ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಿಗೆ ಪ್ರಕರಣವೊಂದರ ಆರೋಪಿಗೆ ಜಾಮೀನು ನೀಡುವಂತೆ ಒತ್ತಾಯಿಸಿ ಕೊಲೆ ಬೆದರಿಕೆ ಹಾಕಲಾಗಿದೆ. ಇಂಟರ್ನೆಟ್‌ ಕರೆ ಮೂಲಕ ಎಚ್ಚರಿಕೆ ನೀಡಿರುವ ಅಪರಿಚಿತ ವ್ಯಕ್ತಿ, ಜಾಮೀನು ನಿರಾಕರಿಸಿದರೆ ಮುಂದಿನ ಟಾರ್ಗೆಟ್ ನೀವೇ ಎಂದು ಹೇಳಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಚಾಮರಾಜನಗರ (ಜು.11): ನ್ಯಾಯಾಲಯಕ್ಕೆ ಹುಸಿ ಬಾಂಬ್‌ ಬೆದರಿಕೆ ಸಂದೇಶಗಳ ಹಾವಳಿ ಹೆಚ್ಚಾಗಿರುವ ನಡುವೆಯೇ, ಈಗ ಕಿಡಿಗೇಡಿಗಳು ನೇರವಾಗಿ ಜಿಲ್ಲಾ ಕೋರ್ಟ್‌ನ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ.

ಬೇಲ್ ಕೊಡದಿದ್ರೆ NEXT ಟಾರ್ಗೆಟ್ ನೀನೇ!

ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ನೀಡುವಂತೆ ನೇರವಾಗಿ ನ್ಯಾಯಾಧೀಶರಿಗೆ ಫೋನ್‌ ಕರೆ ಮಾಡಿ ಎಚ್ಚರಿಸಿರುವ ಘಟನೆ ಚಾಮರಾಜನಗರದಲ್ಲಿ ಶುಕ್ರವಾರ ನಡೆದಿದೆ. ಶುಕ್ರವಾರ ಬೆಳಗ್ಗೆ ನ್ಯಾಯಾಲಯದ ಕಲಾಪ ನಡೆಯುತ್ತಿರುವಾಗಲೇ ಬೆದರಿಕೆ ಕರೆ ಬಂದಿದೆ. ಅನಾಮಧೇಯ ವ್ಯಕ್ತಿಯೋರ್ವ 41000697200 ಸಂಖ್ಯೆಯಿಂದ ನ್ಯಾಯಾಧೀಶರ ಮೊಬೈಲ್‌ಗೆ ಇಂಟರ್ನೆಟ್‌ ಕರೆ ಮಾಡಿದ್ದಾನೆ. ಅದರಲ್ಲಿ ‘ಅಪರಾಧ ಸಂಖ್ಯೆ 144/2026 ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡಬೇಕು’ ಎಂದು ಒತ್ತಾಯಿಸಿದ್ದು, ‘ಒಂದು ವೇಳೆ ಜಾಮೀನು ತಿರಸ್ಕರಿಸಿದರೆ ಮುಂದಿನ ಟಾರ್ಗೆಟ್‌ ನೀನೇ. ನಿನ್ನನ್ನು ಬದುಕಲು ಬಿಡಲ್ಲ’ ಎಂದು ಜೀವ ಬೆದರಿಕೆ ಹಾಕಿದ್ದಾನೆ.

ಎಫ್‌ಐಆರ್ ದಾಖಲು

ಜಡ್ಜ್‌ಗೆ ನೇರವಾಗಿ ಬೆದರಿಕೆ ಹಾಕಿರುವುದು ಆತಂಕ ಮೂಡಿಸುವಂತದ್ದು. ಸದ್ಯ ಘಟನೆಗೆ ಸಂಬಂಧಿಸಿದಂತೆ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಡ್ಜ್‌ಗೆ ಹೆಚ್ಚಿನ ಪೊಲೀಸರು ಭದ್ರತೆ ಒದಗಿಸಿದ್ದಾರೆ.