Asianet Suvarna News Asianet Suvarna News

ಮಾರ್ಕೆಟ್‌ನಲ್ಲಿ ಈಗ ನಟ ಭಯಂಕರ, ಒಳ್ಳೇ ಹುಡುಗ ಪ್ರಥಮ್‌ನದ್ದೇ ಹವಾ..!

ಒಳ್ಳೆ ಹುಡುಗ ಪ್ರಥಮ್ ತಮ್ಮ ಮಾರುಕಟ್ಟೆ ವಿಸ್ತರಿಸಿದ್ದಾರೆ. ಅಂದಹಾಗೆ ಸದ್ಯಕ್ಕೆ ಅವರು ಮಾರುಕಟ್ಟೆ ವಿಸ್ತರಿಸಿರುವುದು ಚಿತ್ರರಂಗದಲ್ಲಿ ಅಲ್ಲ. ಬದಲಾಗಿ ತರಕಾರಿ ಮಾರುಕಟ್ಟೆಯಿಂದ ಸೊಪ್ಪು ತರಕಾರಿಗಳನ್ನು ಅಗತ್ಯವಿದ್ದರ ಬಳಿಗೆ ತಲುಪಿಸುತ್ತಿದ್ದಾರೆ! ಅಂದಹಾಗೆ ಇದು ಸಂಪೂರ್ಣವಾಗಿ `ನಟ ಭಯಂಕರ' ತಂಡದಿಂದ ಪ್ರಾಯೋಜಿತವಾಗಿರುವುದನ್ನು ಕೂಡ ಅವರು ಈ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದ್ದಾರೆ. ದೇಶವೇ ಲಾಕ್ಡೌನ್ ಆಗಿರುವಾಗ ಕನ್ನಡ ಚಿತ್ರರಂಗದ ಪರಿಸ್ಥಿತಿಯೂ ಕಷ್ಟದಲ್ಲಿದೆ. ಆದರೆ ಈ ಸಂದರ್ಭದಲ್ಲಿ ಕೂಡ ಮಾರ್ಕೆಟ್‌ನಲ್ಲಿ ಮಿಂಚುತ್ತಿರುವ ತಾರೆಯಾಗಿ ಪ್ರಥಮ್ ಕಂಗೊಳಿಸುತ್ತಿದ್ದಾರೆ.

Olle Huduga  Pratham helping needy during Covid19 breakdown
Author
Bangalore, First Published Mar 30, 2020, 8:59 PM IST

