ಮಹಿಳಾ ನಟಿಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಮಲೆಯಾಳಂ ಸಿನಿಮಾ ಅಕಾಡೆಮಿಗೆ ರಾಜೀನಾಮೆ ನೀಡಿರುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಲೆಯಾಳಂ ಸಿನಿಮಾ ರಂಗದ ಖ್ಯಾತ ನಿರ್ದೇಶಕ ರಂಜಿತ್‌ಕುಮಾರ್‌ ಅವರ ವಿರುದ್ಧ ಈಗ ಯುವ ನಟರೊಬ್ಬರು ಆರೋಪ ಮಾಡಿದ್ದು ಪ್ರಕರಣವನ್ನು ಕೂಡ ದಾಖಲಿಸಿದ್ದಾರೆ

ತಿರುವನಂತಪುರ: ಮಲೆಯಾಳಂ ಸಿನಿಮಾರಂಗದಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಮಾ ಕಮಿಟಿ ವರದಿ ನೀಡಿದ ನಂತರ ಒಬ್ಬರಾದ ಮೇಲೊಬ್ಬರು ತಮಗಾದ ಕರಾಳ ಅನುಭವವನ್ನು ಬಿಚ್ಚಿಡುವ ಧೈರ್ಯ ತೋರುತ್ತಿದ್ದಾರೆ. ಈಗಾಗಲೇ ಮಹಿಳಾ ನಟಿಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಮಲೆಯಾಳಂ ಸಿನಿಮಾ ಅಕಾಡೆಮಿಗೆ ರಾಜೀನಾಮೆ ನೀಡಿರುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಲೆಯಾಳಂ ಸಿನಿಮಾ ರಂಗದ ಖ್ಯಾತ ನಿರ್ದೇಶಕ ರಂಜಿತ್‌ಕುಮಾರ್‌ ಅವರ ವಿರುದ್ಧ ಈಗ ಯುವ ನಟರೊಬ್ಬರು ಆರೋಪ ಮಾಡಿದ್ದು ಪ್ರಕರಣವನ್ನು ಕೂಡ ದಾಖಲಿಸಿದ್ದಾರೆ. ಹೀಗಾಗಿ ಮಲೆಯಾಳಂ ಸಿನಿಮಾದಲ್ಲಿ ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಉದಯೋನ್ಮುಖ ಪುರುಷ ಕಲಾವಿದರೂ ಕಿರುಕುಳದಿಂದ ಹೊರತಾಗಿಲ್ಲ ಎಂಬುದು ಮುನ್ನೆಲೆಗೆ ಬರುತ್ತಿದೆ. 

ಯುವ ಕಲಾವಿದನ ಆರೋಪವೇನು? 

ಕೇರಳದ ಕೋಜಿಕೋಡ್ ಮೂಲದ ಈ ಯುವ ಕಲಾವಿದ ನಿರ್ದೇಶಕ ರಂಜಿತ್ ಕುಮಾರ್ ವಿರುದ್ಧ ಈಗ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ತಮಗಾದ ಕೆಟ್ಟ ಅನುಭವವನ್ನು ಬಿಚ್ಚಿಟ್ಟಿದ್ದಾರೆ. 2012ರಲ್ಲಿ ಬೆಂಗಳೂರಿನ ಫೈವ್ ಸ್ಟಾರ್‌ ಹೊಟೇಲ್‌ಗೆ ತನ್ನನ್ನು ಕರೆಸಿಕೊಂಡ ನಿರ್ದೇಶಕ ರಂಜಿತ್‌ ಕುಮಾರ್ ಸಂಪೂರ್ಣ ಬೆತ್ತಲಾಗುವಂತೆ ನನ್ನನ್ನು ಒತ್ತಾಯಿಸಿದರು ಎಂದು ಹೇಳಿದ್ದು, ಘಟನೆ ನಡೆದ 12 ವರ್ಷಗಳ ನಂತರ ರಂಜಿತ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಅವರು ಎಲ್ಲೂ ತನ್ನ ಹೆಸರು ಗೊತ್ತಾಗಬಾರದು ಎಂದು ಹೇಳಿರುವುದರಿಂದ ಅವರ ಹೆಸರನ್ನು ಪೊಲೀಸರು ಗೌಪ್ಯವಾಗಿ ಇಟ್ಟಿದ್ದಾರೆ. 

ಮಲಯಾಳಂ ಚಿತ್ರೋದ್ಯಮ ಸೆಕ್ಸ್‌ ಹಗರಣಕ್ಕೆ 2 ತಲೆದಂಡ!

