ಇತ್ತೀಚಿಗೆ ದುಬೈನಲ್ಲಿ ನಡೆದ ಸಂದರ್ಶನವೊಂದರಲ್ಲಿ ಸುದೀಪ್ ಅವರಿಗೆ ಕೆಜಿಎಫ್-2 ಸಿನಿಮಾ ಅಥವಾ ಆರ್ ಆರ್ ಆರ್ ಚಿತ್ರನಾ ಎಂದು ಕೇಳಿದ ಪ್ರಶ್ನೆಗೆ ಕಿಚ್ಚನ ಉತ್ತರ ಅಭಿಮಾನಿಗಳ ಮನಗೆದ್ದಿದೆ. 

ಅಭಿನಯ ಚಕ್ರವರ್ತಿ ಸುದೀಪ್ (Sudeep) ಇತ್ತೀಚಿಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ರಾಷ್ಟ್ರಭಾಷೆ ವಿಚಾರವಾಗಿ ಕಿಚ್ಚ ದೇಶದಾದ್ಯಂತ ಸದ್ದು ಮಾಡಿದ್ದರು. ಇದೇ ಸಮಯದಲ್ಲಿ ಕಿಚ್ಚ ವಿಶ್ವದಲ್ಲಿ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕೆಜಿಎಫ್-2 (KGF 2) ಸಿನಿಮಾದ ಬಗ್ಗೆ ಯಾವುದೇ ಟ್ವೀಟ್ ಅಥವಾ ಪ್ರತಿಕ್ರಿಯೆ ನೀಡಿಲ್ಲ ಎನ್ನುವ ಆರೋಪ ಕೇಳಿಬಂದಿತ್ತು. ಅಲ್ಲದೇ ಕೆಜಿಎಫ್ ಬಗ್ಗೆ ಸುದೀಪ್ ನೀಡಿದ್ದ ಹಳೆಯ ವಿಡಿಯೋ ಸಖತ್ ವೈರಲ್ ಆಗಿತ್ತು. ಆ ವಿಡಿಯೋದಿಂದ ಯಶ್ ಮತ್ತು ಕಿಚ್ಚನ ಅಭಿಮಾನಿಗಳ ನಡುವೆ ವೈಮನಸ್ಸು ಮೂಡಿತ್ತು.

Add Asianetnews Kannada as a Preferred SourcegooglePreferred

ಸುದೀಪ್ ಕನ್ನಡದ ಸಿನಿಮಾಗಳ ಬಗ್ಗೆ ಮತ್ತು ಹೊಸಬರಿಗೆ ಸದಾ ಸಾಥ್ ನೀಡುತ್ತಾ ಬಂದಿದ್ದಾರೆ. ಹೊಸಬರ ಸಿನಿಮಾಗಳ ಬಗ್ಗೆ ಸುದೀಪ್ ಟ್ವೀಟ್ ಮಾಡುವ ಮೂಲಕ ಶುಭಹಾರೈಸುತ್ತಾರೆ, ಸಿನಿಮಾ ನೋಡಿ ವಿಮರ್ಶೆ ಮಾಡುತ್ತಾರೆ. ಆದರೆ ಕೆಜಿಎಫ್-2 ವಿಚಾರದಲ್ಲಿ ಹಾಗೆ ಮಾಡಿಲ್ಲ ಎನ್ನುವುದು ಅನೇಕ ಆರೋಪವಾಗಿತ್ತು. ಕನ್ನಡದ ಬಗ್ಗೆ ಕನ್ನಡ ಸಿನಿಮಾರಂಗದ ಬಗ್ಗೆ ಅಪಾರ ಹೆಮ್ಮೆ ಇಟ್ಟುಕೊಂಡಿರುವ ಸುದೀಪ್ ಯಾವತ್ತೂ ಎಲ್ಲಿಯೂ ಅದಕ್ಕೆ ಧಕ್ಕೆ ಬರುವ ಹಾಗೆ ನಡೆದುಕೊಂಡಿಲ್ಲ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸುದೀಪ್ ಅವರಿಗೆ ಕೆಜಿಎಫ್-2 ಸಿನಿಮಾ ಅಥವಾ ಆರ್ ಆರ್ ಆರ್ ಚಿತ್ರನಾ ಎಂದು ಕೇಳಿದ ಪ್ರಶ್ನೆಗೆ ಕಿಚ್ಚನ ಉತ್ತರ ಅಭಿಮಾನಿಗಳ ಮನಗೆದ್ದಿದೆ.

