Asianet Suvarna News Asianet Suvarna News

ಕನ್ನಡ ಧಾರಾವಾಹಿ 'ಪಾರು' ನೀಡಿದ್ದು ಅಪರೂಪದ ಅವಕಾಶ; ಶರತ್

ಇಂಜಿನಿಯರಿಂಗ್ ಕಲಿತು ಐಟಿ ಉದ್ಯೋಗದಲ್ಲಿದ್ದವರು ಶರತ್. ನಟನಾ ಕ್ಷೇತ್ರದಲ್ಲಿದ್ದ ಆಸಕ್ತಿಗೆ ಮೊದಲ ಅವಕಾಶ ಮಾಡಿಕೊಟ್ಟಿದ್ದು ಸ್ಟಾರ್ ಸುವರ್ಣ ವಾಹಿನಿ. ಹಾಗೆ `ಜಸ್ಟ್ ಮಾತ್ ಮಾತಲ್ಲಿ’ ಎಂಟ್ರಿ ಕೊಟ್ಟು ಇಂದು ಹೆಂಗೆಳೆಯರ ಹಾರ್ಟಲ್ಲಿ ಮನೆ ಮಾಡುವ ತನಕ ಬೆಳೆದು ನಿಂತಿದ್ದಾರೆ.

 

Kannada serial Actor Sharath Padmanabh shares his journey with Paaru in interview
Author
Bengaluru, First Published Jul 31, 2021, 4:10 PM IST

ಚೆಲುವು, ಸದೃಢ ಮೈಕಟ್ಟನ್ನು ಗಮನಿಸಿದರೆ ಈತ ಯಾವ ಸಿನಿಮಾ ತಾರೆಗೂ ಕಡಿಮೆ ಇಲ್ಲ ಅನಿಸಿಬಿಡುತ್ತದೆ. ನಟನೆಯ ಮೂಲಕ ಈಗಾಗಲೇ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ಶರತ್ ಪದ್ಮನಾಭ್ ಅವರ ಫಿಟ್ನೆಸ್‌ ಗೆ ಕಾರಣ ಶ್ರೀನಿವಾಸ್ ಗೌಡ ಅವರ ಟ್ರೇನಿಂಗ್. ರಕ್ಷಿತ್ ಶೆಟ್ಟಿಯವರಿಗೂ ಫಿಟ್ನೆಸ್‌ ಟ್ರೇನರ್ ಆಗಿರುವ ಶ್ರೀನಿವಾಸ್ ಬಳಿಯಲ್ಲಿ ತರಬೇತಿ ಪಡೆಯುತ್ತಿರುವ ಶರತ್ ಸದ್ಯದಲ್ಲೇ ತಾವು ಕೂಡ ಬೆಳ್ಳಿ ಪರದೆಗೆ ಕಾಲಿಡಲು ಸಿದ್ಧವಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಇದುವರೆಗಿನ ಅವರ ಕಿರುತೆರೆ ಪಯಣದ ಬಗ್ಗೆ ಒಂದು ಸಣ್ಣ ಅವಲೋಕನ ನಡೆಸುವಂಥ ಮಾತುಕತೆ ಇದು.

- ಶಶಿಕರ ಪಾತೂರು

ಇಂಜಿನಿಯರ್ ವೃತ್ತಿಯಿಂದ ಕಲಾರಂಗಕ್ಕೆ ಧುಮುಕುವಾಗ ಸಹಜವಾಗಿ ಮನೆಯಲ್ಲಿ ವಿರೋಧ ವ್ಯಕ್ತವಾಗಿರಬಹುದಲ್ಲವೇ?
ನಾನು ಒಮ್ಮೆಲೆ ಧುಮುಕಿದ್ದರೆ ಬಹುಶಃ ವಿರೋಧಿಸುತ್ತಿದ್ದರೇನೋ. ಆದರೆ ಮೊದಲ ಬಾರಿ ನಟನೆಗೆ ಅವಕಾಶ ಸಿಕ್ಕಾಗ ನಾನು ಇಂಜಿನಿಯರಿಂಗ್‌ ವೃತ್ತಿಯನ್ನು ಪೂರ್ತಿಯಾಗಿ ತೊರೆದಿರಲಿಲ್ಲ. ಫ್ರೀಲೇನ್ಸಾಗಿ ಗ್ರಾಫಿಕ್ ಡಿಸೈನರಾಗಿ ಕೆಲಸ ಮಾಡುತ್ತಿದ್ದೆ. ದಿಲೀಪ್ ರಾಜ್ ಅವರ ಪ್ರೊಡಕ್ಷನ್‌ನಲ್ಲಿ ಆಡಿಶನ್ ಕೊಟ್ಟು, ಹದಿನೈದು ದಿನಗಳ ಕಾಲ ವರ್ಕ್ ಶಾಪ್ ನಡೆಸಿದ ಬಳಿಕ ಮೊದಲ ಬಾರಿ ಕ್ಯಾಮೆರಾ ಎದುರಿಗೆ ಬಂದೆ. ಆರಂಭದಲ್ಲಿ ಸೀರಿಯಲ್‌ ಸೆಟ್‌ನಲ್ಲಿಯೂ ಇಂಜಿನಿಯರಿಂಗ್‌ ಕೆಲಸ ಮಾಡಿದ್ದೇನೆ! ನಾನು ರಂಗಭೂಮಿಯಿಂದ ಬಂದವನಲ್ಲ. ಹಾಗಾಗಿ ನಟನೆಯ ಪಟ್ಟನ್ನು ಕೂಡ ಸೀರಿಯಲ್ ಮೂಲಕವೇ ಗಂಭೀರ ಪರಿಶ್ರಮ ಹಾಕಿ ಕಲಿತುಕೊಂಡೆ.

