ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ನನ್ನು ಡ್ರಗ್ಸ್‌ ಪ್ರಕರಣದಲ್ಲಿ ಬಂಧಿಸಿದ್ದ ಮಾದಕ ವಸ್ತು ನಿಗ್ರಹ ದಳ (ಎನ್‌ಸಿಬಿ) ಅಧಿಕಾರಿ ಸಮೀರ್‌ ವಾಂಖೇಡೆ ವಿರುದ್ಧ ಸಿಬಿಐ ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದು, ಅವರ ಮುಂಬೈ ನಿವಾಸದ ಮೇಲೆ ದಾಳಿ ನಡೆಸಿದೆ.

ನವದೆಹಲಿ/ಮುಂಬೈ: ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ನನ್ನು ಡ್ರಗ್ಸ್‌ ಪ್ರಕರಣದಲ್ಲಿ ಬಂಧಿಸಿದ್ದ ಮಾದಕ ವಸ್ತು ನಿಗ್ರಹ ದಳ (ಎನ್‌ಸಿಬಿ) ಅಧಿಕಾರಿ ಸಮೀರ್‌ ವಾಂಖೇಡೆ ವಿರುದ್ಧ ಸಿಬಿಐ ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದು, ಅವರ ಮುಂಬೈ ನಿವಾಸದ ಮೇಲೆ ದಾಳಿ ನಡೆಸಿದೆ. ಆರ್ಯನ್‌ ಖಾನ್‌ಗೆ ಡ್ರಗ್ಸ್ ಕೇಸಿನಲ್ಲಿ ಕ್ಲೀನ್‌ಚಿಟ್‌ ಕೊಡಿಸಲು 25 ಕೋಟಿ ರು. ಕೇಳಿದ ಆರೋಪ ಸಮೀರ್‌ ಮೇಲೆ ಕೇಳಿ ಬಂದಿತ್ತು. ಇದಲ್ಲದೆ ವಿಚಕ್ಷಣ ದಳವು ಸಮೀರ್‌ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ತನ್ನ ವರದಿಯಲ್ಲಿ ಹೇಳಿತ್ತು. ಇದನ್ನು ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಂಡಿರುವ ಸಿಬಿಐ, ವಾಂಖೇಡೆ ಆಸ್ತಿಪಾಸ್ತಿಗಳು ಹಾಗೂ ಮುಂಬೈ, ದಿಲ್ಲಿ, ರಾಂಚಿ ಹಾಗೂ ಕಾನ್ಪುರದ 29 ಸ್ಥಳಗಳಲ್ಲಿ ದಾಳಿ ನಡೆಸಿದೆ.

Add Asianetnews Kannada as a Preferred SourcegooglePreferred

ಕಂದಾಯ ಇಲಾಖೆ ಅಧಿಕಾರಿಯಾಗಿರುವ ಸಮೀರ್‌, 25 ಕೋಟಿ ರು. ಲಂಚದ ಹಣದ ಪೈಕಿ ಮುಂಗಡವಾಗಿ 50 ಲಕ್ಷ ರು. ಸ್ವೀಕರಿಸಿದ್ದರು ಎಂಬ ಮಾಹಿತಿ ತನಗೆ ಇದೆ ಎಂದು ಸಿಬಿಐ ಹೇಳಿದೆ. ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ಪಾರ್ಟಿ ನಡೆಸುತ್ತಿದ್ದ ಆರೋಪ ಹೊರಿಸಿ ಶಾರುಖ್‌ ಮಗನನ್ನು ಸಮೀರ್‌ ಬಂಧಿಸಿದ್ದರೂ, ಸಾಕ್ಷ್ಯಗಳ ಕೊರತೆ ಕಾರಣ ಕೇಸು ಬಿದ್ದು ಹೋಗಿತ್ತು. ಬಳಿಕ ಅವರನ್ನು ಸರ್ಕಾರ ಚೆನ್ನೈಗೆ ಎತ್ತಂಗಡಿ ಮಾಡಿತ್ತು.

ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಡ್ರಗ್ಸ್ ಪ್ರಕರಣ ಅಂತ್ಯಗೊಂಡಿದೆ. ಆದರೆ ಈ ಪ್ರಕರಣ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ ಹಾಗೇ ಉಳಿದುಕೊಂಡಿದೆ. ಈ ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರತೆಯಿಂದ ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ನೀಡಲಾಗಿದೆ. ಆದರೆ ಈ ಘಟನೆ ಬಳಿಕ ಎನ್‌ಸಿಬಿ ಅಧಿಕಾರಿಗಳ ವಿಚಾರಣೆಯಲ್ಲಿ ಶಾರುಖ್ ಖಾನ್ ಆಡಿದ ಮಾತುಗಳನ್ನು ಎನ್‌ಸಿಬಿ ಉಪನಿರ್ದೇಶಕ ಸಂಜಯ್ ಸಿಂಗ್ ಬಹಿರಂಗ ಪಡಿಸಿದ್ದರು. 

