ಟೊಮ್ಯಾಟೋ ಬಗ್ಗೆ ಮಾತಾಡಿದ ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿ ಹಿಗ್ಗಾಮುಗ್ಗ ಟ್ರೋಲ್ ಆಗಿದ್ದಾರೆ. ಆಕ್ರೋಶ ಹೆಚ್ಚಾಗುತ್ತಿದ್ದಂತೆ ನಟ ಸುನೀಲ್ ಶೆಟ್ಟಿ ಕೊನೆಗೂ ಬಹಿರಂಗ ಕ್ಷಮೆ ಕೇಳಿದ್ದಾರೆ. 

ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿ ಟೊಮ್ಯಾಟೋ ಬಗ್ಗೆ ಮಾತನಾಡಿ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದಾರೆ. ಟೊಮ್ಯಾಟೋ ದರ ಗಗನಕ್ಕೇರಿದೆ. ಈ ನಡುವೆ ಸುನಿಲ್ ಶೆಟ್ಟಿ ಹೇಳಿಕೆ ವಿವಾದ ಹುಟ್ಟುಹಾಕಿದೆ. ಅವರ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಿ ರಾಜಕೀಯಗೊಳಿಸಲಾಗಿದೆ. ಇದೀಗ ಸತತವಾಗಿ ನೆಗೆಟಿವ್ ಕಾಮೆಂಟ್ ಗಳು ಬರುತ್ತಿದ್ದು ಸುನೀಲ್ ಕಂಗಾಲಾಗಿದ್ದಾರೆ. ಟ್ರೋಲ್‌ಗಳು ಹೆಚ್ಚಾಗುತ್ತಿದ್ದಂತೆ ಸುನಿಲ್ ಶೆಟ್ಟಿ ಕ್ಷಮೆ ಕೇಳಿದ್ದಾರೆ. ವಾರದ ಹಿಂದೆ ನೀಡಿದ್ದ ಹೇಳಿಕೆ ಈಗ ವೈರಲ್ ಆಗಿದೆ. 

Add Asianetnews Kannada as a Preferred SourcegooglePreferred

ಸುನೀಲ್ ಶೆಟ್ಟಿ ಹೇಳಿದ್ದೇನು? 

ಇತ್ತೀಚೆಗೆ ಟೊಮ್ಯಾಟೋ ಬೆಲೆ ಗಗನಕ್ಕೇರಿದೆ. ಜನಸಾಮಾನ್ಯರು ಖರೀದಿಸಲು ಸಾಧ್ಯವಾಗುತ್ತಿಲ್ಲ. ಕೇವಲ ಜನಸಾಮಾನ್ಯರು ಮಾತ್ರವಲ್ಲ ಸೆಲೆಬ್ರಿಟಿಗಳು ಈ ಬಗ್ಗೆ ಮಾತನಾಡುತ್ತಿದ್ದಾರೆ. ನಟ ಸುನೀಲ್ ಶೆಟ್ಟಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ,‘ನನ್ನ ಪತ್ನಿ ಯಾವಾಗಲೂ ತಾಜಾ ತರಕಾರಿಗಳನ್ನು ಖರೀದಿಸಲು ಆದ್ಯತೆ ನೀಡುತ್ತಾಳೆ. ಇತ್ತೀಚಿನ ದಿನಗಳಲ್ಲಿ ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಿದ್ದು, ಇದು ನಮ್ಮ ಮೇಲೂ ಪರಿಣಾಮ ಬೀರಿದೆ. ನಾನು ಈಗ ಕಡಿಮೆ ಟೊಮ್ಯಾಟೋಗಳನ್ನು ತಿನ್ನುತ್ತಿದ್ದೇನೆ. ಸೂಪರ್‌ಸ್ಟಾರ್ ಆಗಿರುವುದರಿಂದ ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಜನರು ಭಾವಿಸಿರಬಹುದು. ಆದರೆ ಇದು ನಿಜವಲ್ಲ. ನಾವು ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ’ ಎಂದು ಹೇಳಿದ್ದರು. 