ಒಳಗಿಂದ ಫೀಲ್ ಮಾಡಿದಾಗಲೇ  ಹೊಸಲೋಕ-  ಕ್ರೇಜಿಸ್ಟಾರ್

ನಿಮಗೆ ರಂಗಭೂಮಿ ಹಿನ್ನೆಲೆ ಇರಲಿಲ್ಲ ಎನ್ನುವುದರಿಂದ ನಟನೆಗೆ ಕಷ್ಟವಾಯಿತೇ?
ಅದೃಷ್ಟಕ್ಕೆ ನನಗೆ ಹಾಗೇನೂ ಆಗಲಿಲ್ಲ. ಯಾಕೆಂದರೆ ನನಗೆ ವರ್ಕ್‌ಶಾಪ್‌ ನೀಡಿದವರು ರಂಗ ದಿಗ್ಗಜರೆನಿಸಿದ ಕೃಷ್ಣಮೂರ್ತಿ ಕವತ್ತಾರು ಸರ್. ಅವರ ಬಳಿಯಲ್ಲಿ ಹದಿನೈದು ದಿನಗಳ ವರ್ಕ್‌ಶಾಪ್ ಮಾಡಿದ್ದೆ. ಮಾತ್ರವಲ್ಲ, ನನಗೆ ಧಾರಾವಾಹಿಯಲ್ಲಿಯೂ ಹಿರಿಯ, ಅನುಭವಿ ಕಲಾವಿದರೊಡನೆ ನಟಿಸುವ ಅವಕಾಶ ದೊರಕಿತ್ತು. ರಿಚರ್ಡ್ ಲೂಯಿಸ್, ಚಂದ್ರಕಲಾ ಮೋಹನ್ ಅವರಿಂದ ಹಿಡಿದು ಇದೀಗ ನಾನು ನಟಿಸುತ್ತಿರುವ ಧಾರಾವಾಹಿಯಲ್ಲಿರುವ ವಿನಯಾ ಪ್ರಸಾದ್, ಎಸ್ ನಾರಾಯಣ್ ಮೊದಲಾದ ಹಿರಿಯ ಪ್ರತಿಭಾವಂತರು ನೀಡುವ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಲೇ ನಟನಾಗಿ ಗುರುತಿಸಿಕೊಂಡಿದ್ದೇನೆ.

