Asianet Suvarna News Asianet Suvarna News

ಸೋಲನ್ನು ಒಪ್ಪಿಕೊಳ್ಳೋವರೆಗೆ ಅದು ಸೋಲಲ್ಲ, ಹೋರಾಟ: ನವೀನ್ ಶಂಕರ್

ನವೀನ್ ಶಂಕರ್, ಆರ್ಚನಾ ಜೋಯಿಸ್ ನಟನೆ ಶ್ರೀಕಾಂತ್ ಕಟಗಿ ನಿರ್ದೇಶನದ ರೈತ ಬದುಕು, ಹೋರಾಟದ ಕಥೆ 'ಕ್ಷೇತ್ರಪತಿ' ಇಂದು ಬಡುಗಡೆಯಾಗಿದೆ. ಈ ಚಿತ್ರದ ಬಗ್ಗೆ ನಾಯಕ ನವೀನ್ ಶಂಕರ್ ಮಾತನಾಡಿದ್ದಾರೆ. 

Naveen Shankar exclusive interview about Kshetrapathi film vcs
Author
First Published Aug 18, 2023, 9:36 AM IST

ಪ್ರಿಯಾ ಕೆರ್ವಾಶೆ

ಕ್ಷೇತ್ರಪತಿ ಪ್ರೀಮಿಯರ್‌ ಶೋ ನೋಡಿದವರ ರೆಸ್ಪಾನ್ಸ್ ಹೇಗಿತ್ತು?

ಮೊನ್ನೆ ರಾತ್ರಿ ಬುಕಿಂಗ್ ಓಪನ್ ಆಗಿದ್ದು, ನಿನ್ನೆ ಬೆಳಗ್ಗೆ ಹೊತ್ತಿಗೆ ಪ್ರೀಮಿಯರ್ ಶೋ ಹೌಸ್‌ಫುಲ್ ಆಗಿತ್ತು. ಇದರಲ್ಲಿ ವಿಮರ್ಶಕರೂ ಇದ್ದರು. ಈಗ ಸಿನಿಮಾ ವಿಮರ್ಶಕರಿಗೂ ಸಾಮಾನ್ಯರಿಗೂ ವ್ಯತ್ಯಾಸ ಇಲ್ಲ. ಈ ಶೋವನ್ನು ವಿಮರ್ಶಕರೂ ಮೆಚ್ಚಿದ್ದಾರೆ. ಇತರರೂ ಮೆಚ್ಚಿಕೊಂಡಿದ್ದಾರೆ. ಇಂಟೆನ್ಸ್‌ ಆಗಿರುವ ಕ್ರಾಂತಿಕಾರಿಯ ಜರ್ನಿಯನ್ನು ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದೇವೆ. ಈವರೆಗೆ ಇದು ನಮ್ಮ ಸಿನಿಮಾ. ಇವತ್ತಿಂದ ಜನರ ಸಿನಿಮಾ.

ನಿಮ್ಮ ಕೆರಿಯರ್‌ ದೃಷ್ಟಿಯಿಂದ ನೋಡಿದರೆ ಇದೊಂದು ಬಹಳ ಮಹತ್ವದ ಸಿನಿಮಾ ಅಲ್ವಾ?

ಹೌದು. ಆ ಬಗ್ಗೆ ಖುಷಿ ಇದೆ. ಯಾವ ಸಿನಿಮಾಗಳನ್ನೂ ಮೊದಲೇ ಜಡ್ಜ್ ಮಾಡೋದಕ್ಕಾಗಲ್ಲ. ಕ್ರಿಯೇಟಿವ್ ಕೆಲಸಗಳನ್ನು ಬಿಟ್ಟರೆ ಮತ್ಯಾವುದೂ ನಮ್ಮ ಕೈಯಲ್ಲಿ ಇರೋದಿಲ್ಲ. ಅದರಲ್ಲಿ ಏನು ಬೆಸ್ಟ್ ಮಾಡೋದಕ್ಕಾಗುತ್ತೆ, ಅದನ್ನು ಮಾಡಿದ್ದೀವಿ. ಟ್ರೇಲರ್, ಟೀಸರ್‌ಗೆ, ಹಾಡಿಗೆ ಬಂದಿರೋ ರೆಸ್ಪಾನ್ಸ್‌ ಸಿನಿಮಾದ ಪ್ರೀಮಿಯರ್‌ಗೂ ಬಂತಲ್ವಾ ಅದು ನಮಗೆ ಕಾನ್ಫಿಡೆನ್ಸ್ ಕೊಟ್ಟಿತು.

