನಟ ಚಿಯಾನ್ ವಿಕ್ರಮ್ಗೆ ಗಾಯಗೊಂಡಿದ್ದಾರೆ. 'ತಂಗಲಾನ್' ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ಒಂದು ತಿಂಗಳು ಚಿಯಾನ್ ವಿಕ್ರಮ್ಗೆ ವಿಶ್ರಾಂತಿ ಪಡೆಯಲು ವೈದ್ಯರು ಚೂಚಿಸಿದ್ದಾರೆ.
ತಮಿಳಿನ ಖ್ಯಾತ ನಟ ಚಿಯಾನ್ ವಿಕ್ರಮ್ 'ತಂಗಲಾನ್' ಸಿನಿಮಾದ ಪೂರ್ವಾಭ್ಯಾಸದ ವೇಳೆ ತೀವ್ರವಾಗಿ ಗಾಯಗೊಂಡಿದ್ದಾರೆ. ಪಕ್ಕೆಲುಬಿಗೆ ಏಟುಬಿದ್ದಿದ್ದು ವಿಕ್ರಮ್ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ 'ತಂಗಲಾನ್' ಸಿನಿಮಾದ ಶೂಟಿಂಗ್ ಸ್ಥಗಿತಗೊಳಿಸಲಾಗಿದೆ. ಸುಮಾರು ಒಂದು ತಿಂಗಳ ಕಾಲ ಚಿಯಾನ್ ವಿಕ್ರಮ್ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸೂಚಿಸಿದ್ದಾರೆ. ಚಿಯಾನ್ ಸದ್ಯ ಪೊನ್ನಿಯಿನ್ ಸೆಲ್ವನ್ -2 ಸಕ್ಸಸ್ನ ಸಂಭ್ರಮದಲ್ಲಿದ್ದರು. ಮಣಿರತ್ನಂ ನಿರ್ದೇಶನದ ಈ ಸಿನಿಮಾದಲ್ಲಿ ವಿಕ್ರಮ್ ಆದಿತ್ಯ ಕರಿಕಾಳನ್ ಪಾತ್ರದಲ್ಲಿ ಚಿಯಾನ್ ನಟಿಸಿದ್ದರು. ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದ ಚಿಯಾನ್ ಮತ್ತೆ ಮುಂದಿನ ಸಿನಿಮಾದ ತಯಾರಿಯಲ್ಲಿ ನಿರತರಾಗಿದ್ದರು.
ವಿಕ್ರಮ್ ಸದ್ಯ 'ತಂಗಲಾನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ ಸಿಕ್ಕಾಪಟ್ಟೆ ತಯಾರಿ ನಡೆಸುತ್ತಿದ್ದಾರೆ. ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಂಡಿರುವ ಚಿಯಾನ್ ಪಾತ್ರಕ್ಕಾಗಿ ಪೂರ್ವಾಭ್ಯಾಸ ಮಾಡುತ್ತಿದ್ದರು. ಆದರೀಗ ರಿಹರ್ಸಲ್ ವೇಳೆ ಚಿಯಾನ್ ಗಾಯಗೊಂಡಿದ್ದಾರೆ. ಈ ಬಗ್ಗೆ ಚಿಯಾನ್ ವಿಕ್ರಮ್ ಟೀಂ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ವಿಕ್ರಮ್ ಬಗ್ಗೆ ಅವರ ವಕ್ತಾರರು, 'ಆದಿತ್ಯಾ ಕರಿಕಾಳನ್ ಚಿಯಾನ್ ವಿಕ್ರಮ್ ಸ್ವೀಕರಿದ ಎಲ್ಲಾ ಪ್ರೀತಿ ಮತ್ತು ಮೆಚ್ಚುಗೆಗೆ ಧನ್ಯವಾದಗಳು. ಜಗತ್ತಿನಾದ್ಯಂತ ಪೊನ್ನಿಯಿನ್ ಸೆಲ್ವನ್-2 ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಿಹರ್ಸಲ್ ಸಮಯದಲ್ಲಿ ಚಿಯಾನ್ ವಿಕ್ರಮ್ ಗಾಯಗೊಂಡಿದ್ದು ಪಕ್ಕೆಲುಬು ಮುರಿದಿದೆ. ತಂಗಲಾನ್ ಸಿನಿಮಾ ಶೂಟಿಂಗ್ನಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ನಿಮ್ಮ ಪ್ರೀತಿಗೆ ಧನ್ಯವಾದಗಳು. ಬೇಗನೆ ಹಿಂದಿರುಗುತ್ತಾರೆ' ಎಂದು ಹೇಳಿದ್ದಾರೆ.
ಗುರುತೇ ಸಿಗದ ಹಾಗೆ ಬದಲಾದ ಚಿಯಾನ್ ವಿಕ್ರಮ್; ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ಹೊಸ ಅವತಾರ
ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಚಿಯಾನ್ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ. ಸದ್ಯ ವಿಶ್ರಾಂತಿಯಲ್ಲಿರುವ ವಿಕ್ರಮ್ ಆದಷ್ಟು ಬೇಗ ಶೂಟಿಂಗ್ನಲ್ಲಿ ಭಾಗಿಯಾಗುವಂತೆ ಆಗಲು ಎಂದು ಪಾರ್ಥಿಸುತ್ತಿದ್ದಾರೆ.
ವೀಲ್ಚೇರ್ನಲ್ಲೇ 3 ವರ್ಷ ಕಳೆದಿದ್ದ ವಿಕ್ರಮ್; ಸಾವಿನ ದವಡೆಯಿಂದ ಪಾರಾದ ಘಟನೆ ಬಿಚ್ಚಿಟ್ಟ ಖ್ಯಾತ ನಟ
ತಂಗಲಾನ್ ಬಗ್ಗೆ
ತಂಗಲಾನ್ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ಒಂದಾಗಿದೆ. ಈ ಸಿನಿಮಾಗೆ ಪಿ ರಂಜಿತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೆ ತಂಗಲಾನ್ ಸಿನಿಮಾದ ಮೇಕಿಂಗ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದ್ದರು. ತಂಗಲಾನ್ ನೈಜ ಘಟನೆ ಆಧಾರಿತ ಸಿನಿಮಾ. ಕೋಲಾರದ ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಜೀವನದ ಸುತ್ತ ಸುತ್ತುವ ನೈಜ ಘಟನೆಗಳಿಂದ ಪ್ರೇರಿತವಾದ ಸಿನಿಮಾ ಎನ್ನಲಾಗಿದೆ. ಮೇಕಿಂಗ್ ವಿಡಿಯೋ ನೋಡಿದ ಅಭಿಮಾನಿಗಳು ಸಿನಿಮಾಗಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಸಿನಿಮಾದಲ್ಲಿ ನಟಿ ಪಾರ್ವತಿ ಮತ್ತು ಮಾಳವಿಕಾ ಮೋಹನನ್ ನಟಿಸುತ್ತಿದ್ದಾರೆ.