ದೇಶವೇ ಲಾಕ್ಡೌನ್ ಆಗಿರುವಾಗ ಕನ್ನಡ ಚಿತ್ರರಂಗದ ಪರಿಸ್ಥಿತಿಯೂ ಕಷ್ಟದಲ್ಲಿದೆ. ಆದರೆ ಈ ಸಂದರ್ಭದಲ್ಲಿ ಕೂಡ ಮಾರ್ಕೆಟ್‌ನಲ್ಲಿ ಮಿಂಚುತ್ತಿರುವ ತಾರೆಯಾಗಿ ಪ್ರಥಮ್ ಕಂಗೊಳಿಸುತ್ತಿದ್ದಾರೆ. ಅಂದಹಾಗೆ ಸದ್ಯಕ್ಕೆ ಅವರು ಮಾರುಕಟ್ಟೆ ವಿಸ್ತರಿಸಿರುವುದು ಚಿತ್ರರಂಗದಲ್ಲಿ ಅಲ್ಲ. ಬದಲಾಗಿ ತರಕಾರಿ ಮಾರುಕಟ್ಟೆಯಿಂದ ಸೊಪ್ಪು ತರಕಾರಿಗಳನ್ನು ಅಗತ್ಯವಿದ್ದರ ಬಳಿಗೆ ತಲುಪಿಸುತ್ತಿದ್ದಾರೆ! ಅಂದಹಾಗೆ ಇದು ಸಂಪೂರ್ಣವಾಗಿ `ನಟ ಭಯಂಕರ' ತಂಡದಿಂದ ಪ್ರಾಯೋಜಿತವಾಗಿರುವುದನ್ನು ಕೂಡ ಅವರು ಈ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದ್ದಾರೆ. ಪ್ರಥಮ್ ನಟನೆಯ ನಟ ಭಯಂಕರ ಚಿತ್ರ ಮುಹೂರ್ತದ ದಿನದಿಂದಲೂ ವಿವಿಧ ಕಾರಣಗಳಿಂದ ಸುದ್ದಿ ಮಾಡುತ್ತಾ ಬಂದಿದೆ. ವಿಶೇಷ ಏನೆಂದರೆ ಅದು ಯಾವುದೇ ವಿವಾದಗಳಿಂದ ಅಲ್ಲ. ವಿಭಿನ್ನವಾದ ದಾಖಲೆಗಳಿಂದ. ಅದು ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಗೌಡ ನಿರ್ದೇಶಿಸಿದ ದೃಶ್ಯಗಳಿಂದ ಹಿಡಿದು ಧ್ರುವ ಸರ್ಜ ನೀಡಿದ ವಾಯ್ಸ್ ಓವರ್‌ ತನಕ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ಇದು ಮಾತ್ರ ಚಿತ್ರದ ನಿರ್ಮಾಪಕ ನೀಲೇಶ್ ನೇತೃತ್ವದ ಕೆಲಸವಾಗಿದ್ದರೂ, ಚಿತ್ರದಿಂದ ಆಚೆ ಸಮಾಜಕ್ಕೆ ಒಂದು ಉತ್ತಮ ಕೊಡುಗೆಯಾಗಿ ಗುರುತಿಸಿಕೊಂಡಿದೆ. ಹಾಗಾಗಿ ತಮ್ಮ ಸಿನಿಮಾ ಪ್ರಚಾರದಾಚೆಗಿನ ವಿಚಾರಗಳ ಬಗ್ಗೆಯೂ  ಪ್ರಥಮ್ ಅವರು ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.

- ಶಶಿಕರ ಪಾತೂರ್

ನೀವು ಊರಿನಿಂದ ಮರಳಿ ಬಂದಿದ್ದು ಯಾವಾಗ?
ಹೌದು. ನಾನು ಚಿತ್ರಮಂದಿರಗಳು ಮುಚ್ಚಿದಾಗಲೇ ಬೆಂಗಳೂರು ಬಿಟ್ಟು ನಮ್ಮೂರು ಕೊಳ್ಳೇಗಾಲಕ್ಕೆ ಹೊರಟಿದ್ದೆ. ಅಲ್ಲಿ ತೋಟದ ಕೆಲಸ, ಕುರಿ ಮೇಯಿಸುವುದು ಮಾಡುವುದರಲ್ಲಿ ಖುಷಿ ಕಾಣುತ್ತೇನೆ. ನನಗೆ ನಗರ ಅಷ್ಟಾಗಿ ಒಗ್ಗುವುದಿಲ್ಲ. ನನ್ನದು ಸಂಪೂರ್ಣವಾಗಿ ಹಳ್ಳಿಯ ಹಿನ್ನೆಲೆ. ನಿಮಗೊಂದು ವಿಷಯ ಹೇಳಬೇಕು. ನಾನು ತುಂಬ ಹಳ್ಳಿಯಿಂದ ಬಂದವನು. ಕುಗ್ರಾಮದಲ್ಲಿ ಹುಟ್ಟಿ ಬೆಳೆದವನು. ಅದು ಎಂಥದೇ ಫ್ಲ್ಯಾಟ್ ಆಗಿದ್ದರೂ ನಾನು ಅದರೊಳಗೆ ಒಂದೇ ಒಂದು ದಿನವೂ ಉಳಿದುಕೊಳ್ಳಲಾರೆ. ನನಗೆ ಅಪಾರ್ಟ್ಮೆಂಟ್  ಕಲ್ಚರ್ ಇಷ್ಟಾಗಲ್ಲ. ಹಾಗಂತ ಬಿಗ್‌ಬಾಸ್ ಮನೆಯ ಬಗ್ಗೆ ವಿಚಾರಿಸಬೇಡಿ. ಅದು ಸ್ಪರ್ಧೆ ಗೆಲ್ಲಬೇಕು, ಗೆಲ್ಲುತ್ತೇನೆ ಎನ್ನುವ ತೀರ್ಮಾನ ಮಾಡಿಕೊಂಡೇ ಬಂದಿದ್ದೆ. ನನ್ನನ್ನು ಜನ ನೋಡುತ್ತಾರೆ ಎನ್ನುವ ಕಾರಣಕ್ಕೆ ಎಂಟರ್ಟೇನ್ಮೆಂಟ್ ಬಗ್ಗೆ ಮಾತ್ರ ತಲೆ ಓಡಿಸುತ್ತಿದ್ದೆ. ಹಾಗೆ ಹಳ್ಳಿಯಲ್ಲಿ ಆರಾಮಾಗಿದ್ದವನನ್ನು ನಮ್ಮ ಚಿತ್ರದ ನಿರ್ಮಾಪಕರು ಲಾಕ್ಡೌನ್ ನಿಂದ ಕಷ್ಟಕ್ಕೊಳಗಾದ ಒಂದಷ್ಟು ಜನರಿಗೆ ಸಹಾಯ ಮಾಡಲಿಕ್ಕಾಗಿ ಕರೆಸಿಕೊಂಡರು. 