ಅವಮಾನವನ್ನು ಸವಾಲಾಗಿ ತೆಗೆದುಕೊಂಡು ಚಿತ್ರರಂಗಕ್ಕೆ ಬಂದೆ: ಸ್ಪಪ್ನ ಶೆಟ್ಟಿಗಾರ್‌

ಬಹಳ ಸೂಕ್ಷ್ಮ ಸಬ್ಜೆಕ್ಟ್‌. ಸ್ವಲ್ಪ ಹೆಚ್ಚು ಕಮ್ಮಿ ಆದರೆ ಡಾಕ್ಯುಮೆಂಟರಿ ಆಗಬಹುದು, ರಿಯಲಿಸ್ಟಿಕ್ ಆಗ್ಬೇಕು, ಸಿನಿಮ್ಯಾಟಿಕ್‌ ಆಗಿಯೂ ಇರಬೇಕು..

ಎರಡೂವರೆ ತಾಸಿನ ಸಿನಿಮಾ ಉದ್ದ ಆಯ್ತಾ ಅಂದುಕೊಳ್ತಾ ಇದ್ವಿ. ಆದರೆ ನಂಗೆ ಇಂಟರ್‌ವಲ್ ಬಂದಿದ್ದೂ ಗೊತ್ತಾಗಿಲ್ಲ. ಎರಡನೇ ಭಾಗ ಮತ್ತಷ್ಟು ಗಾಢವಾಗಿ ಆವರಿಸಿತ್ತು. ಅಷ್ಟು ಸಲ ಸಿನಿಮಾ ನೋಡಿದ ನಮಗೇ ಹೀಗೆ ಅನಿಸಬೇಕಾದರೆ ನಾವು ಸರಿಯಾದ ರೀತಿಯಲ್ಲಿ ಸಿನಿಮಾ ಮಾಡಿದ್ದೇವೆ, ಮತ್ತು ಸಿನಿಮಾವನ್ನೇ ಮಾಡಿದ್ದೇವೆ ಎಂಬ ಆತ್ಮವಿಶ್ವಾಸ ಬಂತು.

ರೈತರ ಸಮಸ್ಯೆ, ಆತ್ಮಹತ್ಯೆ ಬಗ್ಗೆ ಸಿನಿಮಾಗಳು ಬಂದಿವೆ, ಆದರೆ ಬಾಕ್ಸಾಫೀಸಲ್ಲಿ ಸಕ್ಸಸ್ ಆಗಿಲ್ಲ. ಆದರೂ ಈ ಥರದ ಸಬ್ಜೆಕ್ಟ್‌ ತಗೊಂಡು ಹೊರಟಿದ್ದೀರ, ನಿಮ್ಮ ಈ ಧೈರ್ಯದ ಬಗ್ಗೆ?

ರೈತರ ಸಿನಿಮಾ ಅಂದಾಗ ಎಲ್ಲರೂ ಬಹಳ ಕಷ್ಟ, ಬಹಳ ಕಷ್ಟ ಅಂದರು. ಆದರೆ ನಮಗೊಂದು ಧೈರ್ಯ ಏನಿತ್ತು ಅಂದರೆ ನಾವು ಡಾಕ್ಯುಮೆಂಟರಿ ಮಾಡಿಲ್ಲ, ಸಿನಿಮಾ ಮಾಡಿದ್ದೀವಿ. ಸಿನಿಮಾವನ್ನು ಸಿನಿಮಾವಾಗಿ ತಗೊಳ್ಳಲಿ. ಇಶ್ಯೂ ಬೇಸ್ಡ್ ಅನ್ನೋದಕ್ಕಿಂತ ತಂದೆ ಮಗನ ಬಾಂಧವ್ಯದ ಕಥೆಯಾಗಿಯೇ ಇದನ್ನು ನಾವು ಕಟ್ಟಿಕೊಟ್ವಿ. ತಂದೆ, ಆತನ ಸಾವು. ಅದು ಮಗನಿಗೆ ಎಷ್ಟು ನೋವು ತರುತ್ತೆ, ಆ ನೋವಲ್ಲಿ ಮಗ ಮಾಡುವ ಹೋರಾಟ ಎಷ್ಟು ತೀವ್ರವಾಗಿರುತ್ತೆ ಅನ್ನೋದನ್ನ ಆ ತೀವ್ರತೆಯಲ್ಲೇ ಹೇಳುವ ಪ್ರಯತ್ನ ಮಾಡಿದ್ದೀವಿ.

Naveen Shankar exclusive interview about Kshetrapathi film vcs

ಸಿನಿಮಾದ ಬಗ್ಗೆ ನಿಮಗೆ ಇರುವ ನಿರೀಕ್ಷೆ?

ಜನ ಬಹಳ ಬುದ್ಧಿವಂತರು. ಯಾವ ಸಿನಿಮಾಕ್ಕೆ ಹೋಗಬೇಕು, ಯಾವ ಸಿನಿಮಾಕ್ಕೆ ಹೋಗಬಾರದು ಅನ್ನೋದನ್ನು ಅವರು ನಿರ್ಧರಿಸಿ ಬಿಡ್ತಾರೆ. ಆ ನಿರ್ಧಾರದ ಮುಂದೆ ನಾವೇನು ಹೇಳಿದರೂ ಮಾಡಿದರೂ ಅದು ನಡೆಯೋದಿಲ್ಲ. ಪ್ರೇಕ್ಷಕರನ್ನು ಯಾಮಾರಿಸೋದಕ್ಕೆ ಆಗಲ್ಲ. ಚಿತ್ರಕ್ಕೆ ಅವರನ್ನು ಆಹ್ವಾನಿಸೋದು ಬಿಟ್ಟರೆ ಬೇರೇನೂ ನಮ್ಮ ಕೈಯಲ್ಲಿಲ್ಲ.