ಕೇರಳದ ಮನೋರಮಾ ಮಾಧ್ಯಮದ ವರದಿಯ ಪ್ರಕಾರ, ದೂರುದಾರ ಕೇರಳದ ಕೋಜಿಕೋಡ್ ನಿವಾಸಿಯಾಗಿದ್ದಾನೆ. ಆತ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ನಿರ್ದೇಶಕ ರಂಜಿತ್ ಕುಮಾರ್ 2012ರಲ್ಲಿ ಬೆಂಗಳೂರಿನ ಫೈವ್ ಸ್ಟಾರ್‌ ಹೊಟೇಲೊಂದರಲ್ಲಿ ಆತನ ಮೇಲೆ ಲೈಗಿಂಕ ದೌರ್ಜನ್ಯವೆಸಗಿದ್ದಾನೆ. ಮಲೆಯಾಳಂ ಸೂಪರ್‌ ಸ್ಟಾರ್ ಮಮ್ಮುಟ್ಟಿ ಅಭಿನಯದ 'ಭವುತ್ತಿಯುಡೆ ನಮಥಿಲ್' ಸಿನಿಮಾದ ಶೂಟಿಂಗ್ ವೇಳೆ ರಂಜಿತ್ ನನ್ನನ್ನು ನೋಡಿದರು. ಅಲ್ಲದೇ ಸಣ್ಣ ಪೇಪರ್ ಪೀಸ್‌ನಲ್ಲಿ ಫೋನ್ ನಂಬರ್ ಬರೆದು ನನಗೆ ನೀಡಿದರು. ಇದಾದ ನಂತರ ಅವರನ್ನು ನಾನು ಬೆಂಗಳೂರಿನ ಫೈವ್ ಸ್ಟಾರ್ ಹೊಟೇಲೊಂದರಲ್ಲಿ ಭೇಟಿಯಾದೆ. ಅಲ್ಲಿ ಆತ ನನ್ನನ್ನು ಬೆತ್ತಲಾಗುವಂತೆ ಹೇಳಿದ. ನೀನು ಹೇಗೆ ಕಾಣುತ್ತಿಯಾ ಎಂದು ನಾನು ನೋಡಬೇಕು ಎಂದು ಹೇಳಿದ. ಅಲ್ಲದೇ ನಿನ್ನ ಕಣ್ಣುಗಳು ಬಹಳ ಸುಂದರವಾಗಿದೆ ಎಂದು ಹೇಳಿದ ಆತ ಐಬ್ರೋ ಮಾಡಿಸುವಂತೆ ಹೇಳಿದ. ಆತ ಇನ್ನು ಏನೇನೆಲ್ಲಾ ಮಾಡಿದ ಎಂಬುದನ್ನು ನಾನು ವಿವರಿಸಲು ಸಾಧ್ಯವಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವಕನೋರ್ವ ದೂರಿದ್ದಾನೆ. 

ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಲೆಯಾಳಂ ಖ್ಯಾತ ನಿರ್ದೇಶಕ ರಂಜಿತ್‌ ಲೈಂಗಿಕ ದೌರ್ಜನ್ಯ; ಬಂಗಾಳಿ ನಟಿ ಗಂಭೀರ ಆರೋಪ

ಸಿನಿಮಾದಲ್ಲಿ ನಟನೆ ಮಾಡುವ ಆಸೆನನಗಿತ್ತು. ಆದರೆ ಈ ಘಟನೆ ನನಗೆ ಭಯ ಹಾಗೂ ತೀವ್ರ ಆಘಾತ ಉಂಟು ಮಾಡಿತ್ತು. ಅಲ್ಲದೇ ನಂತರದಲ್ಲಿ ರಂಜಿತ್‌ನಿಂದ ನಾನು ತಪ್ಪಿಸಿಕೊಂಡೆ ಎಂದು ಹೆಸರು ಹೇಳಿಕೊಳ್ಳಲು ಇಚ್ಚಿಸದ ಯುವಕ ಹೇಳಿಕೊಂಡಿದ್ದಾನೆ. ಹೇಮಾ ವರದಿ ಮಲೆಯಾಳಂ ಸಿನಿಮಾ ರಂಗದ ಕರಾಳ ಮುಖವನ್ನು ಬಿಚ್ಚಿಡುತ್ತಿದ್ದಂತೆ ಮಲೆಯಾಳಂ ಸಿನಿಮಾ ರಂಗದಲ್ಲಿ ತಲೆದಂಡವಾದ ಮೊದಲ ವ್ಯಕ್ತಿ ನಿರ್ದೇಶಕ ರಂಜಿತ್ ಆಗಿದ್ದು, ಆತನ ವಿರುದ್ಧ ಈ ಹಿಂದೆ ಬೆಂಗಾಲಿ ನಟಿ ಶ್ರೀಲೇಖಾ ಮಿತ್ರಾ ಕೂಡ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಆತ ಅಸಭ್ಯವಾಗಿ ತಮ್ಮನ್ನು ಟಚ್ ಮಾಡುತ್ತಿದ್ದ ಎಂದು ಅವರು ದೂರಿದ್ದಾರೆ. ನಟಿಯ ಆರೋಪ ಕೇಳಿ ಬರುತ್ತಿದ್ದಂತೆ ಕೇರಳ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ಆಗಸ್ಟ್ 25ರಂದು ರಂಜಿತ್ ಕುಮಾರ್ ರಾಜೀನಾಮೆ ನೀಡಿದ್ದಾರೆ. 

ತೃತೀಯಲಿಂಗಿಗಳು ಕೂಡ ಹೆಣ್ಮಕ್ಕಳಂತೆ ಸುಖಪಡ್ತಾರಾ: ಟ್ರಾನ್ಸ್‌ಜಂಡರ್‌ ನಟಿ ಬಳಿ ಪ್ರಶ್ನಿಸಿದ್ದ ಮಲೆಯಾಳಂ ನಟ

ಇದರ ಜೊತೆಗೆ ಹಲವು ಮಲೆಯಾಳಂ ನಟಿಯರು ಸಿನಿಮಾ ನಿರ್ದೇಶಕರ ವಿರುದ್ಧ ಒಬ್ಬೊಬ್ಬರಾಗಿ ದೂರು ನೀಡಲು ಶುರು ಮಾಡಿದ್ದಾರೆ. ಇದಾದ ನಂತರ ಮಲೆಯಾಳಂ ಸಿನಿಮಾ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಟ ಮೋಹನ್‌ಲಾಲ್ ರಾಜೀನಾಮೆ ನೀಡಿದ್ದಾರೆ.