ಒಳ್ಳೆ ಹುಡುಗ ಪ್ರಥಮನ ಒಳ್ಳೆ ಕೆಲಸಕ್ಕೊಂದು ಸಲಾಂ!

ತುಮಕೂರಲ್ಲಿ ನಿಮ್ಮ ಸೇವೆ ಹೇಗಿರುತ್ತದೆ?
ತುಮಕೂರಲ್ಲಿ ಅಗತ್ಯ `ಸೇವೆಗಳಲ್ಲಿ ನಿರತರು' ವಿಭಾಗದಲ್ಲಿ ಜಿಲ್ಲಾಡಳಿತದಿಂದ ಪರವಾನಗಿ ಪಡೆದುಕೊಂಡಿದ್ದೇವೆ. `ನಟ ಭಯಂಕರ' ಚಿತ್ರದ  ನಿರ್ಮಾಪಕ ನೀಲೇಶ್ ಅವರು ಇದರ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಹತ್ತರಿಂದ ಹನ್ನೆರಡರಷ್ಟು ವಾಹನಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ. ಇದರ ಪೂರ್ಣ ಖರ್ಚನ್ನು ಅವರೇ ವಹಿಸಿಕೊಂಡಿದ್ದಾರೆ. ನಾವೇ ಖುದ್ದಾಗಿ ನಿಂತುಕೊಂಡು ಮನೆಮನೆಗೂ ತಲುಪಿಸುತ್ತಿದ್ದೇವೆ. ಆಹಾರವಿಲ್ಲದೆ ಯಾರೂ ಪರದಾಡಬಾರದು ಎನ್ನುವುದೇ ನಮ್ಮ ಉದ್ದೇಶ. ನಾನು ಇದರಲ್ಲಿ ಸ್ವಯಂಸೇವಕನಾಗಿ ಧುಮುಕಿದ್ದೇನೆ. ನಿರ್ಮಾಪಕ ನೀಲೇಶ್ ಅವರು ಕೂಡ ಜತೆಗಿದ್ದಾರೆ. ಬಹಳ ಜನರು ಉಚಿತವಾಗಿ ಪಡೆದುಕೊಳ್ಳಲು ಕೂಡ ಹಿಂಜರಿಯುತ್ತಿದ್ದಾರೆ. ಹಾಗಾಗಿ ನಾವು ಬೆಲೆ ಇರಿಸಿದ್ದೇವೆ. ಆದರೆ  ಮಾರ್ಕೆಟ್ ರೇಟ್‌ಗಿಂತಲೂ ಕಡಿಮೆ ವೆಚ್ಚದಲ್ಲಿ ತರಕಾರಿ ಪೂರೈಕೆ ಮಾಡುತ್ತಿದ್ದೇವೆ.

