ಜಾಮಿಯಾ ಪ್ರತಿಭಟನೆ: ಬಾಲಿವುಡ್ ಮಂದಿ ಪ್ರತಿಕ್ರಿಯೆ ಇದು
ಹಿಂಸಾರೂಪಕ್ಕೆ ತಿರುಗಿದ ಜಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆ | ರಣಾಂಗಣವಾಗಿದೆ ಜಾಮಿಯಾ ಆವರಣ | ದೇಶಾದ್ಯಂತ ಚರ್ಚೆಯ ಕಾವು ಹೆಚ್ಚಿಸಿದೆ ಜಾಮಿಯಾ ಪ್ರತಿಭಟನೆ
ನವದೆಹಲಿ (ಡಿ. 17): ಪೌರತ್ವ ನಿಷೇಧ ಕಾಯ್ದೆ ( CAA) ವಿರೋಧಿಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಾಮಿಯಾ ಆವರಣ ಅಕ್ಷರಶಃ ರಣಾಂಗಣವಾಗಿದೆ. ಸಾಕಷ್ಟು ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಈ ಪ್ರತಿಭಟನೆ ದೇಶಾದ್ಯಂತ ಪರ- ವಿರೋಧ ಚರ್ಚೆ ಹುಟ್ಟುಹಾಕಿದೆ.
ಪ್ರತಿಭಟನೆ ಕಾವಿನಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಿದ ಜಾಮಿಯಾ ವಿದ್ಯಾರ್ಥಿಗಳು!
ಜಾಮಿಯಾ ಪ್ರತಿಭಟನೆ ಬಗ್ಗೆ ಬಾಲಿವುಡ್ ಸೆಲಬ್ರಿಟಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಕ್ಷಯ್ ಕುಮಾರ್, ಆಯುಷ್ಮಾನ್ ಖುರಾನಾ, ಅಜಯ್ ದೇವಗನ್, ಅನುರಾಗ್ ಕಶ್ಯಪ್, ರಿತೇಶ್ ದೇಶ್ಮುಖ್, ಅನುಭವ್ ಸಿಂಹ ಸೇರಿದಂತೆ ಸಾಕಷ್ಟು ಮಂದಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ನಟ ಅಕ್ಷಯ್ ಕುಮಾರ್ ಜಾಮಿಯಾ ವಿದ್ಯಾರ್ಥಿಗಳ ಟ್ವೀಟನ್ನು ಲೈಕ್ ಮಾಡಿ ಆಕ್ರೋಶಕ್ಕೆ ಗುರಿಯಾಗಿದ್ದರು. ಕೂಡಲೇ 'ನಾನು ಆಕಸ್ಮಿಕವಾಗಿ 'ಲೈಕ್' ಒತ್ತಿಬಿಟ್ಟೆ. ಗೊತ್ತಾದಕೂಡಲೇ ಅನ್ಲೈಕ್ ಮಾಡಿದ್ದೇನೆ. ಇಂತಹ ಕಾಯ್ದೆಗೆ ನಾನು ಬೆಂಬಲ ಸೂಚಿಸುವುದಿಲ್ಲ' ಎಂದು ಬರೆದುಕೊಂಡರು.
ನಟ ಆಯುಷ್ನಾನ್ ಖುರಾನ್ ವಿದ್ಯಾರ್ಥಿಗಳಲ್ಲಿ ಶಾಂತಿ ಕಾಪಾಡುವಂತೆ ಕೇಳಿಕೊಂಡಿದ್ದಾರೆ. ಈ ಟ್ವೀಟ್ಗೆ ನೆಟ್ಟಿಗರು ಗರಂ ಆಗಿದ್ದಾರೆ.