ಕಮಲಹಾಸನ್ ಕಂಡ ಬಳಿಕ ಅಹಂ ತೊರೆದೆ- ಉಮೇಶ್ ಬಣಕಾರ್

ಪ್ರಸ್ತುತ ನಿಮ್ಮ ನಟನಾಸಕ್ತಿಗೆ ಪೂರಕವಾದ ಪಾತ್ರ ದೊರಕಿದೆ ಎನ್ನುವ ಸಂತೃಪ್ತಿ ಇದೆಯೇ?
ಹೌದು. ಪ್ರತಿಯೊಂದು ಪಾತ್ರಗಳೂ ಖುಷಿ ನೀಡಿವೆ. ಉದಾಹರಣೆಗೆ ಆರ್.ಜೆ ಆಗಬೇಕು ಎನ್ನುವ ಆಸೆ ಎಲ್ಲರಿಗೂ ಒಂದಲ್ಲ ಒಮ್ಮೆ ಬಂದೇ ಇರುತ್ತದೆ. ಮೊದಲ ಧಾರಾವಾಹಿಯಲ್ಲೇ ನನಗೆ ಆರ್ ಜೆಯ ಪಾತ್ರ ದೊರಕಿತ್ತು. ಕಡಿಮೆ ಮಾತನಾಡುತ್ತಿದ್ದ ನಾನು ನಿರಂತರವಾಗಿ ಮಾತನಾಡುವ ಅಭ್ಯಾಸ ಮಾಡಬೇಕಿತ್ತು. ಬಳಿಕ ‘ಪುಟ್ಮಲ್ಲಿ’ಯಲ್ಲಿ ಅದಕ್ಕಿಂತ ಸ್ವಲ್ಪ ಸೆಟಲ್ಡ್‌ ಅನಿಸುವಂಥ ಪಾತ್ರ ದೊರಕಿತ್ತು. ಆದರೆ ಆನಂತರ ಸಿಕ್ಕ `ಪಾರು’ ಧಾರಾವಾಹಿಯಲ್ಲಿ ಸಿಕ್ಕಿದ್ದು ಬಿಸ್‌ನೆಸ್‌ ಮ್ಯಾನ್‌ ಪಾತ್ರ. ಅದಕ್ಕಾಗಿ ನಿರ್ದೇಶಕರು ಕೆಲವು ಸಿನಿಮಾ ಪಾತ್ರಗಳ ಬಾಡಿ ಲ್ಯಾಂಗ್ವೇಜ್ ರೆಫರ್ ಮಾಡಿದ್ದರು. ಪ್ರತಿಯೊಂದು ಕ್ಯಾರೆಕ್ಟರ್‌ಗಳ ಜೊತೆಗೆ ಹೇಗೆ ವಿಭಿನ್ನವಾಗಿ ರಿಯಾಕ್ಟ್ ಮಾಡಬೇಕಿದೆ ಎನ್ನುವ ಬಗ್ಗೆ ಕೂಡ ನಿರ್ದೇಶಕರೇ ಸೂಚನೆ ನೀಡಿದ್ದರು. ಸಾಲದೆನ್ನುವಂತೆ ಅದೊಂದೇ ಧಾರಾವಾಹಿಯಲ್ಲಿ ಅಡುಗೆಯವನಾಗಿ, ಟಪೋರಿಯಾಗಿ ಹೀಗೆ ವಿಭಿನ್ನವಾಗಿ ನಟಿಸುವ ಸಂದರ್ಭವೂ ಒದಗಿಬಂತು.

ರಕ್ಷಿತ್ ಶೆಟ್ಟಿಗೆ ನನ್ನ ಬೆಂಬಲವಿದೆ - ಶಿವರಾಜ್ ಕುಮಾರ್

ಇತ್ತೀಚೆಗೆ ನೋಡಿದ ಸಿನಿಮಾ, ಓದಿದ ಪುಸ್ತಕ ಯಾವುದು?
ಹೊಸದಾಗಿ ಓದಿರುವುದು ಎಂದರೆ ಸಚಿನ್ ತೆಂಡೂಲ್ಕರ್ ಅವರ ಆತ್ಮಚರಿತ್ರೆಯಾದ `ಪ್ಲೇಯಿಂಗ್ ಇಟ್ ಮೈ ವೇ’. ಸದ್ಯಕ್ಕೆ ಅದು ಇನ್ನೂ ಓದಿ ಪೂರ್ತಿ ಮಾಡಿಲ್ಲ. ಚಿಕ್ಕಂದಿನಿಂದಲೂ ನಾನು ಸಚಿನ್ ಅಭಿಮಾನಿ. ಹಾಗಾಗಿ ತುಂಬ ಆಸಕ್ತಿಯಿಂದಲೇ ಓದುತ್ತಿದ್ದೇನೆ. ಸಿನಿಮಾ ವಿಚಾರಕ್ಕೆ ಬಂದರೆ ಮೊದಲಿಂದಲೂ ಅದೇ ನನಗೆ ಮನರಂಜನೆಯಾಗಿತ್ತು. ಈಗ ನಾನು ಕಲಾವಿದನಾದ ಮೇಲೆ ಪಾತ್ರಧಾರಿಗಳ ನಟನೆಯ ಬಗ್ಗೆ, ಮೇಕಿಂಗ್ ಬಗ್ಗೆಯೂ  ಗಂಭೀರವಾಗಿ ಅವಲೋಕಿಸುತ್ತೇನೆ. ಹಾಗೆ ನೋಡುವಾಗ ಸಾಕಷ್ಟು ಮಲಯಾಳಂ ಚಿತ್ರಗಳು ಗಮನ ಸೆಳೆಯುತ್ತಿರುತ್ತವೆ. ಕನ್ನಡದಲ್ಲಿ ಇತ್ತೀಚೆಗೆ `ಇಕ್ಕಟ್‌’ ನೋಡಿ  ಮೆಚ್ಚಿದ್ದೆ. ಮುಖ್ಯವಾಗಿ ಸಿನಿಮಾಗಿಂತಲೂ ಒಂದು ಒಂದು ವೆಬ್‌ ಸೀರೀಸ್‌ ತುಂಬ ಇಷ್ಟವಾಗಿತ್ತು. ಅದು ಹಿಂದಿಯ `ಫ್ಯಾಮಿಲಿ ಮ್ಯಾನ್’.

Follow Us:
Download App:
  • android
  • ios