Olle Huduga  Pratham helping needy during Covid19 breakdown

ಈ ಅಗತ್ಯ ವಸ್ತುಗಳ ಸೇವೆ ಎಷ್ಟು ದಿನಗಳ ಕಾಲ ನಡೆಯಲಿದೆ?
ಏಪ್ರಿಲ್ 14ರ ತನಕ ನಮ್ಮ  ಸೇವೆ ಲಭ್ಯವಿರುತ್ತದೆ. ಈಗಾಗಲೇ ಎರಡು ದಿನಗಳಿಂದ ಕೆಲಸ ಮಾಡುತ್ತಿದ್ದೇವೆ. ಆದರೆ ನಾನು ಇನ್ನು ಇವತ್ತು ಮತ್ತು ನಾಳೆ ಎರಡು ದಿನ ಮಾತ್ರ ಇರುತ್ತೇನೆ. ನಾಡಿದ್ದು ಬುಧವಾರ ಮತ್ತೆ ಕೊಳ್ಳೇಗಾಲಕ್ಕೆ ಹೋಗಿ ಊರಲ್ಲಿ ಕುರಿ ಮೇಯಿಸುತ್ತೇನೆ. ನಾನಿದ್ದರೆ ತಂಡದಲ್ಲಿ ಒಂದು ಉತ್ಸಾಹ ಇರುತ್ತದೆ ಎನ್ನುವ ಕಾರಣಕ್ಕೆ ಬಂದೆ. ನಿತ್ಯವೂ ನಾಗರಬಾವಿಯಿಂದ ನೆಲಮಂಗಲ ಟೋಲ್ ದಾಟಿಕೊಂಡು ಹೋಗುತ್ತೇವೆ. ಸಂಜೆ ನಾಲ್ಕು ಗಂಟೆಯಿಂದ ತರಕಾರಿ ತಲುಪಿಸಲು ಶುರು ಮಾಡುತ್ತೇವೆ. ಯಾರೂ ಹೊರಗಡೆ ನಡೆದುಕೊಂಡು ಬರಬೇಕಿಲ್ಲ. ಮನೆ ಗೇಟ್ ತನಕ ಬಂದರೆ ಸಾಕು. ನಾವೇ ಅಲ್ಲಿಗೆ ಹೋಗಿ ತಲುಪಿಸುತ್ತೇವೆ. ಅವರ ಡಿಸ್ಟೆನ್ಸ್ ಕಾಯ್ದುಕೊಳ್ಳುವ ಜತೆಗೆ ನಾವು ಕೂಡ ಡಿಸ್ಟೆನ್ಸ್‌  ಪಾಲಿಸುತ್ತೇವೆ.   ಒಬ್ಬೊಬ್ಬರೂ ಒಂದೊಂದು ಮೀಟರ್ ಡಿಸ್ಟೆನ್ಸ್ ನಲ್ಲಿರುತ್ತೇವೆ. ಎರಡೂ ಕೈಗಳಿಗೆ ಫುಲ್ ಕವರು, ಮುಖಕ್ಕೆ ಮಾಸ್ಕ್ ಜತೆಗೆ ತಲೆಗೆ ಟೋಪಿಯನ್ನು ಕೂಡ ಧರಿಸುತ್ತೇವೆ. ಯಾಕೆಂದರೆ ನಮ್ಮ ತಲೆಗೂದಲು ಕೂಡ ಉದುರಬಾರದು ಎನ್ನುವಷ್ಟರ ಮಟ್ಟಿಗೆ ಕಾಳಜಿ ವಹಿಸುತ್ತಿದ್ದೇವೆ. ನನ್ನ ಪರಿಚಯ ಮಾಡಿಕೊಂಡು ಸೆಲ್ಫೀ ಕೇಳಿದವರಿಗೆ ಕೂಡ ನಾನು ಮಾಸ್ಕ್ ಬಿಚ್ಚದೆ, ಹತ್ತಿರ ಹೋಗದೆ ಸೆಲ್ಪೀ ನೀಡಿದ್ದೇನೆ.

