"ನನ್ನ ಧ್ವನಿ ಇರುವವರೆಗೂ ಮತ್ತು ನನ್ನ ರಿಯಾಜ್ (ಅಭ್ಯಾಸ) ನಡೆಯುವವರೆಗೂ ನಾನು ವೇದಿಕೆಯ ಮೇಲೆ ನೇರವಾಗಿಯೇ ಹಾಡಲು ಇಷ್ಟಪಡುತ್ತೇನೆ. ಪ್ರೇಕ್ಷಕರು ನಮಗಾಗಿ ಬರುತ್ತಾರೆ, ಅವರಿಗೆ ಮೋಸ ಮಾಡುವುದು ನನಗೆ ಇಷ್ಟವಿಲ್ಲ," ಎಂದು ಶ್ರೇಯಾ ಘೋಷಾಲ್ ಹೇಳಿದ್ದಾರೆ. ಮುಂದೇನು?

ಅರಿಜಿತ್ ಸಿಂಗ್ ಬೆನ್ನಲ್ಲೇ ಶ್ರೇಯಾ ಘೋಷಾಲ್ ಸಂಚಲನದ ಹೇಳಿಕೆ!

ಮುಂಬೈ: ಬಾಲಿವುಡ್ ಸಂಗೀತ ಲೋಕದಲ್ಲಿ ಈಗ ವಿರಾಮದ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ಇತ್ತೀಚೆಗಷ್ಟೇ ಸ್ಟಾರ್ ಗಾಯಕ ಅರಿಜಿತ್ ಸಿಂಗ್ (Arijit Singh) ಚಿತ್ರರಂಗದ ಹಿನ್ನೆಲೆ ಗಾಯನದಿಂದ ತುಸು ಕಾಲ ವಿರಾಮ ತೆಗೆದುಕೊಳ್ಳುವ ನಿರ್ಧಾರ ಪ್ರಕಟಿಸಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ಈ ಬೆನ್ನಲ್ಲೇ ಭಾರತದ ಗಾನ ಕೋಗಿಲೆ ಶ್ರೇಯಾ ಘೋಷಾಲ್ (Shreya Ghoshal) ಕೂಡ ತಮ್ಮ ಮನದ ಮಾತನ್ನು ಬಿಚ್ಚಿಟ್ಟಿದ್ದು, ಸಂಗೀತ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ.

ನನಗೂ ಬ್ರೇಕ್ ಬೇಕು ಅನಿಸುತ್ತೆ!

ಇತ್ತೀಚೆಗೆ 'ಎಬಿಪಿ ನ್ಯೂಸ್'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶ್ರೇಯಾ ಘೋಷಾಲ್, ಅರಿಜಿತ್ ಸಿಂಗ್ ಅವರ ನಿರ್ಧಾರವನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ. "ನನಗೂ ಕೂಡ ಕೆಲವೊಮ್ಮೆ ಕೆಲಸದಿಂದ ಬ್ರೇಕ್ ತೆಗೆದುಕೊಳ್ಳಬೇಕು ಎಂದು ಅನಿಸುತ್ತದೆ. ಅರಿಜಿತ್ ಸಿಂಗ್ ಅವರು ಬಹಳ ಧೈರ್ಯದಿಂದ ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಅವರ ಈ ನಡೆಯನ್ನು ನಾನು ಗೌರವಿಸುತ್ತೇನೆ," ಎಂದು ಶ್ರೇಯಾ ಹೇಳಿದ್ದಾರೆ.

ಅರಿಜಿತ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, "ಅವರು ಹೃದಯದಿಂದ ಸಂಗೀತಗಾರ. ಸಂಗೀತದಿಂದ ತನಗೆ ಏನು ಸಿಗುತ್ತದೆ ಅಥವಾ ನಾನು ಇದನ್ನು ಯಾಕೆ ಮಾಡುತ್ತಿದ್ದೇನೆ ಎಂದು ಅವರು ಯೋಚಿಸುವುದಿಲ್ಲ. ಅವರಿಗೆ ಖುಷಿ ಕೊಡುವ ಕೆಲಸವನ್ನು ಮಾತ್ರ ಅವರು ಮಾಡುತ್ತಾರೆ. ಅವರಿಗಿಂತ ಸಂಗೀತವೇ ದೊಡ್ಡದು, ಹಾಗಾಗಿಯೇ ಜನರು ಅವರನ್ನು ಅಷ್ಟೊಂದು ಪ್ರೀತಿಸುತ್ತಾರೆ," ಎಂದು ಅಭಿಮಾನದ ಮಾತುಗಳನ್ನಾಡಿದ್ದಾರೆ.

ಲಿಪ್-ಸಿಂಕ್ ಮಾಡೋದಕ್ಕೆ ನೋ ಎಂದ ಶ್ರೇಯಾ!

