ಅತ್ಯಂತ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಎರಡು ದಿನಗಳ ಕಾಲ ವಾಹನ ಸಂಚಾರ ನಿಷೇಧಿಸಲಾಗಿದೆ. ಯಾವ ಎರಡು ದಿನ ವಾಹನ ಸಂಚಾರ ನಿಷೇಧ? ಕಾರಣವೇನು? 

ಚಾಮರಾಜನಗರ (ಜು.28) ಬಂಡೀಪುರ ವ್ಯಾಪ್ತಿಯಲ್ಲಿರುವ ಅತ್ಯಂತ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಎರಡು ದಿನಗಳ ಕಾಲ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾಹಿತಿ ನೀಡಿದ್ದಾರೆ. ಭಕ್ತರು, ಪ್ರವಾಸಿಗರು ಸಹಕರಿಸಲು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಜುಲೈ 29 ಹಾಗೂ 30 ಎರಡು ದಿನಗಳ ಕಾಲ ಹಿವಮದ್ ಗೋಪಾಲ ಸ್ವಾಮಿ ಬೆಟ್ಟಕ್ಕೆ ಯಾವುದೇ ವಾಹನ ಸಂಚಾರ ಇರುವುದಿಲ್ಲ. ಎಲ್ಲಾ ವಾಹನ ಸಂಚಾರ ನಿಷೇಧಿಸಲಾಗುತ್ತಿದೆ.

ರಸ್ತೆ ಕುಸಿದಿರುವ ಕಾರಣ 2 ದಿನ ನಿಷೇಧ

ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ರಸ್ತೆ ಕುಸಿದಿದೆ. ಭಾರಿ ಮಳೆಯಿಂದ ಹಲೆವೆಡೆ ಕುಸಿತ ಸಂಭವಿಸಿದೆ. ಈ ಪೈಕಿ ಬೆಟ್ಟದ ರಸ್ತೆಯ ಪ್ಯಾರಪಿಟ್ ವಾಲ್ (ಅಡ್ಡಗೋಡೆ) ಕುಸಿದಿರುವ ಕಾರಣ ವಾಹನಗಳಿಗೆ ಸಾಗಲು ಸಾಧ್ಯವಾಗುತ್ತಿಲ್ಲ. ಇಷ್ಟೇ ಅಲ್ಲ ಮತ್ತಷ್ಟು ಕುಸಿಯುವ ಭೀತಿ ಇದೆ. ಹೀಗಾಗಿ ತಕ್ಷಣವೇ ಈ ರಸ್ತೆ ದುರುಸ್ತಿಗೆ ಜಿಲ್ಲಾಡಳಿತ ಮುಂದಾಗಿದೆ.ಜುಲೈ 29 ಹಾಗೂ 30 ರಂದು ಎರಡು ದಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ರಸ್ತೆ ದುರಸ್ತಿ ಕಾರ್ಯ ನಡೆಯಲಿದೆ.

ಹಿಮವದ್ ಗೋಪಾಸ್ವಾಮಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಕರ್ನಾಟಕದ ಅತ್ಯಂತ ಸುಂದರ ತಾಣವಾಗಿರುವ ಹಿವಮದ್ ಗೋಪಾಲ ಸ್ವಾಮಿ ಬೆಟ್ಟ ಪ್ರತಿಯೊಬ್ಬರಿಗೂ ನೆಚ್ಚಿನ ತಾಣವಾಗಿದೆ. ಪ್ರಾಕೃತಿಕ ಸೌಂದರ್ಯ, ಹಿಮದಿಂದ ಆವೃತ್ತವಾಗಿರುವ ಬೆಟ್ಟ ಜೊತೆಗೆ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಗೋಪಾಲಸ್ವಾಮಿ ಬೆಟ್ಟ ಭಕ್ತರನ್ನು ಕೈಬೀಸಿ ಕರೆಯುತ್ತಿದೆ. ಪ್ರತಿ ದಿನ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ಚಾಮರಾಜನಗರದ ಕೆಲ ಪ್ರದೇಶ ಜಲಾವೃತ

ಚಾಮರಾಜನಗರದ ಕೆಲ ತಾಲೂಕುಗಳು ಭಾರಿ ನೀರಿನಿಂದ ಜಲಾವೃತಗೊಂಡಿದೆ. ಪ್ರಮುಖವಾಗಿ ಕಾವೇರಿ ನದಿ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ನಿರಂತರ ಮಳೆಯಾಗುತ್ತಿರುವ ಕಾರಣ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯಗಳಿಂದ 1 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಕೊಳ್ಳೇಗಾಲ ತಾಲೋಕಿನ ಹಳೇ ಹಂಪಾಪುರ, ದಾಸನಪುರ, ಹಳೇ ಅಣಗಳ್ಳಿ, ಹರಳೆ, ಅಣಗಳ್ಳಿ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ನದಿಯಂಚಿನ ಜಮೀನುಗಳು ಜಲಾವೃತಗೊಂಡಿದೆ.