'21 ಅವರ್ಸ್' ವೀಕ್ಷಿಸಿ ಕೈಯಾರೆ ದೋಸೆ ಮಾಡಿಕೊಟ್ಟ ಸುದೀಪ್; ಕಿಚ್ಚನ ಆತಿಥ್ಯಕ್ಕೆ ಧನಂಜಯ್ ಫಿದಾ

ಹೌದು, ಇತ್ತೀಚಿಗಷ್ಟೆ ಸುದೀಪ್ ದುಬೈ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಸುದೀಪ್ ಅವರಿಗೆ ಈ ಪ್ರಶ್ನೆ ಎದುರಾಗಿತ್ತು. ತನ್ನ 26 ವರ್ಷಗಳ ಸಿನಿಮಾ ಜರ್ನಿ ಬಗ್ಗೆ ಮಾತನಾಡಿದ ಕಿಚ್ಚ ಬಹುನಿರೀಕ್ಷೆಯ ವಿಕ್ರಾಂತ್ ರೋಣನ ಬಗ್ಗೆಯೂ ವಿವರಿಸಿದ್ದಾರೆ. ಇದೇ ಸಮಯದಲ್ಲಿ ನಿರೂಪಕ ರ್ಯಾಪಿಕ್ ಫೈರ್ ಪ್ರಶ್ನೆ ಕೇಳಿದ್ದಾರೆ. ಇದರಲ್ಲಿ ಕೆಜಿಎಫ್-2 ಸಿನಿಮಾ ಅಥವಾ ಆರ್ ಆರ್ ಆರ್ ಸಿನಿಮಾನಾ ಎಂದು ಕೇಳಿದ್ದಾರೆ. ಇದಕ್ಕೆ ಸುದೀಪ್, ಕೆಜಿಎಫ್-2 ಎಂದು ಹೇಳಿದ್ದಾರೆ. ದುಬೈನಲ್ಲಿ ಕನ್ನಡದ ಸಿನಿಮಾ ಬಗ್ಗೆ ಮಾತನಾಡಿ ಕೆಜಿಎಫ್-2 ಆಯ್ಕೆ ಮಾಡಿದ ಕಿಚ್ಚನಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಡಿಸುತಿದ್ದಾರೆ. ಕೆಜಿಎಫ್-2 ಬಗ್ಗೆ ಮಾತನಾಡಿಲ್ಲ ಎಂದು ಕಿಡಿಕಾರುತ್ತಿದ್ದವರಿಗೆ ಕಿಚ್ಚನ ಈ ಉತ್ತರ ಮೌನಕ್ಕೆ ಶರಣಾಗುವಂತೆ ಮಾಡಿದೆ.

Vikrant Rona ಸಿನಿಮಾದಿಂದ ಹೊರಬಿತ್ತು ಬಿಗ್ ಅಪ್‌ಡೇಟ್; ಕಿಚ್ಚನ ಸಿನಿಮಾಗೆ ಸಲ್ಮಾನ್ ಸಾಥ್

ಸುದೀಪ್ ನಿರ್ದೇಶಕ ರಾಜಮೌಳಿ ಜೊತೆ ಕೆಲಸ ಮಾಡಿದ್ದಾರೆ. ಆದರೂ ಆರ್ ಆರ್ ಆರ್ ಸಿನಿಮಾ ಆಯ್ಕೆ ಮಾಡದೇ ಕೆಜಿಎಫ್-2 ಸಿನಿಮಾ ಆಯ್ಕೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಇದೇ ಸಮಯದಲ್ಲಿ ಅಜಯ್ ದೇವಗನ್ ಅಥವಾ ಸಲ್ಮಾನ್ ಖಾನ್ ಎಂದು ಕೇಳಿದ ಪ್ರಶ್ನೆಗೆ ಸುದೀಪ್ ಸಲ್ಮಾನ್ ಎಂದು ಹೇಳಿದ್ದಾರೆ. ಇತ್ತೀಚಿಗಷ್ಟೆ ಸುದೀಪ್ ಮತ್ತು ಅಜಯ್ ದೇವಗನ್ ನಡುವೆ ರಾಷ್ಟ್ರಭಾಷೆ ವಿವಾದ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇನ್ನು ಕಿಚ್ಚ ಸಲ್ಮಾನ್ ಖಾನ್ ಜೊತೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದಾರೆ. ಅಲ್ಲದೇ ಸಲ್ಮಾನ್ ಜೊತೆ ತೆರೆಹಂಚಿಕೊಂಡಿದ್ದಾರೆ. ಸುದೀಪ್ ನಟನೆಯ ಬಹುನಿರೀಕ್ಷೆಯ ವಿಕ್ರಾಂತ್ ರೋಣ ಚಿತ್ರವನ್ನು ಹಿಂದಿಯಲ್ಲಿ ಪ್ರೆಸೆಂಟ್ ಮಾಡುತ್ತಿದ್ದಾರೆ.

ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಈಗಾಗಲೇ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಬಹುನಿರೀಕ್ಷೆಯ ಸಿನಿಮಾ ದಕ್ಷಿಣ ಭಾರತದ ಎಲ್ಲಾ ಭಾಷೆಯ ಜೊತೆಗೆ ಹಿಂದಿ ಮತ್ತು ಇಂಗ್ಲೀಷ್ ನಲ್ಲಿಯೂ ತೆರೆಗೆ ಬರುತ್ತಿದೆ.