ಕಥೆ ಇಂಟೆನ್ಸ್ ಆಗಿದೆಯಲ್ಲಾ, ನಿಮ್ಮನ್ನು ಆವರಿಸಿದ ಬಗೆ?

ಸಿನಿಮಾ ಆಗೋದಕ್ಕೂ ಮೊದಲೇ ಆವರಿಸಿದ ಘಟನಾವಳಿಗಳು ಇವೆಲ್ಲ. ಸಿನಿಮಾ ಒಂಥರ ಮಧ್ಯದ ಎಪಿಸೋಡ್‌. ಮುಂದಿನ ದಿನಗಳಲ್ಲಿ ಈ ವಿಷಯದಲ್ಲೇ ಐ ಹ್ಯಾವ್‌ ಟು ಟೆಲ್‌ ಅನ್ನುವ ಅಂಶ ಬಂದರೆ ಖಂಡಿತಾ ಸಿನಿಮಾ ಮಾಡ್ತೀನಿ. ಎಲ್ಲರ ಸಪೋರ್ಟ್‌ನ ಅವಶ್ಯಕತೆ ಇರುವ ಕಾರ್ಮಿಕ ಸಮುದಾಯ, ರೈತ ಸಮುದಾಯದ ಪರವಾಗಿ ನಿಲ್ಲೋದಕ್ಕೆ ಇಷ್ಟಪಡ್ತೀನಿ. ಅದು ನಟನಾಗಿ ಮತ್ತು ವ್ಯಕ್ತಿಯಾಗಿ ನನ್ನ ಜವಾಬ್ದಾರಿ.

ಈ ಥರದ ಸಬ್ಜೆಕ್ಟ್‌ಗೆ ದುಡ್ಡು ಹೊಂದಿಸೋದು ಚಾಲೆಂಜಿಂಗ್ ಅಲ್ವಾ?

ಹೌದು, ಆರಂಭದಲ್ಲಿ ನಾವೇ ದುಡ್ಡು ಹಾಕಿ ಸಿನಿಮಾ ಮಾಡೋದಕ್ಕೆ ಮುಂದಾದ್ವಿ. ಮುಂದೆ ನಮ್ಮ ಬರವಣಿಗೆ, ಮೇಕಿಂಗ್ ನೋಡಿ ಒಂದಿಷ್ಟು ಜನ ಉದ್ಯೋಗಿಗಳು ಹಣ ಹಾಕಲು ಮುಂದೆ ಬಂದರು. ಇದರ ಹಿಂದೆ ಬಿಸಿನೆಸ್‌ ಅಷ್ಟೇ ಇಲ್ಲ. ಸಿನಿಮಾ ಪ್ರೀತಿ, ಕಾಳಜಿಯೂ ಇದೆ.

ಪೌಡರ್ ಮತ್ತು ಹಾರ್ಮೋನಲ್ ಟ್ಯಾಬ್ಲೆಟ್‌ ಬಳಸಿಲ್ಲ; ಸಿಕ್ಸ್‌ ಪ್ಯಾಕ್‌ ಮಾಡಿದ ಸಂಗೀತ ಶೃಂಗೇರಿ ಸ್ಪಷ್ಟನೆ

ಇಂದು ಸಿನಿಮಾ ರಿಲೀಸ್. ಆದರೂ ಇಷ್ಟು ಕೂಲಾಗಿದ್ದೀರಿ?

ನಮ್ಮ ಪಾಲಿನ ಕೆಲಸವನ್ನು ಪ್ರಾಮಾಣಿಕವಾಗಿ ಜವಾಬ್ದಾರಿಯುತವಾಗಿ ನಿರ್ವಹಿಸಿದ್ದೀವಿ. ಆ ಸಾರ್ಥಕತೆ ನನ್ನನ್ನು ಕೂಲಾಗಿಟ್ಟಿದೆ ಅನಿಸುತ್ತೆ. ಚಿತ್ರ ಗೆಲ್ಲುತ್ತೋ, ಸೋಲುತ್ತಾ ಅನ್ನೋದಕ್ಕಿಂತಲೂ ಇದು ಮುಖ್ಯ. ಸೋಲು ಅನ್ನೋದನ್ನು ನಾವು ಒಪ್ಪಿಕೊಳ್ಳೋವರೆಗೂ ಅದು ಸೋಲಾಗಿರಲ್ಲ, ಹೋರಾಟ ಆಗಿರುತ್ತೆ!

Follow Us:
Download App:
  • android
  • ios