ನಿದ್ರಾಹೀನತೆಯಿಂದ ಹೊರಬರಲು ಗಾಂಜಾ ಸೇವನೆ ಕಲಿತಿದ್ದೆ: ಆರ್ಯನ್‌
ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಬಳಿಯಿಂದ ಡ್ರಗ್ಸ್ ಸಿಗದೇ ಇದ್ದರೂ ಬಂಧಿಸಿದ್ದೀರಿ. ಬಳಿಕ ಅಂತಾರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ರೀತಿ ನೋಡಿಕೊಂಡಿದ್ದೀರಿ. ತಪ್ಪಿಲ್ಲದಿದ್ದರೂ ಮಗನನ್ನು ಜೈಲಿಲ್ಲಿ ಇರಿಸಲಾಯಿತು. ಈ ಆಘಾತದಿಂದ ಮಾನಸಿಕವಾಗಿ ನೊಂದ ಪುತ್ರ ಮಲಗಲೂ ಆಗದೆ, ಇರಲೂ ಆಗದೆ ತೊಳಲಾಡಿದ್ದಾನೆ ಎಂದು ವಿಚಾರಣೆ ವೇಳೆ ಶಾರುಖ್ ಖಾನ್ ಅಳಲು ತೋಡಿಕೊಂಡಿದ್ದಾರೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

ಅಧಿಕಾರಿಗಳು ಆರ್ಯನ್ ಖಾನ್‌ನನ್ನು ಅಪರಾಧಿಯಂತೆ ನೋಡಿಕೊಂಡರು. ಹಲವು ಪ್ರಕರಣಗಳ ಆರೋಪಿಯ ಬಳಿ ಕೇಳುವ ಪ್ರಶ್ನೆಗಳನ್ನು ಕೇಳಿ ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದೀರಿ. ಈ ಪ್ರಕರಣ ನನ್ನ ಪುತ್ರನ ಮೇಲೆ ಬೀರಿರುವ ವ್ಯತಿರಿಕ್ತ ಪರಿಣಾಮವೇನು ಅನ್ನೋದು ನಮಗೆ ಮಾತ್ರ ಗೊತ್ತು ಎಂದು ಶಾರುಖ್ ಖಾನ್ ಹೇಳಿದ್ದರು.

Shahrukh Khan ಶೂಟಿಂಗ್‌ನಲ್ಲಿ ಬ್ಯುಸಿ, IPL ನಲ್ಲಿ ಮಗ ಆರ್ಯನ್ ಖಾನ್!

ಶಾರುಖ್‌ ಪುತ್ರನ ಸಿಲುಕಿಸಲು ಯತ್ನ!
ಡಗ್ರ್ಸ್ ಪ್ರಕರಣಧಲ್ಲಿ ಬಾಲಿವುಡ್‌ ಶಾರುಖ್‌ ಖಾನ್‌ ಅವರ ಪುತ್ರನಿಗೆ ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ) ಕ್ಲೀನ್‌ಚಿಟ್‌ ನೀಡಿದ ಬೆನ್ನಲ್ಲೇ, ಆರ್ಯನ್‌ ಖಾನ್‌ ಅವರನ್ನು ಬಂಧಿಸಿದ್ದ ಎನ್‌ಸಿಬಿಯ ಅಂದಿನ ಅಧಿಕಾರಿ ಸಮೀರ್‌ ವಾಂಖೇಡೆಗೆ ಸಂಕಷ್ಟಎದುರಾಗಿತ್ತು. ಅತ್ಯಂತ ಕಳಪೆ ರೀತಿಯಲ್ಲಿ ತನಿಖೆ ನಡೆಸಿರುವ ವಾಂಖೆಡೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಣಕಾಸು ಸಚಿವಾಲಯಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ನಡುವೆ, ನಕಲಿ ಜಾತಿ ಪ್ರಮಾಣಪತ್ರ ನೀಡಿರುವ ಆರೋಪವೂ ವಾಂಖೇಡೆ ಮೇಲಿದೆ. ಇದರ ವಿರುದ್ಧ ಕೂಡ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಂಖೆಡೆ ಅವರು ಭಾರತೀಯ ಕಂದಾಯ ಸೇವೆ ಅಧಿಕಾರಿಯಾಗಿದ್ದಾರೆ. ಅವರಿಗೆ ಹಣಕಾಸು ಸಚಿವಾಲಯವೇ ನೋಡಲ್‌ ಪ್ರಾಧಿಕಾರವಾಗಿದ್ದು, ವಾಂಖೆಡೆ ವಿರುದ್ಧ ವಿತ್ತ ಸಚಿವಾಲಯವೇ ಕ್ರಮ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ವಿತ್ತ ಸಚಿವಾಲಯಕ್ಕೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚಿಸಿದೆ.

ಕ್ಷಮಿಸಿ, ಕ್ಲೀನ್‌ಚಿಟ್‌ ಬಗ್ಗೆ ಪ್ರತಿಕ್ರಿಯಿಸಲ್ಲ
ಆದರೆ, ಡ್ರಗ್ಸ್‌ ಪ್ರಕರಣದಲ್ಲಿ ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ಗೆ ಕ್ಲೀನ್‌ಚಿಟ್‌ ಸಿಕ್ಕ ಕುರಿತು ಪ್ರತಿಕ್ರಿಯೆಗೆ ಎನ್‌ಸಿಬಿ ಮಾಜಿ ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ನಿರಾಕರಿಸಿದ್ದಾರೆ. ಕ್ಷಮಿಸಿ, ನಾನು ಪ್ರತಿಕ್ರಿಯಿಸಲಾರೆ. ನಾನು ಎನ್‌ಸಿಬಿಯಲ್ಲಿಲ್ಲ. ಎನ್‌ಸಿಬಿ ಅಧಿಕಾರಿಗಳ ಜತೆ ಮಾತನಾಡಿ ಎಂದು ಟೀವಿ ವಾಹಿನಿಯೊಂದಕ್ಕೆ ಅವರು ತಿಳಿಸಿದ್ದರು.