ಇದೇ ವೇಳೆ ಲೈವ್ ಪರ್ಫಾರ್ಮೆನ್ಸ್ (ನೇರ ಪ್ರದರ್ಶನ) ಬಗ್ಗೆ ಮಾತನಾಡಿದ ಶ್ರೇಯಾ ಘೋಷಾಲ್ ಕಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ವೇದಿಕೆಯ ಮೇಲೆ ಹಾಡುವಾಗ ಲಿಪ್-ಸಿಂಕ್ (ಹಾಡಿಗೆ ಬಾಯಿ ಅಲ್ಲಾಡಿಸುವುದು) ಮಾಡುವುದನ್ನು ಅವರು ಕಟುವಾಗಿ ವಿರೋಧಿಸಿದ್ದಾರೆ. "ನನಗೆ ಲಿಪ್-ಸಿಂಕ್ ಮಾಡುವುದು ಎಂದರೆ ತುಂಬಾ ಮುಜುಗರವಾಗುತ್ತದೆ. ಅಂತಹ ಪರಿಸ್ಥಿತಿ ಬಂದರೆ ಅಥವಾ ನಾನು ಲಿಪ್-ಸಿಂಕ್ ಮಾಡಬೇಕಾದ ದಿನ ಬಂದರೆ, ಅಂದೇ ನಾನು ಹಾಡುವುದನ್ನು ನಿಲ್ಲಿಸುತ್ತೇನೆ," ಎಂದು ಶ್ರೇಯಾ ಘೋಷಾಲ್ ಗುಡುಗಿದ್ದಾರೆ.

"ನನ್ನ ಧ್ವನಿ ಇರುವವರೆಗೂ ಮತ್ತು ನನ್ನ ರಿಯಾಜ್ (ಅಭ್ಯಾಸ) ನಡೆಯುವವರೆಗೂ ನಾನು ವೇದಿಕೆಯ ಮೇಲೆ ನೇರವಾಗಿಯೇ ಹಾಡಲು ಇಷ್ಟಪಡುತ್ತೇನೆ. ಪ್ರೇಕ್ಷಕರು ನಮಗಾಗಿ ಬರುತ್ತಾರೆ, ಅವರಿಗೆ ಮೋಸ ಮಾಡುವುದು ನನಗೆ ಇಷ್ಟವಿಲ್ಲ," ಎಂದು ತಮ್ಮ ವೃತ್ತಿಪರತೆಯನ್ನು ಮೆರೆದಿದ್ದಾರೆ.

ಕಲಾವಿದರ ಜವಾಬ್ದಾರಿ ದೊಡ್ಡದು

ಲೈವ್ ಶೋಗಳ ವೇಳೆ ಕಲಾವಿದರು ಎದುರಿಸುವ ಒತ್ತಡದ ಬಗ್ಗೆಯೂ ಶ್ರೇಯಾ ಮಾತನಾಡಿದ್ದಾರೆ. "ಮನರಂಜನಾ ಕ್ಷೇತ್ರದಲ್ಲಿರುವ ನಮಗೆ ವೈಯಕ್ತಿಕವಾಗಿ ಎಷ್ಟೇ ನೋವಿದ್ದರೂ, ಅದು ವೇದಿಕೆಯ ಮೇಲೆ ಕಾಣಿಸಿಕೊಳ್ಳಬಾರದು. ಜನರು ನಮ್ಮ ಬಳಿಗೆ ಸಂಗೀತಕ್ಕಾಗಿ ಮತ್ತು ಸ್ಫೂರ್ತಿಗಾಗಿ ಬರುತ್ತಾರೆ. ಸಂಗೀತವು ಅವರ ನೋವನ್ನು ಮರೆಸಿ, ಹೊಸ ಚೈತನ್ಯ ನೀಡುತ್ತದೆ. ಪ್ರೇಕ್ಷಕರಿಂದ ಸಿಗುವ ಚಪ್ಪಾಳೆ ಮತ್ತು ಪ್ರೀತಿಯೇ ನಮಗೆ ದೊಡ್ಡ ಸ್ಫೂರ್ತಿ. ನಮ್ಮ ಮನಸ್ಸು ಖುಷಿಯಾಗಿದ್ದಾಗ ಶಕ್ತಿ ತಾನಾಗಿಯೇ ಬರುತ್ತದೆ," ಎಂದು ಅವರು ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ, ಅರಿಜಿತ್ ಸಿಂಗ್ ಹಾದಿಯಲ್ಲೇ ಶ್ರೇಯಾ ಘೋಷಾಲ್ ಕೂಡ ವಿರಾಮದ ಸುಳಿವು ನೀಡಿರುವುದು ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ತುಸು ಆತಂಕ ಮೂಡಿಸಿದ್ದರೂ, ಸಂಗೀತದ ಬಗ್ಗೆ ಅವರಿಗಿರುವ ಬದ್ಧತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.