ಕೊಟ್ಟ ಮಾತು ಉಳಿಸ್ಕಂಡ್ ಮತ್ತಷ್ಟು ಒಳ್ಳೆ ಹುಡುಗನಾದ ಪ್ರಥಮ್

ನಿಮ್ಮ ಪ್ರಕಾರ ಮನೆಯೊಳಗೆ ಇರುವವರು ಹೇಗೆಲ್ಲಾ ಟೈಮ್ ಪಾಸ್ ಮಾಡಬಹುದು?
ಕೊರೋನದಿಂದ ಏನೇ ಕೆಟ್ಟದಾಗಿದ್ದರೂ ಒಂದಂತು ಒಳ್ಳೆಯದಾಗಿದೆ. ಅದು ನಮ್ಮ ಮನೆಯವರ ಜತೆಗೆ ಹೆಚ್ಚು ಸಮಯವನ್ನು ಕಳೆಯುವ ಅವಕಾಶವನ್ನು ನೀಡಿದೆ. ಅದಕ್ಕಿಂತ ಮತ್ತೊಂದು ಔಷಧವೇ ಇಲ್ಲ ಎನ್ನಬಹುದು. ಇದರ ಜತೆಗೆ ಕನ್ನಡದಲ್ಲಿ ಬಹಳಷ್ಟು ಒಳ್ಳೆಯ, ಸದಭಿರುಚಿಯ ಹಳೆಯ ಸಿನಿಮಾಗಳಿವೆ. ತುಂಬ ಒಳ್ಳೆಯ ಸಂದೇಶಗಳಿರುವ ಅಂಥ  ಸಿನಿಮಾಗಳನ್ನು ನಾವು ನೋಡಿರುವುದೇ ಇಲ್ಲ. ಮನಸಿಗೆ ಖುಷಿ ಕೊಡುವಂಥ ಚಿತ್ರಗಳನ್ನು ಕಂಡಾಗ ನಾವು ಕೂಡ ಒಂದಷ್ಟು ಹಿಂದಿನ ಕಾಲಕ್ಕೆ ಹೋದಂಥ ಅನುಭವ ನೀಡುತ್ತದೆ. ದಯವಿಟ್ಟು ದಶಕಗಳ ಹಿಂದಿನ ಅಣ್ಣಾವ್ರ ಸಿನಿಮಾಗಳನ್ನು, ವಿಷ್ಣುವರ್ಧನ್ ಸಿನಿಮಾಗಳನ್ನು ನೋಡಿ. ಯಾಕೆಂದರೆ ಇಂದಿನ ಬಹಳಷ್ಟು ಮಂದಿಗೆ ಅಂಥ ಚಿತ್ರಗಳನ್ನು ಸಮಯ ಕೊಟ್ಟು ನೋಡುವ ಅವಕಾಶ ಆಗಿರುವುದಿಲ್ಲ. ಇಂಥ ಸಂದರ್ಭದಲ್ಲಿ ಅವು ಖಂಡಿತವಾಗಿ ಇಷ್ಟವಾಗುತ್ತಾ ಹೋಗುತ್ತವೆ. ಅಂತ್ಯದಲ್ಲಿ ಆ ಸಿನಿಮಾಗಳು ಕೂಡ ಸಂಬಂಧದ ಪ್ರಾಮುಖ್ಯತೆಯನ್ನೇ ಎತ್ತಿ ಹಿಡಿಯುತ್ತವೆ ಎನ್ನುವುದರಲ್ಲಿ ಸಂದೇಹವೇ ಬೇಡ.

Follow Us:
Download App:
  • android
  • ios