ಮಾತಾಡಲು ಭಯವಾಗ್ತಿದೆ, ಕುಟುಂಬವನ್ನು ನಿಂದಿಸುತ್ತಾರೆ, ಮಗಳನ್ನು..: ಆತಂಕ ಹೊರ ಹಾಕಿದ ಸುನಿಲ್ ಶೆಟ್ಟಿ

ಸುನೀಲ್ ಶೆಟ್ಟಿ ಟ್ರೋಲ್ 

ಸುನೀಲ್ ಶೆಟ್ಟಿ ಶೆಟ್ಟಿ ಕೇವಲ ತಿನ್ನುವುದರ ಬಗ್ಗೆ ಮಾತ್ರ ಯೋಚಿಸುತ್ತಿದ್ದಾರೆ. ಹಣ ಖರ್ಚಾಗುತ್ತದೆ ಎಂದು ಟೊಮ್ಯಾಟೋ ತಿನ್ನುದು ಕಡಿಮೆ ಮಾಡಿರುವ ಬಗ್ಗೆ ಮಾತನಾಡುತ್ತಾರೆ. ಆದರೆ ಇದರಿಂದ ರೈತರಿಗೆ ಆಗುತ್ತಿರುವ ಲಾಭ ಕಣ್ಣಿಗೆ ಕಾಣುತ್ತಿಲ್ಲ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. 'ಟೊಮ್ಯಾಟೋ ಬೆಲೆ ಜಾಸ್ತಿ ಆಗಿರುವುದರಿಂದ ರೈತರಿಗೆ ಸಹಾಯ ಆಗಿದೆ. ಇದು ಸುನೀಲ್ ಶೆಟ್ಟಿ ಅವರ ಗಮನದಲ್ಲಿಲ್ಲ. ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ’ ಎಂದೆಲ್ಲ ಟೀಕೆ ಮಾಡಲಾಗಿತ್ತು.

ಅಳಿಯ ಕೆ ಎಲ್ ರಾಹುಲ್‌ಗೆ ವಾರ್ನಿಂಗ್ ಕೊಟ್ಟ ಮಾವ ಸುನಿಲ್ ಶೆಟ್ಟಿ..!

ಕ್ಷಮೆ ಕೇಳಿದ ಸುನೀಲ್ ಶೆಟ್ಟಿ 

ಸಿಕ್ಕಾಪಟ್ಟೆ ಟ್ರೋಲ್ ಮತ್ತು ಆಕ್ರೋಶದ ಬಳಿಕ ಸುನೀಲ್ ಶೆಟ್ಟಿ ಕ್ಷಮೆ ಕೇಳಿದ್ದಾರೆ.‘ನಾನು ನಮ್ಮ ರೈತರನ್ನು ಪ್ರಾಮಾಣಿಕವಾಗಿ ಬೆಂಬಲಿಸುತ್ತೇನೆ. ಅವರ ಬಗ್ಗೆ ನನಗೆ ಕೆಟ್ಟ ಆಲೋಚನೆ ಬರುವುದಿಲ್ಲ. ಅವರ ಬೆಂಬಲದೊಂದಿಗೆ ನಾನು ಕೆಲಸ ಮಾಡಿದ್ದೇನೆ. ರೈತರು ನನ್ನ ಜೀವನದ ಪ್ರಮುಖ ಭಾಗ. ಹೋಟೆಲ್ ಉದ್ಯಮಿಯಾಗಿ ಅವರೊಂದಿಗೆ ನನ್ನ ಸಂಪರ್ಕ ಯಾವಾಗಲೂ ಇರುತ್ತದೆ. ನನ್ನ ಯಾವುದೇ ಹೇಳಿಕೆಗಳು ಅವರಿಗೆ ನೋವುಂಟು ಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನನ್ನ ಕನಸಿನಲ್ಲಿಯೂ ಅವರ ವಿರುದ್ಧ ಮಾತನಾಡಲು ನಾನು ಯೋಚಿಸುವುದಿಲ್ಲ. ದಯವಿಟ್ಟು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಈ ವಿಷಯದಲ್ಲಿ ನಾನು ಹೆಚ್ಚಿಗೆ ಏನನ್ನೂ ಹೇಳಲಾರೆ’ ಎಂದು ಹೇಳಿದ್ದಾರೆ.